ಆ್ಯಪ್ನಗರ

ವಿಕ ವರದಿಗೆ ಸ್ಪಂದನೆ: ಕನಕಪುರ ಮುಖ್ಯ ರಸ್ತೆ ದುರಸ್ತಿಗೆ ಸಿಎಂ ಸೂಚನೆ

ಪೈಪ್‌ಲೈನ್‌ ಅಳವಡಿಸಲು ಅಗೆದು ಅಧ್ವಾನಗೊಂಡಿರುವ ಕನಕಪುರ ರಸ್ತೆಯನ್ನು ತಕ್ಷಣವೇ ದುರಸ್ತಿಪಡಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಿಬಿಎಂಪಿ ಆಯುಕ್ತರಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

Vijaya Karnataka 9 Sep 2019, 5:00 am
ವಿಕ ಸುದ್ದಿಲೋಕ ಬೆಂಗಳೂರು
Vijaya Karnataka Web 0809-2-2-KSG_01 (17)


ಪೈಪ್‌ಲೈನ್‌ ಅಳವಡಿಸಲು ಅಗೆದು ಅಧ್ವಾನಗೊಂಡಿರುವ ಕನಕಪುರ ರಸ್ತೆಯನ್ನು ತಕ್ಷಣವೇ ದುರಸ್ತಿಪಡಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಿಬಿಎಂಪಿ ಆಯುಕ್ತರಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

''ಕನಕಪುರ ರಸ್ತೆಯು ನಗರದ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಸಾರ್ವಜನಿಕರ ದೈನಂದಿನ ಸಂಚಾರಕ್ಕೆ ಅಡಚಣೆಯಾಗದಂತೆ ಕಾಮಗಾರಿ ನಡೆಸಬೇಕು. ಒಂದು ಬದಿಯಲ್ಲಿ ರಸ್ತೆ ಅಗೆದು ಮತ್ತೊಂದು ಬದಿಯಲ್ಲಿ ವಾಹನಗಳು ಸುಗಮವಾಗಿ ಚಲಿಸಲು ಅವಕಾಶ ಮಾಡಿಕೊಡಬೇಕು. ಕಾಮಗಾರಿ ಹೆಸರಿನಲ್ಲಿ ಜನರ ಸಂಚಾರಕ್ಕೆ ತೊಂದರೆ ಕೊಡುವುದು ಸರಿಯಲ್ಲ. ಕೂಡಲೇ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ. ಕನಕಪುರ ರಸ್ತೆಗೆ 15 ದಿನದಲ್ಲಿ ನಾನೇ ಖುದ್ದು ಸ್ಥಳ ಪರಿಶೀಲನೆ ನಡೆಸುತ್ತೇನೆ. ಅಷ್ಟರೊಳಗೆ ಬಿಬಿಎಂಪಿ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು,'' ಎಂದು ಸಿಎಂ ಖಡಕ್‌ ಸೂಚನೆ ನೀಡಿದರು.

ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಭಾನುವಾರ ಸಚಿವರು, ಅಧಿಕಾರಿಗಳು ಹಾಗೂ ಶಾಸಕರೊಂದಿಗೆ ಬೆಂಗಳೂರು ನಗರದ ಪ್ರದಕ್ಷಣೆ ಮಾಡಿ ಅಭಿವೃದ್ಧಿ ಯೋಜನೆ ಕಾಮಗಾರಿಗಳನ್ನು ಯಡಿಯೂರಪ್ಪ ಪರಿಶೀಲಿಸಿದರು. ಬಳಿಕ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ನಗರದ ಅಭಿವೃದ್ಧಿ ಕುರಿತು ಮಾಹಿತಿ ನೀಡಿದರು. 'ವಿಜಯ ಕರ್ನಾಟಕ' ಸೆ.8ರ ಸಂಚಿಕೆ ಮುಖಪುಟದಲ್ಲಿ ಪ್ರಕಟವಾದ 'ಮುಖ್ಯಮಂತ್ರಿಗಳೇ ಈ ರಸ್ತೆಗಳಿಗೂ ಬನ್ನಿ, ಅಧಿಕಾರಿಗಳ ಕಿವಿಹಿಂಡಿ ಬದಲಾವಣೆ ತನ್ನಿ' ಶೀರ್ಷಿಕೆಯಡಿ ಕನಕಪುರ ರಸ್ತೆಯ ದುಸ್ಥಿತಿಯನ್ನು ಸವಿವರವಾದ ವರದಿಯನ್ನು ಪ್ರಕಟಿಸಿತ್ತು. ಈ ವರದಿ ಕುರಿತು ಪ್ರಸ್ತಾಪಿಸಿದ ಮುಖ್ಯಮಂತ್ರಿ, ಪಾಲಿಕೆ ಅಧಿಕಾರಿಗಳಿಂದ ಮಾಹಿತಿ ಪಡೆದು ತಕ್ಷಣವೇ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಿದರು.

''ಬಸವನಗುಡಿಯ ಕೆ.ಆರ್‌.ರಸ್ತೆಯಿಂದ ನೈಸ್‌ ಜಂಕ್ಷನ್‌ವರೆಗಿನ ಕನಕಪುರ ರಸ್ತೆ ಹಾಳಾಗಿರುವುದು ಪತ್ರಿಕೆಯಲ್ಲಿ ವರದಿಯಾಗಿದೆ. ಇದನ್ನು ಗಮನಿಸಿ ಕೂಡಲೇ ಕ್ರಮ ಕೈಗೊಳ್ಳುವುದು ಆಯಾ ಇಲಾಖೆಯ ಜವಾಬ್ದಾರಿ. ಬಿಬಿಎಂಪಿ ಆಯುಕ್ತರು ರಸ್ತೆಯನ್ನು ದುರಸ್ತಿಗೊಳಿಸಿ ನಾಗರಿಕರಿಗೆ ತೊಂದರೆ ಆಗದಂತೆ ಮುತುವರ್ಜಿವಹಿಸಿ. ಜಲಮಂಡಳಿ ಅಥವಾ ಮೆಟ್ರೊ ವತಿಯಿಂದ ಕಾಮಗಾರಿ ಕೈಗೊಳ್ಳುವುದಿದ್ದಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಹಾಗೂ ಪಾದಚಾರಿಗಳಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸುವಂತೆ ಸಿಎಂ ಅಧಿಕಾರಿಗಳಿಗೆ ಆದೇಶಿಸಿದರು.

ದುರಸ್ತಿಗೆ ತಕ್ಷಣ ಕ್ರಮ

ಹಾಳಾಗಿರುವ ಕನಕಪುರ ರಸ್ತೆಯನ್ನು ಸೋಮವಾರದಿಂದಲೇ ದುರಸ್ತಿಪಡಿಸಲಾಗುವುದು. ಜನರಿಗೆ ತೊಂದರೆ ಆಗದ ರೀತಿ ರಸ್ತೆಯನ್ನು ಗುಂಡಿ ಮುಕ್ತ ಮಾಡಲಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಸ್ಪಷ್ಟಪಡಿಸಿದರು.

''ಕನಕಪುರ ರಸ್ತೆಯ ಹಾಲಿ ಸ್ಥಿತಿಯ ಕುರಿತು ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ತರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸದ್ಯದಲ್ಲೇ ನಾನು ಕೂಡ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಗುವುದು,'' ಎಂದು ಆಯುಕ್ತರು ತಿಳಿಸಿದರು.


15 ದಿನಗಳಿಗೊಮ್ಮೆ ಸಿಟಿ ರೌಂಡ್‌

ಬೆಂಗಳೂರು ನಗರಾಭಿವೃದ್ಧಿ ಖಾತೆ ತಮ್ಮ ಬಳಿಯೇ ಇಟ್ಟುಕೊಂಡಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಭಾನುವಾರ ಸತತ ಮೂರೂವರೆ ತಾಸು ನಗರ ಪ್ರದಕ್ಷಣೆ ಮಾಡಿ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು. ಇನ್ನು ಮುಂದೆ ಪ್ರತಿ 15 ದಿನಗಳಿಗೊಮ್ಮೆ ನಗರದಲ್ಲಿ ಸಂಚರಿಸಿ ಸಮಸ್ಯೆ ಆಲಿಸುವುದರ ಜತೆಗೆ ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡಲಾಗುವುದು ಎಂದು ಸಿಎಂ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ