ಆ್ಯಪ್ನಗರ

ಕಾಫಿ ಡೇ ಮಾಲೀಕ ಸಿದ್ಧಾರ್ಥ ನಾಪತ್ತೆ ಬಗ್ಗೆ ಅವರ ಕಾರ್ ಡ್ರೈವರ್ ಹೇಳಿದ್ದೇನು?

ಎಸ್. ಎಂ. ಕೃಷ್ಣ ಅವರ ಅಳಿಯ, ಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರು ನಾಪತ್ತೆಯಾಗಿದ್ದು, ಉಳ್ಳಾಲ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದೆ.

Vijaya Karnataka Web 30 Jul 2019, 1:40 pm
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಅಳಿಯ, ಕಾಫಿ ಡೇ ಮಾಲೀಕ ಸಿದ್ಧಾರ್ಥ ನಿಗೂಢ ನಾಪತ್ತೆ ಪ್ರಕರಣದ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
Vijaya Karnataka Web siddartha


ಸೋಮವಾರ ಸಂಜೆ ಬೆಂಗಳೂರಿನಿಂದ ಇನೋವಾ ಕಾರಿನಲ್ಲಿ ಮಂಗಳೂರಿಗೆ ಆಗಮಿಸಿದ್ದರು. ರಾತ್ರಿ 7.30ರ ವೇಳೆ ಕಾರಿನಲ್ಲಿ ಚಾಲಕನ ಜತೆ ಉಳ್ಳಾಲದತ್ತ ತೆರಳಿ ಕಾರನ್ನು ಒಂದು ಸೇತುವೆಯ ಬದಿ ನಿಲ್ಲಿಸಲು ಹೇಳಿ, ಏಕಾಂಗಿಯಾಗಿ ಸೇತುವೆಯಲ್ಲಿ ನಡೆದುಕೊಂಡು ಹೋಗಿದ್ದಾರೆ. ಆ ಬಳಿಕ ಚಾಲಕ ಸುಮಾರು ಎರಡು ಗಂಟೆ ಕಾದರೂ ಅವರು ಮರಳಿ ಬಂದಿಲ್ಲ. ಉಳ್ಳಾಲ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಕೂಡ ವ್ಯಕ್ತವಾಗುತ್ತಿದೆ.

ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಅಳಿಯ ಸಿದ್ಧಾರ್ಥ ನಾಪತ್ತೆ, ಆತ್ಮಹತ್ಯೆ ಶಂಕೆ

ಕಾರಲ್ಲಿ ಬರುವಾಗಲೆಲ್ಲಾ ಸಿದ್ಧಾರ್ಥ ಮಿತ್ರರಿಗೆ ಕರೆ ಮಾಡಿ, ಐ ಆ್ಯಮ್ ಸಾರಿ ಎಂದು ಹೇಳುತ್ತಿದ್ದರು ಎಂದು ಅವರ ಕಾರಿನ ಚಾಲಕ ಬಸವರಾಜ್ ಪಾಟೀಲ್ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

ಸಿದ್ಧಾರ್ಥ ಕಾರು ಚಾಲಕನ ಪರಿಚಯ

ಯಾದಗಿರಿ ಜಿಲ್ಲೆಯ ಬಾಚಿಮಟ್ಟಿ ಗ್ರಾಮದ ಬಸವರಾಜ್ ಪಾಟೀಲ್ ಎಂಬವರು ಕಳೆದ 4 ವರ್ಷದಿಂದ ಸಿದ್ಧಾರ್ಥ ಅವರ ಕಾರು ಚಾಲಕರಾಗಿದ್ದರು. ಮೂಲತಃ ಕೃಷಿ ಕುಟುಂಬದವರಾದ ಬಸವರಾಜ್ ಕುಟುಂಬ ಸುಮಾರು ನಾಲ್ಕು ಎಕರೆಯಷ್ಟು ಹೊಂದಿದ್ದೆ. ಸೋಮಶೇಖರ್ ಎಂಬ ರೈತರ ನಾಲ್ಕು ಮಕ್ಕಳ ಪೈಕಿ ಬಸವರಾಜ್ ಮೊದಲ ಪುತ್ರನಾಗಿದ್ದಾನೆ.


ಸಿದ್ಧಾರ್ಥ ಕಾರ್ ಡ್ರೈವರ್ ಹೇಳಿದ್ದೇನು?

ಕಳೆದ ಮೂರು ವರ್ಷಗಳಿಂದ ಕಾಫಿ ಡೇ ಮಾಲೀಕ ಸಿದ್ಧಾರ್ಥ ಹೆಗ್ಡೆ ಅವರ ಬಳಿ ಕಾರ್ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ನಿನ್ನೆ (ಸೋಮವಾರ) ಬೆಳಿಗ್ಗೆ ಎಂದಿನಂತೆ ಸದಾಶಿವನಗರದಲ್ಲಿರುವ ಸಿದ್ಧಾರ್ಥ ನಿವಾಸಕ್ಕೆ ಕೆಲಸಕ್ಕೆ ಹೋಗಿದ್ದು, ಸುಮಾರು 8 ಗಂಟೆಗೆ ಸಿದ್ಧಾರ್ಥ ಅವರನ್ನು ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಅವರ ಕಚೇರಿಗೆ ಕರೆದುಕೊಂಡು ಹೋಗಿದ್ದೆ. ಬಳಿಕ 11 ಗಂಟೆ ಸುಮಾರಿಗೆ ಮನೆಗೆ ವಾಪಸ್ ಆದೆವು.


ಮನೆಗೆ ಬಂದ ಬಳಿಕ ಸಿದ್ಧಾರ್ಥ ಅವರು ಊರಿಗೆ ಹೋಗಬೇಕಾಗಿದ್ದು, ಮನೆಗೆ ಹೋಗಿ ಲಗೇಜ್ ತೆಗೆದುಕೊಂಡು ಬಾ ಎಂದು ತಿಳಿಸಿದ್ದರು. ಅಂತೆಯೇ ಮನೆಗೆ ತೆರಳಿ ಲಗೇಜ್ ತೆಗೆದುಕೊಂಡು ಬಂದೆ. ಮಧ್ಯಾಹ್ನ 12.30ರ ಸುಮಾರಿಗೆ ಸಕಲೇಶಪುರದ ಕಡೆಗೆ ಹೋಗೋಣ ಎಂದರು. ಅದರಂತೆ KA-03 C-2592 ಸಂಖ್ಯೆಯ ಇನೋವಾ ಕಾರ್‌ನಲ್ಲಿ ತೆರಳಿದೇವು. ಸಕಲೇಶ್ಪರ ಸಮೀಪಿಸುತ್ತಿದ್ದಂತೆ ಮಂಗಳೂರು ಕಡೆ ಹೋಗೋಣ ಎಂದರು. ಅವರ ಮಾತಿನಂತೆ ಮಂಗಳೂರು ನಗರಕ್ಕೆ ಪ್ರವೇಶಿಸುವ ಸರ್ಕಲ್‌ಗೆ ಬಂದಾಗ ಮಾಲೀಕರು ಎಡಗಡೆ ತೆಗೆದುಕೋ ಸೈಟ್‌ಗೆ ಹೋಗಬೇಕು ಎಂದು ಹೇಳಿದರು. ಅದರಂತೆ ಕೇರಳ ಹೈವೇ ರಸ್ತೆಯಿಂದ 0.3-0.4 ಕಿ.ಮೀ. ಸಾಗಿದಾಗ ನದಿಗೆ ಅಡ್ಡಲಾಗಿ ಕಟ್ಟಿರುವ ದೊಡ್ಡ ಸೇತುವೆ ಆರಂಭವಾಗುತ್ತಿದ್ದಂತೆ ಕಾರ್ ನಿಲ್ಲಿಸಲು ಹೇಳಿದರು. ನಂತರ ಕಾರ್‌ನಿಂದ ಇಳಿದು, ನೀನು ಸೇತುವೆಯ ಆ ತುದಿ ಬಳಿ ಕಾರ್ ನಿಲ್ಲಿಸು. ನಾನು ವಾಕಿಂಗ್ ಮಾಡಿಕೊಂಡು ಬರುತ್ತೇನೆಂದು ಹೇಳಿದರು.


ಮಾಲೀಕರ ಮಾತಿನಂತೆ ಸೇತುವೆಯ ತುದಿಗೆ ಕಾರ್ ನಿಲ್ಲಿಸಿದೆ. ಅವರು ನನ್ನ ಬಳಿ ನಡೆದುಕೊಂಡು ಬಂದರು. ನೀನು ಕಾರ್‌ನಲ್ಲಿಯೇ ಕುಳಿತಿರು. ನಾನು ಬರ್ತಿನಿ ಎಂದು ಹೇಳಿ ಜೋಡಿ ರಸ್ತೆಯ ಬಲಭಾಗದ ಕಡೆಗೆ ಹೋಗಿ ವಾಪಸ್ ಬ್ರೀಡ್ಜ್ ದಾಟಿಕೊಂಡು ಮಂಗಳೂರು ಕಡೆ ಹೋದರು. ಸುಮಾರು 8 ಗಂಟೆ ಸಮಯದಲ್ಲಿ ಮಾಲೀಕರು ವಾಪಸ್ ಬಾರದ ಕಾರಣ ಅವರ ಮೊಬೈಲ್‌ಗೆ ಕರೆ ಮಾಡಿದೆ. ಆದರೆ, ಸ್ಪೀಚ್ ಆಫ್ ಆಗಿತ್ತು. ನಂತರ ಅವರ ಪುತ್ರ ಅಮಾರ್ತ್ಯ ಹೆಗ್ಡೆ ಅವರಿಗೆ ಕಾಲ್ ಮಾಡಿ ವಿಷಯ ತಿಳಿಸಿದೆ ಎಂದು ಸಿದ್ಧಾರ್ಥ ಕಾರ್ ಡ್ರೈವರ್ ಬಸವರಾಜ್ ಪಾಟೀಲ್ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ