ಬೆಂಗಳೂರು: ವಿದ್ಯಾರ್ಥಿಗಳ ದಾಖಲಾತಿ ಕಡಿಮೆ ಇರುವ ಕಾರಣ ನೀಡಿ ಸರಕಾರಿ ಪಿಯು ಕಾಲೇಜುಗಳನ್ನು ಮುಚ್ಚದಂತೆ ಸದಸ್ಯರು ವಿಧಾನಸಭೆಯಲ್ಲಿ ಬುಧವಾರ ಸರಕಾರವನ್ನು ಆಗ್ರಹಿಸಿದರು.
ಈ ಸಂಬಂಧ ಬಿಜೆಪಿಯ ಬಿ.ವೈ.ರಾಘವೇಂದ್ರ ಅವರು ಗಮನ ಸೆಳೆಯುವ ಸೂಚನೆಯಡಿ ಮಾಡಿದ ಪ್ರಸ್ತಾಪಕ್ಕೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್, ಸಿ.ಟಿ. ರವಿ, ಜೆಡಿಎಸ್ನ ಎಚ್.ಡಿ.ರೇವಣ್ಣ, ಎಚ್.ಸಿ.ಬಾಲಕೃಷ್ಣ ಮತ್ತಿತರ ಸದಸ್ಯರು ದನಿಗೂಡಿಸಿ, ಶೈಕ್ಷಣಿಕ ವರ್ಷ ಆರಂಭದ ಹಂತದಲ್ಲಿ ಈ ತೀರ್ಮಾನವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
''ಚುನಾವಣಾ ವರ್ಷದಲ್ಲಿ ಇಂತಹ ತೀರ್ಮಾನ ಒಳ್ಳೆಯದಲ್ಲ. ಸ್ಥಳೀಯವಾಗಿ ಶಾಸಕರ ಮೇಲೂ ಒತ್ತಡ ಸೃಷ್ಟಿಯಾಗುತ್ತಿದೆ. ಕಲಾ ವಿಭಾಗದಲ್ಲಿ ದಾಖಲೆ ತಗ್ಗಿದೆ ಎಂಬ ಕಾರಣ ನೀಡಿ ಕಾಲೇಜು ಮುಚ್ಚುವ ಬದಲು, ವಾಣಿಜ್ಯ ವಿಭಾಗ ಆರಂಭಿಸಿ. ವಿದ್ಯಾರ್ಥಿಗಳ ಪ್ರವೇಶ ಹೆಚ್ಚುತ್ತದೆ'' ಎಂದು ಸದಸ್ಯರು ಒತ್ತಾಯಿಸಿದರು. ಈ ಸಂಬಂಧ ಆಸಕ್ತ ಶಾಸಕರ ಸಭೆ ಕರೆದು ಸೂಕ್ತ ತೀರ್ಮಾನ ಮಾಡುವಂತೆ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಸೂಚನೆ ನೀಡಿದರು.