ಆ್ಯಪ್ನಗರ

ಕಲ್ಲಿದ್ದಲು ಕೊರತೆ: ತುರ್ತು ಪರಿಸ್ಥಿತಿ ಘೋಷಿಸಿದ ಇಂಧನ ಇಲಾಖೆ

ಸಾಗಣೆ ಜಾಲದ ತೊಡಕಿನಿಂದ ರಾಜ್ಯದಲ್ಲಿ ಕಲ್ಲಿದ್ದಲು ದಾಸ್ತಾನು ಕರಗಿದ್ದು, ಅರ್ಧ ದಿನಕ್ಕಾಗುವಷ್ಟು ಮಾತ್ರ ಸಂಗ್ರಹ ಇರುವ ಹಿನ್ನೆಲೆಯಲ್ಲಿ ಇಂಧನ ಇಲಾಖೆ ಇದೇ ಮೊದಲ ಬಾರಿಗೆ 'ಕಲ್ಲಿದ್ದಲು ತುರ್ತು ಪರಿಸ್ಥಿತಿ' ಘೋಷಣೆ ಮಾಡಿದ್ದು, ಯಾವುದೇ ವಿಧಾನದಲ್ಲಿ ಕಲ್ಲಿದ್ದಲು ಸಾಗಣೆಗೆ ಸರಕಾರ ಅವಕಾಶ ಕಲ್ಪಿಸಿದೆ.

Vijaya Karnataka 24 Oct 2017, 9:25 pm

ಬೆಂಗಳೂರು: ಸಾಗಣೆ ಜಾಲದ ತೊಡಕಿನಿಂದ ರಾಜ್ಯದಲ್ಲಿ ಕಲ್ಲಿದ್ದಲು ದಾಸ್ತಾನು ಕರಗಿದ್ದು, ಅರ್ಧ ದಿನಕ್ಕಾಗುವಷ್ಟು ಮಾತ್ರ ಸಂಗ್ರಹ ಇರುವ ಹಿನ್ನೆಲೆಯಲ್ಲಿ ಇಂಧನ ಇಲಾಖೆ ಇದೇ ಮೊದಲ ಬಾರಿಗೆ 'ಕಲ್ಲಿದ್ದಲು ತುರ್ತು ಪರಿಸ್ಥಿತಿ' ಘೋಷಣೆ ಮಾಡಿದ್ದು, ಯಾವುದೇ ವಿಧಾನದಲ್ಲಿ ಕಲ್ಲಿದ್ದಲು ಸಾಗಣೆಗೆ ಸರಕಾರ ಅವಕಾಶ ಕಲ್ಪಿಸಿದೆ.

Vijaya Karnataka Web coal shortage dks
ಕಲ್ಲಿದ್ದಲು ಕೊರತೆ: ತುರ್ತು ಪರಿಸ್ಥಿತಿ ಘೋಷಿಸಿದ ಇಂಧನ ಇಲಾಖೆ


''ಕಲ್ಲಿದ್ದಲು ದಾಸ್ತಾನು ಕೊರತೆಯಿಂದ ಸದ್ಯಕ್ಕೆ ರಾಜ್ಯದ ವಿದ್ಯುತ್‌ ಪರಿಸ್ಥಿತಿ ಮೇಲೆ ಪರಿಣಾಮ ಆಗದಿದ್ದರೂ, ಮಳೆಗಾಲ ಮುಗಿದ ಬಳಿಕ ತೊಂದರೆ ಎದುರಾಗಲಿರುವ ಹಿನ್ನೆಲೆಯಲ್ಲಿ ಕಲ್ಲಿದ್ದಲು ಸಾಗಣೆಯನ್ನು ಯಾವುದೇ ವಿಧಾನದಲ್ಲಿ ನಿರ್ವಹಿಸಲು ಸಾಧ್ಯವಾಗುವಂತೆ ಪಾರದರ್ಶಕ ಕಾಯಿದೆಯಿಂದ (ಕೆಟಿಟಿಪಿ) ವಿನಾಯಿತಿ ಪಡೆಯಲು ಈ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ,'' ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು

''ಕೋಲ್‌ ಬ್ಲಾಕ್‌ ವಿವಾದ ಇತ್ಯರ್ಥವಾಗದೇ ಉಳಿದಿರುವ ಕಾರಣ ಹಾಗೂ ಸಾಗಣೆ ಲಿಂಕೇಜ್‌ ಸಮಸ್ಯೆಯಿಂದಾಗಿ ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಎದುರಾಗಿದೆ. ಹೀಗಾಗಿ ನಾನು ಮತ್ತು ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸಚಿವರನ್ನು ಭೇಟಿ ಮಾಡಿ ಯಾವುದಾದರೂ ಮಾರ್ಗದಲ್ಲಿ ಕಲ್ಲಿದ್ದಲು ಪೂರೈಕೆ ಮಾಡುವಂತೆ ಒತ್ತಡ ಹೇರಿದ್ದೇವೆ. ಅರ್ಧದಿನಕ್ಕೆ ಮಾತ್ರ ಸಾಕಾಗುವಷ್ಟು ಕಲ್ಲಿದ್ದಲು ಉಳಿದಿರುವ ಕಾರಣ ಮುಂದಿನ ದಿನಗಳಲ್ಲಿ ತೊಂದರೆ ಆಗಬಾರದು ಎಂಬ ಕಾರಣಕ್ಕೆ ರೈಲು ಮತ್ತು ರಸ್ತೆ ಎರಡೂ ಮಾರ್ಗಗಳಲ್ಲಿ ಕಲ್ಲಿದ್ದಲು ತರಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ'' ಎಂದು ತಿಳಿಸಿದರು.

ಯಾವುದೇ ತನಿಖೆಗೆ ಸಿದ್ಧ

''ಕಲ್ಲಿದ್ದಲು ಗುತ್ತಿಗೆ ಸಂಬಂಧ ಎಂಪ್ಟಾ ಸಂಸ್ಥೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಯಡಿಯೂರಪ್ಪ ಅವರು ಆಧಾರವಿಲ್ಲದೆ ರಾಜಕೀಯ ದುರುದ್ದೇಶದಿಂದ ಆರೋಪ ಮಾಡಿರುವುದು ಸರಿಯಲ್ಲ. ಕೋಲ್‌ ಬ್ಲಾಕ್‌ ವಿವಾದ ಇತ್ಯರ್ಥವಾಗದ ಕಾರಣ 30 ತಿಂಗಳಿಂದ ಮಾಸಿಕ 500 ಕೋಟಿ ರೂ.ಗಳಷ್ಟು ನಷ್ಟವಾಗುತ್ತಿದೆ. ಇದರಿಂದ ಅಂತಿಮವಾಗಿ ವಿದ್ಯುತ್‌ ಗ್ರಾಹಕರಿಗೆ ಹೊರೆಯಾಗಲಿದೆ. ಈ ಕಾರಣಕ್ಕೆ ಪ್ರತ್ಯೇಕ ಕಲ್ಲಿದ್ದಲು ಗುತ್ತಿಗೆ ಪಡೆಯಲು ಕೆಪಿಸಿಎಲ್‌ ಮೂಲಕ ದಂಡ ಪಾವತಿ ಅನಿವಾರ್ಯವಾಗಿತ್ತು. ರಾಜ್ಯದ ಹಿತದೃಷ್ಟಿಯಿಂದ ತೆಗೆದುಕೊಂಡಿರುವ ನಿರ್ಧಾರದಲ್ಲಿ ಯಡಿಯೂರಪ್ಪ ಅವರು ಆರೋಪಿಸುವಂತೆ ಯಾವ ಅಕ್ರಮವೂ ನಡೆದಿಲ್ಲ. ಈ ವಿಚಾರದಲ್ಲಿ ಸಿಬಿಐ ಸೇರಿದಂತೆ ಯಾವುದೇ ತನಿಖೆಗೆ ಸಿದ್ಧವಿದ್ದು, ತಪ್ಪು ಮಾಡಿದ್ದರೆ ನೇಣು ಹಾಕಲಿ'' ಎಂದು ಶಿವಕುಮಾರ್‌ ಸ್ಪಷ್ಟಪಡಿಸಿದರು.

ಎಂಪ್ಟಾ ಸಂಸ್ಥೆ ಆರಂಭವಾಗಿದ್ದು ಎಸ್‌.ಎಂ.ಕೃಷ್ಣ ಅವರು ಸಿಎಂ ಆಗಿದ್ದ ಕಾಲದಲ್ಲಿ. ಆಗ ವಾಜಪೇಯಿ ಅವರು ಪ್ರಧಾನಿಯಾಗಿದ್ದರು. ಈ ಸಂಸ್ಥೆಯ ಕೋಲ್‌ ಬ್ಲಾಕ್‌ ಅನ್ನು ಸುಪ್ರೀಂಕೋರ್ಟ್‌ ರದ್ದುಮಾಡಿದ ಹಿನ್ನೆಲೆಯಲ್ಲಿ ಪರ್ಯಾಯ ಕಲ್ಲಿದ್ದಲು ಗಣಿ ಹಂಚಿಕೆ ಪಡೆಯಲೇಬೇಕಿತ್ತು. ಅದಕ್ಕಾಗಿ ಹಣ ಪಾವತಿಸಬೇಕಿತ್ತು. ರಾಜ್ಯದ ಒಟ್ಟು 30 ಸಂಸದರ ನಿಯೋಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗಿತ್ತು. ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಅವರೂ ರಾಜ್ಯದ ಮನವಿಗೆ ಸ್ಪಂದಿಸಿ ಸಂಸತ್ತಿನಲ್ಲಿ ಕಾನೂನು ತಿದ್ದುಪಡಿ ಮಾಡಿ ಕಲ್ಲಿದ್ದಲು ಬ್ಲಾಕ್‌ ಪಡೆಯಲು ನೆರವಾಗಿದ್ದಾರೆ. ಈ ವಿಚಾರದಲ್ಲಿ ಪ್ರಧಾನಿ ಹಾಗೂ ಪಿಯೂಷ್‌ ಗೋಯಲ್‌ ಇಬ್ಬರೂ ರಾಜ್ಯಕ್ಕೆ ಸಹಾಯ ಮಾಡಿದ್ದಾರೆ. ಎಮ್ಟಾ ಸಂಸ್ಥೆ ಪರವಾಗಿ ರಾಜ್ಯ ಮಾತ್ರ ಹಣ ಪಾವತಿಸಿದೆ ಎಂಬುದು ತಪ್ಪು. ಬಿಜೆಪಿ ಆಡಳಿತವಿರುವ ಪಂಜಾಬ್‌ ಸರಕಾರವೂ 391 ಕೋಟಿ ರೂ. ಪಾವತಿಸಿದೆ. ಯಡಿಯೂರಪ್ಪ ಅವರು ಪೂರ್ಣ ಮಾಹಿತಿ ಇಲ್ಲದೆ ಈ ಆಪಾದನೆ ಮಾಡಿದ್ದಾರೆ'' ಎಂದು ಸಮಜಾಯಿಷಿ ನೀಡಿದರು.

Coal Shortage: DKS

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ