ಆ್ಯಪ್ನಗರ

ಕಾಡಿಬೇಡಿ ಮೋದಿ ಭೇಟಿಗೆ ಪಡೆದ ಅವಕಾಶ ಕುರ್ಚಿ ಗಟ್ಟಿಗೆ ಬಳಸದಿರಿ, ಬಿಎಸ್‌ವೈಗೆ ಸಿದ್ದು ಟಾಂಗ್

ಪ್ರಧಾನಿ ಭೇಟಿಗೆ ಕಾಡಿಬೇಡಿ ಪಡೆದ ಅವಕಾಶವನ್ನು ನಿಮ್ಮ ಕುರ್ಚಿ ಉಳಿಸಿಕೊಳ್ಳುವ ಕಸರತ್ತಿಗೆ ಬಳಸಿಕೊಳ್ಳಬೇಡಿ ಎಂದು ಯಡಿಯೂರಪ್ಪ ದಿಲ್ಲಿ ಭೇಟಿ ಬಗ್ಗೆ ಸಿದ್ದರಾಮಯ್ಯ ಕಾಲೆಳೆದಿದ್ದಾರೆ.

Vijaya Karnataka Web 19 Sep 2020, 9:14 am
ಬೆಂಗಳೂರು: ಪ್ರಧಾನಿ ಭೇಟಿಗೆ ಕಾಡಿಬೇಡಿ ಪಡೆದ ಅವಕಾಶವನ್ನು ನಿಮ್ಮ ಕುರ್ಚಿ ಉಳಿಸಿಕೊಳ್ಳುವ ಕಸರತ್ತಿಗೆ ಬಳಸಿಕೊಳ್ಳಬೇಡಿ. ರಾಜ್ಯದ ಹಿತರಕ್ಷಣೆಗಾಗಿ ನಾಲ್ಕು ಮಾತು ಖಡಕ್‌ ಆಗಿ ಆಡಿ. ಜನ ನಿಮ್ಮ ಬೆನ್ನ ಹಿಂದೆ ಇದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಯಡಿಯೂರಪ್ಪ ಅವರ ದಿಲ್ಲಿ ಭೇಟಿ ಬಗ್ಗೆ ಕಾಲೆಳೆದಿದ್ದಾರೆ.
Vijaya Karnataka Web bsy and siddaramaiah



ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ''ಕಳೆದ ವರ್ಷದ ಅತಿವೃಷ್ಟಿಗೆ 35,000 ಕೋಟಿ ರೂ. ಪರಿಹಾರ ಕೇಳಿದ್ದಿರಿ. ಆದರೆ ಕೇಂದ್ರ ನೀಡಿದ್ದು ಕೇವಲ 1,869 ಕೋಟಿ ರೂ. ಮಾತ್ರ. ಈ ವರ್ಷ 8,000 ಕೋಟಿ ರೂ. ನಷ್ಟವಾಗಿದೆ ಎನ್ನುತ್ತೀರಿ. ಕಳೆದ ವರ್ಷದ ಬಾಕಿ ಜತೆಗೆ ಈ ವರ್ಷದ ಪರಿಹಾರವನ್ನೂ ಉದಾರವಾಗಿ ಕೊಡುವಂತೆ ಕೇಳಿ,'' ಎಂದು ವ್ಯಂಗ್ಯವಾಡಿದ್ದಾರೆ.



''15ನೇ ಹಣಕಾಸು ಆಯೋಗದಿಂದ ಉಳಿದ ರಾಜ್ಯಗಳಿಗಿಂತ ಕರ್ನಾಟಕಕ್ಕೆ ಹೆಚ್ಚು ನಷ್ಟವಾಗಿದೆ. ಇದಕ್ಕೆ ಕಾರಣವಾದ ಮಾನದಂಡಗಳನ್ನು ಪರಿಷ್ಕರಿಸಿ ತೆರಿಗೆ ಹಂಚಿಕೆ ಮತ್ತು ಎನ್‌ಡಿಆರ್‌ಎಫ್‌ ನಿಧಿಯಿಂದ ನ್ಯಾಯಬದ್ಧ ಪಾಲು ಸಿಗುವಂತೆ ಮಾಡಿ. ಕೊರೋನಾ ಸೋಂಕಿನಲ್ಲಿ ಭಾರತ ವಿಶ್ವದ ಎರಡನೇ ಸ್ಥಾನದಲ್ಲಿದೆ. ಗೆಲುವಿನ ಕಿರೀಟಗಳನ್ನೆಲ್ಲ ಮುಡಿಗೇರಿಸಿಕೊಳ್ಳುವ ನರೇಂದ್ರ ಮೋದಿ ವೈಫಲ್ಯಗಳ ಹೊಣೆಯನ್ನು ರಾಜ್ಯಗಳ ಹೆಗಲಿಗೆ ಜಾರಿಸುವ ಚಾಳಿ ಹೊಂದಿದ್ದಾರೆ. ಈ ಬಗ್ಗೆ ಅವರ ಜವಾಬ್ದಾರಿ ನೆನಪಿಸಿ ರಾಜ್ಯಕ್ಕೆ ನ್ಯಾಯಕೊಡಿಸಿ. ಕೇಂದ್ರ ಸರಕಾರ ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ ರಾಜ್ಯದ ಜನರನ್ನು ಇನ್ನೂ ತಲುಪಿಲ್ಲ. ಕೊರೋನಾ ಸೋಂಕಿಗಿಂತ ಹಸಿವು ಮತ್ತು ನಿರುದ್ಯೋಗದಿಂದ ಹೆಚ್ಚು ಜನರು ಸಾವಿಗೀಡಾಗುತ್ತಿದ್ದಾರೆ. ಪ್ಯಾಕೇಜ್‌ನಲ್ಲಿ ರಾಜ್ಯಕ್ಕೆ ನ್ಯಾಯಬದ್ಧ ಪಾಲು ನೀಡುವಂತೆ ಒತ್ತಾಯಿಸಿ,'' ಎಂದು ಕೆಣಕಿದ್ದಾರೆ.



''ನ್ಯಾಯಬದ್ಧವಾಗಿ ರಾಜ್ಯಕ್ಕೆ ನೀಡಬೇಕಾಗಿರುವ ಜಿಎಸ್‌ಟಿ ಪರಿಹಾರ ಮೊತ್ತ 25,508 ಕೋಟಿ ರೂ. ನೀಡದೇ ದ್ರೋಹ ಬಗೆದಿರುವ ಕೇಂದ್ರ ಸರಕಾರ, ಸಾಲ ಎತ್ತುವುದಕ್ಕೆ ಸಿಎಂ ಯಡಿಯೂರಪ್ಪನವರ ಕೈಗೆ ಭಿಕ್ಷಾಪಾತ್ರ ನೀಡಿದೆ. ಮೋದಿಗೆ ಮಣಿಯದೇ ಧೈರ್ಯದಿಂದ ಈ ಅನ್ಯಾಯ ಸರಿಪಡಿಸಲು ಹೇಳಿ,'' ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ