ಆ್ಯಪ್ನಗರ

ಸಿದ್ದು ರಣತಂತ್ರ: ಕೆಪಿಸಿಸಿ ಬರ್ಖಾಸ್ತಿನಿಂದ ಕಾಂಗ್ರೆಸ್ ಹಿರಿಯ ಮುಖಂಡರಿಗೆ ಶಾಕ್

ಸಿದ್ದರಾಮಯ್ಯ-ರಾಹುಲ್ ಭೇಟಿ ಬೆನ್ನಿಗೇ ಕೆಪಿಸಿಸಿ ಟೀಮ್ ಬರ್ಖಾಸ್ತು. ಅಧ್ಯಕ್ಷ, ಕಾರ್ಯಾಧ್ಯಕ್ಷ ಬಿಟ್ಟು ಎಲ್ಲರೂ ಮನೆಗೆ, ಹಿರಿಯ ನಾಯಕರಿಗೆ ಶಾಕ್

Vijaya Karnataka 20 Jun 2019, 11:41 am
ಬೆಂಗಳೂರು: ಲೋಕಸಭೆ ಚುನಾವಣೆಯ ಶೋಚನೀಯ ಸೋಲಿನಿಂದ ಎಚ್ಚೆತ್ತುಕೊಂಡಿರುವ ಎಐಸಿಸಿ, ರಾಜ್ಯ ಕಾಂಗ್ರೆಸ್ ಘಟಕಕ್ಕೆ ಮೇಜರ್ ಸರ್ಜರಿ ಮಾಡುವತ್ತ ಮೊದಲ ಹೆಜ್ಜೆಯಿಟ್ಟಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರನ್ನು ಹೊರತುಪಡಿಸಿ ಇತರ ಎಲ್ಲ್ಲಾ ಪದಾಕಾರಿಗಳ ತಂಡವನ್ನು ಬರಖಾಸ್ತುಗೊಳಿಸಲಾಗಿದೆ!
Vijaya Karnataka Web BNG-1906-2-2-KCV


ಬುಧವಾರ ಮಧ್ಯಾಹ್ನ ಹೊರಬಿದ್ದ ಈ ದಿಢೀರ್ ಆದೇಶಕ್ಕೆ ಕಳೆದ ಮೂರು ದಿನಗಳಿಂದ ದಿಲ್ಲಿಯಲ್ಲಿ ಠಿಕಾಣಿ ಹೂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಸೂತ್ರಧಾರರು ಎಂದು ಹೇಳಲಾಗಿದೆ. ಮಂಗಳವಾರವಷ್ಟೇ ತಮ್ಮ ಟೀಕಾಕಾರ ರೋಷನ್ ಬೇಗ್‌ರನ್ನು ಪಕ್ಷದಿಂದ ಅಮಾನತುಗೊಳಿಸುವಲ್ಲಿ ಸಫಲರಾದ ಸಿದ್ದರಾಮಯ್ಯ ಬುಧವಾರ ಮತ್ತೊಂದು ಶಾಕ್ ನೀಡಿದ್ದಾರೆ.

ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿ ದಿನೇಶ್‌ ಗುಂಡೂರಾವ್‌ ಹಾಗೂ ಕಾರ್ಯಾಧ್ಯಕ್ಷರಾಗಿ ಈಶ್ವರ ಖಂಡ್ರೆ ಸದ್ಯಕ್ಕೆ ಮುಂದುವರಿಯಲಿದ್ದಾರೆ. ಪಕ್ಷದ ಪುನಶ್ಚೇತನದ ದೃಷ್ಟಿಯಿಂದ ಹೊಸ ಪದಾಧಿಕಾರಿಗಳ ತಂಡ ಶೀಘ್ರದಲ್ಲೆ ರಚನೆಯಾಗಲಿದೆ.

ಜಿ. ಪರಮೇಶ್ವರ್‌ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಹೊಸದಾಗಿ ಪದಾಧಿಕಾರಿಗಳ ತಂಡ ರಚಿಸಿಕೊಂಡಿದ್ದರು. 2013ರ ಚುನಾವಣೆ ಸಿದ್ಧತೆ ವೇಳೆ ಈ ಟೀಮ್‌ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿತ್ತು. ಆಗ ನೂರರ ಆಸುಪಾಸಿನಲ್ಲಿ ಪದಾಧಿಕಾರಿಗಳ ಸಂಖ್ಯೆಯಿತ್ತು. ಬಳಿಕ 2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಎಲ್ಲರನ್ನೂ ತೃಪ್ತಿ ಪಡಿಸುವ ಸೂತ್ರದೊಂದಿಗೆ ಪ್ರಭಾವಿ ನಾಯಕರ ಶಿಫಾರಸು ಪತ್ರ ಕೊಂಡು ಹೋದವರಿಗೆಲ್ಲ ಪದಾಧಿಕಾರಿ ಸ್ಥಾನ ನೀಡಲಾಗಿತ್ತು.

ಲೋಕಸಭೆ ಚುನಾವಣೆಯಲ್ಲೂ ಇದೇ ಪರಿಸ್ಥಿತಿ ಮುಂದುವರಿದು ಪ್ರದೇಶ ಕಾಂಗ್ರೆಸ್‌ನ ಪದಾಧಿಕಾರಿಗಳ ಸಂಖ್ಯೆ ಮುನ್ನೂರರ ಗಡಿಗೆ ಬಂದು ತಲುಪಿತ್ತು. ಇವರಲ್ಲಿ ಹೆಚ್ಚಿನವರು ವಿಸಿಟಿಂಗ್‌ ಕಾರ್ಡ್‌, ಲೆಟರ್‌ ಹೆಡ್‌ಗೆ ಸೀಮಿತರಾಗಿ ಪಕ್ಷದ ಕೆಲಸವನ್ನೇ ಮರೆತಿದ್ದರು. ಜಿಲ್ಲೆ, ಬ್ಲಾಕ್‌ ಕಾಂಗ್ರೆಸ್‌ ಹಾಗೂ ಕ್ಷೇತ್ರ ಉಸ್ತುವಾರಿಗೆ ನಿಯೋಜನೆಗೊಂಡವರು ಅತ್ತ ತಲೆಹಾಕಿಯೂ ಮಲಗಲಿಲ್ಲ. ಜೆಡಿಎಸ್‌ನೊಂದಿಗೆ ಅನಿವಾರ್ಯದ ಮೈತ್ರಿ ಇರುವುದನ್ನು ಕಾರ್ಯಕರ್ತರಿಗೆ ಮನದಟ್ಟು ಮಾಡಿಕೊಡುವ ಬದ್ಧತೆ ತೋರಲಿಲ್ಲ. ಹಾಗಾಗಿ ಪಾರ್ಲಿಮೆಂಟ್‌ ಎಲೆಕ್ಷನ್‌ನಲ್ಲಿ ಪಕ್ಷ ಹೀನಾಯವಾಗಿ ನೆಲಕಚ್ಚುವಂತಾಯಿತು ಎಂಬ ಆಪಾದನೆ ಕೇಳಿ ಬಂದಿತ್ತು.

ಈ ಸೂಕ್ಷ್ಮ ಅರಿತ ವರಿಷ್ಠರು ಒಂದೇ ಏಟಿಗೆ ಎಲ್ಲ ಪದಾಧಿಕಾರಿಗಳನ್ನೂ ಮನೆಗೆ ಕಳುಹಿಸಿದ್ದಾರೆ. ಈ ಹೊಡೆತಕ್ಕೆ ಸಿಲುಕಿರುವ ಕೆಪಿಸಿಸಿಯ 19 ಉಪಾಧ್ಯಕ್ಷರು, 90 ಪ್ರಧಾನ ಕಾರ್ಯದರ್ಶಿಗಳು, 181 ಕಾರ್ಯದರ್ಶಿಗಳು ಹಾಗೂ ಒಬ್ಬರು ಖಜಾಂಚಿ ಸ್ಥಾನ ಕಳೆದುಕೊಂಡಂತಾಗಿದೆ. ಹೈಕಮಾಂಡ್‌ ಇಷ್ಟೊಂದು ಕಠಿಣ ನಿಲುವು ತಳೆದಿದ್ದರಿಂದ ಪಕ್ಷದ ಆಂತರಿಕ ವ್ಯವಹಾರ ಸಂಬಂಧ ಕೆಪಿಸಿಸಿ ಅಧ್ಯಕ್ಷರು ಕೊಡುವ ನಿರ್ದೇಶನ ಜಾರಿಗೊಳಿಸಲು ಪಕ್ಷದ ಕಾರ್ಯಾಲಯದ ಪ್ರಧಾನ ಕಾರ್ಯದರ್ಶಿಯೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬಿರುಸಿನ ಚಟುವಟಿಕೆ

ಜನ್ಮ ದಿನದ ಶುಭಾಶಯ ಹೇಳುವ ಉದ್ದೇಶದಿಂದ ರಾಜ್ಯ ಕಾಂಗ್ರೆಸ್‌ನ ಹಲವರು ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಈ ಪೈಕಿ ಸಚಿವ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌ ಸಹೋದರರೂ ಇದ್ದರು. ಡಿಸಿಎಂ ಜಿ. ಪರಮೇಶ್ವರ್‌ ಅವರು ಎಐಸಿಸಿಯ ನಿಕಟಪೂರ್ವ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಮಂಗಳವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಚುನಾವಣೆಯಾದರೆ ಹೊಸ ಅಧ್ಯಕ್ಷರ ನೇಮಕ

ರಾಜ್ಯ ವಿಧಾನಸಭೆಗೆ ಅವಧಿಪೂರ್ವ ಚುನಾವಣೆ ನಡೆಯುವುದಾದರೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಲಿದೆ. ಇಲ್ಲದಿದ್ದರೆ ಈ ಸ್ಥಾನದಲ್ಲಿ ಗುಂಡೂರಾವ್‌ ಮುಂದುವರಿಯಲು ಅಡ್ಡಿಯಾಗದು. ಗುಂಡೂರಾವ್‌ ಅವರಿಗೆ ಸಿದ್ದು ಬೆಂಗಾವಲು ಇರುವುದರಿಂದ ಶಾಂತಿ ಕಾಲದ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳುವುದು ಸುಲಭವಾಗಲಿದೆ.

ರೇಸ್‌ನಲ್ಲಿ ಯಾರಿದ್ದಾರೆ?
ಸರಕಾರ ಇರುವುದರಿಂದ ತಕ್ಷಣಕ್ಕೆ ಕೆಪಿಸಿಸಿ ಅಧ್ಯಕ್ಷರಾಗಲು ಯಾರಿಗೂ ಇಷ್ಟವಿಲ್ಲ. ಚುನಾವಣೆ ನಡೆಯುವುದಾದರೆ ಈ ಸ್ಥಾನ ವಹಿಸಿಕೊಳ್ಳುವವರ ಪಟ್ಟಿಯಲ್ಲಿ ಸಚಿವರಾದ ಎಂ.ಬಿ.ಪಾಟೀಲ್‌, ಡಿ.ಕೆ.ಶಿವಕುಮಾರ್‌ ಹೆಸರು ಮುಂಚೂಣಿಯಲ್ಲಿದೆ. ಮಲ್ಲಿಕಾರ್ಜುನ ಖರ್ಗೆ ಅವರಲ್ಲೂ ಕೆಪಿಸಿಸಿ ಸಾರಥ್ಯ ವಹಿಸಿಕೊಳ್ಳುವ ಉತ್ಸಾಹವಿಲ್ಲ. ಸಿದ್ದರಾಮಯ್ಯ ಅವರಂತೂ ಈ ಸ್ಥಾನದ ಆಕಾಂಕ್ಷಿಯಲ್ಲ. ತಮಗೆ ಬೇಕಾದವರನ್ನು ಕೆಪಿಸಿಸಿ ಕುರ್ಚಿಯಲ್ಲಿ ಪ್ರತಿಷ್ಠಾಪಿಸಿಕೊಂಡು ತಮ್ಮದೇ ನಾಯಕತ್ವದಲ್ಲಿ ಚುನಾವಣೆ ಎದುರಿಸಬೇಕು ಎನ್ನುವುದು ಅವರ ದೂರಾಲೋಚನೆ. ಚುನಾವಣೆ ವೇಳೆ ದಲಿತರಿಗೇ ಕೆಪಿಸಿಸಿ ಪಟ್ಟ ಕಟ್ಟುವುದಾದರೆ ಪರಮೇಶ್ವರ ಹೆಸರನ್ನೇ ಹೈಕಮಾಂಡ್‌ ಮತ್ತೊಮ್ಮೆ ಪರಿಗಣಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ