ಆ್ಯಪ್ನಗರ

ಸಂಪೂರ್ಣ ಸಾಲಮನ್ನಾ ಕಷ್ಟ: ಉತ್ತರ ಕರ್ನಾಟಕ ರೈತರ ನಿಯೋಗಕ್ಕೆ ಸಿಎಂ ಪ್ರತಿಕ್ರಿಯೆ

ಒಂದು ತಿಂಗಳಲ್ಲಿ ಬೆಳೆಸಾಲ ಮನ್ನಾ ಮಾಡುತ್ತೇನೆ. ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಲು ಕಾನೂನು ಮತ್ತು ತಾಂತ್ರಿಕ ತೊಡಕುಗಳಿವೆ.

Vijaya Karnataka 12 Jul 2018, 9:12 am
ಬೆಂಗಳೂರು: ಒಂದು ತಿಂಗಳಲ್ಲಿ ಬೆಳೆಸಾಲ ಮನ್ನಾ ಮಾಡುತ್ತೇನೆ. ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಲು ಕಾನೂನು ಮತ್ತು ತಾಂತ್ರಿಕ ತೊಡಕುಗಳಿವೆ. ಮಹದಾಯಿ, ಕಳಸ ಬಂಡೂರಿ ಯೋಜನೆ ಕುರಿತು ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ರೈತ ಮುಖಂಡರಿಗೆ ಸ್ಪಷ್ಟಪಡಿಸಿದ್ದಾರೆ.
Vijaya Karnataka Web Loan


ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತ ಮುಖಂಡರ ನಿಯೋಗ, ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.

ರೈತರ ನಿಯೋಗದಲ್ಲಿದ್ದ ಒಕ್ಕೂಟದ ಮುಖಂಡ ಸುಭಾಷ್‌ ಚಂದ್ರ ಗೌಡ ಪಾಟೀಲ್‌ ಮಾತನಾಡಿ, ''ಚಾಲ್ತಿ ಸಾಲ, ಸುಸ್ತಿ ಸಾಲ ಸೇರಿದಂತೆ ಎಲ್ಲ ರೀತಿಯ ರೈತರ ಸಾಲವನ್ನು ತಾರತಮ್ಯ ಮಾಡದೇ ಸಂಪೂರ್ಣ ಮನ್ನಾ ಮಾಡಬೇಕು. ರೈತ ಹೋರಾಟಗಾರರ ವಿರುದ್ಧ ದಾಖಲಿಸಿರುವ ಪ್ರಕರಣ ತೆಗೆಸಬೇಕು ಎಂದು ಮನವಿ ಮಾಡಿದೆವು. ಆದರೆ, ಅವರು ಕೇವಲ ಬೆಳೆಸಾಲವನ್ನು ಮಾತ್ರ ಮನ್ನಾ ಮಾಡಲು ಸಾಧ್ಯ ಮುಂದಿನ ದಿನಗಳಲ್ಲಿ ನೋಡೋಣ''ಎಂದು ತಿಳಿಸಿದ್ದಾಗಿ ಹೇಳಿದರು.

ಸಿಎಂ ಭರವಸೆ ನೀಡಿದಂತೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮತ್ತೆ ಹೋರಾಟ ಮಾಡುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದರು. ಮಾಜಿ ಶಾಸಕ ಕೋನರೆಡ್ಡಿ, ರೈತರ ಮುಖಂಡರಾದ ಶಂಕರಗೌಡ ಸೇರಿದಂತೆ ಇನ್ನಿತರರು ನಿಯೋಗದಲ್ಲಿದ್ದರು.

ಪ್ರತಿಪಕ್ಷ ನಾಯಕರ ಭೇಟಿ

''ಬಿಜೆಪಿ ನೇತೃತ್ವದ ಕೇಂದ್ರ ಸರಕಾರವೂ ರಾಜ್ಯದ ಹಿತ ಕಾಪಾಡುವಂತೆ ನೋಡಿಕೊಳ್ಳಲು ನಿಮ್ಮ ಪಾತ್ರ ಮಹತ್ವದ್ದಾಗಿದೆ ಎಂದು ಪ್ರತಿಪಕ್ಷ ನಾಯಕ ಬಿ.ಎಸ್‌ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಕೇಂದ್ರ ಸರಕಾರದ ಫಸಲ್‌ ಭಿಮಾ ಯೋಜನೆ ಅಡಿ ರೈತರಿಗೆ ಪಾವತಿಸುವ ವಿಮೆ ಮೊತ್ತದಲ್ಲಿ ವಿವಿಧ ಶುಲ್ಕಗಳ ರೂಪದಲ್ಲಿ ಹಣ ಕಟ್‌ ಆಗುತ್ತಿದೆ. ಇದು ತಪ್ಪಿ ಎಲ್ಲ ಹಣ ರೈತರಿಗೆ ನೇರವಾಗಿ ಸಿಗಬೇಕು. ಕೇಂದ್ರ ಹಣಕಾಸು ಮಂತ್ರಿಯನ್ನು ಭೇಟಿ ಮಾಡಿ ಈ ವಿಷಯವನ್ನು ಮನವರಿಕೆ ಮಾಡಿಕೊಡಿ ಎಂದು ಕೋರಿದ್ದೇವೆ. ನಮ್ಮ ಮನವಿಗೆ ಅವರು ಸ್ಪಂದಿಸಿದ್ದಾರೆ,'' ಎಂದು ಸುಭಾಷ್‌ ಚಂದ್ರ ಗೌಡ ಪಾಟೀಲ್‌ ತಿಳಿಸಿದರು.

ಬೆಳಗ್ಗೆ ನಗರ ರೈಲು ನಿಲ್ದಾಣಕ್ಕೆ ಆಗಮಿಸಿದ್ದ ರೈತರು ಅಲ್ಲಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ನಡೆಸಿದರು. ನಂತರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ, ಈ ವೇಳೆ ಪೊಲೀಸರು, ರೈತರನ್ನು ತಡೆದರು. ಈ ವೇಳೆ ನೂಕು ನುಗ್ಗಲು ಉಂಟಾಗಿ ಕೆಲ ರೈತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ಕೆಲ ಕಾಲ ಟ್ರಾಫಿಕ್‌ ಜಾಮ್‌


ರೈಲು ನಿಲ್ದಾಣದಿಂದ ನೂರಾರು ಸಂಖ್ಯೆಯಲ್ಲಿ ರೈತರು ಶೇಷಾದ್ರಿ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ಕಾರಣ ಕೆಲ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿ ವಾಹನ ಸಂಚಾರ ನಿಧಾನಗೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ