ಆ್ಯಪ್ನಗರ

ಪ್ರಾದೇಶಿಕ ಪಕ್ಷ ಸಂಘಟಿಸಿದರೆ ಸೋನಿಯಾ ಗಾಂಧಿಗೆ ಸಾಥ್‌: ಎಚ್ ಡಿ ದೇವೇಗೌಡ

ಪ್ರಾದೇಶಿಕ ಪಕ್ಷ ಗಳ ಉಳಿವಿನ ಭರವಸೆ ನೀಡಿರುವ ಸೋನಿಯಾಗಾಂಧಿ ಅವರು ರಾಷ್ಟ್ರದ ಎಲ್ಲಾ ಜಾತ್ಯತೀತ ಶಕ್ತಿಗಳು, ಪ್ರಾದೇಶಿಕ ...

Vijaya Karnataka 25 Aug 2019, 7:24 am
ಹೊಳೆನರಸೀಪುರ (ಹಾಸನ ಜಿಲ್ಲೆ): ಪ್ರಾದೇಶಿಕ ಪಕ್ಷ ಗಳ ಉಳಿವಿನ ಭರವಸೆ ನೀಡಿರುವ ಸೋನಿಯಾ ಗಾಂಧಿ ಅವರು ರಾಷ್ಟ್ರದ ಎಲ್ಲಾ ಜಾತ್ಯತೀತ ಶಕ್ತಿಗಳು, ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸಿದರೆ ನಾವೂ ಸಾಥ್‌ ನೀಡಲಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.
Vijaya Karnataka Web 11


ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ,''ರಾಷ್ಟ್ರ ರಾಜಕಾರಣ ಮಾಡಲು ಬೇರೆ ನಾಯಕರು ದಿಲ್ಲಿಗೆ ಕರೆದರೂ ಹೋಗಿಲ್ಲ. ಕಾಶ್ಮೀರಕ್ಕೆ ರಾಹುಲ್‌ಗಾಂಧಿ ಕರೆದಿದ್ದರು. ಆದರೆ ಹೋಗಲಾಗಿಲ್ಲ. 15 ದಿನಗಳಿಂದ ಪಕ್ಷ ಸಂಘಟನೆಗಾಗಿ ಕಚೇರಿಯಲ್ಲಿ ಇದ್ದೇನೆ,'' ಎಂದರು.

ಅಭಿವೃದ್ಧಿ ಕೆಲಸ ಮಾಡಲಿ: ''ಸರಕಾರ 3 ವರ್ಷ 8 ತಿಂಗಳು ಪೂರೈಸಬಹುದು. ಒಳ್ಳೆಯ ಕೆಲಸ ಮಾಡಿದ್ರೆ ಸಂತೋಷ ಪಡುತ್ತೇವೆ. ಜನರ ಸಮಸ್ಯೆಗೆ ಹೋರಾಡುತ್ತೇವೆ. ಕೇಂದ್ರ ಮತ್ತು ರಾಜ್ಯದಲ್ಲಿ ಎರಡೂ ಕಡೆ ಬಿಜೆಪಿಯದ್ದೇ ಸರಕಾರ ಇರುವ ಕಾರಣ ಸಾಕಷ್ಟು ಅಭಿವೃದ್ಧಿ ಮಾಡಲಿ. ಕೇಂದ್ರದಿಂದ ಸಾಕಷ್ಟು ಹಣ ಬಿಡುಗಡೆ ಮಾಡಿಸಲು ಯಡಿಯೂರಪ್ಪ ಶಕ್ತರು ಎನ್ನುವ ಭರವಸೆ ಇದೆ,'' ಎಂದು ಹೇಳಿದರು.

ಸೋಲಿಗೆ ಧೃತಿಗೆಟ್ಟಿಲ್ಲ: ''ಹಾಸನದಲ್ಲಿ 5 ದಶಕಗಳ ಕಾಲ ಸುದೀರ್ಘ ರಾಜಕಾರಣ ಮಾಡಿದ್ದೇನೆ. ನೀವು ಇಲ್ಲೇ ಚುನಾವಣೆಗೆ ನಿಲ್ಲಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡಿದ್ದರು. ಆದರೆ ಕೆಲವೊಮ್ಮೆ ವಿಧಿ ನಮ್ಮ ಕೈಯಲ್ಲಿ ಇರೋದಿಲ್ಲ. ಮಹಾಭಾರತದಲ್ಲಿ ಧರ್ಮರಾಯ ಮೋಸ ಆಗುವುದೆಂದು ಗೊತ್ತಿದ್ದೂ ಜೂಜಿನಲ್ಲಿ ಸೋತ,'' ಎಂದು ತುಮಕೂರಿನಲ್ಲಿ ಆದ ಸೋಲಿನ ಬಗ್ಗೆ ವಿಶ್ಲೇಷಿಸಿದರು.

''ನಾನು ಪತ್ರಿಕೆಯೊಂದರಲ್ಲಿ ಕೊಟ್ಟ ಹೇಳಿಕೆ ಕುರಿತು ಈಗ ನಾನು ಮಾತನಾಡುವುದಿಲ್ಲ. ಜನರ ಬಳಿಗೆ ಹೋಗೋಣ. ಅವರೇ ಎಲ್ಲವನ್ನೂ ತೀರ್ಮಾನ ಮಾಡ್ತಾರೆ,'' ಎಂದು ವಿಚಾರ ತಳ್ಳಿಹಾಕಿದರು.

''ಶಾಸಕರನ್ನು ಅನರ್ಹ ಮಾಡಿದ್ಯಾರು? ಸುಪ್ರೀಂ ಕೋರ್ಟ್‌ ತೀರ್ಪು ನೀಡುತ್ತದೆ. ಕೇಂದ್ರ ಸರಕಾರ ಕೊಡಿಸುತ್ತದೆ,'' ಎಂದು ದೇವೇಗೌಡ ಆರೋಪಿಸಿದರು.

''ಕಾಶ್ಮೀರ ಸಮಸ್ಯೆ ಪರಿಹರಿಸಲು ಜನರ ವಿಶ್ವಾಸ ಗಳಿಸಿಯೇ 370ರ ವಿಧಿ ರದ್ದುಗೊಳಿಸಬಹುದಿತ್ತು. ಆಗ ಇಷ್ಟು ಟೆನ್ಷನ್‌ ಎದುರಿಸಬೇಕಾಗಿರಲಿಲ್ಲ. ಬಹುತೇಕ ರಾಷ್ಟ್ರಗಳು ಮೋದಿ ನಡೆಯನ್ನು ಒಪ್ಪಿವೆ. ಆದರೆ ಕಾಶ್ಮೀರದಲ್ಲಿ ಈಗಲೂ ಜನಜೀವನ ಸುಗಮವಾಗಿಲ್ಲ,'' ಎಂದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ