ನೀಚ ಎಂದ ದೇವೇಗೌಡರು ಕ್ಷಮೆ ಕೇಳಲಿ
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಿದ್ದರಾಮಯ್ಯ ಅವರನ್ನು ಬೆಳೆಸಿ ತಪ್ಪು ಮಾಡಿದ್ದರಿಂದಲೇ ರಾಜ್ಯ ಭ್ರಷ್ಟಾಚಾರ ರಹಿತ ಆಡಳಿತ ನೋಡುವುದಕ್ಕೆ ಸಾಧ್ಯವಾಗಿದ್ದು, ನೀವು ಇಂಥ ತಪ್ಪುಗಳನ್ನು ಮತ್ತೆ ಮತ್ತೆ ಮಾಡುತ್ತಿರಿ ಎಂದು ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ರಾಮ ಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಡಾ.ಬಿ.ಎಸ್.ಶಿವಣ್ಣ ಹೇಳಿದ್ದಾರೆ.
''ಎರಡು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋತು ಸುಣ್ಣವಾಗಿದ್ದ ನಿಮಗೆ ರಾಜಕೀಯವಾಗಿ ಮತ್ತೆ ಮರುಜನ್ಮ ನೀಡಿದ್ದು, ಇದೇ ಸಿದ್ದರಾಮಯ್ಯ ಹಾಗೂ ಆರ್.ಎಲ್.ಜಾಲಪ್ಪ ಎಂಬುದನ್ನು ಮರೆಯಬೇಡಿ,'' ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
''ಸಿದ್ದರಾಮಯ್ಯ ಆಡಳಿತದಲ್ಲಿ ರಾಜ್ಯ ದೇಶದಲ್ಲೇ ಅಭಿವೃದ್ಧಿಯಲ್ಲಿ ಮೊದಲ ಸ್ಥಾನದಲ್ಲಿದೆ. ಬಂಡವಾಳ ಆಕರ್ಷಣೆಯಲ್ಲಿ ಮೊದಲ ಸ್ಥಾನದಲ್ಲಿದೆ. ಅನ್ನಭಾಗ್ಯ ಯೋಜನೆಯಿಂದ ಕೋಟ್ಯಂತರ ಜನರು ಹಸಿವು ಮುಕ್ತರಾಗುವುದಕ್ಕೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ಋುಣಮುಕ್ತರಾಗುವುದಕ್ಕೆ ಸಾಧ್ಯವಾಗಿದೆ. ವಿದ್ಯಾಸಿರಿಯಂಥ ಯೋಜನೆ ನೀಡುವುದಕ್ಕೆ ಸಾಧ್ಯವಾಗಿದೆ. ಹೀಗಾಗಿ ಜೀವನದಲ್ಲಿ ನೀವು ಇಂಥ ತಪ್ಪನ್ನು ಮತ್ತೆ ಮತ್ತೆ ಮಾಡಿ,'' ಎಂದು ವ್ಯಂಗ್ಯವಾಡಿದ್ದಾರೆ.
''ನಿಮ್ಮ ದೃಷ್ಟಿಯಲ್ಲಿ ಹಿಂದುಳಿದ ವರ್ಗದವರು, ಅಬಲರು, ಪರಿಶಿಷ್ಟ ವರ್ಗದವರು ಮಾತ್ರ ನೀಚರೇ? ನಿಮ್ಮ ಕುಟುಂಬ ವರ್ಗದವರು ಮಾತ್ರ ಸತ್ಪುರುಷರೇ ? ಪ್ರತಿ ಬಾರಿಯೂ ಇದೇ ನನ್ನ ಕೊನೆಯ ಚುನಾವಣೆ ಎಂದು ಯಾಕೆ ಬೂಟಾಟಿಕೆ ಪ್ರದರ್ಶನ ಮಾಡುತ್ತೀರಿ ? ಸಮಾಜದ ಎಲ್ಲ ವರ್ಗದವರಿಗೂ ಅಧಿಕಾರ ಸಿಗಬೇಕೆಂದು ನೀವು ಬಾಯಿ ಮಾತಿಗೆ ಮಾತ್ರ ಹೇಳುತ್ತೀರಿ. ವಾಸ್ತವದಲ್ಲಿ ಅಧಿಕಾರ ನಿಮ್ಮ ಕುಟುಂಬ ವರ್ಗದ ಸುತ್ತಲೇ ತಿರುಗುತ್ತಿರಬೇಕೆಂದು ಬಯಸುತ್ತೀರಿ. ದುರ್ಯೋಧನ ಮಾತ್ರ ಒಳ್ಳೆಯವ, ಪಾಂಡವರು, ಕೃಷ್ಣ ಎಲ್ಲರೂ ನೀಚರು ಎಂದು ಭಾವಿಸಿದ್ದ ಧೃತರಾಷ್ಟ್ರನ ರೀತಿ ನೀವು ಉಳಿದವರೆಲ್ಲ ನೀಚರು ಎಂದು ಧೃತರಾಷ್ಟ್ರ ಪ್ರೀತಿ ಮೆರೆಯುತ್ತಿದ್ದೀರಿ,'' ಎಂದು ಆರೋಪಿಸಿದ್ದಾರೆ.
''ರಾಜ್ಯಕ್ಕೆ ಭ್ರಷ್ಟಾಚಾರ ರಹಿತ ಆಡಳಿತ ನೀಡಿರುವ ಸಿದ್ದರಾಮಯ್ಯ ಅವರ ಬಗ್ಗೆ ಇಷ್ಟು ಕೀಳಾಗಿ ಮಾತನಾಡುವ ಮೂಲಕ ಸಮಸ್ತ ಹಿಂದುಳಿದ ವರ್ಗಕ್ಕೆ ಹಾಗೂ ದಮನಿತ ಸಮುದಾಯಕ್ಕೆ ಅಪಮಾನ ಮಾಡಿದ್ದೀರಿ. ಈ ಹಿನ್ನೆಲೆಯಲ್ಲಿ ತಕ್ಷಣ ಕ್ಷಮೆ ಕೇಳಬೇಕು,'' ಎಂದು ಆಗ್ರಹಿಸಿದ್ದಾರೆ.