ಆ್ಯಪ್ನಗರ

ಚಂಡಮಾರುತ ಭೀತಿ: ಗಂಟೆಗೆ 55-65 ಕಿಮೀ. ವೇಗದಲ್ಲಿ ಗಾಳಿ, ಭಾರಿ ಮಳೆ ಸಾಧ್ಯತೆ

ಚಂಡಮಾರುತ ಕುರಿತಂತೆ ಅರಬ್ಬೀ ಸಮುದ್ರ ಹೊಂದಿಕೊಂಡಿರುವ ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Vijaya Karnataka Web 10 Jun 2019, 7:43 pm
ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಸೋಮವಾರ ಬೆಳಗ್ಗಿನಿಂದ ಜಿಲ್ಲೆಯಲ್ಲಿ ಮೋಡ ಕವಿ ವಾತಾವರಣ ನೆಲೆಸಿದ್ದು, ನಗರದಾದ್ಯಂತ ಆಗಾಗ ತುಂತುರು ಮಳೆಯಾಗಿದೆ.
Vijaya Karnataka Web ಮೋಡ
ಮೋಡ


ಈ ನಡುವೆ ವಾಯುಭಾರ ಕುಸಿತ ಮಂಗಳವಾರ ಮಧ್ಯಾಹ್ನದ ವೇಳೆಗೆ ಚಂಡಮಾರುತವಾಗಿ ಪರಿವರ್ತನೆಗೊಳ್ಳಲಿದ್ದು, ಜಿಲ್ಲೆಯಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ನಿರೀಕ್ಷೆಯಿದೆ.

ಚಂಡಮಾರುತ ಅರಬ್ಬೀ ಸಮುದ್ರದಲ್ಲಿ ಕರಾವಳಿಯಿಂದ 500 ಕಿಮೀ. ದೂರದಲ್ಲಿ ಕೇಂದ್ರೀಕೃತವಾಗಿದ್ದು, ರಾಜಸ್ತಾನದ ಕಡೆಗೆ ಸಾಗುವ ಸಾಧ್ಯತೆಗಳಿವೆ.

ಇದರ ಪರಿಣಾಮವಾಗಿ ಮುಂದಿನ ಎರಡು ಮೂರು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ರಾಜ್ಯದ ಹಲವೆಡೆ ಹಾಗೂ ಲಕ್ಷದ್ವೀಪ, ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಎಸ್.ಎಸ್.ಎಂ. ಗವಾವಸ್ಕರ್ ತಿಳಿಸಿದ್ದಾರೆ.

ಕರಾವಳಿಯಲ್ಲಿ ಸಮುದ್ರ ಕಿನಾರೆಯಿಂದ ಈಗಾಗಲೇ ರಭಸದಿಂದ ಗಾಳಿ ಬೀಸಲಾರಂಭಿಸಿದೆ. ಇದು ಮುಂದಿನ ಎರಡು ದಿನಗಳ ಕಾಲ ತೀವ್ರವಾಗಲಿದೆ. ಮಂಗಳವಾರ ಗಾಳಿ ವೇಗ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಗಂಟೆಗೆ 55ರಿಂದ 65 ಕಿಮೀ. ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದೆ. ಜೂನ್ 12ರ ವೇಳೆಗೆ ಚಂಡಮಾರುತ ಕರ್ನಾಟಕ ಕರಾವಳಿಯಿಂದ ರಾಜಸ್ಥಾನ ಕಡೆಗೆ ಸಾಗಲಿದೆ.

ಕರ್ನಾಟಕ ಮತ್ತು ಕೇರಳ ಕರಾವಳಿಗೆ ಭಾರಿ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಆರೆಂಜ್ ಬಣ್ಣದ ಎಚ್ಚರಿಕೆ ನೀಡಲಾಗಿದೆ. ಜೂ.11ರಿಂದ 13ರ ವರೆಗೆ ಕರ್ನಾಟಕ ಕರಾವಳಿಯಲ್ಲಿ ಹಳದಿ ಬಣ್ಣದ ಎಚ್ಚರಿಕೆ ನೀಡಲಾಗಿದೆ.

’ವಾಯು’ ಚಂಡಮಾರುತ

ಚಂಡಮಾರುತಕ್ಕೆ ಭಾರತೀಯ ಹೆಸರಾದ ’ವಾಯು’ ಎಂದು ನಾಮಕರಣ ಮಾಡಲಾಗಿದೆ. ಚಂಡಮಾರುತ ಕರಾವಳಿಯಿಂದ 500 ಕಿಮೀ. ದೂರದಲ್ಲಿ ಕೇಂದ್ರೀಕೃತವಾಗಿದ್ದು, ರಾಜಸ್ಥಾನದ ಕಡೆಗೆ ಸಾಗುವ ಸಾಧ್ಯತೆಗಳಿವೆ.

ಕಟ್ಟೆಚ್ಚರಕ್ಕೆ ಸೂಚನೆ

ಚಂಡಮಾರುತದಿಂದ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡ ಹಿನ್ನೆಲೆಯಲ್ಲಿ ಕರಾವಳಿಯ ತೀರ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೀನುಗಾರರು ಹಾಗೂ ಪ್ರವಾಸಿಗರು ಸಮುದ್ರಕ್ಕಿಳಿದಂತೆ ಎಚ್ಚರಿಕೆ ನೀಡಲಾಗಿದೆ. ಮಂಗಳೂರಿನಲ್ಲಿ ಪಣಂಬೂರು, ತಣ್ಣೀರುಬಾವಿ, ಸಸಿಹಿತ್ಲು, ಉಳ್ಳಾಲ ಸೇರಿದಂತೆ ಬೀಚ್‌ಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

ಚಂಡಮಾರುತ ಕುರಿತಂತೆ ಅರಬ್ಬೀ ಸಮುದ್ರ ಹೊಂದಿಕೊಂಡಿರುವ ರಾಜ್ಯಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ