ಆ್ಯಪ್ನಗರ

ಕಾಂಗ್ರೆಸ್‌ ಕೈಗೆ ಸಿ.ಡಿ ಹೇಳಿಕೆ ಅಸ್ತ್ರ, ಜನತೆಗೆ ಸತ್ಯ ತಿಳಿಯಲು ನ್ಯಾಯಾಂಗ ತನಿಖೆಗೆ ಆಗ್ರಹ

ಯಾರು ದುರ್ಬಲ ಮುಖ್ಯಮಂತ್ರಿ ಇರುತ್ತಾರೋ, ಅವರನ್ನು ಮಾತ್ರ ಬ್ಲ್ಯಾಕ್‌ಮೇಲ್‌ ಮಾಡಲು ಸಾಧ್ಯ. ಈ ರೀತಿ ಮಾಡುವವರ ಮೇಲೆ ಅವರಿಗೆ ಕೇಸ್‌ ಹಾಕಲು ಏಕೆ ಸಾಧ್ಯವಿಲ್ಲ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Vijaya Karnataka 14 Jan 2021, 11:12 pm
ಸಿ.ಡಿ ತೋರಿಸಿ ಬ್ಲ್ಯಾಕ್‌ ಮೂಲಕ ಕೆಲವರು ಮಂತ್ರಿಯಾಗಿದ್ದಾರೆಂದರೆ ಇದೊಂದು ಅಪಾಯಕಾರಿ ಬೆಳವಣಿಗೆ. ಬಿಜೆಪಿ ಶಾಸಕರದ್ದೇ ಹೇಳಿಕೆಯಾದ್ದರಿಂದ ಸತ್ಯ ಇದೆ ಎಂದೇ ಅರ್ಥ. ಹೀಗಾಗಿ ಸಿ.ಡಿ ಮಾಡಿದವರ ವಿರುದ್ಧ ಕೇಸ್‌ ಹಾಕಬೇಕು. ಆರೋಪದ ಕುರಿತು ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ ಪಕ್ಷ ಆಗ್ರಹಿಸಿದೆ.
Vijaya Karnataka Web cd row karnataka congress demands judicial enquiry
ಕಾಂಗ್ರೆಸ್‌ ಕೈಗೆ ಸಿ.ಡಿ ಹೇಳಿಕೆ ಅಸ್ತ್ರ, ಜನತೆಗೆ ಸತ್ಯ ತಿಳಿಯಲು ನ್ಯಾಯಾಂಗ ತನಿಖೆಗೆ ಆಗ್ರಹ


ಬ್ಲ್ಯಾಕ್‌ಮೇಲ್‌‌ ಒಳಗಾಗಿದ್ದರೆ ಸಿಎಂ ದುರ್ಬಲ

ಮೈಸೂರಿನಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, "ಮುಖ್ಯಮಂತ್ರಿ ಅವರಿಗೆ ಬ್ಲ್ಯಾಕ್‌ಮೇಲ್‌ ಮಾಡಿದ್ದಲ್ಲಿ ಅವರ ವಿರುದ್ಧ ಕ್ರಿಮಿನಲ್‌ ಕೇಸ್‌ ಹಾಕುವ ಧೈರ್ಯವನ್ನು ಯಡಿಯೂರಪ್ಪ ಪ್ರದರ್ಶಿಸಲಿ" ಎಂದು ಸವಾಲು ಹಾಕಿದ್ದಾರೆ.

"ಯಾರು ದುರ್ಬಲ ಮುಖ್ಯಮಂತ್ರಿ ಇರುತ್ತಾರೋ, ಅವರನ್ನು ಮಾತ್ರ ಬ್ಲ್ಯಾಕ್‌ಮೇಲ್‌ ಮಾಡಲು ಸಾಧ್ಯ. ಈ ರೀತಿ ಮಾಡುವವರ ಮೇಲೆ ಅವರಿಗೆ ಕೇಸ್‌ ಹಾಕಲು ಏಕೆ ಸಾಧ್ಯವಿಲ್ಲ? ಪ್ರತಿಪಕ್ಷ ಆರೋಪಿಸಿದ್ದರೆ ಉದ್ದೇಶಪೂರ್ವಕ ಎನ್ನುತ್ತಿದ್ದರು. ಅವರದೇ ಪಕ್ಷದವರು ಹೇಳಿಕೆ ನೀಡಿದ್ದರ ಮರ್ಮ ಹೊರಗೆ ಬರಬೇಕು,’’ ಎಂದು ಒತ್ತಾಯಿಸಿದರು.

ಸಿ.ಡಿ ವಿಷಯ ಏನದು? ಉತ್ತರ ನೀಡುವಂತೆ ಬಿಜೆಪಿಗೆ ಕಾಂಗ್ರೆಸ್ ಆಗ್ರಹ

"ಮುನಿರತ್ನ ಅವರನ್ನು ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲಎಂದು ಗೊತ್ತಿದ್ದರೂ ಏಕೆ ತೆಗೆದುಕೊಂಡರು? ವಿಶ್ವನಾಥ ಪಾಪ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಕುಟುಂಬ ರಾಜಕಾರಣ ನಡೆಯುತ್ತಿದೆ ಎಂದು ಇವರು ಈಗ ಆರೋಪ ಮಾಡುತ್ತಿದ್ದಾರೆ. ನಾನು ಈ ಹಿಂದೆಯೇ ಹೇಳಿದ್ದೇನೆ. ಈ ಸರಕಾರದ ಬಗ್ಗೆ ಜನ ಬೇಸತ್ತಿದ್ದಾರೆ. ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ನಮ್ಮ ಅವಧಿಯಲ್ಲಿ ಜಾರಿಗೆ ತಂದ ಹಲವು ಅಭಿವೃದ್ಧಿ ಕೆಲಸಗಳಿಗೆ ತಡೆಯೊಡ್ಡಿದ್ದಾರೆ," ಎಂದು ಆಕ್ಷೇಪಿಸಿದರು.

ಸಿಎಂ ಗಟ್ಟಿ ನಿಲುವಿನವರಾಗಿದ್ದರೆ ಸಂಪುಟ ವಿಸ್ತರಣೆಗೆ ಹೈಕಮಾಂಡ್‌ ಮುಂದೆ ಗೋಗರೆಯುತ್ತಿರಲಿಲ್ಲ. ಮುನಿರತ್ನ, ವಿಶ್ವನಾಥ್‌ಗೆ ಕಾನೂನು ತೊಡಕಿದ್ದರೂ ಮಂತ್ರಿ ಮಾಡ್ತೇನೆಂದು ಭರವಸೆ ನೀಡಿದ್ದು, ಸುಳ್ಳು ವಾಗ್ದಾನ ಮಾಡಿದಂತಾಗಿದೆ," ಎಂದು ಟೀಕಿಸಿದರು.

ಸಚಿವ ಸ್ಥಾನಕ್ಕಾಗಿ ಸಿ.ಡಿ, ಬ್ಲ್ಯಾಕ್‌ ಮೇಲ್, ಭ್ರಷ್ಟಾಚಾರದ ಆರೋಪ - ನ್ಯಾಯಾಂಗ ತನಿಖೆಗೆ ಡಿಕೆಶಿ ಆಗ್ರಹ

ಸಿ.ಡಿ.ಗೆ ಯಾರು ಗುರಿ

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಬಿಎಲ್‌ ಶಂಕರ್‌, "ಸಿ.ಡಿ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡಿದ್ದು, ಅಧಿಕಾರ ಉಳಿಸಿಕೊಳ್ಳಲು ಮಠಮಾನ್ಯಗಳಿಗೆ 83 ಕೋಟಿ ರೂ. ಕೊಟ್ಟ ಆರೋಪದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು," ಆಗ್ರಹಿಸಿದ್ದಾರೆ.

'ಯತ್ನಾಳ್‌, ಎಚ್‌ ವಿಶ್ವನಾಥ್‌ ಅವರಂತಹ ಹಿರಿಯರು ಆಧಾರ ಇಲ್ಲದೆ ಮಾತನಾಡಲು ಸಾಧ್ಯವಿಲ್ಲ. ಯಾರನ್ನು ಕೇಂದ್ರವಾಗಿಟ್ಟುಕೊಂಡು ಸಿ.ಡಿ ಮಾಡಿದ್ದಾರೆ? ಮುಖ್ಯಮಂತ್ರಿಯನ್ನೋ, ಅವರ ಕುಟುಂಬದವರನ್ನೋ, ಭ್ರಷ್ಟಾಚಾರವನ್ನೋ ಎಂಬ ಬಗ್ಗೆ ಬಹಿರಂಗವಾಗಬೇಕು. ಮುಖ್ಯಮಂತ್ರಿಯನ್ನೇ ಬ್ಲ್ಯಾಕ್‌ಮೇಲ್‌ ಮಾಡುವುದಾದರೆ, ಸರಕಾರವನ್ನೂ ಬ್ಲ್ಯಾಕ್‌ಮೇಲ್‌ ಮಾಡುತ್ತಿರುವ ಸಾಧ್ಯತೆ ಇದೆ," ಎಂದು ಹೇಳಿದರು.

"ಸಿ.ಡಿ ವಿಚಾರದಲ್ಲೇ ಹಿಂದೆ ಎರಡು ಆತ್ಮಹತ್ಯೆ ಯತ್ನ ಪ್ರಕರಣಗಳೂ ನಡೆದಿವೆ. ಇವೆಲ್ಲವೂ ಒಂದು ರೀತಿ ನಿಗೂಢವಾಗಿವೆ. ಬಿಜೆಪಿ ತಾಂತ್ರಿಕವಾಗಿ ಬಹುಮತ ಪಡೆದರೂ ನೈತಿಕವಾಗಿ ಅವರಿನ್ನೂ ಅಲ್ಪಮತದಲ್ಲೇ ಇದ್ದಾರೆ," ಎಂದರು.

ಬಿಎಸ್‌ವೈ ಹೊಣೆ

ಸಂಪುಟ ವಿಸ್ತರಣೆ ಸಂಬಂಧದಲ್ಲಿ ಬ್ಲ್ಯಾಕ್‌ ಮೇಲ್‌, ಲಂಚದ ಆರೋಪ ಕೇಳಿ ಬಂದಿರುವುದರಿಂದ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ನೈತಿಕ ಹೊಣೆ ಹೊರಬೇಕು. ಜತೆಗೆ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ, "ಬಿಜೆಪಿಯೆಂದರೆ ಬ್ಲ್ಯಾಕ್‌ಮೇಲರ್ಸ್‌ ಜನತಾ ಪಕ್ಷವೆಂದು ಅರ್ಥ. ಹಾಗಂತ ಬಿಜೆಪಿಯ ನಾಯಕರೇ ಹೇಳಿಕೊಂಡಿದ್ದಾರೆ. ಸಿಎಂ ಅವರು ಸಂಪುಟಕ್ಕೆ ಯಾರನ್ನಾದೂ ಸೇರಿಸಿಕೊಳ್ಳಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಯಾವ ಸಿ.ಡಿ. ತೋರಿಸಿ ಸಿಎಂ ಬ್ಲ್ಯಾಕ್‌ಮೇಲ್‌ ಮಾಡಲಾಗಿದೆ. ಅದರಲ್ಲಿಅಂತಹ ವಿಚಾರ ಏನಿದೆ? ಸಚಿವರಾದವರು ಯಾರಿಗೆ ಎಷ್ಟು ಲಂಚ ಕೊಟ್ಟಿದ್ದಾರೆ? ಇವುಗಳು ಭ್ರಷ್ಟಾಚಾರ ಕಾಯಿದೆ ಅಡಿ ಗಂಭೀರವಾಗಿವೆ. ಇವುಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು," ಎಂದು ಆಗ್ರಹಿಸಿದರು.

ಅಲ್ಲಗಳೆದ ಸಚಿವರು


ಪ್ರಚಲಿತವಾಗಿ ಚರ್ಚೆಯಲ್ಲಿರುವ ಯಾವುದೇ ಸಿ.ಡಿ ಸದ್ದಿನ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ ಎಂದು ನೂತನ ಸಚಿವ ಆರ್‌ ಶಂಕರ್ ಹೇಳಿದ್ದಾರೆ.

"ನಮ್ಮ ಯಡಿಯೂರಪ್ಪ ಬ್ಲ್ಯಾಕ್‌ಮೇಲ್‌ಗೆ ಹೆದರುವ ರಾಜಕಾರಣಿ ಅಲ್ಲ. ಯಾವ ಸಿ.ಡಿ ಇಲ್ಲ. ನಾಯಕತ್ವ ಬದಲಾವಣೆ ವಿಚಾರ ಬಂದರೆ ಬಿ.ಎಸ್‌. ಯಡಿಯೂರಪ್ಪ ಅವರ ಪರ ಇರುತ್ತೇವೆ," ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ.

"ಎಲ್ಲರ ಬಳಿ ಸಿ.ಡಿಗಳಿವೆ. ನನ್ನ ಬಳಿಯೂ ಇದೆ. ಬಸನಗೌಡ ಪಾಟೀಲ್‌ ಯತ್ನಾಳ್‌ ಸಿ.ಡಿ ಬಿಡುಗಡೆ ಮಾಡಲಿದ್ದಾರೆ. ಅದರಲ್ಲಿಅಂಥದ್ದೇನಿದೆ ಎಂಬುದಕ್ಕೆ ಎಲ್ಲರೂ ಕಾಯಬೇಕು," ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌ ವಿಶ್ವನಾಥ್‌ ಮಾತ್ರ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ