ಆ್ಯಪ್ನಗರ

ಐಎಂಎ ವಂಚನೆ: ವಿಜಯ ಶಂಕರ್‌ರಿಂದ 2.5 ಕೋಟಿ ರೂ. ಲಂಚದ ಹಣ ವಶ

ಐಎಂಎ ಜ್ಯುವೆಲ್ಸ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಐಎಎಸ್‌ ಅಧಿಕಾರಿ ವಿಜಯಶಂಕರ್‌ ಅವರಿಂದ ಕೋಟ್ಯಂತರ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.

Vijaya Karnataka Web 12 Jul 2019, 10:28 pm
ಬೆಂಗಳೂರು : ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಐಎಎಸ್‌ ಅಧಿಕಾರಿ ವಿಜಯ ಶಂಕರ್‌ ಮತ್ತು ಉಪವಿಭಾಗಾಧಿಕಾರಿ ಎಲ್‌.ಸಿ.ನಾಗರಾಜು ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತಗೊಂದಿದ್ದು, ಈ ಇಬ್ಬರೂ ಸೇರಿ ನಾಲ್ವರು ಜೈಲು ಪಾಲಾಗಿದ್ದಾರೆ. ಜತೆಗೆ ಐಎಂಎ ಮಾಲೀಕ ಮನ್ಸೂರ್‌ ಖಾನ್‌ ಅವರಿಂದ ಪಡೆದಿದ್ದರೆನ್ನಲಾದ ಒಂದೂವರೆ ಕೋಟಿ ರೂ. ಜತೆಗೆ ಮತ್ತೊಂದು ವ್ಯವಹಾರದಲ್ಲಿ ಪಡೆದಿದ್ದ ಒಂದು ಕೋಟಿ ರೂ. ಲಂಚದ ಹಣವನ್ನು ವಿಜಯ ಶಂಕರ್‌ ಅವರಿಂದ ಎಸ್‌ಐಟಿ ವಶಕ್ಕೆ ಪಡೆದಿದೆ.
Vijaya Karnataka Web ಐಎಂಎ ಜ್ಯುವೆಲ್ಸ್‌
ಐಎಂಎ ಜ್ಯುವೆಲ್ಸ್‌


ಐಎಂಎ ಸಂಸ್ಥೆಯಿಂದ ಫ್ಲೈಓವರ್‌ ನಿರ್ಮಿಸಲು ಅಡೋಣಿ ಸಂಸ್ಥೆ ಪಡೆದಿದ್ದ 6 ಕೋಟಿ ರೂ ಮುಂಗಡ ಹಣದಲ್ಲಿ ಒಂದೂವರೆ ಕೋಟಿ ರೂಪಾಯಿಯನ್ನು ಅಡೋಣಿ ಸಂಸ್ಥೆಯೇ ಸ್ವಯಂ ಪ್ರೇರಿತವಾಗಿ ಎಸ್‌ಐಟಿಗೆ ಹಿಂದಿರುಗಿಸಿದೆ.

ಜಾಮೀನು ತಿರಸ್ಕಾರ


ಶುಕ್ರವಾರ ಎಸ್‌ಐಟಿ ಕಸ್ಟಡಿ ಅವಧಿ ಮುಗಿದಿದ್ದರಿಂದ ಇಂದು ಎಲ್ಲರನ್ನೂ ಕೆಪಿಐಡಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ವಿಜಯ ಶಂಕರ್‌ ಪರವಾಗಿ ಹಿರಿಯ ವಕೀಲ ವೈ.ಆರ್‌.ಸದಾಶಿವರೆಡ್ಡಿ ಮತ್ತು ಎಲ್‌.ಸಿ.ನಾಗರಾಜ್‌ ಅವರ ಪರವಾಗಿ ಸಿ.ವಿ.ನಾಗೇಶ್‌ ಅವರು ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿ ಶುಕ್ರವಾರವೇ ಜಾಮೀನು ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ತಮ್ಮ ವಾದ ಮಂಡಿಸಿದ ಹಿರಿಯ ವಕೀಲರಿಬ್ಬರು, ''ಅರ್ಜಿದಾರರು ಕಾನೂನು ಪ್ರಕಾರವೇ ಕೆಲಸ ಮಾಡಿದ್ದಾರೆ. ಇವರಿಗೂ ಕಂಪನಿಗೂ ಯಾವುದೇ ಸಂಬಂಧ ಇಲ್ಲ. ಲಂಚ ಪಡೆದಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಇವರಿಗೆ ಜಾಮೀನು ನೀಡದೇ ಹೋದರೆ ಅವರ ಸಂವಿಧಾನದತ್ತ ಮೂಲಭೂತ ಹಕ್ಕು ಉಲ್ಲಂಘನೆ ಆಗುತ್ತದೆ,'' ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಈ ವಾದಕ್ಕೆ ಪ್ರತಿವಾದ ಸಲ್ಲಿಸಿದ ವಿಶೇಷ ಸರಕಾರಿ ಅಭಿಯೋಜಕರಾದ ಎಂ.ನಾರಾಯಣ ರೆಡ್ಡಿ,''ಆರೋಪಿಗಳು ನಿಯಮ ಬದ್ಧವಾಗಿ ಕರ್ತವ್ಯ ನಿರ್ವಹಿಸಿಲ್ಲ. ಇಬ್ಬರೂ ಪ್ರಭಾವೀ ಅಧಿಕಾರಿಗಳಾಗಿರುವುದರಿಂದ ಇವರಿಗೆ ಜಾಮೀನು ನೀಡಿದರೆ ಇನ್ನೂ ತನಿಖಾ ಹಂತದಲ್ಲಿರುವ ಪ್ರಕರಣದ ಮುಂದಿನ ಹಂತದ ತನಿಖೆಗೆ ಅಡ್ಡಿ ಆಗುತ್ತದೆ. ಅಲ್ಲದೆ ಈ ಪ್ರಕರಣ ಈಗಾಗಲೇ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿಗಳ ಮುಂದಿದೆ. ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು,'' ಎಂದು ಮನವಿ ಮಾಡಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಧೀಶ ಶಿವಶಂಕರ ಬಿ ಅಮರಣ್ಣ ಅವರು ವಿಶೇಷ ಅಭಿಯೋಜಕರ ವಾದವನ್ನು ಎತ್ತಿ ಹಿಡಿದು ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದರು. ಇದೇ ವೇಳೆ ಜಾಮೀನು ಅರ್ಜಿಗೆ ತಕರಾರು ಸಲ್ಲಿಸಲು ಎಸ್‌ಐಟಿಗೆ ಸೂಚಿಸಿದ ನ್ಯಾಯಾಲಯ ವಿಚಾರಣೆಯನ್ನು ಜು.18ಕ್ಕೆ ಮುಂದೂಡಿತು.

ಹಣ ಜಪ್ತಿ: ಎಸಿಬಿ ತನಿಖೆ

ವಿಜಯ ಶಂಕರ್‌ ಅವರು ಮನ್ಸೂರ್‌ಖಾನ್‌ನಿಂದ ಪಡೆದಿದ್ದ 1.5 ಕೋಟಿ ರೂ.ವನ್ನು ಹೊಸ ಫ್ಲ್ಯಾಟ್‌ ಖರೀದಿಸುವ ಸಲುವಾಗಿ ಬಿಲ್ಡರ್‌ ಒಬ್ಬರಿಗೆ ನೀಡಿರುವುದನ್ನು ವಿಚಾರಣೆ ವೇಳೆ ತಿಳಿಸಿದ್ದರು. ಬಳಿಕ ಆ ಬಿಲ್ಡರ್‌ನಿಂದ ಎಸ್‌ಐಟಿ ತಂಡ ಹಣವನ್ನು ವಶಕ್ಕೆ ಪಡೆಯುವುದರ ಜತೆಗೆ ಮತ್ತೊಂದು ಪ್ರಕರಣದಲ್ಲಿ ಒಂದು ಕೋಟಿ ರೂ ಪಡೆದಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು. ಆ ಒಂದು ಕೋಟಿಯನ್ನೂ ವಿಜಯ ಶಂಕರ್‌ ಅವರಿಂದ ವಶಪಡಿಸಿಕೊಂಡಿರುವ ಎಸ್‌ಐಟಿ ಈ ಪ್ರಕರಣವನ್ನು ಹೆಚ್ಚಿನ ತನಿಖೆಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಒಪ್ಪಿಸಿದೆ.

ಗನ್‌ ಮುನೀರ್‌ ಬಂಧನ

ಐಎಂಎ ಕಂಪನಿಗೆ ಸೇರಿದ ಫ್ಲ್ಯಾಟ್‌ಗಳ ದಾಖಲೆಗಳನ್ನು ನಕಲು ಮಾಡಿ ಅಲ್ಲಿ ನೆಲೆಸಿದ್ದ ರೌಡಿ ಶೀಟರ್‌ಗಳಾದ ಗನ್‌ಮುನೀರ್‌ ಮತ್ತು ಬ್ರಿಗೇಡ್‌ ಬಾಬು ಇಬ್ಬರನ್ನೂ ಎಸ್‌ಐಟಿ ಬಂಧಿಸಿದ್ದು ವಿಚಾರಣೆ ಮುಂದುವರಿದಿದೆ.

ಹಣ ಹಿಂದಿರುಗಿಸಿದ ಅಡೋಣಿ

ಐಎಂಎ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಅಡೋಣಿ ಸಂಸ್ಥೆ ನಗರದಲ್ಲಿ ಫ್ಲೈಓವರ್‌ ನಿರ್ಮಾಣಕ್ಕೆ ಮುಂದಾಗಿತ್ತು. ಇದಕ್ಕಾಗಿ ಐಎಂಎ ನಿಂದ 6 ಕೋಟಿ ರೂಪಾಯಿ ಮುಂಗಡವಾಗಿ ಪಡೆದಿತ್ತು. ಈ ಸಂಗತಿಯನ್ನು ಎಸ್‌ಐಟಿ ಮುಂದೆ ಸ್ವಯಂ ಪ್ರೇರಿತವಾಗಿ ಒಪ್ಪಿಕೊಂಡಿರುವ ಅಡೋಣಿ ಸಂಸ್ಥೆ ಸದ್ಯ ಒಂದೂವರೆ ಕೋಟಿ ಹಣವನ್ನು ಎಸ್‌ಐಟಿಗೆ ಹಿಂದಿರುಗಿಸಿದ್ದು ಬಾಕಿ ಹಣವನ್ನೂ ಸದ್ಯದಲ್ಲೇ ಹಿಂದಿರುಗಿಸುವುದಾಗಿ ತಿಳಿಸಿದೆ.

ಮೌಲ್ವಿ ಮನೆ ಜಪ್ತಿ

ಎಸ್‌ಐಟಿ ತಂಡ ಗುರುವಾರ ಬಂಧಿಸಿರುವ ಶಿವಾಜಿನಗರದ ಪ್ರಮುಖ ಮಸೀದಿಯ ಮೌಲ್ವಿ ಹನೀಫ್‌ ಅಫ್ಜರ್‌ ಅಜೀಜ್‌ ಅವರನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ ಜು.18ರ ವರೆಗೂ ಎಸ್‌ಐಟಿ ವಶಕ್ಕೆ ಒಪ್ಪಿಸಿದೆ. ಇವರು ಮನ್ಸೂರ್‌ಖಾನ್‌ನಿಂದ ಉಡುಗೊರೆಯಾಗಿ ಪಡೆದಿರುವ 3 ಕೋಟಿ ಮೌಲ್ಯದ ಮನೆಯನ್ನು ಜಪ್ತಿ ಮಾಡಿಕೊಳ್ಳಲು ಎಸ್‌ಐಟಿ ನಿರ್ಧರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ