ಆ್ಯಪ್ನಗರ

ಎಂಎಲ್‌ಸಿಗಳಿಗೆ ಮಾತ್ರ ಏಕೆ, ನಮಗೂ ಅಧಿಕಾರ ನೀಡಿ ಎಂದ ಕೈ ಪಡೆ

30 ಮಂದಿ ಶಾಸಕರನ್ನು ನಾನಾ ಮಂಡಳಿ, ನಿಗಮಗಳಿಗೆ ಅಧ್ಯಕ್ಷರು ಹಾಗೂ ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಿಸುತ್ತಿದ್ದಂತೆ ಕಾಂಗ್ರೆಸ್‌ ಪಕ್ಷದಲ್ಲಿ ಮತ್ತೊಂದು ಹಂತದ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿದೆ.

Vijaya Karnataka 12 Jan 2019, 9:16 am
ಬೆಂಗಳೂರು: ನಾನಾ ನಿಗಮ, ಮಂಡಳಿ ನೇಮಕ ವಿಚಾರದಲ್ಲಿ ಸ್ಥಾನ ಸಿಗದ ಶಾಸಕರು ಹಾಗೂ ಕಾಂಗ್ರೆಸ್‌ನ ಹಿರಿಯ ಕಾರ‍್ಯಕರ್ತರಲ್ಲಿ ಅಸಮಾಧಾನ ಸೃಷ್ಟಿಸಿರುವುದು ಕಾಂಗ್ರೆಸ್‌ ಪಕ್ಷದ ವರಿಷ್ಠರಿಗೆ ಹೊಸ ತಲೆನೋವು ಸೃಷ್ಟಿಸುವ ಸಾಧ್ಯತೆ ಇದೆ.
Vijaya Karnataka Web congress-flag


ಅಂದಾಜು 30 ಮಂದಿ ಶಾಸಕರನ್ನು ನಾನಾ ಮಂಡಳಿ, ನಿಗಮಗಳಿಗೆ ಅಧ್ಯಕ್ಷರು ಹಾಗೂ ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಿಸುತ್ತಿದ್ದಂತೆ ಕಾಂಗ್ರೆಸ್‌ ಪಕ್ಷದಲ್ಲಿ ಮತ್ತೊಂದು ಹಂತದ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿದೆ.

ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಂಘಟಿಸಬೇಕಾದರೆ ಕೇವಲ ಶಾಸಕರಿಗೆ ಮಾತ್ರವಲ್ಲ ಕಾರ್ಯಕರ್ತರಿಗೂ ಅಧಿಕಾರ ಹಂಚಿಕೆ ಆಗಬೇಕೆಂಬ ಹೊಸ ಬೇಡಿಕೆ ಕೇಳಿಬಂದಿದೆ. ಈ ಸಂಬಂಧ ವಿವಿಧ ನಿಗಮ, ಮಂಡಳಿಗಳ ಮಾಜಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಹಿರಿಯ ಕಾರ್ಯಕರ್ತರು ಸದ್ಯದಲ್ಲೇ ಸಭೆ ಸೇರಿ ನಾಯಕರಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.

ಶಾಸಕರಿಗೆ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡುವುದಕ್ಕೆ ವಿರೋಧವಿಲ್ಲವೆಂದು ಸ್ಪಷ್ಟಪಡಿಸಿರುವ ಮಾಜಿಗಳು, ಹಿಂದಿನ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಆರಂಭದಲ್ಲಿ ಕಾರ್ಯಕರ್ತರಿಗೆ ಯಾವುದೇ ಅಧಿಕಾರ ನೀಡಲಿಲ್ಲ. ನಂತರ ಎರಡು ಕಂತುಗಳಲ್ಲಿ 20 ತಿಂಗಳಿಗೆ ಅಧಿಕಾರ ಹಂಚಿಕೆ ಮಾಡಿ ನೇಮಕ ಮಾಡಲಾಯಿತು, 2ನೇ ಕಂತಿನಲ್ಲಿ ನೇಮಕಗೊಂಡವರಿಗೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರಿಂದ 20 ತಿಂಗಳು ಅಧಿಕಾರ ಸಿಗಲಿಲ್ಲ.

ಆ ನಂತರ ಜೆಡಿಎಸ್‌ ಜತೆಗೂಡಿ ಕಾಂಗ್ರೆಸ್‌ ಸಮ್ಮಿಶ್ರ ಸರಕಾರ ರಚಿಸಿದರೂ ಹಿಂದಿನ ನೇಮಕಗಳನ್ನು ದಿಢೀರನೇ ರದ್ದುಪಡಿಸಲಾಯಿತು. ಈಗ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವೆ ಅಧಿಕಾರ ಹಂಚಿಕೆ ಸೂತ್ರದಂತೆ ಎರಡೂ ಪಕ್ಷಗಳಿಂದಲೂ ಆಯಕಟ್ಟಿನ ನಿಗಮ, ಮಂಡಳಿಗಳಿಗೆ ಶಾಸಕರೇ ನೇಮಕಗೊಂಡರೆ ಉಳಿದ ಜೊಳ್ಳುಗಳು ಕಾರ್ಯಕರ್ತರ ಪಾಲಾಗುತ್ತವೆ. ಹೀಗಾಗಿ ಶಾಸಕರಂತೆ ಕಾರ್ಯಕರ್ತರಿಗೂ ಉತ್ತಮ ಸಂಸ್ಥೆಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ನೇಮಿಸಬೇಕೆಂದು ಒತ್ತಡ ಹೇರಲಿದ್ದಾರೆ.

ಹೀಗಾಗಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಸಭೆ ಸೇರಿ 2ನೇ ಕಂತಿನಲ್ಲಿ ನೇಮಕಗೊಂಡವರಿಗೆ ಮೊದಲ ಆದ್ಯತೆ ನೀಡಿ ನೇಮಿಸಬೇಕೆಂದು ಮುಂದಿನ ವಾರ ಸಭೆ ಮಾಡಿ ಮನವಿ ಮಾಡಿಕೊಳ್ಳಲಾಗುವುದು ಎಂದು ಕೆಸಿಡಿಸಿ ಮಾಜಿ ಉಪಾಧ್ಯಕ್ಷ ಎಂ.ವೆಂಕಟೇಶ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ