ಆ್ಯಪ್ನಗರ

ಸಂಪುಟ ಕಸರತ್ತು: ಹೋಟೆಲ್‌ನಲ್ಲಿ ‘ಮುಂಬೈ ಟೀಂ’ ಸಭೆ..! ಆಪರೇಷನ್‌ ಶಾಸಕರ ಮಂತ್ರಿಗಿರಿಗೆ ಒಗ್ಗಟ್ಟಿನ ಸಂದೇಶ

ರಾಜ್ಯದಲ್ಲಿ ಸಚಿವ ಸಂಪುಟ ಸರ್ಜರಿಯ ಚರ್ಚೆ ಜೋರಾಗಿದೆ. ಬೆಂಗಳೂರು ಹಾಗೂ ದಿಲ್ಲಿಯಲ್ಲಿ ವಿಭಿನ್ನ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುವುದರ ನಡುವೆಯೇ ಆಪರೇಷನ್‌ ಕಮಲದ ಮೂಲಕ ಬಿಜೆಪಿಗೆ ವಲಸೆ ಬಂದ ಮಿತ್ರ ಮಂಡಲಿ ಸದಸ್ಯರು ಪ್ರತ್ಯೇಕವಾಗಿ ಸಭೆ ನಡೆಸಿ ಎಲ್ಲರಿಗೂ ಸಚಿವ ಸ್ಥಾನಕ್ಕಾಗಿ ಒಗ್ಗಟ್ಟಿನ ಸಂದೇಶ ರವಾನಿಸಿದ್ದಾರೆ.

Vijaya Karnataka Web 27 Nov 2020, 11:44 pm
ಬೆಂಗಳೂರು: ಬೆಂಗಳೂರು ಹಾಗೂ ದಿಲ್ಲಿಯಲ್ಲಿ ವಿಭಿನ್ನ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುವುದರ ನಡುವೆಯೇ ಆಪರೇಷನ್‌ ಕಮಲದ ಮೂಲಕ ಬಿಜೆಪಿಗೆ ವಲಸೆ ಬಂದ ಮುಂಬೈ ಟೀಂ 'ಮಿತ್ರ ಮಂಡಲಿ' ಸದಸ್ಯರು ಪ್ರತ್ಯೇಕವಾಗಿ ಸಭೆ ನಡೆಸಿ ಎಲ್ಲರಿಗೂ ಸಚಿವ ಸ್ಥಾನಕ್ಕಾಗಿ ಒಗ್ಗಟ್ಟಿನ ಸಂದೇಶ ರವಾನಿಸಿದ್ದಾರೆ.
Vijaya Karnataka Web MUMBAI TEAM


ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಶುಕ್ರವಾರ ರಾತ್ರಿ ಸಭೆ ನಡೆಸಿದ್ದಾರೆ. ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಅವರೇ ಖುದ್ದು ಮುಂಬೈ ಮಿತ್ರರನ್ನು ಸಂಪರ್ಕಿಸಿ ರಾತ್ರಿ ಊಟಕ್ಕೆ ಸೇರೋಣವೆಂದು ಆಹ್ವಾನ ನೀಡಿದ್ದರು. ದಿಲ್ಲಿ ಪ್ರವಾಸದಲ್ಲಿರುವ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ, ಬೆಳಗಾವಿಯಲ್ಲಿರುವ ಶ್ರೀಮಂತ ಪಾಟೀಲ್‌ ಹಾಗೂ ಮಹೇಶ್‌ ಕುಮಠಳ್ಳಿ ಅವರನ್ನು ಹೊರತುಪಡಿಸಿ ಉಳಿದ 13 ಮಂದಿಗೆ ಆಹ್ವಾನ ನೀಡಲಾಗಿತ್ತು.

ಸಚಿವರಾದ ಆನಂದ್‌ ಸಿಂಗ್‌, ಕೆ.ಗೋಪಾಲಯ್ಯ, ನಾರಾಯಣಗೌಡ, ಶಿವರಾಂ ಹೆಬ್ಬಾರ್‌, ಬೈರತಿ ಬಸವರಾಜ, ಮಾಜಿ ಸಚಿವರಾದ ಎಂ.ಟಿ.ಬಿ.ನಾಗರಾಜ್‌, ಆರ್‌.ಶಂಕರ್‌ ಅವರು ಭಾಗವಹಿಸಿದ್ದರು. ರಾಜ್ಯ ಸರಕಾರದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು, ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಮತ್ತಿತರ ಅಭಿವೃದ್ಧಿ ಕೆಲಸಗಳ ಚರ್ಚೆಗೆಂದು ಸಭೆ ಸೇರಲಾಗಿತ್ತಾದರೂ ಹೆಚ್ಚಿನ ಚರ್ಚೆ ರಾಜಕೀಯ ಬೆಳವಣಿಗೆಗಳಿಗೆ ಸೀಮಿತವಾಯಿತು.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಈ ಬಿಜೆಪಿ ಸರಕಾರ ವಲಸಿಗರಿಂದ ಬಂದಿಲ್ಲವೆಂದು ಇತ್ತೀಚೆಗೆ ನೀಡಿದ್ದ ಹೇಳಿಕೆಗೂ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಗಿದೆ. ನಮ್ಮ ತ್ಯಾಗ, ನೋವು, ಹೋರಾಟವನ್ನು ಇಷ್ಟೊಂದು ಲಘುವಾಗಿ ಪರಿಗಣಿಸುವುದು ಬೇಡ, ರೇಣುಕಾಚಾರ್ಯ ಅವರನ್ನು ಕರೆದು ಬುದ್ಧಿ ಮಾತು ಹೇಳದಿದ್ದರೆ ನಾವೇ ನಮ್ಮ ಭಾಷೆಯಲ್ಲಿ ಉತ್ತರ ಕೊಡಬೇಕಾಗುತ್ತದೆ ಎಂದು ಸಿಎಂ ಭೇಟಿಯಾಗಿ ಮನವರಿಕೆ ಮಾಡಿಕೊಡಲು ನಿರ್ಧರಿಸಿದ್ದಾರೆ.

ಮಿತ್ರಮಂಡಳಿಯ ಪ್ರಮುಖ ಸಚಿವ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ನಡೆಗೂ ಆಕ್ಷೇಪ ವ್ಯಕ್ತಪಡಿಸಲಾಯಿತು. ಸಿ.ಪಿ.ಯೋಗೇಶ್ವರ್‌ಗೆ ಮಂತ್ರಿ ಸ್ಥಾನ ಕೊಡಿಸುವುದಕ್ಕೆ ದಿಲ್ಲಿ, ಬೆಂಗಳೂರಿನಲ್ಲಿ ಬಿಜೆಪಿಯ ನಾಯಕರನ್ನು ಸಂಪರ್ಕಿಸುವ ನಡೆ ಸರಿಯಲ್ಲ. ಬಿಜೆಪಿಗೆ ಬಂದ 17 ಮಂದಿಗೂ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ವಿಚಾರದಲ್ಲಿ ಮಾತ್ರ ನಮ್ಮ ನಡೆ ಸ್ಪಷ್ಟ ಇರಬೇಕು ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಗೊತ್ತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ