DD ಮೂಲಕ 71 ಲಕ್ಷ ರೂ. ಕಪ್ಪು ಹಣ ಬಿಳಿ!
ಕೋಟಿ ಕೋಟಿ ಕಪ್ಪು ಹಣವನ್ನು ಬಿಳಿ ಮಾಡಿಕೊಟ್ಟಿರುವ ರಾಷ್ಟ್ರೀಕೃತ, ಸಾರ್ವಜನಿಕ ವಲಯ ಹಾಗೂ ಖಾಸಗಿ ಬ್ಯಾಂಕ್ ಅಧಿಕಾರಿಗಳಿಗೆ ಸಿಬಿಐ ನಡುಕ ಹುಟ್ಟಿಸಿದೆ.
ಮಂಜುನಾಥ್ ನಾಗಲೀಕರ್
ಬೆಂಗಳೂರು: ಕೋಟಿ ಕೋಟಿ ಕಪ್ಪು ಹಣವನ್ನು ಬಿಳಿ ಮಾಡಿಕೊಟ್ಟಿರುವ ರಾಷ್ಟ್ರೀಕೃತ, ಸಾರ್ವಜನಿಕ ವಲಯ ಹಾಗೂ ಖಾಸಗಿ ಬ್ಯಾಂಕ್ ಅಧಿಕಾರಿಗಳಿಗೆ ಸಿಬಿಐ ನಡುಕ ಹುಟ್ಟಿಸಿದೆ. ಈಗ ಮತ್ತೊಂದು ಪ್ರಕರಣದಲ್ಲಿ , ಡಿಡಿ ಮೂಲಕ 71 ಲಕ್ಷ ರೂ. ಕಪ್ಪು ಹಣವನ್ನು ಹೊಸ ನೋಟಿಗೆ ಪರಿವರ್ತಿಸಿರುವ ರಾಷ್ಟ್ರೀಕೃತ ಬ್ಯಾಂಕ್ನ ಅಕ್ರಮವನ್ನು ಬಯಲಿಗೆಳೆದಿದೆ.
ಬೆಂಗಳೂರಿನ ಬಸವನಗುಡಿಯಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಡಿಡಿ ಮೂಲಕ ಹಣ ಪರಿವರ್ತನೆ ಮಾಡಲಾಗಿದೆ. ಈ ಸಂಬಂಧ ಸಿಬಿಐ ಮಂಗಳವಾರ ಎಫ್ಐಆರ್ ದಾಖಲಿಸಿ ತನಿಖೆ ಚುರುಕುಗೊಳಿಸಿದೆ. ಇಂಥದ್ದೇ ಹಲವು ಪ್ರಕರಣಗಳು ಬೆಂಗಳೂರಿನಲ್ಲಿ ನಡೆದಿರುವ ಮಾಹಿತಿ ಸಿಬಿಐ ಅಧಿಕಾರಿಗಳಿಗೆ ಸಿಕ್ಕಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬಸವನಗುಡಿ ಶಾಖೆ ಮುಖ್ಯಸ್ಥ ಎಸ್. ಲಕ್ಷ್ಮೇನಾರಾಯಣ, ಇದೇ ಬ್ಯಾಂಕ್ನ ಇತರ ಅಧಿಕಾರಿಗಳು, ಖಾಸಗಿ ಉದ್ದಿಮೆಯಾದ ಓಂಕಾರ್ ಪರಿಮಳ ಮಂದಿರ್ನ ನಿರ್ದೇಶಕ ಎಸ್.ಗೋಪಾಲ, ಅಶ್ವಿನ್ ಜಿ. ಸುಕ್ನು ಹಾಗೂ ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಕಲಂ 420, 120-ಬಿ, ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ಸಿಬಿಐ ಕೇಸು ದಾಖಲಿಸಿಕೊಂಡಿದೆ.
ಈ ಬ್ಯಾಂಕಿನಲ್ಲಿ ನ.15ರಿಂದ ನ.18ರ ನಡುವೆ 50 ಸಾವಿರ ರೂ. ಒಳಗಿನ 149 ಡಿಡಿಗಳನ್ನು ಪುಣೆ ಮೂಲದ ಖಾಸಗಿ ಉದ್ದಿಮೆ ಹೆಸರಿಗೆ ನೀಡಲಾಗಿದೆ. ಡಿಡಿ ಮೂಲಕ ಬ್ಯಾಂಕ್ ಅಧಿಕಾರಿಗಳು 71 ಲಕ್ಷ 49 ಸಾವಿರ ರೂ.ಯನ್ನು ಹಳೇ ನೋಟುಗಳ ರೂಪದಲ್ಲಿ ಸ್ವೀಕರಿಸಿದ್ದಾರೆ. ಈ ಡಿಡಿಗಳನ್ನು ಪರಿಮಳ ಮಂದಿರ್ನ ಗೋಪಾಲ್ ಹಾಗೂ ಅಶ್ವಿನ್ ಪಡೆದುಕೊಂಡಿದ್ದಾರೆ. ನಂತರ ಆ ಡಿಡಿಗಳನ್ನು ರದ್ದುಗೊಳಿಸಿ (ಕ್ಯಾನ್ಸಲ್) ಅಷ್ಟು ಹಣವನ್ನು ಹೊಸ ನೋಟುಗಳ ರೂಪದಲ್ಲಿ ಆರೋಪಿಗಳು ಕ್ಯಾಷ್ ಮಾಡಿಕೊಂಡಿದ್ದಾರೆ. ಈ ಮೂಲಕ ಹಳೇ ನೋಟುಗಳನ್ನು ಹೊಸ ನೋಟುಗಳಾಗಿ ಪರಿವರ್ತನೆ ಮಾಡಿಕೊಳ್ಳಲಾಗಿದೆ ಎಂದು ಸಿಬಿಐ ಅಧಿಕಾರಿಗಳ ತನಿಖೆಯಿಂದ ತಿಳಿದು ಬಂದಿದೆ.
ಈ ಕೃತ್ಯ ನಡೆಸಿರುವ ಬ್ಯಾಂಕ್ಗಳು, ಆರೋಪಿತ ಬ್ಯಾಂಕ್ ಅಧಿಕಾರಿಗಳ ಮನೆಗಳು, ಗೋಪಾಲ್ ಹಾಗೂ ಅಶ್ವಿನ್ಗೆ ಸೇರಿದ ಮನೆ, ಕಚೇರಿಗಳ ಮೇಲೆ ಮಂಗಳವಾರ ದಾಳಿ ನಡೆಸಲಾಗಿದೆ. ಈ ವೇಳೆ ಬ್ಯಾಂಕ್ನ ಹಲವು ವೋಚರ್, ಡಿಡಿ, ಆಸ್ತಿ ದಾಖಲೆ ಪತ್ರಗಳು, ಹಾರ್ಡ್ ಡಿಸ್ಕ್ ಹಾಗೂ ರದ್ದಾಗಿರುವ 500 ರೂ, 1,000 ನೋಟುಗಳ ರೂಪದಲ್ಲಿ 5.91 ಲಕ್ಷ ರೂ. ಪತ್ತೆಯಾಗಿವೆ ಎಂದು ಸಿಬಿಐ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.