ಆ್ಯಪ್ನಗರ

ಪ್ರವಾಹಕ್ಕಿಲ್ಲ ಪರಿಹಾರ: 45 ದಿನವಾದರೂ ನೆರೆ ಸಂತ್ರಸ್ತರಿಗೆ ಸ್ಪಂದಿಸಲ ಕೇಂದ್ರ ಸರಕಾರ

ನೆರೆ ಸಂತ್ರಸ್ತರ ಸಂಕಟಕ್ಕೆ ಒಂದೂವರೆ ತಿಂಗಳಾದರೂ ಕೇಂದ್ರ ಸರಕಾರ ನೆರವಿನ ಮುಂದಾಗಿಲ್ಲ.

Vijaya Karnataka 15 Sep 2019, 7:16 am
ಬೆಂಗಳೂರು: ನೆರೆ ಸಂತ್ರಸ್ತರ ಸಂಕಟಕ್ಕೆ ಒಂದೂವರೆ ತಿಂಗಳಾದರೂ ನೆರವಿನ ಕಾರ್ಯಕ್ಕೆ ಕೇಂದ್ರ ಸರಕಾರ ಮುಂದಾಗಿಲ್ಲ. ಪ್ರವಾಹದಿಂದ ಕಂಗೆಟ್ಟು ಹೋಗಿರುವ ರಾಜ್ಯದ ಸ್ಥಿತಿಗತಿ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಕೇಂದ್ರ ತಂಡ ಈಗಾಗಲೇ ಒಂದು ಸುತ್ತು ಸಮೀಕ್ಷೆ ನಡೆಸಿದ್ದರೂ ನ್ಯಾಯೋಚಿತ ಪರಿಹಾರವನ್ನು ಬಿಡುಗಡೆ ಮಾಡಿಲ್ಲ.
Vijaya Karnataka Web kf


ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಸಂಪುಟದ ಅನೇಕ ಸಚಿವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ-ಸಂಕಟ ಆಲಿಸಿದ್ದಾರೆ. 22 ಜಿಲ್ಲೆಗಳ 103 ತಾಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಿದ್ದಾರೆ. ತುರ್ತು ಆಗಬೇಕಿರುವ ಕೆಲಸಗಳಿಗೆ ಕಂದಾಯ ಇಲಾಖೆ ಮೂಲಕ 413 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ ಈ ಮೊತ್ತ ಬೆಟ್ಟದಂಥ ಸಮಸ್ಯೆಗೆ ಸಾಸಿವೆ ಕಾಳಿನ ಪರಿಹಾರ ಎಂಬಂತಾಗಿದೆ. ಸಂತ್ರಸ್ತರ ಎಲ್ಲಆದ್ಯತೆಗಳನ್ನು ಪೂರೈಸುವುದಕ್ಕೆ ರಾಜ್ಯದ ಖಾಲಿ ಖಜಾನೆಗೆ ಅಸಾಧ್ಯವಾಗುತ್ತಿದೆ.ನಷ್ಟದ ಪ್ರಮಾಣಕ್ಕೆ ಹೋಲಿಸಿದರೆ ರಾಜ್ಯ ಸರಕಾರ ಬಿಡುಗಡೆ ಮಾಡಿರುವ ಹಣ ಶೇ.1ಕ್ಕಿಂತ ಕಡಿಮೆ.

ಪ್ರವಾಹದಿಂದ ಬೆಳೆ, ಮೂಲ ಸೌಕರ‍್ಯ, ಮನೆ, ಸೇತುವೆ, ಕೃಷಿ ಭೂಮಿ ನಾಶ ಸೇರಿದಂತೆ ಸುಮಾರು 38 ಸಾವಿರ ಕೋಟಿ ರೂ. ಹಾನಿಯಾಗಿದೆ ಎಂಬ ಪ್ರಾಥಮಿಕ ಅಂದಾಜು ವರದಿ ತಯಾರಿಸಿ, ಅದನ್ನು ಕೇಂದ್ರ ಸರಕಾರಕ್ಕೂ ರವಾನಿಸಿದೆ. ಆದರೂ ಪರಿಹಾರ ಬಂದಿಲ್ಲ. ಕೇಂದ್ರ ಸರಕಾರ ರಾಜ್ಯ ಸರಕಾರದ ಮಾಹಿತಿಯನ್ನು ನಂಬುತ್ತಿಲ್ಲವೇ ಎಂಬ ಪ್ರಶ್ನೆ ಎದ್ದಿದೆ.

ಸಂತ್ರಸ್ತರಿಗೆ ನೀಡಿದ ಚೆಕ್‌ ಬೌನ್ಸ್‌

ಮನೆ ಕಳೆದುಕೊಂಡವರಿಗೆ ತಕ್ಷಣದ ಪರಿಹಾರಕ್ಕಾಗಿ ನೀಡಲು ಉದ್ದೇಶಿಸಿದ್ದ 10 ಸಾವಿರ ರೂ. ಚೆಕ್‌ ಮೊತ್ತವೂ ಇದರಲ್ಲಿಸೇರಿದೆ. ಕಂದಾಯ ಇಲಾಖೆ ಬಿಡುಗಡೆ ಮಾಡಿದ ಈ ಹಣ ನೇರವಾಗಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಗೆ ಜಮಾ ಆಗುತ್ತಿದೆಯಾದರೂ, ಕೆಲವೆಡೆ ತುರ್ತು ಕಾಮಗಾರಿ ಹಣ ನಿಯೋಜನೆ ಮಾಡಿರುವುದರಿಂದ ರಾಜ್ಯ ಸರಕಾರ ನೀಡಿದ ಚೆಕ್‌ ಬೌನ್ಸ್‌ ಆಗುತ್ತಿವೆ. ಇದರಿಂದ ಸಂತ್ರಸ್ತರ ಸ್ಥಿತಿಯನ್ನು ಅಣಕ ಮಾಡಿದಂತಾಗುತ್ತಿದೆ.

ಇನ್ನು ರಸ್ತೆ, ಸೇತುವೆ ಸೇರಿದಂತೆ ಮೂಲ ಸೌಕರ್ಯ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆಗೆ 500 ಕೋಟಿ ರೂ. ಹಾಗೂ ಮನೆ ನಿರ್ಮಾಣಕ್ಕೆ ವಸತಿ ಇಲಾಖೆಗೆ 100 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮೌಖಿಕವಾಗಿ ಹೇಳಿಕೆ ನೀಡುತ್ತಿದ್ದರೂ, ಹಣಕಾಸು ಇಲಾಖೆಯಿಂದ ಅಧಿಕೃತ ಆದೇಶ ಪ್ರಕಟವಾಗಿಲ್ಲ. ಇದು ಮರು ನಿರ್ಮಾಣ ಕಾರ್ಯಕ್ಕೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ.

ಕೇಂದ್ರದತ್ತ ಮೊರೆ

ಈ ಎಲ್ಲಕಾರಣಗಳಿಂದ ರಾಜ್ಯ ಸರಕಾರ ಕೇಂದ್ರ ಸರಕಾರದತ್ತ ನಿರೀಕ್ಷೆಯ ದೃಷ್ಟಿ ಹರಿಸಿದೆ. ಕೇಂದ್ರ ತಂಡ ಪರಿಶೀಲನೆ ನಡೆಸಿ ತೆರಳಿದ್ದರೂ ಗೃಹ ಇಲಾಖೆಯ ಉನ್ನತ ಮಟ್ಟದ ಸಭೆ ಇನ್ನೂ ನಡೆದಿಲ್ಲ. ರಾಜ್ಯ ಸರಕಾರ ಈಗಾಗಲೇ ಕಳುಹಿಸಿರುವ ಮನವಿ ಪತ್ರ ಆಧರಿಸಿ ಕೇಂದ್ರ ಕೆಲ ಸ್ಪಷ್ಟನೆಗಳನ್ನೂ ಕೇಳಿದೆ. ರಾಜ್ಯದ ಉತ್ತರ ಸಮಾಧಾನಕರವಾಗಿದ್ದರೆ ಮಾತ್ರ ಪರಿಹಾರ ಬಿಡುಗಡೆ ಕಾರ್ಯಕ್ಕೆ ತುಸು ವೇಗ ಸಿಗುವ ಸಾಧ್ಯತೆ ಇದೆ.

ಪ್ರವಾಹ ನಷ್ಟ 38 ಸಾವಿರ ಕೋಟಿ ರೂ.

ಹಣ ಬಿಡುಗಡೆ 413 ಕೋಟಿ ರೂ.

ಪೀಡಿತ ಜಿಲ್ಲೆ: 22

ತಾಲೂಕು : 103

ಹಾನಿಗೊಂಡ ಮನೆ 2.47 ಲಕ್ಷ

ಬೆಳೆ ನಾಶ 8.8 ಲಕ್ಷ ಹೆಕ್ಟೇರ್‌

ಹಾನಿಗೊಂಡ ರಸ್ತೆ 22 ಸಾವಿರ ಕಿ.ಮೀ

ಕೃಷಿ ಭೂಮಿ ನಾಶ 10 ಸಾವಿರ ಹೆಕ್ಟೇರ್‌

ಮೃತಪಟ್ಟವರು 87

ನೆಲೆ ಕಳೆದುಕೊಂಡವರು 7 ಲಕ್ಷ

ಕಾಳಜಿ ಕೇಂದ್ರದಲ್ಲಿ4.6 ಲಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ