ಆ್ಯಪ್ನಗರ

ಕಾವೇರಿ ನೀರು ಬಿಡುಗಡೆಗೆ ಆದೇಶ: ಸದ್ಯಕ್ಕಿಲ್ಲ ಆತಂಕ

ಒಳಹರಿವು ಆಧರಿಸಿ ಜೂನ್‌ನಲ್ಲಿ ತ.ನಾಡಿಗೆ 9 ಟಿಎಂಸಿ ನೀರು ಹರಿಸಲು ಸೂಚನೆ

Vijaya Karnataka 29 May 2019, 5:00 am
ಹೊಸದಿಲ್ಲಿ: ಮುಂಗಾರಿನ ಆರಂಭದಲ್ಲಿ ಕಾವೇರಿ ಜಲಾಶಯಗಳಿಗೆ ನೀರಿನ ಒಳ ಹರಿವಿನ ಪ್ರಮಾಣ ಸುಧಾರಿಸಿದರೆ ತಮಿಳುನಾಡಿಗೆ 9.19 ಟಿಎಂಸಿ ಅಡಿ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಮಂಗಳವಾರ ನಿರ್ದೇಶನ ನೀಡಿದೆ.
Vijaya Karnataka Web KRS


ಇದು ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ಕರ್ನಾಟಕವು ತಮಿಳುನಾಡಿಗೆ ಜೂನ್‌ ತಿಂಗಳಲ್ಲಿ ಹರಿಸಬೇಕಿರುವ ನೀರಿನ ಕೋಟಾ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ದಿಲ್ಲಿಯ ಜಲ ಆಯೋಗದ ಕಚೇರಿಯಲ್ಲಿ ಪ್ರಾಧಿಕಾರ ಅಧ್ಯಕ್ಷ ಎಸ್‌. ಮಸೂದ್‌ ಹುಸೇನ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ

ಕಾವೇರಿ ಕೊಳ್ಳದ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೆರಿ ಮತ್ತು ಕೇಂದ್ರ ಸರಕಾರದ ಪ್ರತಿನಿಧಿಗಳು ಭಾಗಿಯಾಗಿದ್ದರು.

ತಮಿಳುನಾಡಿನ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ಕುರವೈ ಹಂಗಾಮಿನ ಕೃಷಿ ಆರಂಭಿಸಲು ನೀರಿಗಾಗಿ ಕಾಯುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ನೀರು ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡು ಅಧಿಕಾರಿಗಳು ಸಭೆಯಲ್ಲಿ ಮನವಿ ಮಾಡಿದರು.

ಒಳ ಹರಿವು ಆಧರಿಸಿ ನೀರು

ತಮಿಳುನಾಡಿಗೆ ತಕ್ಷಣಕ್ಕೆ ನೀರು ಹರಿಸಲೇಬೇಕು ಎನ್ನುವ ಒತ್ತಡವನ್ನು ಪ್ರಾಧಿಕಾರ ಹೇರಿಲ್ಲ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ, ಜಲಾಶಯದ ಒಳ ಹರಿವಿನ ಪ್ರಮಾಣ ನೋಡಿಕೊಂಡು ಕೆಳಭಾಗದ ರಾಜ್ಯಕ್ಕೆ ಹರಿಸಬೇಕಾದ ನೀರಿನ ಪ್ರಮಾಣವನ್ನು ಕರ್ನಾಟಕ ನಿರ್ಧರಿಸಬೇಕಿದೆ.

ಸಭೆಯ ಬಳಿಕ ಪ್ರಾಧಿಕಾರದ ಅಧ್ಯಕ್ಷ ಎಸ್‌. ಮಸೂದ್‌ ಹುಸೇನ್‌ ಸುದ್ದಿಗಾರರೊಂದಿಗೆ ಮಾತನಾಡಿ, ''ತಕ್ಷಣವೇ ನೀರು ನೀಡಿ ಎಂಬ ಒತ್ತಡವನ್ನು ಹೇರಿಲ್ಲ. ಆರಂಭಿಕ ಮುಂಗಾರು ಹಾಗೂ ಜಲಾಶಯಗಳಿಗೆ ಹರಿದು ಬರುವ ಒಳಹರಿವಿನ ನೀರಿನ ಪ್ರಮಾಣ ಆಧರಿಸಿ ಜೂನ್‌ ತಿಂಗಳ ನೀರಿನ ಕೋಟಾವನ್ನು ಕರ್ನಾಟಕ ಪೂರೈಸಿದರೆ ಸಾಕು,'' ಎಂದು ತಿಳಿಸಿದರು.

''ಈ ಬಗ್ಗೆ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ. ಉತ್ತಮ ಮಳೆ ಸುರಿದರೆ ಜೂನ್‌ ತಿಂಗಳ ಕೋಟಾ ಪೂರೈಸಲು ಕರ್ನಾಟಕವೂ ಒಪ್ಪಿಗೆ ಸೂಚಿಸಿದೆ,'' ಎಂದು ಅವರು ಹೇಳಿದರು.

ಹದಿನೈದು ದಿನಗಳ ಹಿಂದೇಯೇ ಪ್ರಾಧಿಕಾರದ ಸಭೆ ನಡೆಯಬೇಕಿತ್ತು. ಕರ್ನಾಟಕದ ಮನವಿ ಮೇರೆಗೆ ಅದನ್ನು ಮುಂದೂಡಲಾಗಿತ್ತು ಎಂದು ಅವರು ಇದೇ ವೇಳೆ ತಿಳಿಸಿದರು.

*ಪೂರ್ವಭಾವಿ ಚರ್ಚೆ

ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಮಳೆ ಸುರಿಯುವ ಸಾಧ್ಯತೆ, ಜಲಾಶಯಗಳ ಒಳಹರಿವು ಮತ್ತು ಹೊರಹರಿವು, ಜಲಾನಯನ ಪ್ರದೇಶದಲ್ಲಿ ಲಭ್ಯವಾಗಲಿರುವ ನೀರಿನ ಸಮಗ್ರ ನಿರ್ವಹಣೆಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಭೆಯಲ್ಲಿ ಪೂರ್ವಭಾವಿ ಚರ್ಚೆ ನಡೆಸಲಾಯಿತು.


ಮೇಕೆ ದಾಟು ಪ್ರಸ್ತಾಪ ಇಲ್ಲ

ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕ ಸರಕಾರ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಯೋಜನೆ ಬಗ್ಗೆ ಪ್ರಾಧಿಕಾರದ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ. ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಇದರ ಬಗ್ಗೆ ಚರ್ಚೆ ಬೇಡವೆಂದು ಪ್ರಾಧಿಕಾರಕ್ಕೆ ಮನವಿ ಮಾಡಿದ್ದೆವು ಎಂದು ತಮಿಳುನಾಡು ಸರಕಾರದ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ. ಮೇಕೆದಾಟು ಯೋಜನೆಗೆ ತಮಿಳುನಾಡು ತಕರಾರು ತೆಗೆದಿದೆ.

ಯಾರು ಏನಂದರು?

* ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಬಗ್ಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ನೀರಿನ ಒಳಹರಿವು ಉತ್ತಮವಾಗಿರುತ್ತದೆ ಎಂಬ ವಿಶ್ವಾಸವಿದ್ದು, ಒಳಹರಿವು ಆಧರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಒಂದು ವೇಳೆ, ಒಳಹರಿವು ತಗ್ಗಿ ಸಂಕಷ್ಟದ ಸ್ಥಿತಿ ನಿರ್ಮಾಣವಾದರೆ ಸರ್ವಪಕ್ಷ ಮುಖಂಡರ ಸಭೆ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು. ಪ್ರಾಧಿಕಾರದ ಆದೇಶ ಮತ್ತು ರಾಜ್ಯದ ಹಿತ ಎರಡನ್ನೂ ಪಾಲನೆ ಮಾಡುವ ಕೆಲಸವನ್ನು ಸರಕಾರ ಮಾಡಲಿದೆ.
-ಡಿ.ಕೆ.ಶಿವಕುಮಾರ್‌, ಜಲಸಂಪನ್ಮೂಲ ಸಚಿವ


* ಒಳಹರಿವು ಆಧರಿಸಿ ನೀರು ಬಿಡುವಂತೆ ಕಾವೇರಿ ಪ್ರಾಧಿಕಾರ ಆದೇಶಿಸಿದ್ದು, ಇದರಲ್ಲಿ ಆತಂಕಪಡುವಂತಹ ವಿಚಾರ ಏನಿಲ್ಲ. ಸ್ವಾಭಾವಿಕ ವರ್ಷದಲ್ಲಿ ನಿಗದಿಯಂತೆ ತಮಿಳುನಾಡಿಗೆ ನದಿಯಲ್ಲಿ ನೀರು ಕೊಡುತ್ತೇವೆ. ಮಳೆ ಕೊರತೆಯಾದರೆ ಮಾತ್ರ ಸಂಕಷ್ಟ ನಿರ್ವಹಣೆ ಸೂತ್ರದಂತೆ ನಡೆದುಕೊಳ್ಳಲಾಗುತ್ತದೆ. ಮಂಡ್ಯದ ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಜೂನ್‌ ತಿಂಗಳಲ್ಲಿ ಉತ್ತಮ ಮಳೆಯಾದರೆ ಸಮಸ್ಯೆ ಇಲ್ಲ.
-ಎಂ.ಬಿ.ಪಾಟೀಲ್‌, ಗೃಹ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ