ಆ್ಯಪ್ನಗರ

ಲಂಕಾ ಸ್ಫೋಟ: ಕಾಣೆಯಾಗಿದ್ದ ರಾಜ್ಯದ ಏಳು ಮಂದಿ ಪೈಕಿ ಐವರು ಮೃತ

ಮೃತರಲ್ಲಿ ಲಕ್ಷ್ಮಣ ಗೌಡ ರಮೇಶ್‌, ಕೆ ಎಂ ಲಕ್ಷ್ಮೀನಾರಾಯಣ, ಎಂ ರಂಗಪ್ಪ ಮತ್ತು ಕೆಜಿ ಹನುಮಂತರಾಯಪ್ಪ ಎಂದು ಗುರುತಿಸಲಾಗಿರುವ ಬಗ್ಗೆ ಸರಣಿ ಟ್ವೀಟ್‌ ಮೂಲಕ ಸಿಎಂ ತಿಳಿಸಿದ್ದಾರೆ.

Vijaya Karnataka Web 22 Apr 2019, 3:29 pm
ಕೊಲಂಬೊ: ಈಸ್ಟರ್‌ ಭಾನುವಾರ ಸಂಭವಿಸಿದ ಎಂಟು ಸರಣಿ ಬಾಂಬ್‌ ಸ್ಫೋಟದ ಸಂದರ್ಭ ಕಾಣೆಯಾಗಿದ್ದ ರಾಜ್ಯದ ಏಳು ಜನರಲ್ಲಿ ಐವರು ಸಾವನ್ನಪ್ಪಿರುವ ಬಗ್ಗೆ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ದೃಢಪಡಿಸಿದ್ದಾರೆ.
Vijaya Karnataka Web Bomb Blast Web


ಮೃತರಲ್ಲಿ ಲಕ್ಷ್ಮಣ ಗೌಡ ರಮೇಶ್‌, ಕೆ ಎಂ ಲಕ್ಷ್ಮೀನಾರಾಯಣ, ಎಂ ರಂಗಪ್ಪ ಮತ್ತು ಕೆಜಿ ಹನುಮಂತರಾಯಪ್ಪ ಎಂದು ಗುರುತಿಸಲಾಗಿರುವ ಬಗ್ಗೆ ಸರಣಿ ಟ್ವೀಟ್‌ ಮೂಲಕ ಸಿಎಂ ತಿಳಿಸಿದ್ದಾರೆ.

ಎಚ್‌. ಶಿವಕುಮಾರ್‌, ಎ. ಮಾರೇಗೌಡ ಹಾಗೂ ಎಚ್‌ ಪುಟ್ಟರಾದು ಅವರು ಇನ್ನೂ ಪತ್ತೆಯಾಗಿಲ್ಲ ಎಂಬ ಮಾಹಿತಿಯನ್ನು ನೀಡಿದ್ದಾರೆ. ಮುಖ್ಯ ಕಾರ್ಯದರ್ಶಿಗಳ ಕಚೇರಿಯು ದೆಹಲಿ ಕರ್ನಾಟಕ ಭವನ ಹಾಗೂ ಮೃತರ ಹಾಗೂ ಕಾಣೆಯಾದವರ ಕುಟುಂಬಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಮುಖ್ಯಕಾರ್ಯದರ್ಶಿಗಳು ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರ ಕಚೇರಿಯ ಹೈಕಮಿಷನರ್ ಅವರೊಂದಿಗೆ ಮಾತನಾಡಿದ್ದಾರೆ. ರಾಜ್ಯದ ಪ್ರವಾಸಿಗರ ತಂಡವೊಂದು ಕ್ಯಾಂಡಿಯಿಂದ ಹಿಂದಿರುಗಲಿದೆ. ಪತ್ತೆಯಾಗಿರುವ 5ನೆ ಶವ ಗುರುತಿಸಲು ಅವರು ನೆರವಾಗುವರು. ಪತ್ತೆಯಾಗದ ಇನ್ನಿಬ್ಬರು ವ್ಯಕ್ತಿಗಳ ಮಾಹಿತಿ ದೊರೆತ ಕೂಡಲೇ ತಿಳಿಸಲಾಗುವುದು ಎಂದು ಅವರು ಹೇಳಿದ್ದಾರೆ. ಇವರೆಲ್ಲರೂ ಜೆಡಿಎಸ್‌ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಶ್ರೀಲಂಕಾ ಪ್ರವಾಸದಲ್ಲಿದ್ದರು ಎಂಬ ಮಾಹಿತಿಯನ್ನು ಕುಮಾರಸ್ವಾಮಿ ಟ್ವೀಟ್‌ ಮೂಲಕ ನೀಡಿದ್ದಾರೆ.

ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬದ ಬೆಂಬಲಕ್ಕೆ ನಾವಿದ್ದು, ಭಗವಂತನು ಅವರಿಗೆ ಈ ಆಘಾತ ಭರಿಸುವ ಶಕ್ತಿ ನೀಡಲಿ ಎಂದು ಎಚ್‌ಡಿ ಕುಮಾರಸ್ವಾಮಿ ಪ್ರಾರ್ಥನೆ ಮಾಡಿದ್ದಾರೆ.

ಶ್ರೀಲಂಕಾ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಅವರನ್ನು ನೋಡಲ್ ಅಧಿಕಾರಿಯಾಗಿ ಮುಖ್ಯ ಕಾರ್ಯದರ್ಶಿಗಳು ನೇಮಕ ಮಾಡಿದ್ದು ಅವರು ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರ ಕಛೇರಿಯೊಂದಿಗೆ ಸಮನ್ವಯ ನಡೆಸುತ್ತಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ