ಆ್ಯಪ್ನಗರ

ಬೃಂದಾವನಕ್ಕೆ ಡಿಸ್ನಿಲ್ಯಾಂಡ್‌ ಮಾದರಿ ಲುಕ್‌, 1,200 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ

ಕೆಆರ್‌ಎಸ್‌ ಉದ್ಯಾನ 'ಬೃಂದಾವನ'ವನ್ನು 1,200 ಕೋಟಿ ರೂ. ವೆಚ್ಚದಲ್ಲಿ ಅಮೆರಿಕದ ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಪ್ರಸ್ತಾವನೆ ಸಿದ್ಧಪಡಿಸಿದೆ.

Vijaya Karnataka 15 Nov 2018, 8:04 am
ಬೆಂಗಳೂರು: ಕೆಆರ್‌ಎಸ್‌ ಉದ್ಯಾನ 'ಬೃಂದಾವನ'ವನ್ನು 1,200 ಕೋಟಿ ರೂ. ವೆಚ್ಚದಲ್ಲಿ ಅಮೆರಿಕದ ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಪ್ರಸ್ತಾವನೆ ಸಿದ್ಧಪಡಿಸಿದೆ.
Vijaya Karnataka Web disney


ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಜಾಗತಿಕ ಮಟ್ಟದ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಈ ಉದ್ಯಾನದಲ್ಲಿ 125 ಅಡಿ ಎತ್ತರದ ಕಾವೇರಿ ಮಾತೆಯ ಪ್ರತಿಮೆ, 360 ಅಡಿ ಎತ್ತರದ ಮ್ಯೂಸಿಯಂ ಸಮುಚ್ಛಯ, ಗೋಪುರಯುಕ್ತ ಗಾಜಿನ ಮನೆ, ವೀಕ್ಷ ಣೆ ಗೋಪುರ, ಬ್ಯಾಂಡ್‌ ಸ್ಟ್ಯಾಂಡ್‌, ಒಳಾಂಗಣ ಕ್ರೀಡಾಂಗಣ ಮತ್ತಿತರ ಐತಿಹ್ಯ ಸಾರುವ ಕಟ್ಟಡಗಳನ್ನು ಈ ಡಿಸ್ನಿಲ್ಯಾಂಡ್‌ ಮಾದರಿ ಹೊಂದಿರಲಿದೆ.

ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಯೋಜನೆ ರೂಪುರೇಷೆ ಬಗ್ಗೆ ಸಮಗ್ರ ಚರ್ಚೆ ನಡೆಯಿತು. ಜೈಪುರ ಮೂಲದ ಆರ್ಕಿಟೆಕ್ಟ್ ಕನ್ಸಲ್ಟೆಂಟ್‌ ಸಂಸ್ಥೆ ಯೋಜನೆ ಕುರಿತು ಪ್ರಾತ್ಯಕ್ಷಿಕೆ ನೀಡಿತು.

-ವಿಶ್ವಮಟ್ಟದ ಸಂಸ್ಥೆಗೆ ಗುತ್ತಿಗೆ-

''ಯೋಜನೆಗೆ 1,200 ಕೋಟಿ ರೂ. ಅಂದಾಜು ಮಾಡಲಾಗಿದ್ದು, ಜಾಗತಿಕ ಟೆಂಡರ್‌ ಮೂಲಕ ವಿಶ್ವಮಟ್ಟದ ಸಂಸ್ಥೆಗೆ ಯೋಜನೆ ಗುತ್ತಿಗೆ ವಹಿಸಿಕೊಡಲಾಗುವುದು. ಜಾಗ ನೀಡುವುದರ ಹೊರತಾಗಿ ಯೋಜನೆಗೆ ಸರಕಾರ ಯಾವುದೇ ವೆಚ್ಚ ಮಾಡುವುದಿಲ್ಲ.ಉತ್ತಮ ಆರ್ಥಿಕ ಹಿನ್ನೆಲೆ ಹೊಂದಿರುವ ಮತ್ತು ಕಲಾತ್ಮಕ ವಿನ್ಯಾಸದಲ್ಲಿ ಜಾಗತಿಕ ಮಟ್ಟದ ನೈಪುಣ್ಯತೆ ಇರುವ ಸಂಸ್ಥೆಗಳಿಗೆ ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶವಿರುತ್ತದೆ,'' ಎಂದು ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

''ಉದ್ದೇಶಿತ ಮಾದರಿಯಂತೆ ಸದ್ಯದ ದೋಣಿ ವಿಹಾರ ಸರೋವರದ ಪಕ್ಕದಲ್ಲಿ ಮತ್ತೊಂದು ಸರೋವರ ನಿರ್ಮಿಸಿ ಅದರ ಮಧ್ಯ ಭಾಗದಲ್ಲಿ 360 ಅಡಿ ಎತ್ತರದ ಮ್ಯೂಸಿಯಂ ಸಮುಚ್ಛಯ ನಿರ್ಮಿಸಲಾಗುವುದು. ಈ ಸಮುಚ್ಛಯದ ಮೇಲ್ಭಾಗದಲ್ಲಿ ಕಾವೇರಿ ಮಾತೆಯ 125 ಅಡಿ ಎತ್ತರದ ಪ್ರತಿಮೆ ಇರಲಿದೆ. ಕಾವೇರಿ ಮಾತೆ ಪದತಲದಲ್ಲಿ ಮ್ಯೂಸಿಯಂ ಕಟ್ಟಡ ಇರಲಿದೆ. ಅದೇ ರೀತಿ ಗೋಪುರವುಳ್ಳ ಗಾಜಿನಮನೆ ನಿರ್ಮಾಣವಾಗಲಿದ್ದು, ಈ ಎರಡೂ ಕಟ್ಟಡಗಳಿಂದ ಅಣೆಕಟ್ಟೆಯ ವಿಹಂಗಮ ನೋಟ ಗೋಚರವಾಗಲಿದೆ. ಮ್ಯೂಸಿಯಂನಲ್ಲಿ ಕೆಆರ್‌ಎಸ್‌, ಮೈಸೂರು, ಕರ್ನಾಟಕದ ಐತಿಹ್ಯ ಸಾರುವ ಕಲಾತ್ಮಕ, ಪ್ರಾಚ್ಯವಸ್ತುಗಳು ಇರಲಿವೆ,'' ಎಂದು ಅವರು ತಿಳಿಸಿದರು.

- ವಾರ್ಷಿಕ 300 ಕೋಟಿ ವಹಿವಾಟು ನಿರೀಕ್ಷೆ-

''ಮೈಸೂರು ಹಾಗೂ ಮಂಡ್ಯದ ಕೆಆರ್‌ಎಸ್‌ ಈಗಾಗಲೇ ವಿಶ್ವ ಪ್ರಸಿದ್ಧವಾಗಿವೆ. ಇವುಗಳನ್ನು ವಿಶ್ವದಲ್ಲೇ ಅಗ್ರಗಣ್ಯ ಪ್ರವಾಸಿ ಆಕರ್ಷಣೆ ತಾಣವಾಗಿ ಪರಿವರ್ತಿಸುವುದು ಯೋಜನೆಯ ಉದ್ದೇಶ. ಪ್ರಸ್ತುತ ಬೃಂದಾವನದಿಂದ ರಾಜ್ಯ ಸರಕಾರಕ್ಕೆ ಬರುತ್ತಿರುವ ವಾರ್ಷಿಕ ಆದಾಯ ಕೇವಲ ಆರು ಕೋಟಿ ರುಪಾಯಿ. ಹೊಸ ಯೋಜನೆಯಂತೆ ವಾರ್ಷಿಕ 300 ಕೋಟಿ ರೂ.ಗಳಿಗೂ ಅಧಿಕ ವಹಿವಾಟು ನಡೆಯಲಿದ್ದು, ಸರಕಾರಕ್ಕೆ 30 ಕೋಟಿ ರೂ. ವರಮಾನ ಬರಲಿದೆ ಎಂದು ಅಂದಾಜು ಮಾಡಲಾಗಿದೆ'' ಎಂದು ಸಚಿವ ಡಿ. ಕೆ. ಶಿವಕುಮಾರ್‌ ಹೇಳಿದರು.

''ಎರಡು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಯೋಜನಾ ವರದಿ ಹಾಗೂ ಒಪ್ಪಂದ ಕುರಿತು ಇದೇ ತಿಂಗಳು 20 ರಂದು ಕಾವೇರಿ ನೀರಾವರಿ ನಿಗಮದ ಅಂದಾಜು ಪರಿಶೀಲನಾ ಸಮಿತಿ ಸಭೆ ಅಂತಿಮಗೊಳಿಸಲಿದೆ. ಬಳಿಕ ಕಾವೇರಿ ನೀರಾವರಿ ನಿಗಮದ ಆಡಳಿತ ಮಂಡಳಿ ಸಭೆ ಹಾಗೂ ಸರಕಾರದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಸಮಗ್ರ ಪರಿಶೀಲನೆ ನಡೆಯಲಿದೆ. ಸಚಿವ ಸಂಪುಟದ ಅಂತಿಮ ಅನುಮೋದನೆಯೊಂದಿಗೆ ಜಾಗತಿಕ ಟೆಂಡರ್‌ ಕರೆಯಲಾಗುವುದು'' ಎಂದರು.

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‌ಸಿಂಗ್‌, ಪ್ರವಾಸೋದ್ಯಮ ಕಾರ್ಯದರ್ಶಿ ಅನಿಲ್‌ ಕುಮಾರ್‌, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಚ್‌.ಎಲ್‌.ಪ್ರಸನ್ನ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ