ಆ್ಯಪ್ನಗರ

ಭ್ರಷ್ಟಾಚಾರ ಆರೋಪ: ಬೆಂಗಳೂರು ಸ್ಟೀಲ್ ಬ್ರಿಜ್ ಯೋಜನೆ ರದ್ದು

ಮಹತ್ವದ ಸಭೆಯಲ್ಲಿ ಬೆಂಗಳೂರು ಉಕ್ಕಿನ ಸೇತುವೆ (ಸ್ಟೀಲ್ ಫ್ಲೈಓವರ್) ಕುರಿತು ಭಾರಿ ವಾಗ್ವಾದ ನಡೆದು, ಸ್ಟೀಲ್ ಬ್ರಿಜ್ ಯೋಜನೆ ಕೈಬಿಡುವ ಬಗ್ಗೆ ಸಚಿವರು, ಶಾಸಕರು ತೀರ್ಮಾನ ಕೈಗೊಂಡಿದ್ದಾರೆ.

ವಿಕ ಸುದ್ದಿಲೋಕ 3 Mar 2017, 4:04 pm
ಬೆಂಗಳೂರು: ಲಂಚ-ಭ್ರಷ್ಟಾಚಾರದಿಂದಾಗಿ ಕಾಂಗ್ರೆಸ್-ಬಿಜೆಪಿ ನಡುವೆ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದ, ಹೈಕಮಾಂಡ್ ಲಂಚದ ಆರೋಪ ಕೇಳಿಬಂದಿರುವ 1791 ಕೋಟಿ ರೂ. ವೆಚ್ಚದ ಬೆಂಗಳೂರು ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ಕೈಬಿಡಲು ಕರ್ನಾಟಕ ಸರಕಾರ ತೀರ್ಮಾನಿಸಿದೆ.
Vijaya Karnataka Web corruption allegations bengaluru steel fly over project to be scrapped
ಭ್ರಷ್ಟಾಚಾರ ಆರೋಪ: ಬೆಂಗಳೂರು ಸ್ಟೀಲ್ ಬ್ರಿಜ್ ಯೋಜನೆ ರದ್ದು


ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆದ ಬಳಿಕ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ಇದನ್ನು ಅಧಿಕೃತವಾಗಿ ಘೋಷಿಸಿದರು.

'ದಿನ ಬೆಳಗೆದ್ದು ಸ್ಟೀಲ್ ಫ್ಲೈಓವರ್ ಕುರಿತ ಭ್ರಷ್ಟಾಚಾರ ಆರೋಪಗಳನ್ನು ಕೇಳಿ ಕೇಳಿ ಸಾಕಾಗಿದೆ, ಇದು ಕಾಂಗ್ರೆಸ್ ಪಕ್ಷಕ್ಕೂ ಕೆಟ್ಟ ಹೆಸರು ತರುತ್ತಿದೆ. ಇದೊಂದು ಭ್ರಷ್ಟಾಚಾರ ಸ್ಮಾರಕವಾಗಿ ಉಳಿಯುವ ಆತಂಕವೂ ಇದೆ. ಹೀಗಾಗಿ ಸ್ಟೀಲ್ ಬ್ರಿಜ್ ಯೋಜನೆ ಕೈಬಿಡುವುದು ಉತ್ತಮ' ಎಂದು ಸಚಿವ ಜಾರ್ಜ್ ಅವರು ಸಭೆಯಲ್ಲಿ ಹೇಳಿದ್ದರು.

ಅಲ್ಲದೆ, 'ಸಭೆಯಲ್ಲಿ ಎಲ್ಲರೂ ಒಪ್ಪುವುದಿದ್ದರೆ ಈ ಯೋಜನೆ ಕೈಬಿಡುತ್ತೇವೆ, ಇದಕ್ಕೆ ಮುಖ್ಯಮಂತ್ರಿ ಅವರನ್ನೂ ಒಪ್ಪಿಸುತ್ತೇವೆ, ಆದರೆ ಆರೋಪಗಳನ್ನು ಸಹಿಸುವುದಿಲ್ಲ' ಎಂದು ಜಾರ್ಜ್ ಹೇಳಿದ್ದರು. ಇದೀಗ ಯೋಜನೆ ಕೈಬಿಟ್ಟಿರುವುದಾಗಿ ಅವರು ಘೋಷಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಚಿವ ಜಾರ್ಜ್ ಹೇಳಿದರು.

ಈ ಯೋಜನೆಗಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹಾಗೂ ಇತರ ಕಾಂಗ್ರೆಸ್ ಮುಖಂಡರು ಭಾರಿ ಪ್ರಮಾಣದಲ್ಲಿ ಕಪ್ಪ ಪಡೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಶಾಸಕ ಗೋವಿಂದರಾಜು ಅವರ ಡೈರಿಯನ್ನು ಉಲ್ಲೇಖಿಸಿ ಆರೋಪ ಮಾಡಿರುವುದು ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ವಾಗ್ಯುದ್ಧಕ್ಕೆ ಕಾರಣವಾಗಿತ್ತು. ಉಭಯ ಪಕ್ಷಗಳೂ ಹೈಕಮಾಂಡ್‌ಗೆ ಕಪ್ಪ ಕಾಣಿಕೆ ಸಲ್ಲಿಸುತ್ತಿವೆ ಎಂಬ ಆರೋಪಗಳೂ ಸಾಕಷ್ಟು ಸದ್ದು ಮಾಡಿದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 65 ಕೋಟಿ ರೂ. ಸಂದಾಯವಾಗಿದೆ ಎಂದು ಯಡಿಯೂರಪ್ಪ ಆಪಾದಿಸಿದ್ದರು. ಆದರೆ ಕಾಂಗ್ರೆಸ್ ಕೂಡ ಸುಮ್ಮನೆ ಕೂರಲಿಲ್ಲ. ಬಿಜೆಪಿ ಶಾಸಕ ಲೆಹರ್ ಸಿಂಗ್ ಅವರ ಡೈರಿಯಲ್ಲಿ ಬರೆದಿದೆ ಎನ್ನಲಾದ ದಾಖಲೆಗಳನ್ನು ಬಿಡುಗಡೆ ಮಾಡಿ, ಬಿಜೆಪಿ ಹೈಕಮಾಂಡ್‌ಗೂ ಭಾರಿ ಹಣ ಸಂದಾಯವಾಗಿದೆ ಎಂದು ಆರೋಪ ಮಾಡಿತು.

ಇದೀಗ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಪಕ್ಷದ ಪ್ರತಿಷ್ಠೆಗೂ ಹಾನಿಯಾಗುವ ಸಾಧ್ಯತೆಯಿಂದಾಗಿ, ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ಈ ತೀರ್ಮಾನ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸಭೆಯಲ್ಲಿ ರಾಮಲಿಂಗಾರೆಡ್ಡಿ, ಶಾಸಕರಾದ ದಿನೇಶ್ ಗುಂಡೂರಾವ್, ಮುನಿರತ್ನ, ಹ್ಯಾರಿಸ್, ಅರವಿಂದ ಲಿಂಬಾವಳಿ, ವಿಜಯಕುಮಾರ್, ಜಮೀರ್ ಅಹಮದ್, ಅಖಂಡ ಶ್ರೀನಿವಾಸ್ ಮೂರ್ತಿ ಭಾಗಿಯಾಗಿದ್ದರು. ರಾಜ್ಯಸಭಾ ಸದಸ್ಯರಾದ ರಾಮಮೂರ್ತಿ, ಕುಪೇಂದ್ರ ರೆಡ್ಡಿ, ಶಾಸಕರಾದ ಮುನಿರಾಜು, ಗೋಪಾಲಯ್ಯ, ಪರಿಷತ್ ಸದಸ್ಯೆ ತಾರಾ ಕೂಡ ಇದ್ದರು.

ಮಾತಿನ ಚಕಮಕಿ:
ಸಭೆಯಲ್ಲಿ ಅರವಿಂದ ಲಿಂಬಾವಳಿ ಹಾಗೂ ದಿನೇಶ್ ಗುಂಡೂರಾವ್ ನಡುವೆ ಮಾತಿನ ಚಕಮಕಿ ನಡೆಯಿತು.

ಸಭೆಯಲ್ಲಿ ಲಿಂಬಾವಳಿ ಅವರು ಮೊದಲು ಮಾತನಾಡಲು ಶುರು ಮಾಡಿದಾಗ, ದಿನೇಶ್ ಗುಂಡೂರಾವ್ ಸಿಟ್ಟಾದರು. ಸಭೆ ಆರಂಭವಾಗಲಿ, ಈಗಲೇ ಮಾತನಾಡಬೇಡಿ ಎಂದು ದಿನೇಶ್ ಗುಂಡೂರಾವ್ ಹೇಳಿದಾಗ, ಲಿಂಬಾವಳಿಯೂ ಧ್ವನಿ ಏರಿಸಿದರು, 'ನೀವ್ಯಾಕೆ ಮಾತಾಡ್ತೀರಾ, ಸಚಿವರು ಮಾತನಾಡಲಿ, ಸುಮ್ನೆ ಇರಿ' ಎಂದರು. ಆಗ ಮಧ್ಯಪ್ರವೇಶ ಮಾಡಿದ ರಾಮಲಿಂಗಾರೆಡ್ಡಿ, 'ಅವರು ನಮ್ಮ ಕಾರ್ಯಾಧ್ಯಕ್ಷರು, ಮಾತನಾಡಬೇಡಿ ಅಂತೀರಾ' ಎಂದು ಕೇಳಿದರು.

ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಬಿಡಬ್ಲ್ಯೂಬಿಎಸ್ಎಸ್‌ಬಿ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು ಭಾಗಿಯಾಗಿದ್ದರು.

ಯೋಜನೆಯ ಬಗ್ಗೆ ಮತ್ತಷ್ಟು ವಿವರಗಳು ಇಲ್ಲಿವೆ:
ಸ್ಟೀಲ್ ಬ್ರಿಡ್ಜ್ ಯೋಜನೆ: ಸಿಎಂಗೆ 65 ಕೋಟಿ ರೂ. ಕಪ್ಪ: ಬಿಎಸ್ ಯಡಿಯೂರಪ್ಪ ಆರೋಪ

ಉಕ್ಕಿನ ಮೇಲು ರಸ್ತೆ: ಇಲ್ಲಿದೆ ಅದರ ಕತೆ

ಉಕ್ಕಿನ ಸೇತುವೆಯ ವ್ಯಾಪ್ತಿ, ವಿಸ್ತಾರ

ಸ್ಟೀಲ್ ಫ್ಲೈಓವರ್ ವಿರೋಧಿಸಿ ಪ್ರತಿಭಟನೆ, ಮಾನವ ಸರಪಣಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ