ಬೆಂಗಳೂರು : ರಾಜ್ಯದಲ್ಲಿ ಕಳೆದ ಮೂರು ವಾರಗಳಿಂದ ನಡೆದ ರಾಜಕೀಯ ಚದುರಂಗದಾಟದಲ್ಲಿ ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್-ಜೆಡಿಎಸ್ ದೋಸ್ತಿಗಳ ಮುನ್ನಡೆಯ ಆಟ ಈಗ ಶುರುವಾಗಿದೆ. ಬಿಕ್ಕಟ್ಟಿನ ಕೇಂದ್ರಬಿಂದುವಾಗಿ ಗೆದ್ದೇಬಿಟ್ಟಿವು ಎಂದು ಬೀಗುತ್ತಿದ್ದ 15 ಅತೃಪ್ತ ಶಾಸಕರ ಪೈಕಿ ಮೂವರನ್ನು ಸ್ಪೀಕರ್ ಅನರ್ಹಗೊಳಿಸಿದ್ದಾರೆ. ಇದಕ್ಕೆ ಪೂರಕವಾದ ದಾಖಲೆಗಳನ್ನು ವ್ಯವಸ್ಥಿತವಾಗಿ ಪೂರೈಸುವ ಮೂಲಕ ಕಾಂಗ್ರೆಸ್ ತನ್ನ ವಿರುದ್ಧ ಬಂಡೆದ್ದ ಸ್ವ ಪಕ್ಷೀಯ ಇಬ್ಬರು ಶಾಸಕರು ಹಾಗೂ ಪಕ್ಷೇತರರ ವಿರುದ್ಧ ಸೇಡು ತೀರಿಸಿಕೊಂಡಿದೆ.
ಮೈತ್ರಿ ಸರಕಾರ ಪತನಕ್ಕೆ ಮೂಲಕಾರಣರಾದವರ ರಾಜಕೀಯ ಭವಿಷ್ಯಕ್ಕೇ ತಡೆಯೊಡ್ಡಲು ಅನರ್ಹತೆ ಅಸ್ತ್ರ ವನ್ನೇ ಬಳಸಲು ಕಾಂಗ್ರೆಸ್ ಸರ್ವತಯಾರಿ ಮಾಡಿಕೊಂಡಿತ್ತು. ಅದಕ್ಕೆ ಪೂರಕವಾದ ಮಾಹಿತಿ, ದಾಖಲೆಗಳನ್ನು ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ಗೆ ಸಲ್ಲಿಸಿ ವಾದ ಮಂಡಿಸಿತ್ತು. ಸಂವಿಧಾನದ ಶೆಡ್ಯೂಲ್ 10ರಡಿ ಅತೃಪ್ತ ಶಾಸಕರ ಅನರ್ಹತೆ ಮೂಲಕ ಪಕ್ಷಾಂತರಿಗಳಿಗೆ ಭವಿಷ್ಯದಲ್ಲಿ ಪಾಠವಾಗುವಂತಹ ಐತಿಹಾಸಿಕ ನಿರ್ಣಯವೊಂದು ಆಗಬೇಕೆಂಬ ಒತ್ತಾಸೆ ಕೈಗೂಡಿರುವ ಸಂತಸದಲ್ಲಿ ದೋಸ್ತಿ ಪಕ್ಷಗಳ ನಾಯಕರಿದ್ದಾರೆ. ವಿಪ್ ಉಲ್ಲಂಘನೆ ಜತೆಗೆ, ಬಿಜೆಪಿ ಜತೆಗೆ ಅತೃಪ್ತರ ಒಡನಾಟದ ದಾಖಲೆಗಳನ್ನು ಸಂಗ್ರಹಿಸಲಾಗಿತ್ತು. ಹಿರಿಯ ವಕೀಲರೊಟ್ಟಿಗೆ ಕಾಂಗ್ರೆಸ್ ನಾಯಕರ ತಂಡ ಮೂರ್ನಾಲ್ಕು ದಿನಗಳಿಂದ ನಿರಂತರ ಸಭೆಗಳನ್ನು ಮಾಡಿ ಅತೃಪ್ತ 15 ಮಂದಿ ಶಾಸಕರ ಬಗ್ಗೆ ಪ್ರತ್ಯೇಕ ಕಡತಗಳನ್ನು ಸಿದ್ದಪಡಿಸಿ ಸಭಾಧ್ಯಕ್ಷರಿಗೆ ಸಲ್ಲಿಸಿತ್ತು. ವಿಚಾರಣೆ ಮುಗಿಸಿರುವ ಸಭಾಧ್ಯಕ್ಷರು ಮೂವರು ಶಾಸಕರ ಬಗ್ಗೆ ತಮ್ಮ ತೀರ್ಪು ಪ್ರಕಟಿಸಿದ್ದಾರೆ.
ರಾಜೀನಾಮೆ ನೀಡಿ ಮುಂಬೈ ಹೋಟೆಲ್ ವಾಸ್ತವ್ಯಕ್ಕೆ ಶಿಫ್ಟ್ ಆಗಿದ್ದ ಬಂಡಾಯ ಶಾಸಕರನ್ನು ಮನವೊಲಿಸುವ ನಿರಂತರ ಪ್ರಯತ್ನ ಯಶಸ್ವಿಯಾಗಲಿಲ್ಲ. ಇದರಿಂದ ಕೆರಳಿದ ಕಾಂಗ್ರೆಸ್- ಜೆಡಿಎಸ್ ನಾಯಕರು ಬಂಡಾಯ ಶಾಸಕರಿಗೆ ಪಾಠ ಕಲಿಸಲು ತೀರ್ಮಾನಿಸಿದ್ದರು. ಅಂತೆಯೇ, ನಗರದ ರೇಸ್ಕೋರ್ಸ್ ರಸ್ತೆಯ ಹೋಟೆಲ್ನಲ್ಲಿ ರೂಂಗಳನ್ನು ಮಾಡಿ, ಅತೃಪ್ತ ಶಾಸಕರ ಅನರ್ಹತೆಗೆ ಪೂರಕ ದಾಖಲೆ ಸಿದ್ಧಪಡಿಸುವ ಕೆಲಸವನ್ನು ತಂಡವೊಂದಕ್ಕೆ ಒಪ್ಪಿಸಲಾಗಿತ್ತು. ಅಡ್ವೊಕೇಟ್ ಜನರಲ್ ಕಚೇರಿಯ ಹಿರಿಯ ವಕೀಲರು ಹಾಗೂ ಕಾನೂನು ಮತ್ತು ಸಂಸದೀಯ ನಡಾವಳಿ ಪರಿಣಿತ ಕಾಂಗ್ರೆಸ್ ನಾಯಕರು ಮೂರ್ನಾಲ್ಕು ದಿನಗಳ ಕಾಲ ಸರಣಿ ಸಭೆಗಳನ್ನು ನಡೆಸಿ ಎಲ್ಲ 15 ಅತೃಪ್ತರ ವಿರುದ್ಧವೂ ಪ್ರತ್ಯೇಕ ಕಡಗಳನ್ನು ಸಿದ್ದಪಡಿಸಿದ್ದರು.
ಪ್ರಮುಖವಾಗಿ, ಅತೃಪ್ತ ಶಾಸಕರ ರಾಜೀನಾಮೆ ಸ್ವ ಇಚ್ಛೆಯಿಂದ ಕೂಡಿಲ್ಲ ಹಾಗೂ ನೈಜತೆ ಇಲ್ಲ ಎಂಬುದಕ್ಕೆ ಪೂರಕವಾಗಿ ಗುಂಪುಗುಂಪಾಗಿ ವಿಧಾನಸೌಧಕ್ಕೆ ಆಗಮಿಸಿ ಸ್ಪೀಕರ್ಗೆ ರಾಜೀನಾಮೆ ಸಲ್ಲಿಸಿರುವುದು, ಒಟ್ಟಿಗೇ ವಿಶೇಷ ವಿಮಾನದಲ್ಲಿ ಮುಂಬೈಗೆ ತೆರಳಿರುವುದು ಮತ್ತು ಈ ಸಂದರ್ಭದಲ್ಲಿ ಬಿಜೆಪಿ ನಾಯಕರ ಒಡನಾಟದ ಫೋಟೋ ಮತ್ತು ವಿಡಿಯೋಗಳು, ಮುಂಬೈ ಹೋಟೆಲ್ನಿಂದ ಅತೃಪ್ತರು ಆಗಿಂದಾಗ್ಗೆ ಬಿಡುಗಡೆ ಮಾಡುತ್ತಿದ್ದ ಆಡಿಯೋ, ವಿಡಿಯೋ ದಾಖಲೆಗಳನ್ನು ಪಕ್ಷ ವಿರೋಧಿ ಚಟುವಟಿಕೆ ಹಾಗೂ ಬಿಜೆಪಿ ಜತೆಗಿನ ಒಡನಾಟಕ್ಕೆ ಸಮರ್ಥನೆಯ ದಾಖಲೆಯಾಗಿ ಬಳಕೆ ಮಾಡಿಕೊಳ್ಳಲಾಗಿದೆ.
ಬಂಡಾಯ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾನೂನಿನಡಿ ದಾಖಲಿಸಿದ್ದ ದೂರಿನ ವಿಚಾರಣೆ ಕಾಲಕ್ಕೆ ಸ್ಪೀಕರ್ ಬಯಸಿದ್ದಂತೆ ಈ ದಾಖಲೆಗಳನ್ನು ಕಾಂಗ್ರೆಸ್ ನಾಯಕರು ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ತಂಡ ಈ ದಾಖಲೆಗಳನ್ನು ಬುಧವಾರ ಸಭಾಧ್ಯಕ್ಷರಿಗೆ ಸಲ್ಲಿಕೆ ಮಾಡಿದೆ. ಮಂಗಳವಾರ ಮತ್ತು ಬುಧವಾರ ಈ ಸಂಬಂಧ ಸಭಾಧ್ಯಕ್ಷರು ನಡೆಸಿದ ವಿಚಾರಣೆಗೆ ಬಂಡಾಯ ಶಾಸಕರು ಹಾಜರಾಗದೆ ತಮ್ಮ ವಕೀಲರ ಮೂಲಕ ವಾದ ಮಂಡಿಸಿದ್ದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಖುದ್ದಾಗಿ ತಮ್ಮ ದೂರು ಮತ್ತು ಬೇಡಿಕೆಗೆ ಸ್ಪೀಕರ್ಗೆ ಸಮರ್ಥನೆಗಳನ್ನು ನೀಡಿದ್ದು, ಜೆಡಿಎಸ್ ಕೂಡ ತಮ್ಮ ವಕ್ತಾರರು ಮತ್ತು ವಕೀಲರ ಮೂಲಕ ವಾದ ಮಂಡಿಸಿತ್ತು. ಸಭಾಧ್ಯಕ್ಷರು ವಿಚಾರಣೆ ಪೂರ್ಣಗೊಳಿಸಿ ಗುರುವಾರ ಮೂವರ ಬಗ್ಗೆ ತೀರ್ಪು ಪ್ರಕಟಿಸಿದರು. ಉಳಿದವರ ಬಗ್ಗೆ ಯಾವಾಗ ಬೇಕಾದರೂ ಸಭಾಧ್ಯಕ್ಷರ ತೀರ್ಮಾನ ಪ್ರಕಟವಾಗುವ ನಿರೀಕ್ಷೆಯಿದ್ದು, ಅತಂತ್ರ ಸ್ಥಿತಿಗೆ ಸಿಲುಕುವ ಆತಂಕದಲ್ಲಿರುವ ಬಂಡಾಯ ಶಾಸಕರ ಎದೆಯಲ್ಲಿ ಢವಢವ ಶುರುವಾಗಿದೆ.
ವಿಳಂಬವಾದಷ್ಟು ದೋಸ್ತಿಗೆ ಹಿತ
ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟ ಅಧಿಕಾರ ಕಳೆದುಕೊಂಡರೂ ರಾಜಕೀಯ ಅಸ್ಥಿರತೆಯ ಬಿಕ್ಕಟ್ಟು ಮುಂದುವರಿದಿದೆ. ಹೊಸ ಸರಕಾರ ರಚಿಸುವ ಬಿಜೆಪಿ ಉತ್ಸಾಹದ ಹಾದಿ ಸುಲಭವಾಗಿಲ್ಲ ಎಂಬುದು ಸ್ಪಷ್ಟವಾಗುತ್ತಲೇ ರಾಷ್ಟ್ರಪತಿ ಆಡಳಿತ ಜಾರಿಯಾಗಲಿ ಎಂಬ ಬಯಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಲ್ಲಿದೆ. ಉಳಿದ ಬಂಡಾಯ ಶಾಸಕರ ರಾಜೀನಾಮೆ ಅಂಗೀಕಾರ ಅಥವಾ ಅನರ್ಹತೆ ತೀರ್ಪು ವಿಳಂಬವಾದರೂ ಒಳ್ಳೆಯದೇ ಎಂಬ ಲೆಕ್ಕಾಚಾರ ದೋಸ್ತಿ ನಾಯಕರ ಲೆಕ್ಕಾಚಾರ. ರಮೇಶ್ ಜಾರಕಿಹೊಳಿ, ಮಹೇಶ್ ಕುಮಠಳ್ಳಿ ಹಾಗೂ ಆರ್.ಶಂಕರ್ ಅನರ್ಹತೆ ತೀರ್ಮಾನ ಹೊರಬಿದ್ದಿದ್ದು ಉಳಿದವರ ವಿಚಾರದಲ್ಲಿ ತೀರ್ಮಾನ 2ನೇ ಕಂತಿನಲ್ಲಿ ಬರಬೇಕು ಎಂಬ ಕಾಂಗ್ರೆಸ್ ನಾಯಕರ ಲೆಕ್ಕಾಚಾರ ಸರಿದಾರಿಯಲ್ಲಿ ಸಾಗಿದೆ ಎನ್ನಲಾಗಿದೆ.