ಆ್ಯಪ್ನಗರ

ಮೈತ್ರಿ ಅನಿವಾರ್ಯ, ಬಾಯಿ ಮುಚ್ಚಿಕೊಂಡಿರಿ: ನಾಯಕರಿಗೆ ದಿನೇಶ್‌ ತಾಕೀತು

ಹೈಕಮಾಂಡ್‌ ಆದೇಶದಂತೆ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಅನಿವಾರ್ಯ...

Vijaya Karnataka 26 Jul 2018, 5:00 am
Vijaya Karnataka Web dinesh gundu rao
ಬೆಂಗಳೂರು: ಹೈಕಮಾಂಡ್‌ ಆದೇಶದಂತೆ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಅನಿವಾರ್ಯ. ಇದರ ವಿರುದ್ಧ ಯಾರೂ ಮಾತನಾಡದೆ ಚುನಾವಣೆ ಸಿದ್ಧತೆಗೆ ತೊಡಗಿಕೊಳ್ಳಬೇಕು ಎಂದು ಪಕ್ಷದ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತೊಮ್ಮೆ ತಾಕೀತು ಮಾಡಿದ್ದಾರೆ.

ಮೈತ್ರಿ ಬಗ್ಗೆ ಹೈಕಮಾಂಡ್‌ ಸೂಚನೆಯ ಅರಿವಿದ್ದರೂ ಗೊಂದಲಕಾರಿ ಹೇಳಿಕೆ ಮುಂದುವರಿದ ಹಿನ್ನೆಲೆಯಲ್ಲಿ ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ಮುಖ್ಯಸ್ಥರು ಹಾಗೂ ಜಿಲ್ಲಾಧ್ಯಕ್ಷರ ಸಭೆಯನ್ನು ಬುಧವಾರ ನಡೆಸಿದ ಗುಂಡೂರಾವ್‌, ಪುನಃ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

''ಸಮ್ಮಿಶ್ರ ಸರಕಾರವೆಂದ ಮೇಲೆ ಸಣ್ಣಪುಟ್ಟ ಗೊಂದಲ ಸಹಜ. ಅದನ್ನು ಸಮನ್ವಯ ಸಮತಿ ಸಭೆಯಲ್ಲಿ ಬಗೆಹರಿಸಿಕೊಳ್ಳಲಾಗುವುದು. ನಿಗಮ ಮಂಡಳಿ ಸೇರಿದಂತೆ ಸರಕಾರದ ನಾನಾ ಸ್ತರದ ಮುಖಂಡರು, ಕಾರ್ಯಕರ್ತರಿಗೂ ಸ್ಥಾನಮಾನ ಕೊಡಿಸಲಾಗುವುದು,''ಎಂದಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ. ಲಕ್ಷ್ಮೇನಾರಾಯಣ, ಸಚಿವ ಪುಟ್ಟರಂಗಶೆಟ್ಟಿ ಪಾಲ್ಗೊಂಡಿದ್ದರು.

ಮೋದಿ, ಶಾ ಎದುರಿಸುವ ಶಕ್ತಿ ರಾಹುಲ್‌ಗೆ ಮಾತ್ರ ಇದೆ

ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರನ್ನು ಎದುರಿಸುವ ಶಕ್ತಿ ರಾಹುಲ್‌ ಗಾಂಧಿ ಅವರಿಗೆ ಮಾತ್ರ ಇದೆ. ಈ ನಡುವೆಯೂ ಬಿಜೆಪಿಯರು ಅವರನ್ನು ಗೇಲಿ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಬೇಸರ ವ್ಯಕ್ತಪಡಿಸಿದ್ದಾರೆ.

''ವಿದೇಶ ಪ್ರವಾಸ ಹೊರತು ಪಡಿಸಿದರೆ ಪ್ರಧಾನಿ ಮೋದಿ ಅವರದ್ದು ಯಾವ ಸಾಧನೆಯೂ ಇಲ್ಲ. ಮನ್‌ಕಿ ಬಾತ್‌ ಕೂಡ ಒಂದು ಸಾಧನೆಯೆಂದುಕೊಂಡಿದ್ದಾರೆ. ದಲಿತರ ಮೇಲಿನ ದೌರ್ಜನ್ಯವನ್ನೂ ಸಮರ್ಥಿಸಿಕೊಳ್ಳುತ್ತಾರೆ. ಪ್ರತಿಪಕ್ಷದ ನಾಯಕರ ಮೇಲೆ ಐಟಿ ದಾಳಿ ಮಾಡಿಸುತ್ತಾರೆ. ಇಂಥ ದ್ವೇಷದ ರಾಜಕಾರಣವನ್ನು ದೇಶದ ಇತಿಹಾಸದಲ್ಲಿ ಯಾರೂ ಮಾಡಿರಲಿಲ್ಲ,'' ಎಂದು ಆರೋಪಿಸಿದ್ದಾರೆ.

''ವರಿಷ್ಠರ ತೀರ್ಮಾನದಂತೆ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲಾಗುತ್ತಿದೆ,''ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ