ಆ್ಯಪ್ನಗರ

ದಸರಾ ಗಜಪಡೆಗೆ ಡಬಲ್‌ ಪೂಜೆ, ಸಚಿವರ ಜೇಬಿಗೇ ಕಳ್ಳರ ಕೈ!

ರಾಜಕಾರಣಿಗಳ ಪೈಪೋಟಿಯಿಂದಾಗಿ ಈ ಬಾರಿಯ ಗಜಪಯಣಕ್ಕೆ ಎರಡೆರಡು ಬಾರಿ ಪೂಜೆಯ ಯೋಗ ಒದಗಿ ಬಂತು. ಈ ಗೊಂದಲದ ನಡುವೆ ಜೇಬುಗಳ್ಳರು ಎಸ್‌ಪಿಯಂಥ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳದಲ್ಲಿದ್ದಾಗಲೂ ಸೀದಾ ಸಚಿವರ ಜೇಬಿಗೇ ಕೈ ಹಾಕುವ ಮೂಲಕ ಕೈಚಳಕ ಪ್ರದರ್ಶಿಸಿದರು!

Vijaya Karnataka 23 Aug 2019, 7:48 am
ಮೈಸೂರು: ರಾಜಕಾರಣಿಗಳ ಪೈಪೋಟಿಯಿಂದಾಗಿ ಈ ಬಾರಿಯ ಗಜಪಯಣಕ್ಕೆ ಎರಡೆರಡು ಬಾರಿ ಪೂಜೆಯ ಯೋಗ ಒದಗಿ ಬಂತು. ಈ ಗೊಂದಲದ ನಡುವೆ ಜೇಬುಗಳ್ಳರು ಎಸ್‌ಪಿಯಂಥ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳದಲ್ಲಿದ್ದಾಗಲೂ ಸೀದಾ ಸಚಿವರ ಜೇಬಿಗೇ ಕೈ ಹಾಕುವ ಮೂಲಕ ಕೈಚಳಕ ಪ್ರದರ್ಶಿಸಿದರು!
Vijaya Karnataka Web BNG-2208-2-2-ELEPHANT POOJA


ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗದ ಹಿನ್ನೆಲೆಯಲ್ಲಿ ಯಾರು ಗಜಪಯಣಕ್ಕೆ ಚಾಲನೆ ನೀಡುತ್ತಾರೆ ಎನ್ನುವ ಗೊಂದಲ ಅಧಿಕಾರಿಗಳಲ್ಲಿತ್ತು. ಹೀಗಾಗಿ ಆಹ್ವಾನ ಪತ್ರಿಕೆಯನ್ನೇ ಮುದ್ರಿಸಿರಲಿಲ್ಲ. ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ಸಚಿವ ಆರ್‌.ಅಶೋಕ್‌ ಜಿಲ್ಲೆಗೆ ಭೇಟಿ ನೀಡಲಿದ್ದು, ಅವರ ಪ್ರವಾಸ ಕಾರ್ಯಕ್ರಮದ ಪಟ್ಟಿಯಲ್ಲಿ (ಟಿಪಿ) ಗಜಪಯಣಕ್ಕೆ ಚಾಲನೆ ಎಂದು ಹಾಕಲಾಗಿತ್ತು. ಬೆಳಗ್ಗೆ 11ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು. ಅವರು ಬಾರದ ಕಾರಣ ಶಾಸಕ ಎಸ್‌.ಎ.ರಾಮದಾಸ್‌ ನೇತೃತ್ವದಲ್ಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು. ಗಜಪಯಣ ಇನ್ನೇನು ಆರಂಭವಾಗಬೇಕು ಎನ್ನುವಷ್ಟರಲ್ಲಿ ಸಚಿವ ಆರ್‌. ಅಶೋಕ್‌ ಹಾಗೂ ವಿ. ಸೋಮಣ್ಣ ಆಗಮಿಸಿದರು. ಇದರಿಂದಾಗಿ ಮತ್ತೊಮ್ಮೆ ಪೂಜೆ ನಡೆಸಿ, ಆನೆಗಳಿಗೆ ಆರತಿ ಎತ್ತಿ ಪುಷ್ಪಾರ್ಚನೆ ನಡೆಸಲಾಯಿತು. ಈ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.

ಸಚಿವರ ಕಿಸೆಗೆ ಕೈ ಹಾಕಿದ ಕಳ್ಳ

ವೀರನಹೊಸಳ್ಳಿ ಗೇಟ್‌ನಲ್ಲಿ ಆನೆಗಳ ಪೂಜೆ ನೂಕುನುಗ್ಗಲಿನಲ್ಲಿ ನಡೆಯಿತು. ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಜನರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಇಬ್ಬರು ಸಚಿವರು ಆಗಮಿಸಿದ ಸಂದರ್ಭ ಇನ್ನಷ್ಟು ತಳ್ಳಾಟ ನಡೆಯಿತು. ಇದೇ ಸಂದರ್ಭ ಉಪಯೋಗಿಸಿಕೊಂಡು ಕಳ್ಳನೊಬ್ಬ ಬಿಜೆಪಿ ಮುಖಂಡ ಸಂದೇಶ್‌ ಸ್ವಾಮಿ ಅವರ ಕಿಸೆಯಲ್ಲಿದ್ದ 38 ಸಾವಿರ ರೂ.ಗಳನ್ನು ಎಗರಿಸಿದ. ಪಕ್ಕದಲ್ಲಿದ್ದ ಸಚಿವ ವಿ. ಸೋಮಣ್ಣ ಅವರ ಕಿಸೆಗೇ ಮತ್ತೊಬ್ಬ ಕಳ್ಳ ಕೈ ಹಾಕಿ ಹಣ ಎಗರಿಸಲು ನೋಡಿದ. ಆದರೆ ಗನ್‌ಮ್ಯಾನ್‌ ಕಣ್ಣಿಗೆ ಬಿದ್ದು ಸಿಕ್ಕಿ ಬಿದ್ದ. ತಮ್ಮ ಉಪಸ್ಥಿತಿಯಲ್ಲೇ ಸಚಿವರ ಕಿಸೆಗೆ ಜೇಬುಗಳ್ಳರು ಕೈ ಹಾಕಿದ್ದು ಕಂಡು ಸ್ಥಳದಲ್ಲಿದ್ದ ಹಿರಿಯ ಪೊಲೀಸ್‌ ಅಧಿಕಾರಿಗಳು ಮುಜುಗರಕ್ಕೊಳಗಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ