ಆ್ಯಪ್ನಗರ

‘ಸಿದ್ದರಾಮಯ್ಯ ಕಾಂಗ್ರೆಸ್‌’ಗೆ ಹಿರಿಯರಿಂದ 'ರಿಪೇರಿ'! ಹೊಸ ವರ್ಷಕ್ಕೆ ಡಿಕೆಶಿ ಕೆಪಿಸಿಸಿ ಸಾರಥಿ?

ರಾಜ್ಯದಲ್ಲಿ ಪಕ್ಷದ ಪ್ರತಿ ವಿಚಾರದಲ್ಲೂ ಸಿದ್ದರಾಮಯ್ಯ ಹೇಳಿದ್ದೇ ನಡೆಯುತ್ತದೆ ಎಂಬ ಸ್ಥಿತಿ ಹಿಂದೆ ಸರಿದಿದೆ. ಇನ್ನು ಮುಂದೆ ಹೈಕಮಾಂಡ್‌ ಹೇಳಿದಂತೆ ಕೇಳುವುದು ಸಿದ್ದರಾಮಯ್ಯಗೆ ಅನಿವಾರ್ಯವಾಗಲಿದೆ.

Vijaya Karnataka Web 10 Dec 2019, 8:49 pm
ಬೆಂಗಳೂರು: ರಾಜ್ಯದಲ್ಲಿರುವುದು ‘ಸಿದ್ದರಾಮಯ್ಯ ಕಾಂಗ್ರೆಸ್‌’ ಎಂದು ಕೆಲ ತಿಂಗಳಿಂದ ನಿರ್ಲಿಪ್ತರಾಗಿದ್ದ ಹಿರಿಯ ಕಾಂಗ್ರೆಸಿಗರು ಉಪಚುನಾವಣೆ ಫಲಿತಾಂಶದ ಬಳಿಕ ಚುರುಕಾಗಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಸೇಡು ತೀರಿಸಿಕೊಳ್ಳಲು ಒಟ್ಟಾಗಿ ಮುಗಿಬಿದ್ದಿದ್ದಾರೆ. ಸಂಪೂರ್ಣ ವಿವೇಚನೆಯೊಂದಿಗೆ ರಾಜ್ಯದಲ್ಲಿ ಪಕ್ಷ ಮುನ್ನಡೆಸುವ ಅವಕಾಶ ಪಡೆದುಕೊಂಡಿದ್ದ ಸಿದ್ದರಾಮಯ್ಯ ನಾಯಕತ್ವಕ್ಕೆ ಹಿನ್ನಡೆಯಾದ ಹಿನ್ನೆಲೆಯಲ್ಲಿ ‘ರಿಪೇರಿ’ಯ ಅನಿವಾರ್ಯತೆ ಹೈಕಮಾಂಡ್‌ಗೆ ಮನದಟ್ಟಾಗಿದೆ. ನಿಷ್ಠ ಮತ್ತು ಮೂಲ ಕಾಂಗ್ರೆಸ್‌ ಪ್ರತಿಪಾದನೆಯ ಹಲವು ಹಿರಿಯ ನಾಯಕರು ಹೊಸ ವರ್ಷದಲ್ಲಿ ರಾಜ್ಯ ಕಾಂಗ್ರೆಸ್‌ ಮುಂಚೂಣಿ ಸ್ಥಾನಕ್ಕೆ ಬಂದು ನಿಲ್ಲುವುದು ಖಚಿತವಾಗಿದೆ.
Vijaya Karnataka Web ‘ಸಿದ್ದರಾಮಯ್ಯ ಕಾಂಗ್ರೆಸ್‌’ಗೆ ಹಿರಿಯರಿಂದ ರಿಪೇರಿ! ಹೊಸ ವರ್ಷಕ್ಕೆ ಡಿಕೆಶಿ ಕೆಪಿಸಿಸಿ ಸಾರಥಿ?


ರಾಜ್ಯದಲ್ಲಿ ಪಕ್ಷದ ಪ್ರತಿ ವಿಚಾರದಲ್ಲೂ ಸಿದ್ದರಾಮಯ್ಯ ಹೇಳಿದ್ದೇ ನಡೆಯುತ್ತದೆ ಎಂಬ ಸ್ಥಿತಿ ಹಿಂದೆ ಸರಿದಿದೆ. ಇನ್ನು ಮುಂದೆ ಹೈಕಮಾಂಡ್‌ ಹೇಳಿದಂತೆ ಕೇಳುವುದು ಸಿದ್ದರಾಮಯ್ಯಗೆ ಅನಿವಾರ್ಯವಾಗಲಿದೆ. ಹತ್ತಾರು ವರ್ಷಗಳಿಂದ ಪಕ್ಷವನ್ನು ಕಟ್ಟಿ ಬೆಳೆಸಿ ಮೂಲೆಗುಂಪಾದೆವು ಎಂಬ ಹತಾಶೆಯಲ್ಲಿದ್ದ ಹಿರಿಯರು ಉಪಚುನಾವಣೆಯಲ್ಲಿ ಪಕ್ಷದ ಸೋಲಿಗೆ ಸಿದ್ದರಾಮಯ್ಯ ಅವರನ್ನೇ ಪೂರ್ಣ ಹೊಣೆ ಮಾಡಿ ಹೊಸ ವ್ಯವಸ್ಥೆಗೆ ನೀಲನಕ್ಷೆಯೊಂದಿಗೆ ಸಿದ್ಧರಾಗಿದ್ದಾರೆ. ಅಂತೆಯೇ, ಡಿ.14ರ ‘ಭಾರತ್‌ ಬಚಾವೋ’ ಆಂದೋಲನದ ಬಳಿಕ ರಾಜ್ಯ ಕಾಂಗ್ರೆಸ್‌ಗೆ ಸರ್ಜರಿ ಪ್ರಕ್ರಿಯೆ ಆರಂಭವಾಗಲಿದ್ದು, ನೂತನ ವರ್ಷದಲ್ಲಿ ಸಾಮೂಹಿಕ ನಾಯಕತ್ವದ ಹೊಸದೊಂದು ವೇದಿಕೆ ಅಣಿಯಾಗಲಿದೆ.

ವರ್ಷಾಂತ್ಯದಲ್ಲಿ ಪ್ರಕಟವಾಗಬೇಕಿದ್ದ ಕೆಪಿಸಿಸಿ ನೂತನ ಸಾರಥಿ ಆಯ್ಕೆ ನಿರೀಕ್ಷೆಗೆ ಮೊದಲೇ ಪ್ರಕಟವಾಗಲಿದೆ. ಡಿ.ಕೆ.ಶಿವಕುಮಾರ್‌, ಜಿ. ಪರಮೇಶ್ವರ್‌, ಎಚ್‌.ಕೆ.ಪಾಟೀಲ್‌, ಎಂ.ಬಿ.ಪಾಟೀಲ್‌ ಸೇರಿದಂತೆ ಹಲವರಿಗೆ ಜವಾಬ್ದಾರಿಗಳು ಹಂಚಿಕೆ ಆಗಲಿವೆ.

'ಗೆದ್ದವರಿಗೆ ಬಹುಮಾನ, ಸೋತವರ ಬಗ್ಗೆ ಹೈಕಮಾಂಡ್ ಗಮನ': ಮಂತ್ರಿಗಿರಿ ಪಕ್ಕಾ ಅಂದ್ರು ಅಶ್ವಥ್ ನಾರಾಯಣ

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಗಾದಿಗೆ ದಿನೇಶ್‌ ಗುಂಡೂರಾವ್‌ ನೀಡಿರುವ ರಾಜೀನಾಮೆಗಳು ತಕ್ಷಣಕ್ಕೆ ಅಂಗೀಕಾರ ಆಗುವುದಿಲ್ಲ ಎಂದು ಪಕ್ಷದ ಮೂಲಗಳು ಹೇಳಿವೆ.

ಕೆಪಿಸಿಸಿಗೆ ಹೊಸ ಸಾರಥಿ

ಹೊಸ ವರ್ಷದಲ್ಲಿ ಕೆಪಿಸಿಸಿ ಸಾರಥ್ಯ ವಹಿಸಿಕೊಳ್ಳಲು ಡಿ.ಕೆ.ಶಿವಕುಮಾರ್‌ಗೆ ಎಐಸಿಸಿಯಿಂದ ಸಂದೇಶ ಬಂದಿತ್ತು ಎನ್ನಲಾಗಿದೆ. ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಅವರನ್ನು ಮುಂದುವರಿಸಿ, ಸಿಎಲ್‌ಪಿ ನಾಯಕತ್ವವನ್ನು ಜಿ. ಪರಮೇಶ್ವರ್‌ಗೆ ನೀಡಲು ನಿರ್ಧರಿಸಲಾಗಿತ್ತು ಎನ್ನಲಾಗಿದೆ. ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯಲ್ಲಿ ಎಚ್‌.ಕೆ.ಪಾಟೀಲ್‌ರನ್ನು ಕರೆಸಿಕೊಂಡು, ಎಂ.ಬಿ.ಪಾಟೀಲ್‌ಗೆ ರಾಜ್ಯದಲ್ಲಿ ಹೊಸ ಜವಾಬ್ದಾರಿಯೊಂದನ್ನು ನೀಡುವ ಸೂತ್ರ ಎಐಸಿಸಿ ಮಟ್ಟದಲ್ಲಿ ಸಿದ್ದವಾಗಿತ್ತು. ಉಪಚುನಾವಣೆ ಫಲಿತಾಂಶ ನಂತರದ ಪಕ್ಷದೊಳಗಿನ ಬೆಳವಣಿಗೆ ಹಿನ್ನೆಲೆಯಲ್ಲಿ ಈ ಸಿದ್ದಸೂತ್ರಕ್ಕೆ ಬೇಗ ಚಾಲನೆ ಸಿಗಲಿದೆ ಎಂದು ಹೇಳಲಾಗಿದೆ. ಆದರೆ, ಜನವರಿ ಮೂರನೇ ವಾರದಲ್ಲಿಎಐಸಿಸಿ ಪುನಾರಚನೆ ನಡೆದು ರಾಜ್ಯ ಉಸ್ತುವಾರಿಗಳು ಬದಲಾಗಲಿದ್ದು, ಅಲ್ಲಿಯವರೆಗೆ ಕೆ.ಸಿ.ವೇಣುಗೋಪಾಲ್‌ ಮುಂದುವರಿಯಲಿದ್ದಾರೆ ಎನ್ನಲಾಗಿದೆ.

'ವಿಶ್ವನಾಥ್, ಎಂಟಿಬಿಗೆ ಅನ್ಯಾಯವಾಗಿದೆ! ಗೆದ್ದವರು, ಸೋತವರೆಲ್ಲ ಸಭೆ ಮಾಡ್ತೀವಿ': ರಮೇಶ್ ಜಾರಕಿಹೊಳಿ

ಸಕ್ರಿಯರಾದ ಹಿರಿಯರು

ಲೋಕಸಭೆ ಚುನಾವಣೆ ಬಳಿಕ ಸಿದ್ದರಾಮಯ್ಯ ಬಣ ಹಾಗೂ ಹಿರಿಯ ಕಾಂಗ್ರೆಸ್ಸಿಗರು ಎಂಬ ಎರಡು ಬಣಗಳ ಕಾದಾಟ ತೀವ್ರಗೊಂಡಿತ್ತು. ಉಪಚುನಾವಣೆಯಲ್ಲಿ ಈ ಕಾದಾಟ ತೀವ್ರಗೊಂಡು ಪಕ್ಷದ ಸೋಲಿಗೆ ಕಾರಣವಾಯಿತು. ಈ ಸೋಲು ನಿರೀಕ್ಷಿಸಿ ಕಾದಿದ್ದ ಹಿರಿಯ ಕಾಂಗ್ರೆಸ್ಸಿಗರು ತೆರೆಮರೆಯಲ್ಲಿ ಒಟ್ಟುಗೂಡಿ ಸಿದ್ದರಾಮಯ್ಯ ವಿರುದ್ಧ ಸೇಡು ತೀರಿಸಿಕೊಳ್ಳುವ ಕಾರ್ಯಾಚರಣೆಗೆ ಇಳಿದಿದ್ದಾರೆ. ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ದಿಲ್ಲಿಯಲ್ಲಿ ಮಂಗಳವಾರ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಮೂಲ ಕಾಂಗ್ರೆಸ್ಸಿಗರೆಲ್ಲರ ಧ್ವನಿಯಾಗಿ ಸಿದ್ದರಾಮಯ್ಯ ವಿರುದ್ಧ ದೂರುಗಳ ಸುರಿಮಳೆಗೈದಿದ್ದಾರೆ. ಮುನಿಯಪ್ಪ ಅವರಿಗೆ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ಹಿರಿಯರ ಸಾಥ್‌ ಸಿಕ್ಕಿದೆ ಎನ್ನಲಾಗಿದೆ.

'ಬುರುಡೆ ಸಿದ್ದರಾಮಯ್ಯ ತೆಗೆದು ಹಾಕಲು ಕಾಂಗ್ರೆಸ್ ಮೀಟಿಂಗ್': ಸರ್ಕಾರ ಸುಭದ್ರ ಅಂದ್ರು ಅಶೋಕ್

ಖರ್ಗೆ ವಿರುದ್ಧ ಸಿದ್ದು ಕೆಂಡ

ಡಿ.9 ರಂದು ಸಿಹಿ ಸುದ್ದಿ ನೀಡುವುದಾಗಿ ಪ್ರಚಾರ ಭಾಷಣದಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿಕೊಂಡು ಓಡಾಡಿದ್ದು ನನ್ನ ಭವಿಷ್ಯದ ಕುರಿತಾಗಿ ಎಂದು ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದಾರೆ. ಆಪ್ತರೊಟ್ಟಿಗೆ ಈ ವಿಚಾರ ಹಂಚಿಕೊಂಡಿರುವ ಸಿದ್ದರಾಮಯ್ಯ, ಉಪಚುನಾವಣೆ ಬಳಿಕ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಕುತ್ತು ಬರಲಿದೆ ಎಂಬುದನ್ನು ಗ್ರಹಿಸಿ ಪರೋಕ್ಷವಾಗಿ ಖರ್ಗೆ ಈ ವಿಚಾರ ಪ್ರಸ್ತಾಪಿಸಿದ್ದರು. ನನ್ನ ವಿರುದ್ಧ ಅತೃಪ್ತಿಯಿಂದ ಖರ್ಗೆ ಅವರು ನೀಡಿದ ಹೇಳಿಕೆಯನ್ನು ಬಿಜೆಪಿ ಉಪಚುನಾವಣೆಯಲ್ಲಿ ಸಕಾರಾತ್ಮಕವಾಗಿ ಬಳಕೆ ಮಾಡಿಕೊಂಡಿತು ಎಂದು ಸಿದ್ದರಾಮಯ್ಯ ಆಪ್ತರ ಬಳಿ ಅವಲತ್ತುಕೊಂಡಿದ್ದಾರೆ. ಪಕ್ಷದೊಳಗಿನ ಈ ಅಸಹಕಾರ ಹಾಗೂ ಕಾಲೆಳೆಯುವ ಪ್ರಯತ್ನಗಳಿಂದ ಸಾಕುಸಾಕಾಗಿದೆ ಎಂದು ಸಿದ್ದರಾಮಯ್ಯ ಆಪ್ತರೆದುರು ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

'ಜಾತಿ ಒಡೆದ ಸಿದ್ದರಾಮಯ್ಯರಿಂದ ಕನಕದಾಸರಿಗೆ ಅವಮಾನ, ಈಗ ಫ್ರೀ ಹೌಸ್‌ ಅರೆಸ್ಟ್‌': ಸೊಗಡು ಶಿವಣ್ಣ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ