ಆ್ಯಪ್ನಗರ

‘ದೋಸ್ತಿ’ಗಳ ಹಗ್ಗಜಗ್ಗಾಟಕ್ಕೆ ದಿಲ್ಲಿ ವರಿಷ್ಠರ ಅಂಗಳವೇ ನಿರ್ಣಾಯಕ

ಜೆಡಿಎಸ್‌ಗೆ ಎಷ್ಟು ಸೀಟು ಬಿಟ್ಟುಕೊಡಬೇಕು, ಯಾವ ಕ್ಷೇತ್ರವನ್ನು ಕಾಂಗ್ರೆಸ್‌ ಉಳಿಸಿಕೊಳ್ಳಬೇಕು. ಪಕ್ಷ ಹಾಲಿ ಪ್ರತಿನಿಧಿಸುತ್ತಿರುವ ಕ್ಷೇತ್ರಗಳನ್ನು ಬಿಟ್ಟುಕೊಡಲು ಸಾಧ್ಯವೇ ಎಂಬಂಥ ರಾಜ್ಯ ಕಾಂಗ್ರೆಸ್‌ ನಾಯಕರ ವಾದ, ನಿಲುವುಗಳು ಕೇವಲ ಶಿಫಾರಸು ಹಂತಕ್ಕೆ ಸೀಮಿತವಾಗಲಿವೆ.

Vijaya Karnataka Web 21 Feb 2019, 8:15 am
ಬೆಂಗಳೂರು: ರಾಜ್ಯದಲ್ಲಿ ಲೋಕಸಮರವನ್ನು ಒಟ್ಟಾಗಿ ಎದುರಿಸುವ ಆಶಯದಂತೆ ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ 'ದೋಸ್ತಿ'ಗಳ ಮಧ್ಯೆ ಎಷ್ಟೇ ಹಗ್ಗಜಗ್ಗಾಟ ನಡೆಯುತ್ತಿದ್ದರೂ, ದಿಲ್ಲಿಯ ಎಐಸಿಸಿ ವರಿಷ್ಠರ ಅಂಗಳದಲ್ಲಿ ಹೊರಬೀಳುವ ತೀರ್ಮಾನವೇ ಅಂತಿಮವಾಗಲಿದೆ.
Vijaya Karnataka Web cONG jds


ಜೆಡಿಎಸ್‌ಗೆ ಎಷ್ಟು ಸೀಟು ಬಿಟ್ಟುಕೊಡಬೇಕು, ಯಾವ ಕ್ಷೇತ್ರವನ್ನು ಕಾಂಗ್ರೆಸ್‌ ಉಳಿಸಿಕೊಳ್ಳಬೇಕು. ಪಕ್ಷ ಹಾಲಿ ಪ್ರತಿನಿಧಿಸುತ್ತಿರುವ ಕ್ಷೇತ್ರಗಳನ್ನು ಬಿಟ್ಟುಕೊಡಲು ಸಾಧ್ಯವೇ ಎಂಬಂಥ ರಾಜ್ಯ ಕಾಂಗ್ರೆಸ್‌ ನಾಯಕರ ವಾದ, ನಿಲುವುಗಳು ಕೇವಲ ಶಿಫಾರಸು ಹಂತಕ್ಕೆ ಸೀಮಿತವಾಗಲಿವೆ. ಈ ವಾರಾಂತ್ಯದೊಳಗೆ ದಿಲ್ಲಿಯಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾದ ಉಭಯ ಪಕ್ಷಗಳ ವರಿಷ್ಠರ ಹಂತದ ಚರ್ಚೆಯೇ 'ದೋಸ್ತಿ'ಗಳ ನಡುವಿನ ಸೀಟು ಹಂಚಿಕೆ ಕಲಹಕ್ಕೆ ತೆರೆ ಎಳೆಯುವಲ್ಲಿ ನಿರ್ಣಾಯಕ ಆಗಲಿದೆ.

ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟದಿಂದ ಉಭಯ ಪಕ್ಷಗಳಿಗೂ ಲಾಭವಾಗುವ ಕಾರಣ ಕೊಡು -ಕೊಳ್ಳುವ ಧೋರಣೆಯೊಂದಿಗೆ ವ್ಯವಹರಿಸಲು ಎರಡೂ ಪಕ್ಷಗಳ ವರಿಷ್ಠರು ಬಯಸಿದ್ದಾರೆ. ಹೀಗಾಗಿ, ರಾಜ್ಯ ನಾಯಕರ ಅಭಿಪ್ರಾಯಗಳಿಗೆ ಪೂರ್ಣ ಪ್ರಮಾಣದಲ್ಲಿ ಮನ್ನಣೆ ಸಿಗುವ ಸಾಧ್ಯತೆಗಳು ಕಡಿಮೆ ಎಂದೇ ಹೇಳಲಾಗುತ್ತಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಈ ಮೂವರು ಚರ್ಚೆ ಬಳಿಕ ರಾಜ್ಯದಲ್ಲಿ 'ದೋಸ್ತಿ'ಗಳ ಸೀಟು ಹೊಂದಾಣಿಕೆ ಚೌಕಟ್ಟು ಅಂತಿಮಗೊಳ್ಳಲಿದೆ.

ಉಭಯ ಪಕ್ಷಗಳ ಮಧ್ಯೆ ರಾಜ್ಯಮಟ್ಟದಲ್ಲಿ ಚರ್ಚೆಗೆ ಪೂರ್ವಭಾವಿಯಾಗಿ ಕೆಪಿಸಿಸಿ ಚುನಾವಣಾ ಸಮಿತಿ ಸೋಮವಾರ ಸಭೆ ನಡೆಸಿದ್ದು, ಜೆಡಿಎಸ್‌ ನಾಯಕರೊಟ್ಟಿಗೆ ಸಮಾಲೋಚನೆ ನಡೆಸಿ ವರಿಷ್ಠರಿಗೆ ಸೂಕ್ತ ಶಿಫಾರಸು ಮಾಡಲು ರಾಜ್ಯ ಕಾಂಗ್ರೆಸ್‌ ನಾಯಕರು ಬಯಸಿದ್ದಾರೆ. ಈ ಸಂಬಂಧ ಬುಧವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ದೇವೇಗೌಡರನ್ನು ಭೇಟಿ ಮಾಡಬೇಕಿತ್ತಾದರೂ, ಇನ್ನೂ ಸಾಧ್ಯವಾಗಿಲ್ಲ.

ಮಿತ್ರಪಕ್ಷದ ರಾಜ್ಯ ನಾಯಕರು ಎಷ್ಟೇ ವಾದ, ನಿಲುವು ಪ್ರತಿಪಾದಿಸಿದರೂ ಸೀಟು ಹಂಚಿಕೆ ವಿಚಾರದಲ್ಲಿ ಎಐಸಿಸಿ ಹೈಕಮಾಂಡ್‌ ಜತೆಗಿನ ಮಾತುಕತೆಯೇ ನಿರ್ಣಾಯಕವಾದ ಕಾರಣ ದೇವೇಗೌಡರು ಮುಗುಮ್ಮಾಗಿ ಉಳಿದಿದ್ದಾರೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ