ಆ್ಯಪ್ನಗರ

ರಫೇಲ್‌ ದಾಖಲೆ ಕಳವು, ಮೋದಿ ವಿರುದ್ಧ ಕೇಸು ದಾಖಲಾಗಲಿ: ದಿನೇಶ್ ಗುಂಡೂರಾವ್

ಸಮ್ಮಿಶ್ರ ಸರಕಾರ ಸಮನ್ವಯದಿಂದ ಚೆನ್ನಾಗಿ ಕೆಲಸ ಮಾಡುತ್ತಿದೆ. ಪ್ರಧಾನಿ ಮಾತ್ರ ಅದಾನಿ, ಅಂಬಾನಿ ಮೊದಲಾದ ಉದ್ಯಮಪತಿಗಳ ರಿಮೋಟ್ ಕಂಟ್ರೋಲ್ ಆಗಿ ಅಧಿಕಾರ ನಡೆಸುತ್ತಿದ್ದಾರೆ ಎಂದು ದಿನೇಶ್ ಟೀಕಿಸಿದರು.

Vijaya Karnataka Web 6 Mar 2019, 9:25 pm
ಮಂಗಳೂರು: ರಫೇಲ್ ಒಪ್ಪಂದದ ಎಲ್ಲ ವ್ಯವಹಾರಗಳನ್ನು ಪ್ರಧಾನಿ ಕಾರ್ಯಾಲಯವೇ ನೋಡಿಕೊಂಡಿತ್ತು. ಇದೀಗ ಅದರ ದಾಖಲೆ ನಾಪತ್ತೆಯಾಗಿದೆ ಎನ್ನುವ ಮೂಲಕ ಹಗರಣವನ್ನು ಸರಕಾರ ಒಪ್ಪಿಕೊಂಡಂತಾಗಿದೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಭ್ರಷ್ಟಾಚಾರ ಕಾಯಿದೆಯಡಿ ಕೇಸು ದಾಖಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
Vijaya Karnataka Web ಪರಿವರ್ತನಾ ಯಾತ್ರೆ
ಪರಿವರ್ತನಾ ಯಾತ್ರೆ


ಅಡ್ಯಾರ್‌ನ ಅಡ್ಯಾರ್ ಗಾರ್ಡನ್‌ನಲ್ಲಿ ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಜಿಲ್ಲಾಮಟ್ಟದ ಪರಿವರ್ತನಾ ಯಾತ್ರೆಯಲ್ಲಿ ಅವರು ಮಾತನಾಡಿದರು.

ರಫೇಲ್ ಪ್ರಕರಣದಲ್ಲಿ ಪ್ರಧಾನಿ ಮೋದಿ ಪಾರ್ಲಿಮೆಂಟ್, ಸುಪ್ರೀಂ ಕೋರ್ಟ್ ಸೇರಿದಂತೆ ಇಡೀ ದೇಶದ ದಾರಿ ತಪ್ಪಿಸಿದ್ದಾರೆ. ತಾನು ಹೇಳಿಕೊಂಡಂತೆ ಚೌಕಿದಾರ ಅಲ್ಲ, ಭ್ರಷ್ಟಾಚಾರದ ಭಾಗೀದಾರ್ ಎಂದು ಒಪ್ಪಿಕೊಂಡಂತಾಗಿದೆ. ಬ್ಯಾಂಕ್‌ಗಳಿಗೆ ಮೋಸ ಮಾಡಿದವರನ್ನು ವಿದೇಶಕ್ಕೆ ಪರಾರಿಯಾಗಲು ಬಿಟ್ಟ ಮೇಲೆ, ಈಗ ಭ್ರಷ್ಟಾಚಾರದ ಅಂಗಡಿ ಮುಚ್ಚುತ್ತೇನೆ ಎಂದು ಈಗ ಭಾಷಣ ಮಾಡಿದರೆ ಹೇಗೆ ಎಂದು ಅವರು ಹೇಳಿದರು.

ಯುವಜನತೆಗೆ ಉದ್ಯೋಗ ಕೊಡುತ್ತೇನೆ ಎಂದು ಅಧಿಕಾರಕ್ಕೆ ಬಂದ ನಂತರ ಈಗ ಅದರ ಬಗ್ಗೆ ಏನನ್ನೂ ಮಾತನಾಡದೆ, ತಾನು ಮಹಾ ಸುಳ್ಳುಗಾರ ಎಂದು ಪ್ರಧಾನಿ ಒಪ್ಪಿಕೊಂಡಂತಾಗಿದೆ. ಬಿಜೆಪಿ ನಾಯಕರ ಮಕ್ಕಳೇ ಆಮದು ವ್ಯವಹಾರದಲ್ಲಿ ತೊಡಗಿದ್ದರಿಂದ, ಮಾರುಕಟ್ಟೆಯಲ್ಲಿ ಅಡಕೆ ದರ ಕುಸಿದಿದ್ದರೂ, ಆಮದು ಸುಂಕ ಹೆಚ್ಚಿಸುವ ಪ್ರಯತ್ನವನ್ನು ಸರಕಾರ ಮಾಡುತ್ತಿಲ್ಲ ಎಂದು ದಿನೇಶ್‌ ಗುಂಡೂರಾವ್‌ ಆರೋಪಿಸಿದರು.

ಪ್ರಧಾನಿ ಮೋದಿ ಐದು ವರ್ಷಗಳ ತಮ್ಮ ಸಾಧನೆ ಹೇಳುವ ಬದಲು ರಾಜ್ಯ ಸರಕಾರದ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ಚುನಾವಣೆ ನಡೆಯುವುದು ಲೋಕಸಭೆಗೆ ವಿನಃ ರಾಜ್ಯಕ್ಕಲ್ಲ. ಸಿಎಂ ಕುಮಾರಸ್ವಾಮಿ ಅವರನ್ನು ರಿಮೋಟ್ ಕಂಟ್ರೋಲ್ ಎಂದಿದ್ದೀರಿ. ಸಮ್ಮಿಶ್ರ ಸರಕಾರ ಸಮನ್ವಯದಿಂದ ಚೆನ್ನಾಗಿ ಕೆಲಸ ಮಾಡುತ್ತಿದೆ. ಪ್ರಧಾನಿ ಮಾತ್ರ ಅದಾನಿ, ಅಂಬಾನಿ ಮೊದಲಾದ ಉದ್ಯಮಪತಿಗಳ ರಿಮೋಟ್ ಕಂಟ್ರೋಲ್ ಆಗಿ ಅಧಿಕಾರ ನಡೆಸುತ್ತಿದ್ದಾರೆ ಎಂದು ದಿನೇಶ್ ಟೀಕಿಸಿದರು.

ಕೋಮುವಾದ, ಮೂಲಭೂತವಾದ ಬಿತ್ತುತ್ತಿರುವ ಬಿಜೆಪಿಯನ್ನು ಹೊರಗಿಡದಿದ್ದರೆ ದೇಶಕ್ಕೆ ಅಪಾಯವಿದೆ. ಚುನಾವಣೆ ಬರುವಾಗಲೆಲ್ಲಾ ರಾಮನ ಜಪ ಮಾಡುತ್ತಿದ್ದ ಬಿಜೆಪಿ, ಹುತಾತ್ಮ ಸೈನಿಕರನ್ನು ದಾಳವಾಗಿ ಬಳಸುತ್ತಿದೆ. ಬಿಜೆಪಿಗೆ ನ್ಯಾಯ, ಧರ್ಮ ಯಾವುದೂ ಇಲ್ಲ ಎಂದು ದಿನೇಶ್‌ ಗುಂಡೂರಾವ್ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ