ಆ್ಯಪ್ನಗರ

ಗವರ್ನರ್ ನಡೆ ವಿರೋಧಿಸಿ ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್‌ ತೀರ್ಮಾನ

ಆಪರೇಷನ್‌ ಕಮಲಕ್ಕೆ ಸಾವಿರ ಕೋಟಿ ರೂ. ಹೂಡಿಕೆ ಮಾಡಲಾಗಿದ್ದು ಸದನದಲ್ಲಿ ಈ ಬಗ್ಗೆ ದನಿಯೆತ್ತಬೇಕು. ಜತೆಗೆ ರಾಜ್ಯಪಾಲರ ನಡೆಯ ವಿರುದ್ಧವೂ ಹೋರಾಡಬೇಕು ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ(ಸಿಎಲ್‌ಪಿ) ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಗೊತ್ತಾಗಿದೆ.

Vijaya Karnataka 22 Jul 2019, 8:31 am
ಬೆಂಗಳೂರು : ಆಪರೇಷನ್‌ ಕಮಲಕ್ಕೆ ಸಾವಿರ ಕೋಟಿ ರೂ. ಹೂಡಿಕೆ ಮಾಡಲಾಗಿದ್ದು ಸದನದಲ್ಲಿ ಈ ಬಗ್ಗೆ ದನಿಯೆತ್ತಬೇಕು. ಜತೆಗೆ ರಾಜ್ಯಪಾಲರ ನಡೆಯ ವಿರುದ್ಧವೂ ಹೋರಾಡಬೇಕು ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ(ಸಿಎಲ್‌ಪಿ) ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಗೊತ್ತಾಗಿದೆ.
Vijaya Karnataka Web cong


ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ರಾತ್ರಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್‌, ಜಿ.ಪರಮೆಶ್ವರ, ದಿನೇಶ್‌ ಗುಂಡೂರಾವ್‌ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

ವಿಶ್ವಾಸಮತ ಯಾಚನೆ ಪೂರ್ಣಗೊಳಿಸುವಂತೆ ರಾಜ್ಯಪಾಲರು 2 ಬಾರಿ ನಿರ್ದೇಶನ ಕಳಿಸಿದ್ದಾರೆ. ರಾಜ್ಯಪಾಲರಿಗೆ ಇಂಥ ಅಧಿಕಾರವೇ ಇಲ್ಲ. ಇದರ ವಿರುದ್ಧ ಹೋರಾಟ ಮುಂದುವರಿಸುವುದರ ಜತೆಗೆ ರಾಜ್ಯಪಾಲರು ಬಿಜೆಪಿಯ ಏಜೆಂಟ್‌ ಎಂದು ಬಿಂಬಿಸಬೇಕು. ಈ ವಿಚಾರವಾಗಿ ಸದನದಲ್ಲಿ ಸುದೀರ್ಘವಾಗಿ ಮಾತನಾಡುವಂತೆ ಶಾಸಕರಿಗೆ ಮುಖಂಡರು ಸೂಚಿಸಿದರು ಎನ್ನಲಾಗಿದೆ.

ದೋಸ್ತಿ ಶಾಸಕರನ್ನು ಸೆಳೆಯಲು ಬಿಜೆಪಿಯವರು ಸುಮಾರು 1 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ. ಆಪರೇಷನ್‌ ಕಮಲ ಸಂಬಂಧ ಬಿ.ಸಿ.ಪಾಟೀಲ್‌ ಅವರೊಂದಿಗೆ ಯಡಿಯೂರಪ್ಪ ಸಂಭಾಷಣೆ ನಡೆಸಿದ ಆಡಿಯೊವಿದೆ. ಶಾಸಕರನ್ನು ಮುಂಬಯಿಗೆ ಕಳಿಸಿದ್ದರಲ್ಲಿ ಬಿಎಸ್‌ವೈ ಆಪ್ತ ಸಂತೋಷ್‌ ಪಾತ್ರವಿದೆ. ಬಿಜೆಪಿ ಶಾಸಕರು, ಮಾಜಿ ಶಾಸಕರೂ ಈ ಕಾರ್ಯಾಚರಣೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎಲ್ಲ ಅಂಶವನ್ನೂ ಪ್ರಸ್ತಾಪಿಸುವಂತೆ ನಿರ್ದೇಶನ ನೀಡಲಾಯಿತು ಎಂದು ತಿಳಿದು ಬಂದಿದೆ.

''ಸರಕಾರ ರಚಿಸಲು ಬಿಜೆಪಿಯವರು ಸಾವಿರ ಕೋಟಿ ರೂ. ಖರ್ಚು ಮಾಡಲು ಹೊರಟಿದ್ದಾರೆ. ಈ ನಡುವೆಯೂ ನಾವು ವಿಶ್ವಾಸಮತ ಗೆಲ್ಲುತ್ತೇವೆ. ವಿಪ್‌ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಬಾಕಿಯಿದೆ. ಸಿದ್ದರಾಮಯ್ಯ ಅವರೂ ಕ್ರಿಯಾಲೋಪವೆತ್ತಿದ್ದಾರೆ. ಇದೂ ಇತ್ಯರ್ಥವಾಗಬೇಕು,'' ಎಂದು ಸಭೆ ಬಳಿಕ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯಿಸಿದ್ದಾರೆ.

ಬೆನ್ನಿಗೆ ಚೂರಿ ಹಾಕಿದರು ಎಂದ ಸಿದ್ದು

ತಾವು ಸಿಎಂ ಆಗಿದ್ದಾಗ ಕ್ಷೇತ್ರ ಅಭಿವೃದ್ಧಿಗೆ ಹೆಚ್ಚು ಅನುದಾನ ಪಡೆದುಕೊಂಡಿದ್ದವರೇ ಬೆನ್ನಿಗೆ ಚೂರಿ ಹಾಕಿದ್ದಾರೆ. ರಾಜಕೀಯದಲ್ಲಿ ಯಾರನ್ನು ನಂಬಬೇಕೆಂದೇ ತಿಳಿಯುತ್ತಿಲ್ಲವೆಂದು ಸಭೆಯಲ್ಲಿ ಸಿದ್ದರಾಮಯ್ಯ ಬೇಸರ ತೋಡಿಕೊಂಡಿದ್ದಾರೆ.

''ಕೆಲ ಶಾಸಕರು ನನಗೆ ಆಪ್ತರು. ನಾನೇ ಅವರನ್ನು ಕಳಿಸಿದ್ದೇನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ, ಎಲ್ಲರೂ ನನಗೆ ಆಪ್ತರು. ಯಾರಿಗೂ ಬಿಜೆಪಿಗೆ ಹೋಗಿ ಎನ್ನುವ ನೀಚ ಕೆಲಸವನ್ನು ನಾನು ಮಾಡುವುದಿಲ್ಲ. ಬಸವರಾಜು, ಸೋಮಶೇಖರ್‌, ಮುನಿರತ್ನ ಹೇಳಿದ ಕೆಲಸವನ್ನೆಲ್ಲ ಮಾಡಿಕೊಟ್ಟಿದ್ದೆ. ಅವರೇ ಬೆನ್ನಿಗೆ ಚೂರಿ ಹಾಕಿದರು. ಎಂಟಿಬಿ, ಸುಧಾಕರ್‌ ಎಲ್ಲಿಗೂ ಹೋಗುವುದಿಲ್ಲ ಎಂದು ಹೇಳಿ ಮೋಸಮಾಡಿದರು. ಇಂಥವರ ಜತೆ ರಾಜಕಾರಣ ಮಾಡುವುದು ಕಷ್ಟ. ನನಗೆ ಬಹಳ ನೋವಾಗಿದೆ. ಇಂಥವರೆಲ್ಲ ವಾಪಸ್‌ ಬಂದರೂ ಸೇರಿಸಿಕೊಳ್ಳಬಾರದು. ರಾಜಕಾರಣ ಶುದ್ಧವಾಗಿರಬೇಕು,'' ಎಂದರು ಎನ್ನಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ