ಆ್ಯಪ್ನಗರ

ದೋಸ್ತಿ ಬಜೆಟ್‌ನಲ್ಲಿ ಇಂಧನ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್‌ ಗರಂ

ಸಮ್ಮಿಶ್ರ ಸರಕಾರದ ಬಜೆಟ್‌ನಲ್ಲಿ ಇಂಧನ ಬೆಲೆಗಳನ್ನು ಏರಿಸಿರುವ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕ್ರಮವನ್ನು ಜನಸಾಮಾನ್ಯರಷ್ಟೇ ಅಲ್ಲ, ಜೆಡಿಎಸ್‌ನ ಮಿತ್ರಪಕ್ಷ ಕಾಂಗ್ರೆಸ್‌ ಕೂಡ ವಿರೋಧಿಸಿದೆ.

Vijaya Karnataka Web 7 Jul 2018, 5:13 pm
ಬೆಂಗಳೂರು: ಸಮ್ಮಿಶ್ರ ಸರಕಾರದ ಬಜೆಟ್‌ನಲ್ಲಿ ಇಂಧನ ಬೆಲೆಗಳನ್ನು ಏರಿಸಿರುವ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕ್ರಮವನ್ನು ಜನಸಾಮಾನ್ಯರಷ್ಟೇ ಅಲ್ಲ, ಜೆಡಿಎಸ್‌ನ ಮಿತ್ರಪಕ್ಷ ಕಾಂಗ್ರೆಸ್‌ ಕೂಡ ವಿರೋಧಿಸಿದೆ.
Vijaya Karnataka Web CM HDK


ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಪೆಟ್ರೋಲ್‌, ಡೀಸೆಲ್‌ ಮತ್ತು ವಿದ್ಯುತ್‌ ದರಗಳನ್ನು ಏರಿಸುವ ಪ್ರಸ್ತಾಪಗಳನ್ನು ಮುಖ್ಯಮಂತ್ರಿ ಪ್ರಕಟಿಸಿದ್ದರು. ಮುಂದಿನ ವಾರ ಬಜೆಟ್‌ಗೆ ಸದನದ ಅಂಗೀಕಾರ ಪಡೆಯುವ ವೇಳೆ ಈ ಪ್ರಸ್ತಾವಗಳನ್ನು ವಿರೋಧಿಸಲು ಕಾಂಗ್ರೆಸ್‌ ಚಿಂತಿಸುತ್ತಿದೆ.

34,000 ಕೋಟಿ ರೂ.ಗಳ ಮೊತ್ತದ ರೈತರ ಸಾಲಮನ್ನಾದ ಹೊರೆಯನ್ನು ಭರಿಸಲು ಪೆಟ್ರೋಲ್ ಮತ್ತು ಡೀಸೆಲ್‌ ಮೇಲೆ ಶೇ 2ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವುದಾಗಿ ಕುಮಾರಸ್ವಾಮಿ ಪ್ರಸ್ತಾಪಿಸಿದ್ದರು.

ಇಂಧನ ಬೆಲೆಗಳ ತೀವ್ರ ಏರಿಕೆ ವಿಚಾರವಾಗಿ ಕೇಂದ್ರದ ಮೋದಿ ಸರಕಾರದ ವಿರುದ್ಧ ಕಾಂಗ್ರೆಸ್‌ ಮತ್ತು ಇತರ ಪಕ್ಷಗಳು ಹೋರಾಟ ತೀವ್ರಗೊಳಿಸಲು ಮುಂದಾಗಿರುವ ಸಂದರ್ಭದಲ್ಲೇ ದೋಸ್ತಿ ಸರಕಾರವೂ ಗಾಯದ ಮೇಲೆ ಬರೆ ಎಳೆಯಲು ನಿರ್ಧರಿಸಿರುವುದು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ. ಇದೇ ಎಳೆಯನ್ನು ಹಿಡಿದುಕೊಂಡು ಬಿಜೆಪಿ ಪ್ರತಿದಾಳಿ ನಡೆಸಬಹುದೆಂಬ ಆತಂಕವೂ ಇದೆ.

ತನ್ನ ಜತೆ ಚರ್ಚಿಸಿಲ್ಲ ಎಂದ ಕಾಂಗ್ರೆಸ್‌:
'ಇಂಧನ ಬೆಲೆಗಳನ್ನು ಏರಿಸುವ ಮೂಲಕ ಕುಮಾರಸ್ವಾಮಿ ಅವರು ಕಾಂಗ್ರೆಸ್‌ನ ಚುನಾವಣಾ ಅಸ್ತ್ರವನ್ನೇ ನಿಷ್ಕ್ರಿಯಗೊಳಿಸಿದ್ದಾರೆ. ಮೋದಿ ಸರಕಾರದ ವಿರುದ್ಧ ಉಗ್ರ ಹೋರಾಟ ಆರಂಭಿಸಲು ಇಂಧನ ಬೆಲೆ ಏರಿಕೆ ಅಸ್ತ್ರವನ್ನೇ ನಂಬಿಕೊಂಡಿದ್ದ ಕಾಂಗ್ರೆಸ್‌ ಈಗ ಅಸ್ತ್ರ ಕಳೆದುಕೊಂಡಂತಾಗಿದೆ' ಎಂದು ಹಿರಿಯ ಕಾಂಗ್ರೆಸಿಗರೊಬ್ಬರು ಹೇಳಿದ್ದಾರೆ. ಈ ಪ್ರಸ್ತಾಪವನ್ನು ಕೂಡಲೇ ಹಿಂತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗೆ ಒತ್ತಾಯಿಸುವುದಾಗಿ ಅವರು ಹೇಳಿದ್ದಾರೆ.

'ಶೀಘ್ರವೇ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇಂಥದೊಂದು ತಪ್ಪು ಲೆಕ್ಕಾಚಾರದ ನಿರ್ಧಾರದ ಪರಿಣಾಮವನ್ನು ಕಾಂಗ್ರೆಸ್‌ ಭರಿಸುವುದು ಹೇಗೆ?' ಎಂದು ಅವರು ಪ್ರಶ್ನಿಸಿದರು.

ಈಗಾಗಲೇ ಬಿಜೆಪಿ ಹಾಗೂ ಜಾಲತಾಣಿಗರು ಕಾಂಗ್ರೆಸ್‌ ವಿರುದ್ಧ ಹರಿಹಾಯುತ್ತಿದ್ದಾರೆ. ಇಂಧನ ಬೆಲೆ ಏರಿಕೆ ಹೆಸರಿನಲ್ಲಿ ಮೋದಿ ಸರಕಾರದ ವಿರುದ್ಧ ಹೋರಾಡಲು ಕಾಂಗ್ರೆಸ್‌ಗೆ ನೈತಿಕತೆ ಎಲ್ಲಿದೆ? ಎಂದು ಪ್ರಶ್ನಿಸುತ್ತಿದ್ದಾರೆ.

ಇಂಧನ ಬೆಲೆಗಳನ್ನು ಮತ್ತಷ್ಟು ಏರಿಸಲು ಕರ್ನಾಟಕ ಸರಕಾರಕ್ಕೆ ಅನುಮತಿ ನೀಡಿದ್ದಾದರೂ ಹೇಗೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧವೂ ಕೆಲವು ನಾಯಕರು ಕಿಡಿ ಕಾರಿದ್ದಾರೆ.

ಇಂತಹ ಮಹತ್ವದ ನಿರ್ಧಾರ ಘೋಷಿಸುವ ಮುನ್ನ ಕುಮಾರಸ್ವಾಮಿ, ಸಂಪುಟ ಸದಸ್ಯರು ಸೇರಿದಂತೆ ಕಾಂಗ್ರೆಸ್‌ನ ಯಾವ ನಾಯಕರ ಜತೆಗೂ ಚರ್ಚಿಸಿಲ್ಲ; ಸಮನ್ವಯ ಸಮಿತಿ ಸಭೆಯಲ್ಲೂ ಸಮಾಲೋಚನೆ ನಡೆಸಿಲ್ಲ ಎಂದು ಹಲವು ಕಾಂಗ್ರೆಸ್‌ ಮುಖಂಡರು ದೂರಿದ್ದಾರೆ.

'ರೈತರ ಸಾಲಮನ್ನಾ ವಿಚಾರವನ್ನು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ಅನುಮೋದಿಸಲಾಗಿತ್ತು. ಆದರೆ ಇಂಧನ ಬೆಲೆ ಏರಿಕೆ ಬಗ್ಗೆ ಯಾವುದೇ ಪ್ರಸ್ತಾಪ ಆಗಿರಲಿಲ್ಲ; ಬಜೆಟ್‌ನಲ್ಲಿ ಅದನ್ನು ನಿರೀಕ್ಷಿಸಿರಲೂ ಇಲ್ಲ' ಎಂದು ನಾಯಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ