ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಾಲುದಾರ ಸಂಸ್ಥೆಯಾಗಿರುವ ಜಿವಿಕೆಯು ತನ್ನ ಪಾಲಿನ ಷೇರುಗಳನ್ನು ಕೆನಡಿಯನ್ ಫೇರ್ಪಾಕ್ಸ್ ಕಂಪನಿಗೆ ಮಾರಾಟ ಮಾಡುವುದನ್ನು ತಡೆಯಬೇಕೆಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಗೆ ಪತ್ರವೊಂದನ್ನು ಬರೆದಿರುವ ಶಿವಕುಮಾರ್ ವಿಮಾನ ನಿಲ್ದಾಣ ಸಂಸ್ಥೆಯಲ್ಲಿ ಜಂಟಿ ಪಾಲುದಾರಿಕೆ ಹೊಂದಿರುವ ರಾಜ್ಯ ಸರಕಾರ ವಿಮಾನ ನಿಲ್ದಾಣದ ಆಡಳಿತ ಖಾಸಗಿ ವಿದೇಶಿ ಸಂಸ್ಥೆಯ ಕೈವಾಶವಾಗದಂತೆ ತಡೆಗಟ್ಟಬೇಕೆಂದು ಕೋರಿದ್ದಾರೆ.
2008ರಲ್ಲಿ ಆರಂಭಗೊಂಡಿರುವ ಕೆಂಪೇಗೌಡ ವಿಮಾನ ನಿಲ್ದಾಣ ನಿರ್ಮಾಣ ಸಂಸ್ಥೆಯು ಕೇಂದ್ರ ಸರಕಾರ, ಕರ್ನಾಟಕ ಸರಕಾರ, ಸೀಮೆನ್ಸ್ ಮತ್ತು ಜೂರಿಚ್ ವಿಮಾನ ನಿಲ್ದಾಣ ಸಂಸ್ಥೆಯ ಜಂಟಿ ಸಹಭಾಗಿತ್ವದಲ್ಲಿ ಆರಂಭವಾಯಿತು. ಅದಾಗಲೇ ಮುಂಬೈ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿದ್ದ ಜಿವಿಕೆ ಸಮೂಹ ಸಂಸ್ಥೆಯು ಶೇ.43 ರಷ್ಟು ಷೇರುಗಳನ್ನು ಪಡೆದು ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕವಾಗಿತ್ತು.
ಆದರೆ ಇದೀಗ ಜಿವಿಕೆ ಸಂಸ್ಥೆ ತನ್ನ ಷೇರುಗಳ ಪೈಕಿ ಶೇ. 35 ರಷ್ಟು ಷೇರುಗಳನ್ನು ಕೆನಡಿಯನ್ ಫೇರ್ ಪಾಕ್ಸ್ ಸಂಸ್ಥೆಗೆ ಮಾರಾಟ ಮಾಡಿದೆ. ಫೇರ್ ಪಾಕ್ಸ್ ಸಂಸ್ಥೆ ಈಗಾಗಲೇ ಜೂರಿಚ್ ಸಂಸ್ಥೆಯಿಂದ ಶೇ.5 ರಷ್ಟನ್ನು ವಿಕ್ರಯಿಸಿದೆ. ಉಳಿದ ಷೇರುಗಳನ್ನು ಫೇರ್ ಪಾಕ್ಸ್ ಸಂಸ್ಥೆಗೆ ವರ್ಗಾಯಿಸುವುದಾಗಿ ಜಿವಿಕೆ ಹೇಳಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರಾದ ಸೀಮೆನ್ಸ್ (ಶೇ.26) ಹಾಗೂ ಫೇರ್ ಪಾಕ್ಸ್ ಸಂಸ್ಥೆ (ಶೇ.5 ಮತ್ತು ಶೇ.33 ಮತ್ತು ಶೇ.10) ಒಟ್ಟು ಸೇರಿದರೆ ಶೇ.74 ರಷ್ಟು ಷೇರುಗಳು ವಿದೇಶಿ ಸಂಸ್ಥೆಗಳ ಪಾಲಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ನಿರ್ವಹಣೆ ಹಾಗೂ ಸ್ಥಾಪಿಸಿದ ಉದ್ದೇಶ ಈಡೇರದೆ ಹಿನ್ನೆಡೆಯಾಗಲಿದೆ.
2ನೇ ಟರ್ಮಿನಲ್ ವಿಸ್ತರಣೆಯು ಕಾರ್ಯಪ್ರಗತಿಯಲ್ಲಿರುವಾಗ ವಿದೇಶಿ ಸಂಸ್ಥೆಗಳು ಬಹುಪಾಲು ಷೇರುಗಳ ಮೇಲೆ ನಿಯಂತ್ರಣ ಹೊಂದುವುದು ದೇಶದ ಹಿತಾಸಕ್ತಿಗಳಿಗೆ ಧÜಕ್ಕೆಯಾಗುತ್ತದೆ. ಇದನ್ನು ಪರಿಗಣಿಸಿ ರಾಜ್ಯ ಸರಕಾರ ತಕ್ಷಣವೇ ಜಿವಿಕೆ ಸಂಸ್ಥೆ ತನ್ನುಳಿದ ಶೇ.10 ರಷ್ಟು ಷೇರುಗಳನ್ನು ಮಾರಾಟ ಮಾಡದಂತೆ ನಿರ್ಬಂಧಿಸಬೇಕು ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಗುಹೋಗುಗಳ ಬಗ್ಗೆ ರಾಜ್ಯ ಸರಕಾರ ಸಂಪೂರ್ಣ ನಿಯಂತ್ರಣ ಸಾಧಿಸಬೇಕೆಂದು ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.