ಆ್ಯಪ್ನಗರ

ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕ ವಿರೋಧಿಸಿ ಕಾಂಗ್ರೆಸ್ ಸಭಾತ್ಯಾಗ

ಸಾಲದ ಮಿತಿ ಹೆಚ್ಚಿಸುವ ಸರಕಾರದ ನಡೆ ಸರಿಯಲ್ಲ ಎಂದಿರುವ ಕಾಂಗ್ರೆಸ್‌, ಸಾಲ ಪಡೆಯುವ ಮಾನದಂಡವನ್ನು ಜಿಡಿಪಿಯ ಶೇ. 3.5 ರಷ್ಟರವರೆಗೆ ಹೆಚ್ಚಿಸಿಕೊಳ್ಳಿ. ಅದಕ್ಕಿಂತ ಜಾಸ್ತಿ ಸಾಲ ಬೇಡ ಎಂದು ವಾದಿಸಿದೆ.

Authored byಇರ್ಷಾದ್ ಉಪ್ಪಿನಂಗಡಿ | Vijaya Karnataka Web 25 Sep 2020, 2:25 pm
ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಹೆಚ್ಚುವರಿ ಸಾಲ ಪಡೆಯುವ ಪ್ರಮಾಣವನ್ನು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ. 5ಕ್ಕೆ ಹೆಚ್ಚಿಸಲು ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮ(4)ಕ್ಕೆ ತಿದ್ದುಪಡಿ ತರುವ ಸರಕಾರದ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್‌ ಸಭಾತ್ಯಾಗ ನಡೆಸಿದೆ.
Vijaya Karnataka Web Karnataka Assembly Session


ಸಾಲದ ಮಿತಿ ಹೆಚ್ಚಿಸುವ ಸರಕಾರದ ನಿರ್ಧಾರದಿಂದಾಗಿ ರಾಜ್ಯದ ಆರ್ಥಿಕ ಶಿಸ್ತು ನುಚ್ಚು ನೂರಾಗುತ್ತದೆ ಎಂದು ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ. ಸಾಲದ ಮಿತಿ ಹೆಚ್ಚಿಸುವ ಸರಕಾರದ ನಡೆ ಸರಿಯಲ್ಲ ಎಂದಿರುವ ವಿರೋಧ ಪಕ್ಷ, ಸಾಲ ಪಡೆಯುವ ಮಾನದಂಡವನ್ನು ಶೇ. 3.5 ರಷ್ಟರವರೆಗೆ ಹೆಚ್ಚಿಸಿಕೊಳ್ಳಿ. ಅದಕ್ಕಿಂತ ಜಾಸ್ತಿ ಸಾಲ ಬೇಡ ಎಂದು ಅಭಿಪ್ರಾಯಪಟ್ಟಿದೆ.

ವಿಧೇಯಕ ಮಂಡನೆ ಕುರಿತಾಗಿ ನಡೆದ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜಿಎಸ್‌ಟಿ ಪರಿಹಾರ ವಿಚಾರವಾಗಿ ರಾಜ್ಯಕ್ಕೆ ಅನ್ಯಾಯವಾಗಿದೆ. ಕೇಂದ್ರದ ಮೇಲೆ ಜಿಎಸ್‌ಟಿ ಪರಿಹಾರ ನೀಡುವಂತೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.‌

‘ಅವಿಶ್ವಾಸ ನಿರ್ಣಯದ ಬಗ್ಗೆ ಕಾಂಗ್ರೆಸ್‌ನವರು ಈವರೆಗೂ ನಮ್ಮನ್ನು ಸಂಪರ್ಕಿಸಿಲ್ಲ’; ಎಚ್‌ಡಿ ಕುಮಾರಸ್ವಾಮಿ

ಈಗಾಗಲೇ ಸಾಲದ ಹೊರೆ ಹೆಚ್ಚಿದೆ. ಹೀಗಿದ್ದರೂ ಮತ್ತೆ 33,000 ಕೋಟಿ ಸಾಲ ಮಾಡುವುದರಿಂದ ಆರ್ಥಿಕ ಶಿಸ್ತು ಹದಗೆಡುತ್ತದೆ. ಈ ನಿಟ್ಟಿನಲ್ಲಿ ಸಾಲ ಪಡೆಯುವ ಮಾನದಂಡವನ್ನು ಶೇ. 3 ರಿಂದ ಶೇ. 5 ಕ್ಕೆ ಏರಿಕೆ ಮಾಡುವುದು ಸರಿಯಲ್ಲ ಎಂದರು.

ಇದೇ ವಿಚಾರವಾಗಿ ಮಾತನಾಡಿದ ಶಾಸಕ ಕೃಷ್ಣ ಬೈರೇಗೌಡ, ಯಾವುದೇ ಕಾರಣಕ್ಕೂ ಆರ್ಥಿಕ ಶಿಸ್ತನ್ನು ಉಲ್ಲಂಘನೆ ಮಾಡಲು‌ ಸರಕಾರ ಹೋಗಬಾರದು. ರಾಜ್ಯದ ಸಾಲದ ಹೊರೆಯನ್ನು ತೀರಿಸಬೇಕಾದರೆ ಆರೇಳು ವರ್ಷಗಳು ಬೇಕಾದೀತು. ಈ ನಿಟ್ಟಿನಲ್ಲಿ ಸಾಲದ ಮಿತಿ ಹೆಚ್ಚಳ ಮಾಡುವ ಸರಕಾರದ ನಿರ್ಧಾರ ಸರಿಯಲ್ಲ ಎಂದರು.

ಸರಕಾರ ರಾಜ್ಯದ ಜನರ ಮೇಲೆ ಸಾಲದ ಹೊರೆಯನ್ನು ಹಾಕಬಾರದು. ಜಿಎಸ್‌ಟಿ ಪರಿಹಾರವನ್ನು ಕೇಂದ್ರದಿಂದ ಪಡೆಯಬೇಕೇ ಹೊರತು ರಾಜ್ಯದ ಜನರ ಮೇಲೆ‌ ಸಾಲದ ಹೊರೆ ಹಾಕಬಾರದು ಎಂದು ಕೃಷ್ಣ ಬೈರೇಗೌಡ ಆಗ್ರಹಿಸಿದರು.

ನಂತರ, ರಾಜ್ಯ ಸಾಲದ ಸುಳಿಗೆ ಸಿಕ್ಕಿ ಹಾಕಿಕೊಂಡಿದೆ. ಹೀಗಿರುವಾಗ ಹೆಚ್ಚುವರಿ ಸಾಲ ಪಡೆದುಕೊಂಡರೆ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಇಳಿಯುತ್ತದೆ. ಸಾಲ ಪಡೆಯುವ ಮೂಲಕ ರಾಜ್ಯವನ್ನು ಸರಕಾರ ಹಾಳು ಮಾಡಲು ಹೊರಟಿದೆ ಎಂದು ಆರೋಪಿಸಿ ಕಾಂಗ್ರೆಸ್ ಸಭಾತ್ಯಾಗ ನಡೆಸಿತು.

ಸಭಾತ್ಯಾಗದ ನಡುವೆಯೂ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಯಿತು.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ