ಆ್ಯಪ್ನಗರ

ಅತಂತ್ರರಾದ ಕಾಂಗ್ರೆಸ್‌ನ ನಾಲ್ವರು ರೆಬಲ್‌ಗಳು

ಆಪರೇಷನ್‌ ಕಮಲ ಯಶಸ್ವಿಯಾಗುವ ನಿರೀಕ್ಷೆಯಿಂದ ಕಳೆದೊಂದು ತಿಂಗಳಿಂದಲೂ ಶಾಸಕರಾದ ರಮೇಶ್‌ ಜಾರಕಿಹೊಳಿ, ಡಾ.ಉಮೇಶ್‌ ಜಾಧವ್‌, ಬಿ.ನಾಗೇಂದ್ರ ಹಾಗೂ ಮಹೇಶ್‌ ಕುಮಠಳ್ಳಿ ಕಾಂಗ್ರೆಸ್‌ ಸಂಪರ್ಕದಿಂದ ದೂರವಾಗಿದ್ದಾರೆ.

Vijaya Karnataka Web 10 Feb 2019, 10:31 pm
ಬೆಂಗಳೂರು: ಕಾಂಗ್ರೆಸ್‌ನ ನಾಲ್ವರು ಬಂಡಾಯ ಶಾಸಕರು ಅತಂತ್ರ ಸ್ಥಿತಿಗೆ ತಲುಪಿದ್ದು ಅವರ ರಾಜಕೀಯ ಭವಿಷ್ಯವೇ ಡೋಲಾಯಮಾನವಾಗುವಂತಾಗಿದೆ.
Vijaya Karnataka Web Congress


ಆಪರೇಷನ್‌ ಕಮಲ ಯಶಸ್ವಿಯಾಗುವ ನಿರೀಕ್ಷೆಯಿಂದ ಕಳೆದೊಂದು ತಿಂಗಳಿಂದಲೂ ಶಾಸಕರಾದ ರಮೇಶ್‌ ಜಾರಕಿಹೊಳಿ, ಡಾ.ಉಮೇಶ್‌ ಜಾಧವ್‌, ಬಿ.ನಾಗೇಂದ್ರ ಹಾಗೂ ಮಹೇಶ್‌ ಕುಮಠಳ್ಳಿ ಕಾಂಗ್ರೆಸ್‌ ಸಂಪರ್ಕದಿಂದ ದೂರವಾಗಿದ್ದಾರೆ. ವಿಪ್‌ ನೀಡಲಾಗಿದ್ದರೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಗೂ ಗೈರು ಹಾಜರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರೆಬಲ್‌ಗಳ ವಿರುದ್ಧ ಪಕ್ಷಾಂತರ ನಿಷೇಧ ಕಾಯಿದೆಯಡಿ ಕ್ರಮ ಕೈಗೊಳ್ಳುವಂತೆ ಸ್ಪೀಕರ್‌ ಅವರಿಗೆ ದೂರು ಸಲ್ಲಿಸಲು ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ.

ಈಗಿನ ಸನ್ನಿವೇಶದಲ್ಲಿ ಬಿಜೆಪಿ ಸರಕಾರ ರಚನೆಯಾಗುವ ಖಾತರಿಯಿಲ್ಲ. ಕಾಂಗ್ರೆಸ್‌ಗೆ ಮರಳುವ ಪರಿಸ್ಥಿತಿಯಲ್ಲೂ ಬಂಡಾಯಗಾರರು ಇಲ್ಲ. ಅವರ ಮುಂದಿರುವ ಸದ್ಯದ ಆಯ್ಕೆಯೆಂದರೆ ಶಾಸನಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಕಾಂಗ್ರೆಸ್‌ನಿಂದ ಅಧಿಕೃತವಾಗಿ ಹೊರಬರುವುದು. ಅಂತಹ ನಿಲುವು ಕೈಗೊಂಡರೆ ಮುಂದೆ ಉಪಚುನಾವಣೆಗೆ ತಯಾರಾಗಬೇಕಾಗುತ್ತದೆ. ಸಮ್ಮಿಶ್ರ ಸರಕಾರವೇ ಮುಂದುವರಿದರೆ ಮತ್ತೆ ಚುನಾವಣೆ ಎದುರಿಸುವುದು ಕ್ಲಿಷ್ಟವಾಗಲಿದೆ.

ಒಂದು ವೇಳೆ 'ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು' ಎಂಬ ಮಾತಿಗೆ ಕಟ್ಟುಬಿದ್ದು ಹಳೆಯದನ್ನೆಲ್ಲ ಮರೆತು ಕಾಂಗ್ರೆಸ್‌ಗೆ ವಾಪಸ್‌ ಬಂದರೂ ಅಪಮಾನಕ್ಕೆ ಗುರಿಯಾಗಬೇಕಾಗುತ್ತದೆ. ಕ್ಷೇತ್ರದ ಮತರಾರ ದೃಷ್ಟಿಯಲ್ಲೂ ಇವರ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಲು ಸಾಧ್ಯವಿಲ್ಲ. ಹಾಗಾಗಿ ರೆಬಲ್‌ಗಳ ಸ್ಥಿತಿ ಚಿಂತಾಜನಕವಾಗುವಂತಾಗಿದೆ. ಈ ನಡುವೆಯೂ ಅವರು ಬಜೆಟ್‌ ಅಧಿವೇಶನದುದ್ದಕ್ಕೂ ಗೈರು ಹಾಜರಾಗುವುದು ನಿಶ್ಚಿತವೆನ್ನಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ