ಆ್ಯಪ್ನಗರ

ನಿಗಮ ಮಂಡಳಿಗಳಲ್ಲಿ ಬೆಂಬಲಿಗರಿಗೆ ಸ್ಥಾನ ಕೊಡಿಸಲು ಕಾಂಗ್ರೆಸ್‌ ತ್ರಿಮೂರ್ತಿಗಳ ಹೊಯ್ದಾಟ

Congress Corporation Boards Selection Fight : ರಾಜ್ಯ ಕಾಂಗ್ರೆಸ್‌ನಲ್ಲಿ ನಿಗಮ ಮಂಡಳಿ ಹಾಗೂ ಬೆಂಬಲಿಗರಿಗೆ ಸ್ಥಾನ ಕೊಡಿಸುವ ನಿಟ್ಟಿನಲ್ಲಿ ಗಲಾಟೆ ಜೋರಿದೆ. ಡಿಕೆ ಶಿವಕುಮಾರ್‌, ಜಿ ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಬಿಗಿಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

Edited by ಜಯಪ್ರಕಾಶ್‌ ಬಿರಾದಾರ್‌ | Vijaya Karnataka 24 Jan 2024, 12:12 am

ಹೈಲೈಟ್ಸ್‌:

  • ನಿಗಮ -ಮಂಡಳಿ ನೇಮಕದಲ್ಲಿ ಬೆಂಬಲಿಗರಿಗಾಗಿ ಬಿಗಿಪಟ್ಟು
  • ಕೈ ತ್ರಿಮೂರ್ತಿಗಳ ಹೊಯ್ದಾಟ; ನನ್ನನ್ನು ಯಾರೂ ಕೇಳಿಲ್ಲಎಂದ ಡಾ.ಜಿ ಪರಮೇಶ್ವರ್‌,
  • ನೋ ನೋ, ಅದೆಲ್ಲಾ ಸುಳ್ಳು ಎಂದ ಡಿಕೆ ಶಿವಕುಮಾರ್‌; ಅನಪೇಕ್ಷಿತರ ಹೆಸರು ಪಟ್ಟಿ ಸೇರಿದ್ದೇಗೆ- ಸಿಎಂ ಸಿಡಿಮಿಡಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಡಿಕೆ ಶಿವಕುಮಾರ್‌ ಸಿದ್ದರಾಮಯ್ಯ
ಡಿಕೆ ಶಿವಕುಮಾರ್‌ ಸಿದ್ದರಾಮಯ್ಯ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಸರ್ಕಾರ ಅಧಿಕಾರಕ್ಕೆ ಬಂದು ಎಂಟು ತಿಂಗಳು ಮುಗಿದರೂ ನಿಗಮ -ಮಂಡಳಿ ನೇಮಕವಾಗದೆ, ಹುದ್ದೆ ಆಕಾಂಕ್ಷಿ ಶಾಸಕರು ಮತ್ತು ಮುಖಂಡರನ್ನು ನಿರಾಶೆ ಆವರಿಸಿರುವುದು ಒಂದೆಡೆಯಾದರೆ, ನಾಮನಿರ್ದೇಶನ ಪಟ್ಟಿ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್‌ನಲ್ಲಿನ ನಡೆದಿದ್ದ ಮುಸುಕಿನ ಗುದ್ಧಾಟ ಬಯಲಿಗೆ ಬಂದಿದೆ. ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮಧ್ಯೆ ಪಟ್ಟಿ ವಿಚಾರದಲ್ಲಿ ಜಟಾಪಟಿ ನಡೆದಿದೆ.
ನಾಲ್ಕೈದು ಸುತ್ತಿನ ಸಮಾಲೋಚನಾ ಸಭೆಗಳ ಬಳಿಕ ಅಂತಿಮಗೊಳಿಸಿದ್ದ ನಾಮನಿರ್ದೇಶನ ಪಟ್ಟಿಗೆ ಅನುಮೋದನೆ ಹಂತದಲ್ಲಿಎಐಸಿಸಿ ಮಟ್ಟದಲ್ಲಿ ಕೆಲವು ಹೆಸರುಗಳು ಸೇರ್ಪಡೆಯಾಗಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಸಿಡಿಮಿಡಿ ವ್ಯಕ್ತಪಡಿಸಿದ್ದಾರೆ. ಇದರಿಂದ ಪಟ್ಟಿ ಪ್ರಕಟಣೆಗೆ ಬ್ರೇಕ್‌ ಬಿದ್ದಿದೆ. ಇದರ ಬೆನ್ನಲ್ಲೇ, ಹಿರಿಯರಾದ ತಮ್ಮ ಅಭಿಪ್ರಾಯ ಕೇಳದೆಯೇ ಪಟ್ಟಿ ಸಿದ್ದಪಡಿಸಿರುವುದಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಎಲ್ಲಬೆಳವಣಿಗೆ ಆಡಳಿತಾರೂಢ ಕಾಂಗ್ರೆಸ್‌ನಲ್ಲಿಗೊಂದಲ, ರೇಜಿಗೆ ಸೃಷ್ಟಿಸಿದೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್‌, '' ನಿಗಮ- ಮಂಡಳಿ ನೇಮಕ ವಿಚಾರದಲ್ಲಿ ನಮ್ಮನ್ನು ಯಾರೂ ಸಂಪರ್ಕ ಮಾಡಿಲ್ಲ. ಪಕ್ಷದಲ್ಲಿ ಜಿಲ್ಲಾವಾರು ಕೆಲಸ ಮಾಡಿರುವುದು ಯಾರು ಎಂಬುದು ನಮಗೆ ಗೊತ್ತಿರುತ್ತದೆ. ನಮ್ಮ ಅಭಿಪ್ರಾಯ ಕೇಳದೆ ಅಧಿಕಾರ ಹಂಚಿದರೆ, ಪಕ್ಷಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದವರಿಗೆ ಬೇಸರವಾಗುತ್ತದೆ,'' ಎಂದು ಹೇಳಿದರು.

ಡಿಸಿಎಂ ಸಮರ್ಥನೆ

ಪರಮೇಶ್ವರ್‌ ಹೇಳಿಕೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟವಾಗಿ ತಳ್ಳಿಹಾಕಿದರು. ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ, ''ನಿಗಮ -ಮಂಡಳಿ ನೇಮಕದಲ್ಲಿನಮ್ಮ ಅಭಿಪ್ರಾಯ ಪಡೆದಿಲ್ಲಎಂಬುದು ಸುಳ್ಳು. ಎಲ್ಲರ ಅಭಿಪ್ರಾಯ ಪಡೆದು ನಾಮನಿರ್ದೇಶನ ಪ್ರಕ್ರಿಯೆ ಸಂಬಂಧ ಮಾರ್ಗಸೂಚಿ ನಿಗದಿ ಮಾಡಿದ್ದು, ಅದರಂತೆ ಅಧಿಕಾರ ಹಂಚಲಾಗುವುದು,'' ಎಂದು ಸಮಜಾಯಿಷಿ ನೀಡಿದರು.

ಸಿಎಂ ಸಿಡಿಮಿಡಿ, ನೇಮಕಕ್ಕೆ ಬ್ರೇಕ್‌

ನಾಮನಿರ್ದೇಶನ ಪಟ್ಟಿಗೆ ಅನುಮೋದನೆ ಹಂತದಲ್ಲಿಎಐಸಿಸಿ ಹೈಕಮಾಂಡ್‌ ಅಂಗಳದಲ್ಲಿಹೆಚ್ಚುವರಿಯಾಗಿ ಕೆಲವು ಅನಪೇಕ್ಷಿತ ಹೆಸರುಗಳು ಸೇರ್ಪಡೆಯಾಗಿರುವುದು ಸಿಎಂ ಸಿದ್ದರಾಮಯ್ಯ ಅವರನ್ನು ಕೆರಳಿಸಿದೆ.

ತವರು ಮೈಸೂರಿನ ನರೇಂದ್ರ, ಕೆಪಿಸಿಸಿ ಶಿಷ್ಠಾಚಾರ ವಿಭಾಗದಲ್ಲಿದ್ದ ಸುಧೀಂದ್ರ ಸೇರಿದಂತೆ ಎಂಟು- ಹತ್ತು ಹೆಸರು ತಮ್ಮ ಗಮನಕ್ಕೇ ಬರದೆ ಹೈಕಮಾಂಡ್‌ ಅಂಗಳದಲ್ಲಿಸೇರಿರುವುದಕ್ಕೆ ಸಿಎಂ 'ಗರಂ' ಆಗಿದ್ದು, ಅನುಮೋದಿತ ಪಟ್ಟಿಯನ್ನು ಒಪ್ಪಿಲ್ಲ. ಹೀಗಾಗಿ ಪಟ್ಟಿಗೆ ಬ್ರೇಕ್‌ ಬಿದ್ದಿದೆ. ಈ ಬಿಕ್ಕಟ್ಟಿಗೆ ಪರಿಹಾರ ಹುಡುಕಲು ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲ ಮತ್ತೆ ನಗರಕ್ಕೆ ಆಗಮಿಸುತ್ತಿದ್ದು, ಶುಕ್ರವಾರ ಈ ಸಂಬಂಧ ಮತ್ತೊಂದು ಸುತ್ತಿನ ಕಸರತ್ತು ನಡೆಯಲಿದೆ.

ಹೈಕಮಾಂಡ್‌ನತ್ತ ಬೊಟ್ಟು

ಮೊದಲ ಹಂತದಲ್ಲಿ ಶಾಸಕರನ್ನು ಪ್ರಮುಖ ನಿಗಮ -ಮಂಡಳಿಗಳಿಗೆ ನೇಮಕ ಮಾಡಲು ನಿರ್ಧರಿಸಿ ಪಟ್ಟಿ ಮಾಡಲಾಗಿತ್ತು. ಆದರೆ, ಮೊದಲ ಪಟ್ಟಿಯಲ್ಲಿಕಾರ್ಯಕರ್ತರೂ ಸೇರಬೇಕು ಎಂದು ರಾಹುಲ್‌ಗಾಂಧಿ ಫರ್ಮಾನು ಹೊರಡಿಸಿದ ಹಿನ್ನೆಲೆಯಲ್ಲಿಸಿಎಂ ಮತ್ತು ಡಿಸಿಎಂ ಒಟ್ಟಾಗಿ ಚರ್ಚಿಸಿ ಕಳೆದ ವಿಧಾನಸಭೆ ಚುನಾವಣೆಯಲ್ಲಿಅಭ್ಯರ್ಥಿ ಆಕಾಂಕ್ಷಿಗಳಾಗಿದ್ದವರು ಸೇರಿ ನಾನಾ ಪ್ರಮುಖರ ಪಟ್ಟಿಯನ್ನು ಸೇರಿಸಿ ಒಟ್ಟಾರೆ 72 ಮಂದಿ ಪಟ್ಟಿಯನ್ನು ಎಐಸಿಸಿ ಅನುಮೋದನೆಗೆ ಸಲ್ಲಿಸಲಾಗಿತ್ತು.

ಆದರೆ, ವರಿಷ್ಠರ ಒಪ್ಪಿಗೆ ಪಡೆದ ಪಟ್ಟಿಯಲ್ಲಿರಾಜ್ಯ ನಾಯಕರ ಮಟ್ಟದಲ್ಲಿಚರ್ಚೆಯೇ ಆಗದ ಹಲವು ಹೆಸರುಗಳು ಸೇರಿದ್ದವು. ದಿಲ್ಲಿಹೈಕಮಾಂಡ್‌ ಅಂಗಳದಲ್ಲಿದಿಢೀರ್‌ ಸೇರ್ಪಡೆಯಾದ ಕೆಲವು ಹೆಸರುಗಳು ಸಿಎಂ ಕಣ್ಣು ಕೆಂಪಾಗಿಸಿದೆ. ಕಳೆದ ವಾರ ರಾಜ್ಯ ಚುನಾವಣಾ ಸಮಿತಿ ಸಭೆ ಬಳಿಕ ಸುರ್ಜೇವಾಲ ಎದುರು ಸಿಎಂ ತಮ್ಮ ಅಸಮಾಧಾನ ಹೊರಹಾಕಿದ್ದರು. ತಮ್ಮ ಗಮನಕ್ಕೇ ಬಾರದೆ ಹೆಸರುಗಳು ಪಟ್ಟಿ ಸೇರುವುದಾದರೆ, ಮೂರ್ನಾಲ್ಕು ಬಾರಿ ದಿನಗಟ್ಟಲೆ ಚರ್ಚೆ ಮಾಡಿ ಪಟ್ಟಿ ಸಿದ್ದಪಡಿಸಿದ್ದು ಏಕೆ? ಎಂದು ಸಿಎಂ ಸಿದ್ದರಾಮಯ್ಯ ಬೇಸರಗೊಂಡಿದ್ದರು. ಹೀಗಾಗಿ, ಪಟ್ಟಿಗೆ ತಡೆ ನೀಡಲಾಗಿತ್ತು.

ನಿಗಮ -ಮಂಡಳಿ ನೇಮಕಕ್ಕೆ ಸಂಬಂಧಿಸಿದಂತೆ ಶಾಸಕರದ್ದು ಎಲ್ಲಕ್ಲಿಯರ್‌ ಆಗಿದೆ. ಕಾರ್ಯಕರ್ತರ ನೇಮಕದ ಬಗ್ಗೆ ಚರ್ಚೆ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್‌ ಜತೆ ಮಾತನಾಡಿದ್ದೇನೆ. ಸುರ್ಜೇವಾಲ ಬಳಿ ಪಟ್ಟಿ ಸಿದ್ದವಿದ್ದು, ಕೆ.ಸಿ.ವೇಣುಗೋಪಾಲ್‌ ಸಹಿ ಆಗಬೇಕಿದೆ. ಎಲ್ಲರ ಅಭಿಪ್ರಾಯ ಪಡೆದು ಪಟ್ಟಿ ಸಿದ್ದಪಡಿಸುವುದು ಕಷ್ಟ. ಈ ವಿಚಾರದಲ್ಲಿಸಚಿವ ಪರಮೇಶ್ವರ್‌ ಜತೆ ಮಾತನಾಡುತ್ತೇನೆ.
ಸಿದ್ದರಾಮಯ್ಯ, ಸಿಎಂ
ಲೇಖಕರ ಬಗ್ಗೆ
ಜಯಪ್ರಕಾಶ್‌ ಬಿರಾದಾರ್‌
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. ಚಿನ್ನದ ಪದಕದೊಂದಿಗೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ ಆರು ವರ್ಷಗಳಿಂದ ರಾಜ್ಯಮಟ್ಟದ ವಿವಿಧ ಪತ್ರಿಕೆಗಳಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ಆರೋಗ್ಯ, ಅರಣ್ಯ, ಸಾರಿಗೆ, ರಾಜಕೀಯ, ಕೊರೊನಾ, ಬೆಂಗಳೂರು ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯದ ಕುರಿತು ಒಂದು ಸಾವಿರಕ್ಕೂ ಅಧಿಕ ವಿಶೇಷ ವರದಿಗಳನ್ನು ಬರೆದಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೊಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ