ಬೆಂಗಳೂರು: ರಾಜ್ಯದಲ್ಲಿ ಮಲಿನಗೊಂಡಿರುವ 17 ನದಿಗಳನ್ನು ಶುಚಿಗೊಳಿಸುವ ಕಾರ್ಯವನ್ನು ಸರಕಾರ ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.
ಗಾಂಧಿ ಭವನದ ಕಸ್ತೂರಬಾ ಸಭಾಂಗಣದಲ್ಲಿ 'ವಿಜ್ಞಾನಿ ಸಂತ ಜಿ.ಡಿ.ಅಗರವಾಲ ಅವರ ಸ್ಮರಣಾರ್ಥ' ಗ್ರಾಮ ಸೇವಾ ಸಂಘ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಲೋಕವಿದ್ಯಾ ವೇದಿಕೆ ಹಾಗೂ ಭಾರತ ಯಾತ್ರಾ ಕೇಂದ್ರ ಜಂಟಿಯಾಗಿ ಶನಿವಾರ ಆಯೋಜಿಸಿದ್ದ 'ನದಿಗಳನ್ನು ಉಳಿಸೋಣ ಬನ್ನಿ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ''ರಾಜ್ಯದಲ್ಲಿ 17 ಪ್ರಮುಖ ನದಿಗಳು ಮಲಿನಗೊಂಡಿವೆ ಎಂದು ಸರಕಾರ ಗುರ್ತಿಸಿದ್ದು, ಅವುಗಳನ್ನು ಶುಚಿಗೊಳಿಸುವುದಾಗಿ ಘೋಷಿಸಿದೆ. ಆದ್ದರಿಂದ ಈ ಕಾರ್ಯವನ್ನು ಸರಕಾರ ಶೀಘ್ರ ಅನುಷ್ಠಾನಗೊಳಿಸಬೇಕು,'' ಎಂದು ಒತ್ತಾಯಿಸಿದರು.
''ಧರ್ಮ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳು. ಮುಖ ಸರಿಯಿಲ್ಲದೇ ಇದ್ದರೆ, ನಾಣ್ಯಕ್ಕೆ ಬೆಲೆ ಇರುವುದಿಲ್ಲ. ವಿಜ್ಞಾನ ಮತ್ತು ಧರ್ಮಗಳು ಒಂದಾದಾಗ ಮಾತ್ರ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ಆದರೆ, ಧರ್ಮಗಳು ವೈಜ್ಞಾನಿಕತೆಯನ್ನು ಅಳವಡಿಸಿಕೊಳ್ಳದೆ ಆಚಾರ, ವಿಚಾರಗಳ ಹೆಸರಲ್ಲಿ ನದಿಗಳನ್ನು ಮಾಲಿನ್ಯ ಮಾಡುತ್ತಿವೆ. ನಮ್ಮ ನಾಗರೀಕತೆ ಮತ್ತು ಸಂಸ್ಕೃತಿಗಳು ನದಿ ದಡದಲ್ಲಿ ಬೆಳೆದು ಬಂದಿವೆ. ಇಂದು ನಾಗರೀಕತೆ ಮತ್ತು ಧಾರ್ಮಿಕ ಪರಂಪರೆಗಳೇ ನದಿ ಮೂಲಗಳ ನಾಶಕ್ಕೆ ಕಾರಣವಾಗುತ್ತಿವೆ. ಈ ಯಾವುದೇ ಘಟನೆಗಳ ಬಗ್ಗೆ ಪರಿವೆಯೇ ಇಲ್ಲದೆ ಧಾರ್ಮಿಕ ವ್ಯಕ್ತಿಗಳು ವೈಚಾರಿಕತೆ ಮತ್ತು ವೈಜ್ಞಾನಿಕತೆಗೆ ಬೆನ್ನು ತಿರುಗಿಸಿ ಕುಳಿತಿದ್ದಾರೆ,'' ಎಂದು ಬೇಸರ ವ್ಯಕ್ತಪಡಿಸಿದರು.
'' ಕಾರ್ಖಾನೆ, ನಗರಗಳ ತ್ಯಾಜ್ಯನೀರು, ರೈತರು ಬಳಸುವ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಇತ್ಯಾದಿಗಳು ಎಗ್ಗಿಲ್ಲದೆ ನದಿಗಳಿಗೆ ಹರಿಸುತ್ತಿದ್ದೇವೆ. ನದಿಗಳು ಉಳಿಯದಿದ್ದರೆ ನಾಗರೀಕತೆ ಸರ್ವನಾಶವಾಗಲಿದೆ,''ಎಂದು ಅಭಿಪ್ರಾಯಪಟ್ಟರು.
ಪ್ರೊ.ಜಿ.ಡಿ.ಅಗರವಾಲ ಅವರ ಸಮೀಪವರ್ತಿ ಬಸವರಾಜ ಪಾಟೀಲ ಮಾತನಾಡಿ, ''ಗಂಗಾ ನದಿ ಶುಚಿಗೊಳಿಸುವಂತೆ ಆಗ್ರಹಿಸಿ 111 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿ ಜಿ.ಡಿ.ಅಗರವಾಲ ಅವರು ಪ್ರಾಣಬಿಟ್ಟರು. ಗಂಗಾ ನದಿ ಶುದ್ಧೀಕರಣಕ್ಕೆ ಸಂಬಂಧಿಸಿದಂತೆ ಕಳೆದ ನಾಲ್ಕು ವರ್ಷಗಳಿಂದ ಕೇಂದ್ರ ಸರಕಾರ 22 ಸಾವಿರ ಕೋಟಿ ರೂ. ಖರ್ಚು ಮಾಡಿರುವುದಾಗಿ ಹೇಳುತ್ತಿದೆ. ಇದುವರೆಗೆ ಒಂದೇ ಒಂದು ಕೆಲಸವೂ ಆಗಿಲ್ಲ. ಈ ಹಣ ಎಲ್ಲಿ ಹೋಯಿತು ಎಂಬುದು ಸಹ ಗೊತ್ತಿಲ್ಲ. ಇಂತಹ ಸಂವೇದನಾರಹಿತ ಸರಕಾರಕ್ಕೆ ತಮ್ಮ ಬಲಿದಾನ ಅಗತ್ಯವಿಲ್ಲ. ಉಪವಾಸ ಬಿಟ್ಟು ಬೇರೆ ಹೋರಾಟದ ಮಾರ್ಗಗಳನ್ನು ಯೋಚಿಸೋಣ ಎಂದು ಅಗರವಾಲ ಅವರಿಗೆ ತಿಳಿಸಿದೆ. ಆದರೆ, ಅವರು ಹಠವಾದಿ. ಅವರ ಸಾವಿನ ಬಗ್ಗೆ ಸಹ ಕೇಂದ್ರ ಸರಕಾರ ಮರುಗಲಿಲ್ಲ ,''ಎಂದು ಅಸಮಾಧಾನ ವ್ಯಕ್ತಪಡಿಸಿದರು.
''ಕೇಂದ್ರದ ಜಲಸಂಪನ್ಮೂಲ ಮಂತ್ರಾಲಯದಲ್ಲಿ ಪ್ರಮುಖ ಹುದ್ದೆಗಳಲ್ಲಿರುವ ಆರು ಮಂದಿ ಐಎಎಸ್ ಅಧಿಕಾರಿಗಳು ಅಗರವಾಲ ಅವರ ವಿದ್ಯಾರ್ಥಿಳಾಗಿದ್ದಾರೆ. ಒಂದು ನದಿ ಶುದ್ಧೀಕರಣದ ವಿಷಯಕ್ಕೆ ಸಂಬಂಧಿಸಿದಂತೆ ಈ ದೇಶ ಒಬ್ಬ ಮಹಾನ್ ವಿಜ್ಞಾನಿಯ ಬಲಿ ಪಡೆಯುತ್ತದೆ ಎಂದರೆ ನಾವು ಯಾವ ಯುಗದಲ್ಲಿದ್ದೇವೆ ಎಂಬುದನ್ನು ಗಂಭೀರವಾಗಿ ಚಿಂತನೆ ನಡೆಸಬೇಕು. ಮುಂಬರುವ ದಿನಗಳಲ್ಲಿ ದೇಶಾದ್ಯಂತ ನದಿಗಳನ್ನು ರಕ್ಷಿಸುವಂತಹ ಹೋರಾಟಗಳನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು,'' ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ಡಾ.ಎಂ.ವಿ.ರಾಜೀವ್ಗೌಡ, ವಿಧಾನ ಪರಿಷತ್ ಮಾಜಿ ಅಧ್ಯಕ್ಷ ಬಿ.ಎಲ್.ಶಂಕರ್, ರಂಗಕರ್ಮಿ ಹಾಗೂ ಹೋರಾಟಗಾರ ಪ್ರಸನ್ನ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೊಡೇ ಪಿ.ಕೃಷ್ಣ, ಜಲತಜ್ಞ ವಿಶ್ವನಾಥ್ ಶ್ರೀಕಂಠಯ್ಯ, ವಿಜ್ಞಾನಿ ಪ್ರೊ.ಅಭಿಜಿತ್ ಮಿತ್ರ ಮತ್ತಿತರರಿದ್ದರು.
ಗಾಂಧಿ ಭವನದ ಕಸ್ತೂರಬಾ ಸಭಾಂಗಣದಲ್ಲಿ 'ವಿಜ್ಞಾನಿ ಸಂತ ಜಿ.ಡಿ.ಅಗರವಾಲ ಅವರ ಸ್ಮರಣಾರ್ಥ' ಗ್ರಾಮ ಸೇವಾ ಸಂಘ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಲೋಕವಿದ್ಯಾ ವೇದಿಕೆ ಹಾಗೂ ಭಾರತ ಯಾತ್ರಾ ಕೇಂದ್ರ ಜಂಟಿಯಾಗಿ ಶನಿವಾರ ಆಯೋಜಿಸಿದ್ದ 'ನದಿಗಳನ್ನು ಉಳಿಸೋಣ ಬನ್ನಿ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ''ರಾಜ್ಯದಲ್ಲಿ 17 ಪ್ರಮುಖ ನದಿಗಳು ಮಲಿನಗೊಂಡಿವೆ ಎಂದು ಸರಕಾರ ಗುರ್ತಿಸಿದ್ದು, ಅವುಗಳನ್ನು ಶುಚಿಗೊಳಿಸುವುದಾಗಿ ಘೋಷಿಸಿದೆ. ಆದ್ದರಿಂದ ಈ ಕಾರ್ಯವನ್ನು ಸರಕಾರ ಶೀಘ್ರ ಅನುಷ್ಠಾನಗೊಳಿಸಬೇಕು,'' ಎಂದು ಒತ್ತಾಯಿಸಿದರು.
''ಧರ್ಮ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳು. ಮುಖ ಸರಿಯಿಲ್ಲದೇ ಇದ್ದರೆ, ನಾಣ್ಯಕ್ಕೆ ಬೆಲೆ ಇರುವುದಿಲ್ಲ. ವಿಜ್ಞಾನ ಮತ್ತು ಧರ್ಮಗಳು ಒಂದಾದಾಗ ಮಾತ್ರ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ಆದರೆ, ಧರ್ಮಗಳು ವೈಜ್ಞಾನಿಕತೆಯನ್ನು ಅಳವಡಿಸಿಕೊಳ್ಳದೆ ಆಚಾರ, ವಿಚಾರಗಳ ಹೆಸರಲ್ಲಿ ನದಿಗಳನ್ನು ಮಾಲಿನ್ಯ ಮಾಡುತ್ತಿವೆ. ನಮ್ಮ ನಾಗರೀಕತೆ ಮತ್ತು ಸಂಸ್ಕೃತಿಗಳು ನದಿ ದಡದಲ್ಲಿ ಬೆಳೆದು ಬಂದಿವೆ. ಇಂದು ನಾಗರೀಕತೆ ಮತ್ತು ಧಾರ್ಮಿಕ ಪರಂಪರೆಗಳೇ ನದಿ ಮೂಲಗಳ ನಾಶಕ್ಕೆ ಕಾರಣವಾಗುತ್ತಿವೆ. ಈ ಯಾವುದೇ ಘಟನೆಗಳ ಬಗ್ಗೆ ಪರಿವೆಯೇ ಇಲ್ಲದೆ ಧಾರ್ಮಿಕ ವ್ಯಕ್ತಿಗಳು ವೈಚಾರಿಕತೆ ಮತ್ತು ವೈಜ್ಞಾನಿಕತೆಗೆ ಬೆನ್ನು ತಿರುಗಿಸಿ ಕುಳಿತಿದ್ದಾರೆ,'' ಎಂದು ಬೇಸರ ವ್ಯಕ್ತಪಡಿಸಿದರು.
'' ಕಾರ್ಖಾನೆ, ನಗರಗಳ ತ್ಯಾಜ್ಯನೀರು, ರೈತರು ಬಳಸುವ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಇತ್ಯಾದಿಗಳು ಎಗ್ಗಿಲ್ಲದೆ ನದಿಗಳಿಗೆ ಹರಿಸುತ್ತಿದ್ದೇವೆ. ನದಿಗಳು ಉಳಿಯದಿದ್ದರೆ ನಾಗರೀಕತೆ ಸರ್ವನಾಶವಾಗಲಿದೆ,''ಎಂದು ಅಭಿಪ್ರಾಯಪಟ್ಟರು.
ಪ್ರೊ.ಜಿ.ಡಿ.ಅಗರವಾಲ ಅವರ ಸಮೀಪವರ್ತಿ ಬಸವರಾಜ ಪಾಟೀಲ ಮಾತನಾಡಿ, ''ಗಂಗಾ ನದಿ ಶುಚಿಗೊಳಿಸುವಂತೆ ಆಗ್ರಹಿಸಿ 111 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿ ಜಿ.ಡಿ.ಅಗರವಾಲ ಅವರು ಪ್ರಾಣಬಿಟ್ಟರು. ಗಂಗಾ ನದಿ ಶುದ್ಧೀಕರಣಕ್ಕೆ ಸಂಬಂಧಿಸಿದಂತೆ ಕಳೆದ ನಾಲ್ಕು ವರ್ಷಗಳಿಂದ ಕೇಂದ್ರ ಸರಕಾರ 22 ಸಾವಿರ ಕೋಟಿ ರೂ. ಖರ್ಚು ಮಾಡಿರುವುದಾಗಿ ಹೇಳುತ್ತಿದೆ. ಇದುವರೆಗೆ ಒಂದೇ ಒಂದು ಕೆಲಸವೂ ಆಗಿಲ್ಲ. ಈ ಹಣ ಎಲ್ಲಿ ಹೋಯಿತು ಎಂಬುದು ಸಹ ಗೊತ್ತಿಲ್ಲ. ಇಂತಹ ಸಂವೇದನಾರಹಿತ ಸರಕಾರಕ್ಕೆ ತಮ್ಮ ಬಲಿದಾನ ಅಗತ್ಯವಿಲ್ಲ. ಉಪವಾಸ ಬಿಟ್ಟು ಬೇರೆ ಹೋರಾಟದ ಮಾರ್ಗಗಳನ್ನು ಯೋಚಿಸೋಣ ಎಂದು ಅಗರವಾಲ ಅವರಿಗೆ ತಿಳಿಸಿದೆ. ಆದರೆ, ಅವರು ಹಠವಾದಿ. ಅವರ ಸಾವಿನ ಬಗ್ಗೆ ಸಹ ಕೇಂದ್ರ ಸರಕಾರ ಮರುಗಲಿಲ್ಲ ,''ಎಂದು ಅಸಮಾಧಾನ ವ್ಯಕ್ತಪಡಿಸಿದರು.
''ಕೇಂದ್ರದ ಜಲಸಂಪನ್ಮೂಲ ಮಂತ್ರಾಲಯದಲ್ಲಿ ಪ್ರಮುಖ ಹುದ್ದೆಗಳಲ್ಲಿರುವ ಆರು ಮಂದಿ ಐಎಎಸ್ ಅಧಿಕಾರಿಗಳು ಅಗರವಾಲ ಅವರ ವಿದ್ಯಾರ್ಥಿಳಾಗಿದ್ದಾರೆ. ಒಂದು ನದಿ ಶುದ್ಧೀಕರಣದ ವಿಷಯಕ್ಕೆ ಸಂಬಂಧಿಸಿದಂತೆ ಈ ದೇಶ ಒಬ್ಬ ಮಹಾನ್ ವಿಜ್ಞಾನಿಯ ಬಲಿ ಪಡೆಯುತ್ತದೆ ಎಂದರೆ ನಾವು ಯಾವ ಯುಗದಲ್ಲಿದ್ದೇವೆ ಎಂಬುದನ್ನು ಗಂಭೀರವಾಗಿ ಚಿಂತನೆ ನಡೆಸಬೇಕು. ಮುಂಬರುವ ದಿನಗಳಲ್ಲಿ ದೇಶಾದ್ಯಂತ ನದಿಗಳನ್ನು ರಕ್ಷಿಸುವಂತಹ ಹೋರಾಟಗಳನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು,'' ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ಡಾ.ಎಂ.ವಿ.ರಾಜೀವ್ಗೌಡ, ವಿಧಾನ ಪರಿಷತ್ ಮಾಜಿ ಅಧ್ಯಕ್ಷ ಬಿ.ಎಲ್.ಶಂಕರ್, ರಂಗಕರ್ಮಿ ಹಾಗೂ ಹೋರಾಟಗಾರ ಪ್ರಸನ್ನ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೊಡೇ ಪಿ.ಕೃಷ್ಣ, ಜಲತಜ್ಞ ವಿಶ್ವನಾಥ್ ಶ್ರೀಕಂಠಯ್ಯ, ವಿಜ್ಞಾನಿ ಪ್ರೊ.ಅಭಿಜಿತ್ ಮಿತ್ರ ಮತ್ತಿತರರಿದ್ದರು.