ಆ್ಯಪ್ನಗರ

ಅತಿವೃಷ್ಠಿ ಪರಿಹಾರಕ್ಕೆ 2000 ಕೋಟಿ ಕೊಡಿ: ಕೇಂದ್ರಕ್ಕೆ ಸಿಎಂ ನೇತೃತ್ವದ ನಿಯೋಗ ಮನವಿ

ಅತಿವೃಷ್ಠಿಯಿಂದ ಕೊಡಗು ಸೇರಿದಂತೆ ರಾಜ್ಯದ ಹಲವು ಭಾಗಗಲ್ಲಿ ಭಾರಿ ಅನಾಹುತವಾಗಿದ್ದು, ಪ್ರಾಥಮಿಕ ವರದಿ ಪ್ರಕಾರ 3435.80 ಕೋಟಿ ಹಾನಿ ಅಂದಾಜಿಸಿದ್ದು, ತಕ್ಷಣದ ಪರಿಹಾರಕ್ಕೆ 2000 ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರಕ್ಕೆ ರಾಜ್ಯ ಮನವಿ ಮಾಡಿದೆ.

Vijaya Karnataka 31 Aug 2018, 7:24 am
ಬೆಂಗಳೂರು: ಅತಿವೃಷ್ಠಿಯಿಂದ ಕೊಡಗು ಸೇರಿದಂತೆ ರಾಜ್ಯದ ಹಲವು ಭಾಗಗಲ್ಲಿ ಭಾರಿ ಅನಾಹುತವಾಗಿದ್ದು, ಪ್ರಾಥಮಿಕ ವರದಿ ಪ್ರಕಾರ 3435.80 ಕೋಟಿ ಹಾನಿ ಅಂದಾಜಿಸಿದ್ದು, ತಕ್ಷಣದ ಪರಿಹಾರಕ್ಕೆ 2000 ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರಕ್ಕೆ ರಾಜ್ಯ ಮನವಿ ಮಾಡಿದೆ.
Vijaya Karnataka Web hdk


ಸಿಎಂ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ, ಸಹಕಾರ ಸಚಿವ ಬಂಡೆಪ್ಪ ಕಾಶಂಪುರ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌ ಅವರಿದ್ದ ನಿಯೋಗ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಮಳೆ ನಿಂತ ಬಳಿಕ ಕೊಡಗು ಹಾಗೂ ಮಲೆನಾಡು ಜಿಲ್ಲೆಯಲ್ಲಿ ಹಾನಿಯ ಬಗ್ಗೆ ಸಮೀಕ್ಷೆ ನಡೆಸಿ ಅಂತಿಮ ವರದಿ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲಾಗುವುದು. ಕೇಂದ್ರ ಸರಕಾರಕ್ಕೂ ಹಾನಿ ಪರಿಶೀಲನೆಗೆ ನಿಯೋಗ (ಐಎಂಸಿಟಿ ) ಕಳುಹಿಸಿಕೊಡುವಂತೆ ನಿಯೋಗ ಕೇಳಿಕೊಂಡಿದೆ.

''ಕೊಡಗು ಸೇರಿದಂತೆ ಮಲೆನಾಡು, ಕರಾವಳಿ ಜಿಲ್ಲೆಯಲ್ಲಿ ಸುರಿದ ವ್ಯಾಪಕ ಮಳೆಯಿಂದ ನಾಗರಿಕರ ರಕ್ಷಣಾ ಕಾರ್ಯಕ್ಕೆ ಕೇಂದ್ರ ಸರಕಾರ ಎನ್‌ಡಿಆರ್‌ಎಫ್‌ ಪಡೆಯನ್ನು ಸಕಾಲಕ್ಕೆ ಕಳುಹಿಸಿಕೊಟ್ಟಿದೆ. ಒಟ್ಟು 65 ಮಂದಿ ಪ್ರಾಣ ಕಳೆದುಕೊಂಡಿದ್ದು, 5500 ಮನೆಗಳು ಹಾನಿಗೊಂಡಿವೆ. ಸುಮಾರು 2000 ಕಿಮೀ ರಸ್ತೆ ನಿರ್ನಾಮಗೊಂಡಿರುವುದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಕೊಡಗು ಜಿಲ್ಲೆಯಲ್ಲಿ ಇನ್ನೂ ಮಳೆ ಸುರಿಯುತ್ತಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಸರ್ವೆ ನಡೆಸಿ ಪ್ರತ್ಯೇಕ ವರದಿ ನೀಡಲಾಗುವುದು,'' ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇದಕ್ಕೂ ಮುನ್ನ ನಿಯೋಗವು ಪ್ರಧಾನ ಮಂತ್ರಿ ಕಾರ್ಯಾಲಯದ ರಾಜ್ಯಸಚಿವ ಜಿತೇಂದ್ರ ಸಿಂಗ್‌ ಅವರನ್ನು ಭೇಟಿಯಾಗಿ ರಾಜ್ಯದ ನೆರೆ ಮತ್ತು ಬರ ಪರಿಸ್ಥಿತಿ ಕುರಿತು ಸಮಾಲೋಚಿಸಿದರು.


ರಾಷ್ಟ್ರಪತಿ ಭೇಟಿ

ಸಚಿವ ಬಂಡೆಪ್ಪ ಕಾಶಂಪೂರ ಜತೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಲೇವಾದೇವಿ, ಗಿರವಿದಾರರಿಂದ ರೈತರು ಹಾಗೂ ಕಡುಬಡವರು ಪಡೆದಿರುವ ಖಾಸಗಿ ಸಾಲ ಮನ್ನಾ ಮಾಡಲು ಉದ್ದೇಶಿತ 'ಋುಣ ಪರಿಹಾರ ಅಧಿನಿಯಮ 2018' ಸುಗ್ರೀವಾಜ್ಞೆ ಯ ಬಗ್ಗೆ ಮನವರಿಕೆ ಮಾಡಿಕೊಟ್ಟು ಅಂಕಿತ ಹಾಕಬೇಕೆಂದು ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ