ಆ್ಯಪ್ನಗರ

ಸಿಎಎ ವಿರುದ್ಧ ಅಖಾಡಕ್ಕಿಳಿದ ಕಾಂಗ್ರೆಸ್; ಕಾರ್ಯಾಗಾರದಲ್ಲಿ ಕೈಗೊಂಡ ನಿರ್ಣಯ ಹೀಗಿವೆ

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌ಆರ್‌ಸಿ ವಿರುದ್ಧ ಹೋರಾಟ ನಡೆಸಲು ಕಾಂಗ್ರೆಸ್ ನಿರ್ಣಯ ಕೈಗೊಂಡಿದೆ. ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿಚಾರವಾಗಿ ಕಾರ್ಯಾಗಾರ ನಡೆಸಿದ್ದು ಮುಂದಿನ ದಿನಗಳಲ್ಲಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದೆ.

Vijaya Karnataka Web 16 Jan 2020, 3:54 pm
ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ 2019, ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ ನ್ನು ಕೇಂದ್ರ ಸರಕಾರ ಹಿಂದಕ್ಕೆ ಪಡೆಯಬೇಕು ಎಂದು ರಾಜ್ಯ ಕಾಂಗ್ರೆಸ್ ನಿರ್ಣಯವನ್ನು ಕೈಗೊಳ್ಳುವ ಮೂಲಕ ಒತ್ತಾಯಿಸಿದೆ. ಸಿಎಎ ಎನ್‌ಆರ್‌ಸಿ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದರೂ ಕಾಂಗ್ರೆಸ್ ನೇರವಾಗಿ ಪ್ರತಿಭಟನೆಯ ಅಖಾಡಕ್ಕೆ ಇಳಿದಿರಲಿಲ್ಲ.
Vijaya Karnataka Web congress resolution against citizenship amendment act
ಸಿಎಎ ವಿರುದ್ಧ ಅಖಾಡಕ್ಕಿಳಿದ ಕಾಂಗ್ರೆಸ್; ಕಾರ್ಯಾಗಾರದಲ್ಲಿ ಕೈಗೊಂಡ ನಿರ್ಣಯ ಹೀಗಿವೆ


ಆದರೆ ರಾಷ್ಟ್ರೀಯ ಮಟ್ಟದಲ್ಲಿ ಕಾಯ್ದೆ ವಿರೋಧಿಸುವ ನಿರ್ಧಾರವನ್ನು ಕಾಂಗ್ರೆಸ್ ಕೈಗೊಂಡ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಮುಖಂಡರು ಬೆಂಗಳೂರಿನಲ್ಲಿ ಕಾರ್ಯಾಗಾರ ನಡೆಸುವ ಮೂಲಕ ಈ ನಿರ್ಣಯವನ್ನು ಕೈಗೊಂಡಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಕಾರ್ಯಾಗಾರ ನಡೆದಿದ್ದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ಮುಖಂಡರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಕಾಂಗ್ರೆಸ್ ಕೈಗೊಂಡಿರುವ ನಿರ್ಣಯಗಳು ಹೀಗಿವೆ.

ಎನ್‌ಪಿಆರ್‌ಗೆ ರಾಕ್ಷಸೀ ಉದ್ದೇಶವಿದೆ; ಮೋದಿ, ಶಾ ದಾರಿ ತಪ್ಪಿಸುತ್ತಿದ್ದಾರೆ: ಸಿದ್ದರಾಮಯ್ಯ ವಾಗ್ದಾಳಿ

*ದೇಶದಲ್ಲಿರುವ ಗಂಭೀರ ಪರಿಸ್ಥಿತಿ ಮನಗಂಡು ಸಿಎಎ,ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಕುರಿತಂತೆ ಕೇಂದ್ರ ಸರಕಾರ ಮಾಡಿರುವ ಕಾನೂನನ್ನು ಹಿಂಪಡೆಯಬೇಕು.

* ಸಂವಿಧಾನ ತಜ್ಞರು, ಸಾಮಾಜಿಕ ಹೋರಾಟಗಾರರು, ಪ್ರಗತಿಪರರು ವಿವಿಧ ರಾಜಕೀಯ ಪಕ್ಷಗಳ ನಾಯಕರು ವಿದ್ಯಾರ್ಥಿಗಳು ಹಾಗೂ ಯುವಜನರ ಪ್ರತಿನಿಧಿಗಳು ಒಳಗೊಂಡ ಸಮಾಲೋಚನೆ ನಡೆಸಲು ನಿರ್ಧಾರ

*ಸುಪ್ರೀಂ ಕೋರ್ಟ್ ಮುಂದಿರುವ ಸಿಎಎ/ಎನ್‌ಆರ್‌ಸಿ ಸಂಬಂಧಪಟ್ಟ ಅರ್ಜಿಗಳನ್ನು ಶೀಘ್ರದಲ್ಲಿ ಇತ್ಯರ್ಥಗೊಳಿಸಲು ಆಗ್ರಹ

ಸಭೆಯ ಬಳಿಕ ಮಾತನಾಡಿದ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಿಎಎ ಹಾಗೂ ಎನ್‌ಆರ್‌ಸಿ ಮೂಲಕ ಮುಸ್ಲಿಮರನ್ನು ಹೊರಕ್ಕೆ ಕಳುಹಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಕಾಯ್ದೆಯಲ್ಲಿ ಅಫ್ಗಾನಿಸ್ತಾನವನ್ನು ಏಕೆ ಸೇರಿಸಿದ್ದಾರೆ ಎಂಬುದು ಗೊತ್ತಾಗಿಲ್ಲ‌‌. ಹಿಂದೂ ರಾಷ್ಟ್ರ ಮಾಡಬೇಕು ಎಂದು ಹಿಂದೂಗಳನ್ನು ಸೇರಿಸಿಕೊಳ್ಳುವುದರ ಜೊತೆಗೆ ಕ್ರೈಸ್ತರನ್ನು ಹಾಗೂ ಪಾರ್ಸಿಗಳನ್ನು ಯಾಕಾಗಿ ಸೇರಿಸಿದಿರಿ, ಅವರು ಈ ದೇಶದವರಲ್ಲ‌ವಲ್ಲ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

ಬಿಜೆಪಿಗರಿಗೆ ಸಂವಿಧಾನವೂ ಬೇಕಿಲ್ಲ ಹಾಗೂ ಅಂಬೇಡ್ಕರ್ ಬೇಕಿಲ್ಲ. ಭಾರತವು ಜಾತ್ಯತೀತ ರಾಷ್ಟ್ರವಾಗಿದೆ. ಸಿಎಎ ಹಾಗೂ ಎನ್‌ಆರ್‌ಸಿಯಿಂದ ಯಾರಿಗೂ ಏನೂ ಸಿಗುವುದಿಲ್ಲ ಈ ನಿಟ್ಟಿನಲ್ಲಿ ಕಾಯ್ದೆಯನ್ನು ಕೇಂದ್ರ ಸರಕಾರ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ