ಆ್ಯಪ್ನಗರ

ದೆಹಲಿ ಹಿಂಸಾಚಾರ: ಅಮಿತ್ ಶಾ ರಾಜೀನಾಮೆಗೆ ಈಶ್ವರ್ ಖಂಡ್ರೆ ಒತ್ತಾಯ

ದೆಹಲಿ ಹಿಂಸಾಚಾರವನ್ನು ನಿಯಂತ್ರಣ ಮಾಡಲು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಒತ್ತಾಯಿಸಿದರು.

Vijaya Karnataka Web 28 Feb 2020, 2:39 pm
ಬೆಂಗಳೂರು: ದೆಹಲಿಯಲ್ಲಿ ನಡೆದ ಸಿಎಎ ಪರ- ವಿರೋಧಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕರ ಸಾವು ನೋವಿಗೆ ಕೇಂದ್ರದ ಬಿಜೆಪಿ ಸರ್ಕಾರ ನೇರ ಹೊಣೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಆರೋಪಿಸಿದರು.
Vijaya Karnataka Web central government should take action against delhi violence says congress leader eshwar khandre
ದೆಹಲಿ ಹಿಂಸಾಚಾರ: ಅಮಿತ್ ಶಾ ರಾಜೀನಾಮೆಗೆ ಈಶ್ವರ್ ಖಂಡ್ರೆ ಒತ್ತಾಯ


ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹೊಣೆಗಾರಿಕೆ ಗೃಹ ಇಲಾಖೆಯ ವ್ಯಾಪ್ತಿಯಲ್ಲಿ ಬರುತ್ತದೆ. ಹೀಗಿದ್ದರೂ, ಗಲಭೆ ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ.

ಈ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜೀನಾಮೆ ನೀಡಬೇಕು. ಗೃಹ ಮಂತ್ರಿ ರಾಜೀನಾಮೆ ನೀಡದಿದ್ದರೆ ರಾಷ್ಟ್ರಪತಿಗಳು ಅವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ತಾಹೀರ್ ಹುಸೇನ್ ಅಮಾನತ್ತಿಗೆ ಕಾರಣಗಳೇನು?: ಈ ಕುರಿತು ಆಪ್ ಹೇಳುವುದೇನು?

ಗಲಭೆಗೆ ಬಿಜೆಪಿ ಸಚಿವ ಅನುರಾಗ್‌ ಠಾಕೂರ್‌ ಹಾಗೂ ಕಪಿಲ್ ಮಿಶ್ರಾ ಪ್ರಚೋದನಾತ್ಮಕ ಹೇಳಿಕೆ ಕಾರಣ ಎಂದು ಆರೋಪಿಸಿದ ಖಂಡ್ರೆ, ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.

ದೆಹಲಿ ಹಿಂಸಾಚಾರಕ್ಕೆ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ ನ್ಯಾಯಾಧೀಶರಾದ ಮುರಳೀಧರ್‌ ಅವರನ್ನು ರಾತ್ರೋ ರಾತ್ರಿ ವರ್ಗಾವಣೆ ಮಾಡಿರುವುದು ಅಘಾತಕಾರಿ. ನ್ಯಾಯಾಧೀಶರನ್ನು ಹೆದರಿಸುವಂತಹ ಕೆಲಸ ದೇಶದಲ್ಲಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗಲಭೆಗೆ ಯಾವುದೇ ಪಕ್ಷದವರು ಕಾರಣವಾಗಿರಲಿ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಬೇಕು ಎಂದು ಒತ್ತಾಯಿಸಿದರು.

ದೆಹಲಿ ಪೊಲೀಸ್ ಕಮಿಷನರ್ ಆಗಿ ಶ್ರೀವಾತ್ಸವ್ ನೇಮಕ: ದಂಗೆ ಅಡಗಿಸಲಿದ್ದಾರಾ ಜನರ ಸೇವಕ?

ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ನಡೆದ ಪರ-ವಿರೋಧ ಪ್ರತಿಭಟನೆ ಮತೀಯ ಹಿಂಸೆಗೆ ತಿರುಗಿದ ಪರಿಣಾಮ 38 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಗಲಭೆಯಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಸದ್ಯ ರಾಜಕೀಯ ಆರೋಪ ಪತ್ಯಾರೋಪಕ್ಕೆ ದೆಹಲಿ ಹಿಂಸಾಚಾರ ಕಾರಣವಾಗಿದೆ. ಗಲಭೆ ಪೀಡಿತ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ಕೈಗೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ