ಆ್ಯಪ್ನಗರ

ನಳಿನ್‌ಗೆ ಸಿದ್ದು ‘ಪಂಪ್‌ವೆಲ್’ ಟ್ವೀಟ್ ಗುದ್ದು!

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್‌ ದಾಳಿ ನಡೆಸಿದ್ದು ಕಳೆದ 10 ವರ್ಷಗಳಿಂದ ನೆನೆಗುದಿಗೆ ಬಿದ್ದ ಮಂಗಳೂರಿನ ಪಂಪ್‌ವೆಲ್ ಮೇಲ್ಸೇತುವೆಯನ್ನು ಉಲ್ಲೇಖಿಸಿ ಕಾಲೆಳೆದಿದ್ದಾರೆ.

Vijaya Karnataka Web 29 Nov 2019, 1:39 pm
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್‌ಗೆ ಪಂಪ್‌ವೆಲ್ ಫ್ಲೈಓವರ್ ಭೂತ ಎಡೆಬಿಡದೆ ಕಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಂಗಳೂರಿನ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ವಿಳಂಬ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದರೆ ಇದೀಗ ನಳಿನ್ ಅವರನ್ನು ತರಾಟೆಗೆ ತೆಗೆದುಕೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ‘ಪಂಪ್‌ವೆಲ್’ ಟ್ರೋಲ್ ಬಳಸಿಕೊಂಡಿದ್ದಾರೆ.
Vijaya Karnataka Web congress leader siddaramaiah tweet on nalin kumar kateel
ನಳಿನ್‌ಗೆ ಸಿದ್ದು ‘ಪಂಪ್‌ವೆಲ್’ ಟ್ವೀಟ್ ಗುದ್ದು!


ಉಪಚುನಾವಣೆ ಬಳಿಕ ಕಾಂಗ್ರೆಸ್ ಖಾಲಿಯಾಗುತ್ತದೆ. ಸಿದ್ದರಾಮಯ್ಯ ನಿರುದ್ಯೋಗಿಯಾಗುತ್ತಾರೆ ಎಂದು ನಳಿನ್ ಕುಮಾರ್ ಕಟೀಲ್ ಮಾಡಿರುವ ಟೀಕೆಗೆ ಟ್ವಿಟ್ಟರ್‌ನಲ್ಲಿ ತಿರುಗೇಟು ಕೊಟ್ಟಿರುವ ಸಿದ್ದರಾಮಯ್ಯ , ಸಂಘ ಪರಿವಾರ ನಳಿನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದ್ದೇ ಸಿಎಂ ಬಿಎಸ್‌ ಯಡಿಯೂರಪ್ಪ ಅವರನ್ನು ನಿರುದ್ಯೋಗಿಯನ್ನಾಗಿ ಮಾಡಲು. ಆ ಕೆಲಸವನ್ನು ಕಟೀಲ್ ಯಶಸ್ವಿಯಾಗಿ ಮಾಡ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.


ಈ ಟ್ವೀಟ್‌ಗೆ #welldone #Pumpwelldone ಎಂಬ ಹ್ಯಾಶ್ ಟ್ಯಾಗ್ ನೀಡುವ ಮೂಲಕ ನಳಿನ್ ಕಾಲೆಳೆದಿದ್ದಾರೆ. ಮಂಗಳೂರಿನಿಂದ ಉಡುಪಿ ಹಾಗೂ ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಆರಂಭವಾಗಿ 10 ವರ್ಷಗಳು ಕಳೆದಿವೆ. ನಳಿನ್ ಕುಮಾರ್ ಕಟೀಲ್ ಮೊದಲ ಬಾರಿ ಸಂಸದರಾಗಿ ಆಯ್ಕೆಯಾದ ಸಂದರ್ಭದಲ್ಲಿ ಆರಂಭಗೊಂಡ ಕಾಮಗಾರಿ ಇದುವರೆಗೂ ಪೂರ್ಣಗೊಂಡಿಲ್ಲ.

ಮಹಾಲಕ್ಷ್ಮಿ ಲೇಔಟ್‌ ಉಪ ಚುನಾವಣೆ: ಮಹಾಲಕ್ಷ್ಮಿ ವರಕ್ಕಾಗಿ ನಡೀತಿದೆ ತ್ರಿಕೋನ ಸಮರ!

ನವಯುಗ ಕಂಪನಿಗೆ ಕಾಮಗಾರಿಯ ಗುತ್ತಿಗೆ ನೀಡಲಾಗಿದ್ದು ಆರ್ಥಿಕ ಮುಗ್ಗಟ್ಟು ಕಾರಣ ನೀಡಿ ಸಂಸ್ಥೆ ಕಾಮಗಾರಿಯನ್ನು ಸುದೀರ್ಘ ಅವಧಿಯಲ್ಲೂ ಪೂರ್ಣಗೊಳಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆದರೂ, ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳಿಂದ ಪ್ರತಿಭಟನೆ ನಡೆದರು ಪಂಪ್‌ವೆಲ್ ಸ್ಥಿತಿ ಮಾತ್ರ ಬದಲಾಗಿಲ್ಲ.

ಉಪಚುನಾವಣೆ ಕ್ಷೇತ್ರ ಪರಿಚಯ : 'ಹೊಸಕೋಟೆ ಕದನ' ದಲ್ಲಿ ಗೆಲ್ಲೋರು ಯಾರು?

ಮಂಗಳೂರಿಗರ ವ್ಯಾಪಕ ಪ್ರತಿಭಟನೆಯ ಹಿನ್ನೆಲೆಯಲ್ಲಿ 2019 ಜನವರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾರ್ಯದರ್ಶಿ ಮಂಗಳೂರಿಗೆ ಭೇಟಿ ನೀಡಿದ್ದರು. ಈ ವೇಳೆ ಕಾಮಗಾರಿ ಗುತ್ತಿಗೆಯನ್ನು ವಹಿಸಿರುವ ನವಯುಗ ಸಂಸ್ಥೆ ಅನುದಾನದ ಕೊರತೆ ಬಗ್ಗೆ ತಿಳಿಸಿತ್ತು. ಆ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಬ್ಯಾಂಕರ್ ಜತೆ ಮಾತನಾಡಿ ಸಾಲ ಹಾಗೂ ಸರಕಾರದಿಂದ ಅನುದಾನ ಒದಗಿಸಲಾಗಿತ್ತು. ಅಲ್ಲದೆ ಮೇ 31 ರೊಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿತ್ತು.

ಹೀಗಿದ್ದರೂ ಮತ್ತೆ ಕೆಲವು ತೊಡಕುಗಳಿಂದ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಗುತ್ತಿಗೆದಾರ ಕಂಪನಿಗೆ ಸಾಲ ನೀಡಿ ಕಾಮಗಾರಿ ನಡೆಸುವಂತೆ ಸೂಚನೆ ನೀಡಿದರು ಯಾವುದೇ ಫಲಪ್ರದವಾಗಿಲ್ಲ. ಇದೀಗ ಪಂಪ್‌ವೆಲ್ ಮೇಲ್ಸೇತುವೆ ಉದ್ಘಾಟನೆಗೆ ಡಿಸೆಂಬರ್ 31 ರಂದು ಮತ್ತೊಂದು ಡೆಡ್‌ಲೈನ್‌ನನ್ನು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಳಿನ್ ಕುಮಾರ್ ಕಟೀಲ್ ಅವರನ್ನು ತರಾಟೆಗೆ ತೆಗೆದುಕೊಳ್ಳಲು 'ಪಂಪ್‌ವೆಲ್' ಅಸ್ತ್ರ ಬಳಸಿಕೊಂಡಿದ್ದಾರೆ . ಸಿದ್ದರಾಮಯ್ಯ ಅವರ 'ಪಂಪ್‌ವೆಲ್' ಹ್ಯಾಶ್ ಟ್ಯಾಗ್ ಟ್ವೀಟ್‌ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಸದ್ದು ಮಾಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ