ಆ್ಯಪ್ನಗರ

ಸೆ. 27, 28ಕ್ಕೆ ಸುರ್ಜೇವಾಲಾ ರಾಜ್ಯಕ್ಕೆ ಆಗಮನ, ಕಾಂಗ್ರೆಸ್‌ ಪಾಳಯದಲ್ಲಿ ಹೊಸ ಉತ್ಸಾಹ

ರಾಜ್ಯ ವಿಧಾನ ಮಂಡಲ ಕಲಾಪ ಸಂದರ್ಭದಲ್ಲೇ ಬೆಂಗಳೂರಿಗೆ ಆಗಮಿಸಲಿರುವ ರಣದೀಪ್‌ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರ ಜೊತೆಗೆ ಪ್ರತ್ಯೇಕ ಸಭೆ ನಡೆಸುವ ಸಾಧ್ಯತೆ ಇದೆ.

Vijaya Karnataka 19 Sep 2020, 11:59 pm
ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಉಸ್ತುವಾರಿಯಾಗಿ ನೇಮಕಗೊಂಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಸೆಪ್ಟಂಬರ್‌ 27, 28ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ.
Vijaya Karnataka Web Randeep Surjewala


ರಾಜ್ಯ ವಿಧಾನ ಮಂಡಲ ಕಲಾಪ ಸಂದರ್ಭದಲ್ಲೇ ಅವರು ಬೆಂಗಳೂರಿಗೆ ಆಗಮಿಸಲಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರ ಜೊತೆಗೆ ಪ್ರತ್ಯೇಕ ಸಭೆ ನಡೆಸುವ ಸಾಧ್ಯತೆ ಇದೆ.

ಸುರ್ಜೇವಾಲಾ ಆಗಮನ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಾಳಯದಲ್ಲಿ ಹೊಸ ಉತ್ಸಾಹ ಮೂಡಿದೆ. ಹೀಗಾಗಿ ಅಧಿವೇಶನದಲ್ಲಿ ಸರಕಾರವನ್ನು ಕಟ್ಟಿ ಹಾಕುವುದಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಜಿಎಸ್‌ಟಿ ಪರಿಹಾರ, ಕೋವಿಡ್‌ ಅವ್ಯವಹಾರದಂಥ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದು ರಾಷ್ಟ್ರಮಟ್ಟದಲ್ಲಿ ಈ ಎರಡು ವಿಚಾರಗಳು ಸದ್ದು ಮಾಡುವಂತೆ ಕಾಂಗ್ರೆಸ್‌ ತಂತ್ರಗಾರಿಕೆ ರೂಪಿಸಿದೆ.

ಜೆಡಿಎಸ್‌ ಅವಕಾಶವಾದಿ, ಆರ್‌ಎಸ್‌ಎಸ್‌ ಜತೆಗೂ ಹೋಗಬಹುದು: ಸಿದ್ದರಾಮಯ್ಯ ವಾಗ್ದಾಳಿ

ಅಧಿಕಾರಕ್ಕಾಗಿ ಆರ್‌ಎಸ್‌ಎಸ್‌ ಜತೆ ಬೇಕಾದರೂ ಹೋಗುತ್ತಾರೆ ಎಂದು ಜೆಡಿಎಸ್‌ ವಿರುದ್ಧ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿರುವ ರಮೇಶ್‌ ಬಾಬು ಅವರನ್ನು ಪಕ್ಷಕ್ಕೆ ಸೇರಿಸಿಕೊಂಡ ಬಳಿಕ ಮಾತನಾಡಿದ ಅವರು, "ಜೆಡಿಎಸ್‌ ಅವಕಾಶವಾದಿ ಪಕ್ಷ. ಸ್ವಾರ್ಥ ಮತ್ತು ಅಧಿಕಾರಕ್ಕಾಗಿ ಯಾರ ಜತೆ ಬೇಕಾದರೂ ಹೋಗುತ್ತಾರೆ," ಎಂದು ಚಾಟಿ ಬೀಸಿದರು.

"ಕಾಂಗ್ರೆಸ್‌ ಎಲ್ಲ ಪಕ್ಷಗಳ ತಾಯಿ ಇದ್ದ ಹಾಗೆ. ಬಹುತೇಕ ಎಲ್ಲ ಪಕ್ಷಗಳ ನಾಯಕರು ಕಾಂಗ್ರೆಸ್‌ನಲ್ಲಿ ಇದ್ದು ಹೋದವರು. ದೇವೇಗೌಡರು ಕಾಂಗ್ರೆಸ್‌ನಲ್ಲಿದ್ದರು. ಕಾಂಗ್ರೆಸ್‌ನಿಂದ ತಾಲೂಕು ಬೋರ್ಡ್‌ ಸದಸ್ಯರಾಗಿದ್ದವರು. ವಿಧಾನಸಭೆಗೆ ಟಿಕೆಟ್‌ ಸಿಗಲಿಲ್ಲ ಎಂಬ ಕಾರಣಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ರಾಮಕೃಷ್ಣ ಹೆಗಡೆಯವರೂ ಕಾಂಗ್ರೆಸ್‌ನಲ್ಲಿದ್ದರು. ಜೆಡಿಎಸ್‌ ಒಂದು ಅವಕಾಶವಾದಿ ಪಕ್ಷ. ಅವರು ಸ್ವಾರ್ಥಕ್ಕಾಗಿ ಇರುವವರು. ಅಧಿಕಾರಕ್ಕಾಗಿ ಬಿಜೆಪಿ ಜೊತೆಯೂ ಹೋಗುತ್ತಾರೆ. ಆರ್‌ಎಸ್‌ಎಸ್‌ ಜೊತೆ ಸೇರಿದರೂ ಸೇರಬಹುದು," ಎಂದು ಲೇವಡಿ ಮಾಡಿದರು.

ಜೆಡಿಎಸ್‌ ಮುಖಂಡ ರಮೇಶ್‌ ಬಾಬು ಕಾಂಗ್ರೆಸ್‌ಗೆ ಸೇರ್ಪಡೆ

ಸದಸ್ಯತ್ಯ ತನ್ನಿ, ಸ್ಥಾನಮಾನ ಪಡೆಯಿರಿ

"ಪ್ರತಿ ತಾಲೂಕಿನಲ್ಲೂ ಕನಿಷ್ಠ 5 ಸಾವಿರ ಯುವಕರಿಗೆ ಪಕ್ಷದ ಸದಸ್ಯತ್ವ ಕೊಡಿಸಿ. ಹೆಚ್ಚು ಯುವಕರನ್ನು ಸದಸ್ಯರನ್ನಾಗಿ ಮಾಡಿ ನೀವು ನಾಯಕರಾಗಿ ಬೆಳೆಯಿರಿ’ - ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಯುವ ಕಾಂಗ್ರೆಸ್‌ ಸದಸ್ಯರಿಗೆ ನೀಡಿದ ಆಫರ್!

ಯೂತ್‌ ಕಾಂಗ್ರೆಸ್‌ ಮುಖಂಡರ ಜತೆಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಿದ ಅವರು, "ರಾಹುಲ್‌ ಗಾಂಧಿ ಅವರು ಯುವ ನಾಯಕತ್ವ ಬೆಳೆಸಬೇಕು ಎಂಬ ದೃಷ್ಟಿಯಿಂದ ಯೂತ್‌ ಕಾಂಗ್ರೆಸ್‌ನಲ್ಲಿ ಚುನಾವಣೆ ಪ್ರಾರಂಭಿಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಂಚಾಯಿತಿಯಿಂದ ಸಂಸತ್ತಿನವರೆಗೆ ಚುನಾವಣೆ ಮೂಲಕ ನಾಯಕರ ಆಯ್ಕೆ ಮಾಡಬೇಕಿರುವುದು ನಮ್ಮ ಕರ್ತವ್ಯ. ಈ ನಾಯಕರಾಗಿ ನೀವು ಬೆಳೆಯಬೇಕು ಎಂಬುದು ನಮ್ಮ ಉದ್ದೇಶ," ಎಂದರು.

"ಸದಸ್ಯತ್ವ ನೋಂದಣಿಗೆ ಮುಕ್ತ ಅವಕಾಶ ಇದ್ದು, ನಿಮ್ಮ ಮೇಲೆ ಯಾರ ಒತ್ತಡವೂ ಇರುವುದಿಲ್ಲ. ಹೆಚ್ಚು ಸದಸ್ಯರನ್ನು ಮಾಡಿದಷ್ಟು ನಿಮ್ಮಲ್ಲಿ ನಾಯಕತ್ವದ ಗುಣ ಬೆಳೆಯುತ್ತದೆ," ಎಂದು ಹೇಳಿದರು.

ಅಕಾಯ್‌ ಪದ್ಮಾಶಾಲಿ ಕಾಂಗ್ರೆಸ್‌ ಸೇರ್ಪಡೆ

ಸಾಮಾಜಿಕ ಹೋರಾಟಗಾರ್ತಿ ಅಕಾಯ್‌ ಪದ್ಮಶಾಲಿ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಮ್ಮುಖದಲ್ಲಿ ಭಾನುವಾರ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಎರಡು ದಿನಗಳ ಹಿಂದಷ್ಟೇ ಅವರು ಶಿವಕುಮಾರ್‌ ಭೇಟಿಯಾಗಿ ಈ ಸಂಬಂಧ ಚರ್ಚೆ ನಡೆಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ