ಆ್ಯಪ್ನಗರ

ಜೆಡಿಎಸ್‌ಗೆ 6 ಸೀಟು ಬಿಡಲು ಕಾಂಗ್ರೆಸ್‌ ತಯಾರಿ? ಸಿದ್ದು ಸೇರಿ 3 ಹಾಲಿ ಶಾಸಕರ ಕಣಕ್ಕಿಳಿಸಲು ಚಿಂತನೆ

ಅಧಿಕಾರ ಹಂಚಿಕೆಯಲ್ಲಿನ 1/3 ಸೂತ್ರದಂತೆ 9 ರಿಂದ 10 ಸೀಟುಗಳನ್ನು ಜೆಡಿಎಸ್‌ ಬಯಸಿದೆ. ಆದರೆ, ಜೆಡಿಎಸ್‌ ಗಟ್ಟಿ ನೆಲೆ ಹಾಗೂ ಶಾಸಕರ ಸಂಖ್ಯೆ ಮತ್ತಿತರ ಲೆಕ್ಕಾಚಾರದಲ್ಲಿ 6 ಸೀಟುಗಳನ್ನು ಬಿಟ್ಟುಕೊಡುವ ಪ್ರಸ್ತಾವನೆ ಕಾಂಗ್ರೆಸ್‌ನಲ್ಲಿ ಸಿದ್ಧವಾಗಿದೆ.

Vijaya Karnataka 5 Feb 2019, 6:30 pm
ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಮಿತ್ರಪಕ್ಷ ಜೆಡಿಎಸ್‌ಗೆ ರಾಜ್ಯದಲ್ಲಿ 6 ಸೀಟು ಬಿಟ್ಟುಕೊಡಲು ಕಾಂಗ್ರೆಸ್‌ ಬಯಸಿದ್ದು, ಸ್ಥಾನ ಹೊಂದಾಣಿಕೆ ಚೌಕಾಶಿಗೆ ವೇದಿಕೆ ಅಣಿಗೊಳ್ಳುತ್ತಿದೆ.
Vijaya Karnataka Web ಕಾಂಗ್ರೆಸ್‌, ಜೆಡಿಎಸ್‌
ಕಾಂಗ್ರೆಸ್‌, ಜೆಡಿಎಸ್‌


ಅಧಿಕಾರ ಹಂಚಿಕೆಯಲ್ಲಿನ 1/3 ಸೂತ್ರದಂತೆ 9 ರಿಂದ 10 ಸೀಟುಗಳನ್ನು ಜೆಡಿಎಸ್‌ ಬಯಸಿದೆ. ಆದರೆ, ಜೆಡಿಎಸ್‌ ಗಟ್ಟಿ ನೆಲೆ ಹಾಗೂ ಶಾಸಕರ ಸಂಖ್ಯೆ ಮತ್ತಿತರ ಲೆಕ್ಕಾಚಾರದಲ್ಲಿ 6 ಸೀಟುಗಳನ್ನು ಬಿಟ್ಟುಕೊಡುವ ಪ್ರಸ್ತಾವನೆ ಕಾಂಗ್ರೆಸ್‌ನಲ್ಲಿ ಸಿದ್ಧವಾಗಿದೆ.

ಸಣ್ಣಪುಟ್ಟ ಭಿನ್ನಾಭಿಪ್ರಾಯದ ಮಧ್ಯೆಯೂ ಮಂಡ್ಯ ಹಾಗೂ ಹಾಸನ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ತಕರಾರು ಸೃಷ್ಟಿಸುವ ಆಸಕ್ತಿ ಕಾಂಗ್ರೆಸ್‌ಗೆ ಇಲ್ಲ. ಜತೆಗೆ, ಕಳೆದ ಉಪಚುನಾವಣೆಯಲ್ಲಿ ಬಿಟ್ಟುಕೊಟ್ಟಂತೆ ಶಿವಮೊಗ್ಗವನ್ನು ಮತ್ತೆ ಮಿತ್ರಪಕ್ಷಕ್ಕೇ ಬಿಡಲು ಕಾಂಗ್ರೆಸ್‌ ತಯಾರಾಗಿದೆ. ಸಮಾನ ನೆಲೆ ಲೆಕ್ಕಾಚಾರದಲ್ಲಿ ಮೈಸೂರು ಕ್ಷೇತ್ರವನ್ನು ಕಳೆದುಕೊಳ್ಳಲು ಕಾಂಗ್ರೆಸ್‌ಗೆ ಪೂರ್ಣ ಸಮ್ಮತಿ ಇಲ್ಲ. ವಿಶೇಷವಾಗಿ, ಮೈಸೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ತವರಿನಲ್ಲಿ ತಾವು ಇನ್ನಷ್ಟು ತೆರೆಮರೆಗೆ ಸರಿಯುವ ಆತಂಕ ಸಿದ್ದರಾಮಯ್ಯ ಅವರಿಗಿದೆ. ಆದರೂ, ಮೈತ್ರಿ ಆದರ್ಶದಂತೆ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಕಾಂಗ್ರೆಸ್‌ ತಯಾರಿದೆ ಎಂದು ಹೇಳಲಾಗಿದೆ.

ಈ ನಾಲ್ಕು ಕ್ಷೇತ್ರಗಳ ಜತೆಗೆ, ಉತ್ತರ ಕರ್ನಾಟಕ ಭಾಗದ ಕ್ಷೇತ್ರವೊಂದನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಕಾಂಗ್ರೆಸ್‌ ಬಯಸಿದ್ದು, ಬೆಂಗಳೂರು ಉತ್ತರ ಕ್ಷೇತ್ರ ಬೇಕೆಂಬ ಜೆಡಿಎಸ್‌ ಬೇಡಿಕೆಗೂ ಒಪ್ಪುವ ಸಾಧ್ಯತೆಯಿದೆ. ಆದರೆ, ಹಾಲಿ ವಶದಲ್ಲಿರುವ ಯಾವುದೇ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಕಾಂಗ್ರೆಸ್‌ ತಯಾರಿಲ್ಲ ಎನ್ನಲಾಗಿದೆ. ಜೆಡಿಎಸ್‌ ಬಯಸಿರುವ ಕೋಲಾರ ಮೀಸಲು ಕ್ಷೇತ್ರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು ಈ ಎಲ್ಲ ಕಡೆಗಳಲ್ಲೂ ಕಾಂಗ್ರೆಸ್‌ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಹಾಲಿ ಸಂಸದರನ್ನು ಬದಿಗೆ ಸರಿಸಿ ಜೆಡಿಎಸ್‌ಗೆ ಮಣೆ ಹಾಕುವ ಸ್ಥಿತಿಯಂತೂ ಇಲ್ಲ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಹೀಗಿದ್ದ ಮೇಲೆ ಕೊಪ್ಪಳ ಸೇರಿದಂತೆ ಬೇರೆ ಕ್ಷೇತ್ರದಿಂದ ಸ್ಪರ್ಧಿಸುವ ಮಾತೆಲ್ಲಿಂದ ಬಂತು.
- ಮಾಜಿ ಸಿಎಂ ಸಿದ್ದರಾಮಯ್ಯ

ಸಿದ್ದು ಸೇರಿ ಶಾಸಕರಿಗೆ ಬಡ್ತಿ

ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಸಾಧ್ಯವಾದಷ್ಟು ಹೆಚ್ಚು ಸೀಟು ಗೆಲ್ಲುವ ಉಮೇದಿಯಲ್ಲಿರುವ ಎಐಸಿಸಿ ವರಿಷ್ಠರು, ಗೆಲ್ಲುವ ಕುದುರೆಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ದೃಷ್ಟಿಯಿಂದ ಸಿದ್ದರಾಮಯ್ಯ ಸೇರಿ ಮೂವರು ಹಾಲಿ ಶಾಸಕರನ್ನು ಅಭ್ಯರ್ಥಿಗಳಾಗಿ ಕಣಕ್ಕಿಳಿಸಲು ಕಾಂಗ್ರೆಸ್‌ ಬಯಸಿದೆ.

ಕೊಪ್ಪಳದಿಂದ ಮಾಜಿ ಸಿಎಂ ಸಿದ್ದರಾಮಯ್ಯ, ಬೀದರ್‌ನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಹಾಗೂ ಬೆಳಗಾವಿಯಿಂದ ಅಂಜಲಿ ನಿಂಬಾಳ್ಕರ್‌ ಅವರನ್ನು ಕಣಕ್ಕಿಳಿಸುವ ಚಿಂತನೆ ದಿಲ್ಲಿ ವರಿಷ್ಠರ ಅಂಗಳದಲ್ಲಿ ಮೊಳೆತಿದೆ. ರಾಜ್ಯದ ಅಸ್ಥಿರ ರಾಜಕೀಯ ಸನ್ನಿವೇಶದಲ್ಲಿ ಹಾಲಿ ಶಾಸಕರನ್ನು ಲೋಕಸಭೆ ಕಣಕ್ಕಿಳಿಸುವುದು ಸೂಕ್ತವಾಗಲಾರದು. ಇದರಿಂದ ಮೈತ್ರಿ ಸರಕಾರಕ್ಕೆ 'ಆಪರೇಷನ್‌ ಕಮಲ'ದ ಗುಮ್ಮ ಇನ್ನಷ್ಟು ಹೆಚ್ಚಲಿದೆ ಎಂಬ ಅಭಿಪ್ರಾಯವಿದೆ. ಈ ವಾದದ ಮಧ್ಯೆಯೂ ಸ್ಪರ್ಧೆಗೆ ಮಾನಸಿಕವಾಗಿ ಸಿದ್ಧವಾಗಿರುವಂತೆ ಈ ಮೂವರಿಗೆ ಹೈಕಮಾಂಡ್‌ ಸಂದೇಶ ತಲುಪಿಸಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ