ಆ್ಯಪ್ನಗರ

10 ತಿಂಗಳ ಮಗು ಸೇರಿ ರಾಜ್ಯದಲ್ಲಿ ಮತ್ತೆ 7 ಜನರಿಗೆ ಕೊರೊನಾ, ಒಟ್ಟು ಸೋಂಕಿತರು 62ಕ್ಕೆ ಏರಿಕೆ, ಮೂವರು ಬಲಿ!

ತುಮಕೂರಿನ ವ್ಯಕ್ತಿ ಸೇರಿ ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿಗೆ ಒಟ್ಟು ಮೂವರು ಅಸುನೀಗಿದ್ದಾರೆ. ಅಚ್ಚರಿಯ ರೀತಿಯಲ್ಲಿ ದಕ್ಷಿಣ ಕನ್ನಡದ 10 ತಿಂಗಳ ಮಗುವೊಂದಕ್ಕೆ ಕೋವಿಡ್‌-19 ಸೋಂಕು ಇರುವುದು ದೃಢಪಟ್ಟಿದೆ.

Vijaya Karnataka 27 Mar 2020, 3:10 pm

ಬೆಂಗಳೂರು: ರಾಜ್ಯದಲ್ಲಿ ಮತ್ತೆ 7 ಜನರಿಗೆ ಕೊರೊನಾ ವೈರಸ್‌ ಸೋಂಕು ಇರುವುದು ದೃಢಪಟ್ಟಿದ್ದು ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ. ಇದರಲ್ಲಿ ತುಮಕೂರಿನ ವ್ಯಕ್ತಿ ಸೇರಿ ಒಟ್ಟು ಮೂವರು ಅಸುನೀಗಿದ್ದಾರೆ. ಅಚ್ಚರಿಯ ರೀತಿಯಲ್ಲಿ 10 ತಿಂಗಳ ಮಗುವೊಂದಕ್ಕೆ ಕೋವಿಡ್‌-19 ಸೋಂಕು ಇರುವುದು ದೃಢಪಟ್ಟಿದೆ.
Vijaya Karnataka Web Coronavirus


ಗುರುವಾರ ಸಂಜೆ 5 ಗಂಟೆಯಿಂದ ಶುಕ್ರವಾರ ಬೆಳಿಗ್ಗೆ 8 ಗಂಟೆ ನಡುವೆ ಈ 7 ಪ್ರಕರಣಗಳು ವರದಿಯಾಗಿವೆ ಎಂಬುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.

56 - ದಕ್ಷಿಣ ಕನ್ನಡದ 10 ತಿಂಗಳ ಮಗುವಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಮಗು ಆಗಲಿ, ಪೋಷಕರಿಗಾಗಲಿ ವಿದೇಶಕ್ಕೆ ತೆರಳಿದ ಯಾವುದೇ ಹಿನ್ನೆಲೆ ಇಲ್ಲ. ಆದರೆ ಇತ್ತೀಚೆಗೆ ಪೋಷಕರು ಮಗುವಿನೊಂದಿಗೆ ಕೇರಳಕ್ಕೆ ತೆರಳಿದ್ದರು. ಈ ವೇಳೆ ಕೊರೊನಾ ಬಂದಿರಬಹುದು ಎಂದುಕೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿದೆ. ಮಗುವಿಗೆ ಜಿಲ್ಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೊನಾಗೆ ಬಲಿಯಾದ ತುಮಕೂರು ವ್ಯಕ್ತಿ ಎಲ್ಲೆಲ್ಲಿ ಓಡಾಡಿದ್ದ? ಇಲ್ಲಿದೆ ರೂಟ್‌ ಮ್ಯಾಪ್‌!

57 - ಬೆಂಗಳೂರಿನ 20 ವರ್ಷದ ಯುವಕ. ಇವರು ಮಾರ್ಚ್‌ 15 ರಂದು ಶ್ರೀಲಂಕಾದ ಕೊಲಂಬೋದಿಂದ ಬಂದಿದ್ದರು. ಇವರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

58 - ಬೆಂಗಳೂರಿನ 25 ವರ್ಷದ ಮಹಿಳೆ. ಈಕೆ ಲಂಡನ್‌ನಿಂದ ಮಾರ್ಚ್‌ 18 ರಂದು ಬೆಂಗಳೂರಿಗೆ ಬಂದಿದ್ದರು. ಇವರಿಗೂ ಬೆಂಗಳೂರು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

59 - 35 ವರ್ಷದ ಬೆಂಗಳೂರಿನ ಮಹಿಳೆ. ಇವರು 25ನೇ ಕೊರೊನಾ ಸೋಂಕಿತ ವ್ಯಕ್ತಿಯ ಮನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇವರಿಗೂ ಕೊರೊನಾ ಇರುವುದು ದೃಢಪಟ್ಟಿದ್ದು, ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

60 - ತುಮಕೂರು ಮೂಲದ 60 ವರ್ಷದ ಈ ವ್ಯಕ್ತಿ ಶುಕ್ರವಾರ ಅಸುನೀಗಿದ್ದಾರೆ. ಇವರು ರಾಜ್ಯದಲ್ಲಿ ಕೋವಿಡ್‌-19 ಸೋಂಕಿನಿಂದ ಸಾವನ್ನಪ್ಪಿದ ಮೂರನೇ ವ್ಯಕ್ತಿಯಾಗಿದ್ದಾರೆ. ಇವರು ಮಾರ್ಚ್‌ 13 ರಂದು ದಿಲ್ಲಿಗೆ ಭೇಟಿ ನೀಡಿದ್ದರು. ಇವರಿಂದ ಕೊರೊನಾ ಸೋಂಕು ತಗುಲುವ ಹೆಚ್ಚಿನ ಸಾಧ್ಯತೆ ಇರುವ 24 ಜನರನ್ನು ಗುರುತಿಸಲಾಗಿದ್ದು ಇದರಲ್ಲಿ 13 ಜನರನ್ನು ಮನೆಯಲ್ಲೇ ಕ್ವಾರಂಟೈನ್‌ನಲ್ಲಿ ಇರಲು ಹೇಳಲಾಗಿದೆ. ಇವರಲ್ಲಿ ಮೂವರು ವೈದ್ಯರು ಮತ್ತು ದಾದಿಯರೂ ಸೇರಿದ್ದಾರೆ. 24 ರಲ್ಲಿ 8 ಜನರ ವರದಿ ಬಂದಿದ್ದು ಕೊರೊನಾ ಸೋಂಕು ಇಲ್ಲ ಎಂಬುದು ದೃಢಪಟ್ಟಿದೆ.

ನೂರಾರು ಜನರ 'ಸಂಪರ್ಕ'ದಲ್ಲಿದ್ದ ತುಮಕೂರಿನ ವ್ಯಕ್ತಿ ಕೊರೊನಾಗೆ ಬಲಿ!

61 - ಇವರು 25ನೇ ಕೊರೊನಾ ಪೀಡಿತ ವ್ಯಕ್ತಿಯ ಮನೆಯಲ್ಲಿ ಕೆಲಸಕ್ಕಿದ್ದರು. ಬೆಂಗಳೂರಿನ 33 ವರ್ಷದ ಈ ಮಹಿಳೆಗೆ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

62 - 22 ವರ್ಷದ ಉತ್ತರ ಕನ್ನಡದ ಈ ಯುವಕ ದುಬೈನಿಂದ ಬಂದಿದ್ದು ಇವರಿಗೂ ಕೊರೊನಾ ಸೋಂಕು ಇರುವುದು ಖಚಿತವಾಗಿದೆ. ಇವರಿಗೆ ಉತ್ತರ ಕನ್ನಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ನಡುವೆ 62 ರಲ್ಲಿ 5 ಕೊರೊನಾ ಪೀಡಿತರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ. ಇನ್ನು ಮೂವರು ಅಸುನೀಗಿದ್ದು ಸದ್ಯ 54 ಜನರಿಗೆ ಕೊರೊನಾ ಸೋಂಕು ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ