ಆ್ಯಪ್ನಗರ

ಶೈಕ್ಷಣಿಕ ಅಸಮಾನತೆಗೆ ಡಿಜಿಟಲ್‌ ಕಲಿಕೆ ಪರಿಹಾರ: ಡಾ. ಅಶ್ವತ್ಥನಾರಾಯಣ

ಡಿಜಿಟಲ್‌ ಕಲಿಕೆಗೆ ಸವಾಲುಗಳಿದ್ದು, ಅದನ್ನು ಪರಿಣಾಮಕಾರಿ ಆಗಿ ಎದುರಿಸುವ ಕೆಲಸವೂ ಆಗುತ್ತಿದೆ. ಇಂಟರ್ನೆಟ್‌ ಸಂಪರ್ಕ ಹಾಗೂ ಮೊಬೈಲ್‌, ಲ್ಯಾಪ್‌ಟಾಪ್‌ನಂಥ ಗ್ಯಾಡ್ಜೆಟ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವೂ ನಡೆದಿದೆ.

Vijaya Karnataka Web 13 Jun 2020, 4:02 pm
ಬೆಂಗಳೂರು: ತಂತ್ರಜ್ಞಾನದ ಮೂಲಕ ಸಮಾಜದಲ್ಲಿ ಎಲ್ಲರನ್ನೂ ತಲುಪಲು ಸಾಧ್ಯವಿರುವುದರಿಂದ ಶೈಕ್ಷಣಿಕ ಅಸಮಾನತೆಗೆ ಡಿಜಿಟಲ್‌ ಕಲಿಕೆ ಪರಿಹಾರವಾಗಿದೆ. ಹಾಗಾಗಿ, ಎಲ್ಲ ಶಿಕ್ಷಣ ಸಂಸ್ಥೆಗಳು ಡಿಜಿಟಲ್‌ ಕಲಿಕೆಗೆ ಒತ್ತು ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.
Vijaya Karnataka Web ಅಶ್ವತ್ಥನಾರಾಯಣ
ಅಶ್ವತ್ಥನಾರಾಯಣ


ಉನ್ನತ ಶಿಕ್ಷಣದ ಡಜಿಟಿಲೀಕರಣ- ಸವಾಲು ಮತ್ತು ಅವಕಾಶಗಳ ಕುರಿತು ಪದ್ಮಶ್ರೀ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಆಯೋಜಿಸಿದ್ದ ವಿಡಿಯೋ ಸಂವಾದ ನಡೆಸಿದರು.

"ಸಮಾಜದ ಯಾವುದೇ ವರ್ಗ, ಸ್ಥಳ, ಜನಾಂಗದ ಭೇದವಿಲ್ಲದೇ ಗುಣಮಟ್ಟದ ಶಿಕ್ಷಣವನ್ನು ಎಲ್ಲರಿಗೂ ತಲುಪಿಸಲು ಇರುವ ಮಾರ್ಗವೇ ಡಿಜಿಟಲ್‌ ಕಲಿಕೆ. ಶೈಕ್ಷಣಿಕ ಅಸಮಾನತೆ ಹೋಗಲಾಡಿಸಲು ಇದು ಪರಿಹಾರವೂ ಆಗಿದ್ದು, ಕುಗ್ರಾಮದಲ್ಲಿರುವ ವಿದ್ಯಾರ್ಥಿಗಳು ಸಹ ಡಿಜಿಟಲ್‌ ವ್ಯವಸ್ಥೆ ಮೂಲಕ ನುರಿತ ಉಪನ್ಯಾಸಕರ ಪಾಠ ಕೇಳಲು ಅವಕಾಶ ಒದಗಿದೆ. ಜತೆಗೆ, ಪಠ್ಯ ವಿಷಯಗಳ ಲಿಖಿತ ಮಾಹಿತಿಯೂ ಅವರ ಕೈ ಸೇರುತ್ತಿರುವುದಿಂದ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಲಭ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ಸಂಸ್ಥೆಗಳು ಸಮಯ ವ್ಯರ್ಥ ಮಾಡದೆ ಡಿಜಿಟಲ್‌ ಶಿಕ್ಷಣಕ್ಕೆ ಒತ್ತು ನೀಡಬೇಕು" ಎಂದು ಡಿಸಿಎಂ ಹೇಳಿದರು.

"ಡಿಜಿಟಲ್‌ ಕಲಿಕೆಗೆ ಸವಾಲುಗಳಿದ್ದು, ಅದನ್ನು ಪರಿಣಾಮಕಾರಿ ಆಗಿ ಎದುರಿಸುವ ಕೆಲಸವೂ ಆಗುತ್ತಿದೆ. ಇಂಟರ್ನೆಟ್‌ ಸಂಪರ್ಕ ಹಾಗೂ ಮೊಬೈಲ್‌, ಲ್ಯಾಪ್‌ಟಾಪ್‌ನಂಥ ಗ್ಯಾಡ್ಜೆಟ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವೂ ನಡೆದಿದೆ. ಕಾರ್ಪೊರೆಟ್‌ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ಅಥವಾ ಸರ್ಕಾರದ ಹಣ ಬಳಸಿಕೊಂಡು ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವ ಬಗ್ಗೆ ಪರಿಶೀಲಿಸಲಾಗುವುದು. ಎಲ್ಲೆಡೆ ತಡೆ ರಹಿತ ಗುಣಮಟ್ಟದ 4ಜಿ ನೆಟ್‌ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ" ಎಂದರು.

"ವಿದ್ಯಾರ್ಥಿಗಳ ಕಲಿಕೆಗೆ ತೊಂದರೆ ಆಗದಂತೆ ಪಾಠ ಪ್ರವಚನಗಳನ್ನು ವೀಡಿಯೋ ಮಾಡಿ ಯೂಟ್ಯೂಬ್ ಚಾನಲ್‌ಗಳಾದ 'ವಿಜಯೀ ಭವ', 'ಜ್ಞಾನ ನಿಧಿ' ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ. 'ಸ್ವಯಂ' ಎಂಬ ಆನ್‌ಲೈನ್ ವೇದಿಕೆ ಮೂಲಕ ಯುಜಿಸಿ ಪಾಠ ಮಾಡಿದೆ. ಕರ್ನಾಟಕ ಮುಕ್ತ ವಿವಿಯಿಂದಲೂ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್ ಮತ್ತು ಟೆಲಿಗ್ರಾಂ ಮೂಲಕ ವಿದ್ಯಾರ್ಥಿಗಳಿಗೆ ಇ-ನೋಟ್ಸ್, ಪಿಪಿಟಿ ತಲುಪಿಸಲಾಗಿದೆ" ಎಂದು ಮಾಹಿತಿ ನೀಡಿದರು.

ನೂತನ ಶಿಕ್ಷಣ ನೀತಿಯಡಿ ಡಿಜಿಟಲ್‌ ಕಲಿಕೆಗೆ ಒತ್ತು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ನೂತನ ಶಿಕ್ಷಣ ನೀತಿಯಡಿ ಹೊಸ ಸಂಸ್ಥೆಗಳ ಸ್ಥಾಪನೆಗೆ ಮಾತ್ರವಲ್ಲದೆ, ಅಸ್ತಿತ್ವದಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯ, ಸಂಸ್ಥೆಗಳ ಶ್ರೇಯಾಂಕ ಸುಧಾರಣೆ ಹಾಗೂ ಶಿಕ್ಷಣದ ಡಿಜಿಟಲೀಕರಣಗೊಳಿಸಲು ಅನುದಾನ ನೀಡಲಾಗುತ್ತದೆ. ಕೇಂದ್ರದ ಆದೇಶವನ್ನು ರಾಜ್ಯದಲ್ಲೂ ಅನುಷ್ಠಾನಗೊಳಿಸುವ ಮೂಲಕ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸಿ, ಆನ್‌ಲೈನ್‌ ಕಲಿಕೆ ಸರಳಗೊಳಿಸಲಾಗುವುದು" ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ