ಆ್ಯಪ್ನಗರ

ಪುಲ್ವಾಮಾ ದಾಳಿ: ಸಾರ್ವಜನಿಕವಾಗಿ ಮಾಹಿತಿ ನೀಡಲಾಗದು, ಕಾದು ನೋಡಿ ಎಂದ ನಿರ್ಮಲಾ ಸೀತಾರಾಮನ್‌

ಉಗ್ರರ ವಿರುದ್ಧದ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಳ್ಳಲಿದೆ. ''ಉಗ್ರರ ದಮನಕ್ಕಾಗಿ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಉಗ್ರರನ್ನು ದಮನ ಮಾಡುವ ಕಾರ್ಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.

Vijaya Karnataka Web 19 Feb 2019, 10:21 pm
ಬೆಂಗಳೂರು: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಿದ ಸೈನಿಕರ ನೈತಿಕ ಬಲ ಕುಸಿದಿಲ್ಲ. ಬದಲಿಗೆ, ದೇಶದ ಜನರು ತೋರಿದ ಬೆಂಬಲದಿಂದಾಗಿ ಯೋಧರು ಮತ್ತಷ್ಟು ಉತ್ಸುಕರಾಗಿದ್ದಾರೆ ಎಂದು ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್‌ ಹೇಳಿದರು.
Vijaya Karnataka Web ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್


ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಉಗ್ರರ ವಿರುದ್ಧದ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಳ್ಳಲಿದೆ'' ಎಂದರು.

''ಉಗ್ರರ ದಮನಕ್ಕಾಗಿ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಉಗ್ರರನ್ನು ದಮನ ಮಾಡುವ ಕಾರ್ಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ'' ಎಂದು ಸ್ಪಷ್ಟಪಡಿಸಿದರು.


ಘಟನೆ ಬಗ್ಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್‌, ''ಘಟನೆಯ ತನಿಖೆ ಪ್ರಗತಿಯಲ್ಲಿದೆ. ದೇಶದಲ್ಲಿ ಮುಂಬೈ ದಾಳಿಯಿಂದ ಇಲ್ಲಿಯವರೆಗೆ ಉಗ್ರರು ನಡೆಸಿರುವ ಎಲ್ಲಾ ದಾಳಿಗಳ ಬಗ್ಗೆ ಸೂಕ್ತ ಸಾಕ್ಷ್ಯಾಧಾರ ನೀಡಿದರೂ ಪಾಕಿಸ್ತಾನ ಏನು ಕ್ರಮ ಕೈಗೊಂಡಿದೆ,''ಎಂದು ಪ್ರಶ್ನಿಸಿದರು.

ಪುಲ್ವಾಮಾ ದಾಳಿ ಯಾರೂ ಊಹಿಸದಂಥ ಘಟನೆ. ಅದರ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ನೀಡಲು ಸಾಧ್ಯವಿಲ್ಲ. ನಮ್ಮದೇ ರೀತಿಯಲ್ಲಿ ಪ್ಲಾನ್‌ ಮಾಡುತ್ತಿದ್ದೇವೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದರು.

ಮುಂಬೈ ದಾಳಿ ನಂತರದಲ್ಲಿ ಪಾಕಿಸ್ತಾನ ಪ್ರತಿ ಬಾರಿಯೂ ಸಾಕ್ಷ್ಯ ಕೇಳುತ್ತಿದೆ. ನಮ್ಮ ಸರಕಾರ ಮಾತ್ರವಲ್ಲ. ಈ ಹಿಂದಿನ ಸರಕಾರವೂ ಸಾಕ್ಷ್ಯ ನೀಡಿತ್ತು. ಆದರೆ ಆ ದೇಶದಿಂದ ಯಾವುದೇ ಕ್ರಮ ಆಗಿಲ್ಲ ಎಂದರು.


ಪಾಕಿಸ್ತಾನ ಸರಕಾರ ಇದುವರೆಗೂ ಏನೂ ಮಾಡಿಲ್ಲ. ಪುಲ್ವಾಮಾ ದಾಳಿ ನಂತರ ನಮ್ಮ ಯೋಧರ ಆತ್ಮಸ್ಥೈರ್ಯ ಕುಗ್ಗಿಲ್ಲ ಎಂದು ರಕ್ಷಣಾ ಸಚಿವೆ ತಿಳಿಸಿದರು.

ಭಯೋತ್ಪಾದನೆ ವಿರುದ್ಧ ಹೋರಾಡ ಬೇಕಾದರೆ ಎಲ್ಲರೂ ಒಗ್ಗೂಡಬೇಕು. ಯೋಧರು ಇದನ್ನೇ ಬಯಸುತ್ತಿದ್ದಾರೆ. ಸಮಯ ಬಂದಾಗ ಎಲ್ಲವನ್ನೂ ಮಾಡಿ ತೋರಿಸುತ್ತೇವೆ. ಈಗೇನೂ ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಏರ್‌ ಶೋನಲ್ಲಿ 60ಕ್ಕೂ ಹೆಚ್ಚು ಯುದ್ಧ ವಿಮಾನಗಳು ಪ್ರದರ್ಶನ ನೀಡಲಿವೆ ಎಂದು ನಿರ್ಮಲಾ ಸೀತಾರಾಮನ್‌ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಗೂ ಮುನ್ನ ಯುದ್ಧ ವಿಮಾನ ಪತನದಲ್ಲಿ ಮೃತಪಟ್ಟ ಪೈಲಟ್‌ ಸಾಹಿಲ್‌ ಗಾಂಧಿಗೆ ಸಂತಾಪ ಸೂಚಿಸಿ, ಒಂದು ನಿಮಿಷ ಮೌನ ಆಚರಿಸಲಾಯಿತು.

ನಂತರ ಬೆಂಗಳೂರು ದುರಂತದ ಬಗ್ಗೆ ಮಾತನಾಡಿದ ರಕ್ಷಣಾ ಸಚಿವರು, ಈ ಘಟನೆ ದುರದೃಷ್ಟಕರ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ವರದಿ ಬಂದ ಬಳಿಕವಷ್ಟೇ ಪ್ರತಿಕ್ರಿಯೆ ನೀಡಲಾಗುವುದು ಎಂದರು.

ತಾಲೀಮು ನಡೆಸುತ್ತಿದ್ದ ವೇಳೆ ಪತನಕ್ಕೀಡಾದ ಸೂರ್ಯ ಕಿರಣ್‌ ಯುದ್ಧ ವಿಮಾನಗಳ ಏರೋ ಇಂಡಿಯಾ ಶೋದಲ್ಲಿ ಪ್ರದರ್ಶನ ಇರುವುದಿಲ್ಲ. ಪ್ರತಿ ವಿಮಾನವನ್ನು ತಪಾಸಣೆಗೊಳಪಡಿಸಿ ಪ್ರದರ್ಶನಕ್ಕೆ ಸಜ್ಜುಗೊಳಿಸಲಾಗುವುದೆಂದು ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ