ಆ್ಯಪ್ನಗರ

ಕಬ್ಬು ದರ ನಿಗದಿ, ಸಿಎಂ ವಿವೇಚನೆಗೆ - ಸಕ್ಕರೆ ಸಚಿವರು, ರೈತ ಮುಖಂಡರ ಸಭೆಯಲ್ಲಿ ತೀರ್ಮಾನ

ಗುರುವಾರ ಸಕ್ಕರೆ ಸಚಿವರ ಜೊತೆ ನಡೆದ ಸಭೆಯಲ್ಲಿ ಪ್ರತಿ ಟನ್‌ಗೆ 2,850 ರೂ. ದರಕ್ಕೆ ರೈತ ಮುಖಂಡರು ಒಪ್ಪದೆ ಹೆಚ್ಚಿನ ದರಕ್ಕೆ ಪಟ್ಟು ಹಿಡಿದರು. ಇದರಿಂದ ಸಭೆ ಅಪೂರ್ಣಗೊಂಡಿದ್ದು ದರ ನಿಗದಿ ಸಿಎಂಗೆ ಬಿಡಲು ತೀರ್ಮಾನಿಸಲಾಗಿದೆ.

Vijaya Karnataka 15 Oct 2020, 9:01 pm
ಬೆಂಗಳೂರು: 2020-21ನೇ ಸಾಲಿಗೆ ಕಬ್ಬಿನ ದರ ನಿಗದಿ ಮಾಡುವ ತೀರ್ಮಾನವನ್ನು ಸಿಎಂ ವಿವೇಚನೆಗೆ ಬಿಡಲು ಸಕ್ಕರೆ ಸಚಿವರು ಹಾಗೂ ರೈತ ಮುಖಂಡರು ಸಮ್ಮತಿಸಿದ್ದಾರೆ.
Vijaya Karnataka Web Sugarcane-bccl


ಗುರುವಾರ ವಿಕಾಸಸೌಧದಲ್ಲಿ ಸಕ್ಕರೆ ಸಚಿವ ಶಿವರಾಮ್‌ ಹೆಬ್ಬಾರ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಸಕ್ತ ಸಾಲಿನ ದರ ನಿಗದಿ ಸಂಬಂಧ ಚರ್ಚೆ ನಡೆಯಿತು. ಪ್ರತಿ ಟನ್‌ಗೆ 2,850 ರೂ. ದರಕ್ಕೆ ರೈತರ ಮುಖಂಡರು ಒಪ್ಪದೆ ಹೆಚ್ಚಿನ ದರಕ್ಕೆ ಪಟ್ಟು ಹಿಡಿದರು. ಇದರಿಂದ ಸಭೆ ಅಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸುವ ವಾಗ್ದಾನವನ್ನು ಸಚಿವರು ನೀಡಿದ್ದಾರೆ.

ಕೇಂದ್ರ ಸರಕಾರ ಪ್ರತಿ ಟನ್‌ಗೆ 2,850 ರೂ. ನಿಗದಿ ಮಾಡಿದೆ. ಹಿಂದಿನ ವರ್ಷದ ದರಕ್ಕಿಂತ ಕೇವಲ 100 ರೂ. ಹೆಚ್ಚುವರಿ ನಿಗದಿಗೆ ರೈತ ಮುಖಂಡರು ಆಕ್ಷೇಪಿಸಿದ್ದಾರೆ. ಕಬ್ಬಿನ ಉತ್ಪಾದನಾ ವೆಚ್ಚ 3,050 ರೂ. ಆಗಲಿದೆ ಎಂಬುದನ್ನು ಸರಕಾರಿ ಕಬ್ಬು ಸಂಶೋಧನಾ ಕೇಂದ್ರ ತಿಳಿಸಿದೆ. ಇದಕ್ಕೆ ರಾಜ್ಯ ಸರಕಾರ ಪ್ರೋತ್ಸಾಹಧನ ಸೇರಿಸಿ ಪ್ರತಿ ಟನ್‌ಗೆ 3,300 ರೂ. ನಿಗದಿ ಮಾಡುವಂತೆ ರೈತ ಮುಖಂಡರು ಪಟ್ಟು ಹಿಡಿದಿದ್ದಾರೆ.

ಬಾಕಿ ಹಣ ಕುರಿತು ಗೊಂದಲ


ಸಭೆಯಲ್ಲಿ ಅಧಿಕಾರಿಗಳು ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ 195 ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಮಾಹಿತಿ ನೀಡಿದರು. ಆದರೆ, ರೈತ ಮುಖಂಡರು ಬಾಕಿ ಮೊತ್ತ 700 ಕೋಟಿ ರೂ. ಇದೆ ಎಂದು ವಾದಿಸಿದರು. ಕೆಲ ಸಕ್ಕರೆ ಕಾರ್ಖಾನೆಗಳು ತಪ್ಪು ಲೆಕ್ಕ ನೀಡಿದ್ದನ್ನು ಯಥಾವತ್‌ ಒಪ್ಪಿಕೊಳ್ಳಲಾಗಿದೆ. ಇದರಿಂದ ರೈತರ ಜೊತೆಗೆ ಸರಕಾರಕ್ಕೆ ಬರಬೇಕಿರುವ ತೆರಿಗೆ ಹಣಕ್ಕೂ ಕತ್ತರಿ ಬೀಳಲಿದ್ದು ಗೊಂದಲ ಸೃಷ್ಟಿಯಾಗಲಿದೆ ಎಂದು ಮುಖಂಡರು ಎಚ್ಚರಿಸಿದರು. ಎಲ್ಲಾ ಕಾರ್ಖಾನೆಗಳಿಂದ ಮತ್ತೊಮ್ಮೆ ಮಾಹಿತಿ ಸಂಗ್ರಹಿಸಿ ಬಾಕಿ ಮೊತ್ತದ ಅಂಕಿ-ಅಂಶವನ್ನು ತಿಳಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಸಭೆ ಬಳಿಕ ‘ವಿಕ’ದೊಂದಿಗೆ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರ್‌ ಶಾಂತಕುಮಾರ್‌ "ಪ್ರತಿ ಟನ್‌ ಕಬ್ಬಿಗೆ 2,850 ರೂ. ದರ ನಿಗದಿ ಮಾಡುವ ಸರಕಾರದ ಪ್ರಸ್ತಾವ ಒಪ್ಪಿಲ್ಲ. ಉತ್ಪಾದನಾ ವೆಚ್ಚಕ್ಕಿಂತ ಅಧಿಕ ಮೊತ್ತ ನೀಡಲು ಮನವಿ ಮಾಡಿದ್ದೇವೆ. ನಾನಾ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಹಣವನ್ನು ರೈತರಿಗೆ ವಿತರಿಸಲು ಸರಕಾರ ಮಧ್ಯಪ್ರವೇಶಿಸಬೇಕು. ತಪ್ಪು ಮಾಹಿತಿ ನೀಡಿದರೆ ಕ್ರಿಮಿನಲ್‌ ಕೇಸ್‌ ಹಾಕುವಂತಹ ಕಠಿಣ ಕ್ರಮ ಕೈಗೊಂಡರೆ ರೈತರಿಗೆ ಅನುಕೂಲವಾಗಲಿದೆ," ಎಂದು ತಿಳಿಸಿದರು.

ಸಭೆಯಲ್ಲಿ ಮಂಡಳಿ ಸದಸ್ಯ ಹಾಗೂ ಹಿರಿಯ ಐಎಎಸ್‌ ಅಧಿಕಾರಿ ಜಿ. ಕುಮಾರ್‌ ನಾಯಕ್‌ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ