ಆ್ಯಪ್ನಗರ

ಲೋಕ ಸಮರ: ಗ್ರಾಮಾಂತರಕ್ಕೆ ಸುರೇಶ್‌, ದಕ್ಷಿಣಕ್ಕೆ ಪ್ರಿಯಾಕೃಷ್ಣ, ಉತ್ತರಕ್ಕೆ ಯಾರು?

ಲೋಕಸಭೆ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳನ್ನು ಗುರುತಿಸಲು ಕ್ಷೇತ್ರವಾರು ಮುಖಂಡರಿಂದ ಕಳೆದೆರಡು ದಿನದಿಂದಲೂ ಕೆಪಿಸಿಸಿ ಕಚೇರಿಯಲ್ಲಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ.

Vijaya Karnataka 26 Jan 2019, 6:30 am
ಬೆಂಗಳೂರು : ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಹಾಲಿ ಸಂಸದ ಡಿ.ಕೆ.ಸುರೇಶ್‌ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಹಾಗೆಯೇ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಮಾಜಿ ಶಾಸಕ ಪ್ರಿಯಾಕೃಷ್ಣ ಅವರಿಗೆ ಟಿಕೆಟ್‌ ನೀಡಲು ಉದ್ದೇಶಿಸಲಾಗಿದೆ. ಆದರೆ ಉತ್ತರ ಕ್ಷೇತ್ರದಿಂದ ಯಾರು ಎಂಬುದು ಮಾತ್ರ ನಿಗೂಢವಾಗಿಯೇ ಉಳಿದಿದೆ.
Vijaya Karnataka Web ಸಂಸತ್‌ ಭವನ
ಸಂಸತ್‌ ಭವನ


ಲೋಕಸಭೆ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳನ್ನು ಗುರುತಿಸಲು ಕ್ಷೇತ್ರವಾರು ಮುಖಂಡರಿಂದ ಕಳೆದೆರಡು ದಿನದಿಂದಲೂ ಕೆಪಿಸಿಸಿ ಕಚೇರಿಯಲ್ಲಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಎಐಸಿಸಿ ಕಾರ್ಯದರ್ಶಿ ಹಾಗೂ ಬೆಂಗಳೂರು ವಿಭಾಗದ ಉಸ್ತುವಾರಿ ಯಶೋಮತಿ ನೇತೃತ್ವದಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಸೆಂಟ್ರಲ್‌ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಿಗೆ ಸಂಬಂಧಿಸಿ ಶುಕ್ರವಾರ ಸಭೆ ನಡೆಸಲಾಯಿತು.

ಗುರುವಾರ ಕೋಲಾರ, ಚಿಕ್ಕಬಳ್ಳಾಪುರ ಸೇರಿ ಕೆಲ ಕ್ಷೇತ್ರಗಳ ಮುಖಂvರ ಅಭಿಪ್ರಾಯ ಸಂಗ್ರಹಿಸಿದ್ದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಗೆಲ್ಲುವ ಸಾಮರ್ಥ್ಯ‌ವಿರುವ ಹಾಲಿ ಸಂಸದರಿಗಷ್ಟೇ ಟಿಕೆಟ್‌ ನೀಡಲಾಗುವುದು ಎಂದಿದ್ದರು. ಇದು ಕಾಂಗ್ರೆಸ್‌ನ ಹಾಲಿ ಸಂಸದರಿಗೆ ಆತಂಕ ತಂದಿಟ್ಟಿದೆ. ಹಾಗಾಗಿ ಮೋದಿ ಅಲೆಯಲ್ಲೂ ಗೆದ್ದ ಸಂಸದರಿಗೆ ಟಿಕೆಟ್‌ ನೀಡಬೇಕು ಎಂಬುದು ಶುಕ್ರವಾರದ ಸಭೆಯಲ್ಲೂ ಕೇಳಿ ಬಂತು.

2 ಕ್ಷೇತ್ರಗಳಲ್ಲಿ ಒತ್ತಡ

ಈ ಮಧ್ಯೆ ಬೆಂಗಳೂರು ಉತ್ತರ ಹಾಗೂ ಬೆಂಗಳೂರು ಸೆಂಟ್ರಲ್‌ನಲ್ಲಿ ಆಕಾಂಕ್ಷಿಗಳ ಒತ್ತಡ ಜಾಸ್ತಿಯಿದೆ. ಒಂದನ್ನು ಬಿಟ್ಟುಕೊಡುವಂತೆ ಜೆಡಿಎಸ್‌ ಪಟ್ಟು ಹಿಡಿಯುವ ಸಾಧ್ಯತೆ ಬಗ್ಗೂ ಸಭೆಯಲ್ಲಿ ಚರ್ಚೆಯಾಯಿತು.ಈ ಸಂಬಂಧ ಸ್ಥಳೀಯ ಕಾಂಗ್ರೆಸ್‌ ಮುಖಂಡರನ್ನು ಮಾನಸಿಕವಾಗಿ ಸಜ್ಜುಗೊಳಿಸುವ ಯತ್ನವನ್ನು ವಿಭಾಗ ಉಸ್ತುವಾರಿ ಯಶೋಮತಿ ಮಾಡಿದರು. ಪಟ್ಟಿಯ ಬಗ್ಗೆ ಅಂತಿಮವಾಗಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಸೂಕ್ತ ತೀರ್ಮಾನಿಸುತ್ತಾರೆ. ಅದಕ್ಕೆ ಎಲ್ಲರೂ ಬದ್ಧರಾಗಿರುವಂತೆ ಯಶೋಮತಿ ಸೂಚಿಸಿದರು ಎಂದು ತಿಳಿದು ಬಂದಿದೆ.

ಬೆಂಗಳೂರು ಉತ್ತರಕ್ಕೆ ಬಿ.ಎಲ್‌.ಶಂಕರ್‌, ಎಚ್‌.ಎಂ.ರೇವಣ್ಣ, ವಿಧಾನ ಪರಿಷತ್ತಿನ ಸದಸ್ಯ ಎಂ. ನಾರಾಯಣಸ್ವಾಮಿ, ಮಾಜಿ ಸಚಿವ ಎಂ.ಆರ್‌.ಸೀತಾರಾಂ ಪುತ್ರ ರಕ್ಷಾ ಸೀತಾರಾಂ, ರವಿಶಂಕರ ಶೆಟ್ಟಿ ಹಾಗೂ ಉತ್ತರ ಲೋಕಸಭಾ ಕ್ಷೇತ್ರದ ಅಧ್ಯಕ್ಷ ರಾಜ್‌ಕುಮಾರ್‌ ಅವರು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ರವಿಶಂಕರ್‌ ಶೆಟ್ಟಿ ಅವರಿಗೆ ಅವಕಾಶ ನೀಡಬೇಕೆಂಬ ಮನವಿಯನ್ನೂ ನಾನಾ ಘಟಕಗಳ ಮುಖಂಡರು ಸಲ್ಲಿಸಿದ್ದಾರೆ.

ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್‌ನ ಐವರು ಮತ್ತು ಜೆಡಿಎಸ್‌ನ ಇಬ್ಬರು ಶಾಸಕರಿದ್ದಾರೆ. ಪಕ್ಷಕ್ಕೆ ಸ್ಥಾನ ಉಳಿಸಿಕೊಳ್ಳಲು ಮನವಿ ಮಾಡಿದ್ದು, ಮೈತ್ರಿಯ ತೀರ್ಮಾನಕ್ಕೆ ನಾವು ಬದ್ಧ. ದೇವೇಗೌಡರೇ ಅಭ್ಯರ್ಥಿಯಾಗಲೆಂದು ಹೈಕಮಾಂಡ್‌ ಹೇಳಿದರೆ ಅದಕ್ಕೂ ಒಪ್ಪುತ್ತೇವೆ.
- ಎಸ್‌.ಟಿ.ಸೋಮಶೇಖರ್‌, ಯಶವಂತಪುರ ಶಾಸಕ

ಕಾಂಗ್ರೆಸ್‌ನಿಂದಲೇ ನನ್ನ ರಾಜಕೀಯ ಜೀವನ ಆರಂಭವಾಗಿದೆ. ದಾವಣಗೆರೆಯಿಂದ ನನ್ನನ್ನು ಕಣಕ್ಕಿಳಿಸಬೇಕು ಎನ್ನುವುದು ಅಲ್ಲಿಯ ಮುಖಂಡರ ಅಪೇಕ್ಷೆ. ಆದರೆ, ನಾನು ಬೆಂಗಳೂರು ಉತ್ತರದ ಆಕಾಂಕ್ಷಿಯಾಗಿದ್ದೇನೆ.
- ಎಚ್‌.ಎಂ.ರೇವಣ್ಣ, ಮಾಜಿ ಸಚಿವ

ಸೀಟು ಹಂಚಿಕೆಯಲ್ಲಿ ಗೊಂದಲವಿಲ್ಲ. ರಾಹುಲ್‌ ಹಾಗೂ ದೇವೇಗೌಡರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ.
- ಬಿ.ಕೆ.ಹರಿಪ್ರಸಾದ್‌, ರಾಜ್ಯಸಭೆ ಸದಸ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ