ಆ್ಯಪ್ನಗರ

ಉದ್ಯೋಗ ಸೃಷ್ಟಿ ಬಗ್ಗೆ ಕೇಂದ್ರ ಶ್ವೇತಪತ್ರ ಹೊರಡಿಸಲಿ: ದೇವನೂರು ಮಹಾದೇವ

''ಭಾರತದ ಇಂದಿನ ಗತಿಯನ್ನು ಗಮನಿಸಿದರೆ ದಿಗಿಲಾಗುತ್ತದೆ. ಬುಡಕಟ್ಟು ಜನರು, ರೈತರು, ಕಾರ್ಮಿಕರಿಗೆ ಉಳಿಗಾಲ ಇಲ್ಲದಂತಾಗಿದೆ. ನಿರುದ್ಯೋಗ ಹೆಚ್ಚಾಗುತ್ತಿದೆಯೇ ಹೊರತು ನೈಜ ಅಭಿವೃದ್ಧಿ ಆಗುತ್ತಿಲ್ಲ. ಇದರಿಂದ ಸಮುದಾಯದ ಬದುಕು ಅನಿಶ್ಚಿತತೆಯಲ್ಲಿ ತೊಯ್ದಾಡುತ್ತಿದೆ,'' ಎಂದು ಆತಂಕ ವ್ಯಕ್ತಪಡಿಸಿದರು.

Vijaya Karnataka 11 Mar 2019, 7:30 am
ಬೆಂಗಳೂರು: ಕೇಂದ್ರ ಸರಕಾರ ಉದ್ಯೋಗ ಸೃಷ್ಟಿ ಬಗ್ಗೆ ಶ್ವೇತಪತ್ರ ಹೊರಡಿಸುವುದರ ಜತೆಗೆ ಉದ್ಯೋಗವನ್ನು ಮೂಲಭೂತ ಹಕ್ಕನ್ನಾಗಿಸಬೇಕಾದ ಅಗತ್ಯವಿದೆ ಎಂದು ಸಾಹಿತಿ ದೇವನೂರು ಮಹಾದೇವ ಅಭಿಪ್ರಾಯಪಟ್ಟರು.
Vijaya Karnataka Web Devnur


ನಮ್ಮ ಧ್ವನಿ ವೇದಿಕೆ ಗಾಂಧಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ 'ಪ್ರಬುದ್ಧ ಭಾರತ' ವಿಷಯ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ''ಸಂಸತ್‌ ಚುನಾವಣೆ ವೇಳೆ ಮತ ಕೇಳಲು ಮನೆಬಾಗಿಲಿಗೆ ಬರುವ ರಾಜಕಾರಣಿಗಳನ್ನು ಉದ್ಯೋಗ ಮೂಲಭೂತ ಹಕ್ಕಿನ ಕುರಿತು ಪ್ರಶ್ನಿಸಬೇಕು. ಈ ವಿಷಯವನ್ನು ಯುವಜನತೆ ಪ್ರಬಲವಾಗಿ ಪ್ರತಿಪಾದಿಸಿ ಚರ್ಚೆಯ ವಿಷಯವನ್ನಾಗಿಸಬೇಕಿದೆ,'' ಎಂದರು.

''ಭಾರತದ ಇಂದಿನ ಗತಿಯನ್ನು ಗಮನಿಸಿದರೆ ದಿಗಿಲಾಗುತ್ತದೆ. ಬುಡಕಟ್ಟು ಜನರು, ರೈತರು, ಕಾರ್ಮಿಕರಿಗೆ ಉಳಿಗಾಲ ಇಲ್ಲದಂತಾಗಿದೆ. ನಿರುದ್ಯೋಗ ಹೆಚ್ಚಾಗುತ್ತಿದೆಯೇ ಹೊರತು ನೈಜ ಅಭಿವೃದ್ಧಿ ಆಗುತ್ತಿಲ್ಲ. ಇದರಿಂದ ಸಮುದಾಯದ ಬದುಕು ಅನಿಶ್ಚಿತತೆಯಲ್ಲಿ ತೊಯ್ದಾಡುತ್ತಿದೆ,'' ಎಂದು ಆತಂಕ ವ್ಯಕ್ತಪಡಿಸಿದರು.

ಪರ್ಯಾಯ ರಾಜಕೀಯ ಶಕ್ತಿ ಅಗತ್ಯ:

ನಟ ಪ್ರಕಾಶ್‌ರಾಜ್‌ ಮಾತನಾಡಿ ''ಬಿಜೆಪಿ ಹಾಗೂ ಕಾಂಗ್ರೆಸ್‌ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ನೈಜ ರಾಜಕಾರಣವನ್ನು ಮಾಡುತ್ತಿಲ್ಲ. ಅದರಲ್ಲೂ ಕಾಂಗ್ರೆಸ್‌ ಪ್ರಗತಿಪರರನ್ನು ದಾಳವಾಗಿ ಬಳಸಿಕೊಂಡಿತೇ ಹೊರತು ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲಿಲ್ಲ. ಇದರಿಂದಾಗಿ ಈ ಎರಡೂ ಪಕ್ಷಗಳ ಸಿದ್ಧಾಂತಗಳಿಗೆ ಹೊರತಾದ ಪರ್ಯಾಯ ರಾಜಕಾರಣವನ್ನು ಹುಟ್ಟು ಹಾಕಬೇಕಿದೆ,'' ಎಂದರು. ರಾಜ್ಯಸಭೆ ಸದಸ್ಯ ಡಾ.ಎಲ್‌.ಹನುಮಂತಯ್ಯ, ಮಾಜಿ ಶಾಸಕ ವೈ.ಎಸ್‌.ವಿ.ದತ್ತ, ಮಹೇಂದ್ರಕುಮಾರ್‌,ಇಕ್ಬಾಲ್‌ ಅಹಮದ್‌ ಷರೀಫ್‌ ಮತ್ತಿತರರಿದ್ದರು.

ದೇಶ ಆಳುತ್ತಿರುವವರು ಅಂಬಾನಿ/ಅದಾನಿಯೋ ಅಥವಾ ಚುನಾಯಿತ ಜನಪ್ರತಿನಿಧಿಗಳೇ ಎಂಬ ಸಂಶಯ ಮೂಡಿದೆ. ಹಿಂದೆ ಕಂಪನಿ ಸರಕಾರಕ್ಕೆ ಕಪ್ಪ ನೀಡುತ್ತಿದ್ದ ರೀತಿ ಈಗ ಏಳೆಂಟು ವಿದೇಶಿ ಕಂಪನಿಗಳಿಗೆ ಸರಕಾರ ಮಣೆ ಹಾಕಿದೆ- ದೇವನೂರು ಮಹಾದೇವ, ಹಿರಿಯ ಸಾಹಿತಿ

ನಾನು ನಗರ ನಕ್ಸಲ್‌: ಡಾ.ಸಿ.ಎಸ್‌. ದ್ವಾರಕಾನಾಥ್‌'

''ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ನಾನು ನಗರ ನಕ್ಸಲ್‌ ಆಗಿರುವೆ. ಶಸ್ತ್ರ ಹಿಡಿಯದೆ ಅಹಿಂಸಾ ಮಾರ್ಗದಲ್ಲಿ ನಕ್ಸಲ್‌ ಚಳವಳಿಯತ್ತ ಸಾಗಿರುವೆ. ಈ ರೀತಿಯಾಗಿ ಹೇಳಿಕೊಳ್ಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ. ಜಿಯೋ ಡೇಟಾ ಬಳಸುವುದು ದೇಶಪ್ರೇಮ ಅಲ್ಲ. ಬಡವರು ವರ್ಷಕ್ಕೆ 3,200 ರೂ. ಜಿಎಸ್‌ಟಿ ರೂಪದಲ್ಲಿ ಹಣ ತೆರುತ್ತಿದ್ದರೂ, ಅದಕ್ಕೆ ಪ್ರತಿಯಾಗಿ ಸರಕಾರದಿಂದ ಯಾವ ಸವಲತ್ತನ್ನೂ ಪಡೆಯುತ್ತಿಲ್ಲ ,''ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್‌.ದ್ವಾರಕಾನಾಥ್‌ ಆಕ್ಷೇಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ