ಆ್ಯಪ್ನಗರ

ನಿಮ್ಮಿಂದ ರಾಜಕೀಯ ಭವಿಷ್ಯ ಹಾಳಾಯಿತು: ಯಡಿಯೂರಪ್ಪ ವಿರುದ್ಧ ತಿರುಗಿಬಿದ್ದ ಅನರ್ಹ ಶಾಸಕರು

-ಉಪ ಚುನಾವಣೆ ಬರಲ್ಲವೆಂದು ಹೇಳಿದ್ರಿ, ಈಗ ದಿಢೀರನೇ ಏಕೆ ಘೋಷಣೆ, -ನಂಬಿಕೆಗೆ ಮೋಸ ಮಾಡಿದ್ರಿ, ನಮ್ಮಿಂದಲೇ ನೀವು ಸಿಎಂ ಆಗಿದ್ದೆಂದು ಅನರ್ಹ ಶಾಸಕರು ಮುಖ್ಯಮಂತ್ರಿ ಕೂಗಾಡಿದ್ದಾರೆ.

Vijaya Karnataka Web 21 Sep 2019, 9:10 pm
ಬೆಂಗಳೂರು: ಉಪ ಚುನಾವಣೆ ಘೋಷಣೆಯಿಂದಾಗಿ ತಮ್ಮ ರಾಜಕೀಯ ಭವಿಷ್ಯ ತೂಗೂಯ್ಯಾಲೆಯಲ್ಲಿಸಿಲುಕಿರುವುದರಿಂದ ತೀವ್ರ ಆತಂಕಕ್ಕೆ ಒಳಗಾಗಿರುವ ಅನರ್ಹ ಶಾಸಕರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ತಮ್ಮ ಕೋಪತಾಪ ಪ್ರದರ್ಶಿಸಿದ್ದಾರೆ. ಅನಿರೀಕ್ಷಿತವಾಗಿ ಘೋಷಣೆಯಾದ ಚುನಾವಣೆಯನ್ನು ಒಪ್ಪಿಕೊಳ್ಳಲು ಆಗದ ಮನಸ್ಥಿತಿಯಲ್ಲಿರುವ ಅನರ್ಹರು ಮುಖ್ಯಮಂತ್ರಿ ಹಾಗೂ ಅವರ ಜತೆಯಲ್ಲಿದ್ದ ಸಚಿವರ ವಿರುದ್ಧ ಮುಗಿಬಿದ್ದಿದ್ದಾರೆ.
Vijaya Karnataka Web ಅನರ್ಹ ಶಾಸಕರು
ಅನರ್ಹ ಶಾಸಕರು


ಚುನಾವಣೆ ಘೋಷಣೆಯಾಗುತ್ತಿದ್ದಂತೆ ಸಿಎಂ ಯಡಿಯೂರಪ್ಪ ಮಲ್ಲೇಶ್ವರದ ಅರಣ್ಯಭವನದಲ್ಲಿರುವ ಅತಿಥಿಗೃಹಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರ ಜತೆ ತೆರಳಿದರು. ಅಲ್ಲಿಗೆ ಎಸ್‌.ಟಿ.ಸೋಮಶೇಖರ್‌, ಮುನಿಯತ್ನ, ಬಿ.ಸಿ.ಪಾಟೀಲ್‌, ಕೆ.ಆರ್‌.ಪೇಟೆ ನಾರಾಯಣಗೌಡ, ರೋಷನ್‌ ಬೇಗ್‌, ಶಿವರಾಂ ಹೆಬ್ಬಾರ್‌, ಆರ್‌.ಶಂಕರ್‌, ಡಾ.ಸುಧಾಕರ್‌ ಆಗಮಿಸಿದರು. ಚುನಾವಣೆ ಘೋಷಣೆಯ ಶಾಕ್‌ಗೆ ಒಳಗಾಗಿದ್ದ ಅನರ್ಹರು ಏಕಾಏಕಿ ಮುಖ್ಯಮಂತ್ರಿ ವಿರುದ್ಧ ತಿರುಗಿಬಿದ್ದರು. ''ನೀವು ಕೊಟ್ಟಿದ್ದೆ ಒಂದು ಮಾತು, ಈಗ ಆಗುತ್ತಿರುವುದೇ ಇನ್ನೊಂದು ರೀತಿ, ನಮ್ಮ ರಾಜಕೀಯ ಭವಿಷ್ಯವನ್ನು ಪಣಕ್ಕಿಟ್ಟು ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದೆವು. ಕೋರ್ಟ್‌ನಲ್ಲಿಪ್ರಕರಣ ಇತ್ಯರ್ಥವಾಗುವ ತನಕ ಯಾವುದೇ ಕಾರಣಕ್ಕೂ ಆಯೋಗ ಚುನಾವಣೆ ಘೋಷಣೆ ಆಗುವುದಿಲ್ಲವೆಂದು ಭರವಸೆ ಕೊಟ್ಟಿದ್ದೀರಿ, ಈಗ ಏಕೆ ಈ ರೀತಿ ಆಗಿದೆ,'' ಎಂದು ಒಂದೇ ಸಮನೆ ಪ್ರಶ್ನಿಸತೊಡಗಿದರೆಂದು ತಿಳಿದುಬಂದಿದೆ.

''ನಮಗೆ ವಿಷ ಕೊಡಿ, ನಮ್ಮ ಬಾಯಿಗೂ ಮಣ್ಣು ಹಾಕಿ, ನಿಮ್ಮಿಂದ ನಮಗೆ ಮೋಸ ಆಗಿದೆ. ನಾವು ಚುನಾವಣೆಗೆ ಸ್ಪರ್ಧಿಸಲು ಅವಕಾಶವಾಗುವಂತೆ ಸುಪ್ರೀಂಕೋರ್ಟ್‌ನಲ್ಲಿಸೋಮವಾರ ಸ್ಪೀಕರ್‌ ಆದೇಶಕ್ಕೆ ತಡೆ ಕೊಡಿಸಿ, ಒಂದು ವೇಳೆ ನಾವು ಚುನಾವಣೆಗೆ ಸ್ಪರ್ಧಿಸಲು ಆಗದಿದ್ದರೆ ನಮ್ಮ ರಾಜಕೀಯ ಭವಿಷ್ಯ ಮುಗಿದಂತೆ. ಇಂದು ನೀವು ಮುಖ್ಯಮಂತ್ರಿ ಆಗಿ ಕುಳಿತುಕೊಂಡಿರುವುದು ನಮ್ಮಿಂದಲೇ ಎಂಬುದನ್ನು ಮರೆಯಬೇಡಿ, ನಾವು ಶಾಸಕ ಸ್ಥಾನ ತ್ಯಾಗಕ್ಕೆ ಮುಂದಾದಾಗ ಅನೇಕರು ಬುದ್ಧಿ ಮಾತು ಹೇಳಿದರು, ಅವರ ಮಾತು ಕೇಳಿದರೆ ಈ ರೀತಿ ಆಗುತ್ತಿರಲಿಲ್ಲ. ಇವತ್ತು ನಮ್ಮನ್ನು ನಮ್ಮ ಮನೆಯವರು ಗೌರವಿಸುವ ಸ್ಥಿತಿಯಲ್ಲಿಇಲ್ಲ, ಪಕ್ಷದ ಕಾರ್ಯಕರ್ತರಂತು ಕೇಳುತ್ತಿಲ್ಲ, ಇಂಥ ಸ್ಥಿತಿಯಲ್ಲಿಹೇಗೆ ಚುನಾವಣೆಗೆ ಹೋಗುವುದು,'' ಎಂದು ಸಿಎಂ ವಿರುದ್ಧ ಹರಿಹಾಯ್ದರು ಎಂದು ಮೂಲಗಳು ತಿಳಿಸಿವೆ.

ಕೊಠಡಿಯಲ್ಲಿಒಂದು ರೀತಿ ಗಲಾಟೆ ಜೋರಾಗಿದ್ದರೂ ಸಿಎಂ ಯಡಿಯೂರಪ್ಪ ಮಾತ್ರ ಮೌನಕ್ಕೆ ಶರಣಾಗಿದ್ದರು, ಉಳಿದ ಸಚಿವರು ಅನರ್ಹರನ್ನು ಸಮಾಧಾನಪಡಿಸಲು ಯತ್ನಿಸಿದರೂ ಅವರಾರ‍ಯರು ಅವರ ಮಾತು ಕೇಳುವ ಸ್ಥಿತಿಯಲ್ಲಿಇರಲಿಲ್ಲ. ಅಂತಿಮವಾಗಿ ಮೌನ ಮುರಿದ ಯಡಿಯೂರಪ್ಪ ''ನಿಮಗೆ ಮಾತು ಕೊಟ್ಟಂತೆ ನಡೆದುಕೊಳ್ಳುತ್ತೇನೆ, ಆ ಮಾತನ್ನು ಖಂಡಿತವಾಗಿಯೂ ಉಳಿಸಿಕೊಳ್ಳುವೆ. ಯಾವತ್ತೂ ಯಾರಿಗೂ ಕೊಟ್ಟ ಮಾತಿಗೆ ದ್ರೋಹ ಬಗೆದಿಲ್ಲ. ಇದರಲ್ಲಿಯಾವುದೇ ಅನುಮಾನ ಬೇಡ. ಸೋಮವಾರ ಕೋರ್ಟ್‌ನಲ್ಲಿಅರ್ಜಿ ವಿಚಾರಣೆಗೆ ಬರಲಿದೆ, ಅವತ್ತು ಏನು ತೀರ್ಪು ಬರುತ್ತೋ ನೋಡೋಣ. ಸಮರ್ಥ ವಾದ ಮಂಡನೆಗೆ ಎಲ್ಲಾಸಿದ್ಧತೆ ಮಾಡಲಾಗಿದೆ'' ಎಂದು ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ. ಅನರ್ಹರ ಆಕ್ರೋಶ ಮುಂದುವರಿದಾಗ, ''ನಾನು ನಿಮ್ಮೊಂದಿಗೆ ದಿಲ್ಲಿಗೆ ಬರುವೆ, ವಕೀಲರೊಂದಿಗೆ ಚರ್ಚಿಸೋಣ'' ಎಂದು ಸಮಾಧಾನ ಪಡಿಸಿದರು. ಬಳಿಕ ಸಿಎಂ ಯಡಿಯೂರಪ್ಪ ಹಾಗೂ ಐದಾರು ಮಂದಿ ಅನರ್ಹರು ದಿಲ್ಲಿಗೆ ತೆರಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ