ಆ್ಯಪ್ನಗರ

ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆ ದುರ್ಬಲಗೊಳಿಸಿದರೆ ದಲಿತರ ದಂಗೆ- ಸಿದ್ದರಾಮಯ್ಯ ಎಚ್ಚರಿಕೆ

ರಾಜ್ಯ ಸರಕಾರ ಎಸ್‌ಸಿಪಿ /ಟಿಎಸ್‌ಪಿ ಕಾಯ್ದೆಗೆ ತಿದ್ದುಪಡಿ ತರುವ ಕುರಿತಾಗಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದು ಕಾಂಗ್ರೆಸ್ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸರಕಾರದ ನಡೆಯನ್ನು ಖಂಡಿಸಿದ್ದಾರೆ.

Vijaya Karnataka Web 18 Sep 2019, 1:21 pm
ಬೆಂಗಳೂರು : ಎಸ್‌ಸಿಪಿ - ಟಿಎಸ್‌ಪಿ ಕಾಯ್ದೆಯನ್ನು ದುರ್ಬಲಗೊಳಿಸಲು ರಾಜ್ಯ ಸರಕಾರ ಹೊರಟರೆ ದಲಿತ ಸಮುದಾಯ ದಂಗೆ ಎದ್ದೀತು ಹಾಗೂ ಅದರ ಮುಂಚೂಣಿಯಲ್ಲಿ ನಾನೇ ಇರುತ್ತೇನೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web siddaramayha


ಎಸ್‌ಸಿಪಿ - ಟಿಎಸ್‌ಪಿ ಕಾಯ್ದೆ ಕುರಿತಾದ ಸರಕಾರದ ನಿಲುವನ್ನು ವಿರೋಧಿಸಿ ಟ್ವೀಟ್ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡ ಅವರು, ಸರಕಾರದ ಬಣ್ಣ ಬಹಳ ಬೇಗ ಬದಲಾಗುತ್ತಿದೆ. ಎಸ್‌ಸಿಪಿ/ ಟಿಎಸ್‌ಪಿ ಯೋಜನೆಗೆ ತಿದ್ದುಪಡಿ ತಂದು ಅನುದಾನ ಕಡಿತಗೊಳಿಸುವ ಸರಕಾರದ ಚಿಂತನೆ ದುಷ್ಟ ಆಲೋಚನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸರಕಾರದ ಎಲ್ಲಾ 39 ಇಲಾಖೆಗಳಿಗೆ ಹಂಚಿಕೆಯಾಗುವ ವಾರ್ಷಿಕ ಅನುದಾನದಲ್ಲಿ ಶೇ. 24.1 ಮೊತ್ತವನ್ನು ಪರಿಶಿಷ್ಟ ಫಲಾನುಭವಿಗಳಿಗೆ ಮೀಸಲಿಡುವ ಹಾಗೂ ವೆಚ್ಚ ಮಾಡುವುದನ್ನು ಕಡ್ಡಾಯಗೊಳಿಸಿರುವ 'ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಹಾಗೂ ಬುಡಕಟ್ಟು ಉಪಯೋಜನೆ ಅಧಿನಿಯಮ- 2013' ತಿದ್ದುಪಡಿಗೆ ರಾಜ್ಯ ಸರಕಾರ ಮುಂದಾಗಿದೆ.

ಯೋಜನೆಯಡಿ ನಿಗದಿಯಾದ ಅನುದಾನವನ್ನು ಇತರ ಇಲಾಖೆಗಳಿಗೆ ಬಳಕೆಮಾಡಲು ಅವಕಾಶವಿಲ್ಲ ಇದರಿಂದ ಪರಿಶಿಷ್ಟರಿಗೆ ವೈಯಕ್ತಿಕ ಲಾಭವಾಗುತ್ತಿಲ್ಲ ಎಂಬ ಕಾರಣಕ್ಕಾಗಿ ಸರಕಾರ ಈ ನಿರ್ಧಾರಕ್ಕೆ ಬಂದಿದೆ. ಈ ಕುರಿತಾದ ಹಣಕಾಸು ಇಲಾಖೆ ಸಲಹೆಗೆ ರಾಜ್ಯ ಸರಕಾರ ಸಮ್ಮತಿ ಸೂಚಿಸಿದ್ದು, ಸೋಮವಾದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ 'ಕರ್ನಾಟಕ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡಗಳ ಅಭಿವೃದ್ದಿ ಪರಿಷತ್' ಸಭೆಯಲ್ಲಿ ಕಾನೂನು ತಿದ್ದುಪಡಿ ಕುರಿತಾಗಿ ನಿರ್ಧಾರ ಕೈಗೊಳ್ಳಲಾಗಿತ್ತು.


ಸರಕಾರದ ಈ ಚಿಂತನೆಗೆ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರವಾಗಿ ವಿರೋಧಿಸಿದ್ದು ಹೋರಾಟದ ಸೂಚನೆಯನ್ನು ನೀಡಿದ್ದಾರೆ. ನಿರ್ಧಾರಕ್ಕೆ ಬಿಜೆಪಿ ಪಕ್ಷದ ಶಾಸಕರು ಕೂಡಾ ಸಮ್ಮತಿ ಸೂಚಿಸಬಾರದು ಎಂದ ಅವರು, ಇದರ ವಿರುದ್ಧ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ್ದಾರೆ. ಪಕ್ಷದ ದಾಸ್ಯಕ್ಕೆ ಕಟ್ಟುಬಿದ್ದು ಸರಕಾರದ ನಿಲುವನ್ನು ಸಹಿಸಿಕೊಂಡರೆ ಇತಿಹಾಸ ಕ್ಷಮಿಸದು ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ