ಆ್ಯಪ್ನಗರ

ಸಿಎಂ ಪರಿಹಾರ ನಿಧಿಗಾಗಿ ನಕಲಿ ದಾಖಲೆ: ಇಬ್ಬರ ವಿರುದ್ಧ ಪ್ರಕರಣ

ಅರ್ಜಿಯೊಂದಿಗೆ ನೀಡಲಾಗಿದ್ದ ಮಣಿಪಾಲ್‌ ಆಸ್ಪತ್ರೆಯ ವೈದ್ಯಕೀಯ ದಾಖಲೆಗಳು ಮೇಲ್ನೋಟಕ್ಕೆ ನಕಲಿ ಎಂದು ಕಂಡು ಬಂದ ಕಾರಣ, ದಾಖಲೆಗಳ ನೈಜತೆ ಪರಿಶೀಲಿಸುವಂತೆ ಆಸ್ಪತ್ರೆಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು.

Vijaya Karnataka 9 Mar 2019, 3:18 pm
ಬೆಂಗಳೂರು: ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿ ನಕಲಿ ವೈದ್ಯಕೀಯ ದಾಖಲೆಗಳನ್ನು ನೀಡಿ ನೆರವಿಗಾಗಿ ಅರ್ಜಿ ಸಲ್ಲಿಸಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Vijaya Karnataka Web cm


ಫೆ.20ರಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಜನತಾ ದರ್ಶನದಲ್ಲಿ ಚನ್ನಪ್ಪ ಹಾಗೂ ಸುನಂದಮ್ಮ ಎಂಬವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಒದಗಿಸುವಂತೆ ಮನವಿ ಸಲ್ಲಿಸಿದ್ದರು.

ಅರ್ಜಿಯೊಂದಿಗೆ ನೀಡಲಾಗಿದ್ದ ಮಣಿಪಾಲ್‌ ಆಸ್ಪತ್ರೆಯ ವೈದ್ಯಕೀಯ ದಾಖಲೆಗಳು ಮೇಲ್ನೋಟಕ್ಕೆ ನಕಲಿ ಎಂದು ಕಂಡು ಬಂದ ಕಾರಣ, ದಾಖಲೆಗಳ ನೈಜತೆ ಪರಿಶೀಲಿಸುವಂತೆ ಆಸ್ಪತ್ರೆಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು. ಮುಖ್ಯಮಂತ್ರಿ ಕಚೇರಿಯಿಂದ ನೇಮಿಸಿದ ಇಬ್ಬರು ಅಧಿಕಾರಿಗಳ ತಂಡ ದಾಖಲೆ ಪರಿಶೀಲಿಸಿದಾಗ ನಕಲಿ ಎಂದು ಆಸ್ಪತ್ರೆಯ ಅಧಿಕಾರಿಗಳು ದೃಢೀಕರಿಸಿದ್ದರು. ದಾಖಲೆಯ ಹೆಸರಿಗೂ ಮತ್ತು ಆಸ್ಪತ್ರೆಯ ನೋಂದಣಿ ಸಂಖ್ಯೆಗಳಿಗೂ ಹೊಂದಾಣಿಕೆಯಾಗುತ್ತಿಲ್ಲ. ಬಿಲ್‌ಗಳಲ್ಲಿ ನಮೂದಿಸಿರುವ ಹೆಸರಿನ ವೈದ್ಯರೂ ಸೇವೆ ಸಲ್ಲಿಸುತ್ತಿಲ್ಲ ಎಂದು ಆಸ್ಪತ್ರೆಯು ಪತ್ರದಲ್ಲಿ ತಿಳಿಸಿದೆ.

ಭದ್ರಾವತಿ ಶಾಸಕ ಹೆಸರಿನಲ್ಲಿ ವೈದ್ಯ ಸಚಿವರಿಗೆ ಕರೆ: ಪ್ರಕರಣ ದಾಖಲು
ಭದ್ರಾವತಿ ಶಾಸಕ ಸಂಗಮೇಶ್ವರ ಹೆಸರಿನಲ್ಲಿ ವೈದ್ಯ ಶಿಕ್ಷಣ ಸಚಿವ ಇ.ತುಕಾರಾಮ್‌ ಅವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ, ಕೆಲಸ ಮಾಡಿಸಿಕೊಂಡುವಂತೆ ಜೋರು ಮಾಡಿದ್ದಾನೆ.

ಸಚಿವರಿಗೆ ಕರೆ ಮಾಡಿರುವ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕ ಸಂಗಮೇಶ್ವರ ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ.

ಮಾ.5ರಂದ ಸಂಜೆ 6.15ರ ಸುಮಾರಿಗೆ ವೈದ್ಯ ಸಚಿವರು ಕಚೇರಿಯಲ್ಲಿದ್ದ ವೇಳೆ ಅಪರಿಚಿತ ವ್ಯಕ್ತಿ ಕರೆ ಮಾಡಿ, 'ನಾನು ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್‌. ನನ್ನ ಕೆಲಸವನ್ನು ಮಾಡಿಕೊಡಿ' ಎಂದು ಹೇಳಿದ್ದಾನೆ. ಆಗ ಅನುಮಾನಗೊಂಡ ಸಚಿವರು, ಅಪ್ತ ಮೂಲಕ ಕರೆ ಮಾಡಿದವನ ಬಗ್ಗೆ ಪತ್ತೆ ಮಾಡಿಸಿದರು. ಆಗ ನಕಲಿ ವ್ಯಕ್ತಿ ಎಂದು ಗೊತ್ತಾಗಿದೆ.

''ಪ್ರಕರಣ ದಾಖಲಿಸಿಕೊಂಡು ಅಪರಿಚಿತ ವ್ಯಕ್ತಿಯ ಫೋನ್‌ ಸಂಖ್ಯೆ ಆಧರಿಸಿ ಆತನ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ,'' ಎಂದು ಪೊಲೀಸರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ