ಆ್ಯಪ್ನಗರ

'ಮೋದಿ ಬೈದ್ರೆ ದೇವರನ್ನ ಬೈದಂಗೆ' ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ

ನೆರೆ ಪರಿಹಾರ ವಿಚಾರವಾಗಿ ಕೇಂದ್ರ ಸರಕಾರವನ್ನು ಟೀಕಿಸುತ್ತಿರುವ ವಿರೋಧ ಪಕ್ಷಗಳ ನಡೆಯನ್ನು ವಿರೋಧಿಸಿದ ಸಂಸದರ ಪ್ರತಾಪ್ ಸಿಂಹ ಪ್ರಧಾನಿ ಮೋದಿಗೆ ಬೈದರೆ ದೇವರನ್ನು ಬೈದಂಗೆ ಎಂದು ಹೇಳಿಕೆ ನೀಡಿದ್ದರು.

Vijaya Karnataka Web 2 Oct 2019, 4:24 pm
ಬೆಂಗಳೂರು: ಕರ್ನಾಟಕ ಪ್ರವಾಹಕ್ಕೆ ಕೇಂದ್ರ ಸರಕಾರ ಪರಿಹಾರ ವಿಳಂಬ ಆರೋಪ ವಿಚಾರ ರಾಜ್ಯಾಧ್ಯಂತ ಭಾರೀ ಸುದ್ದಿ ಮಾಡುತ್ತಿದೆ. ರಾಜ್ಯದ ಪ್ರವಾಹಕ್ಕೆ ಕೇಂದ್ರ ಸರಕಾರ ಮಿಡಿಯುತ್ತಿಲ್ಲ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದ್ದರೆ, ಕಾಂಗ್ರೆಸ್ ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುತ್ತಿದೆ ಎನ್ನುತ್ತಿದೆ ಬಿಜೆಪಿ. ಈ ನಡುವೆ ಸಂಸದ ಪ್ರತಾಪ್ ಸಿಂಹ ನೆರೆ ಪರಿಹಾರದ ವಿಚಾರದಲ್ಲಿ ಪ್ರಧಾನಿ ಮೋದಿ ವಿರುದ್ಧ ಮಾತನಾಡಿದರೆ ದೇವರ ವಿರುದ್ಧ ಮಾತನಾಡಿದಂತೆ ಎಂಬ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
Vijaya Karnataka Web pratap simha


ಪರಿಹಾರ ವಿಳಂಬಕ್ಕೆ ಕೇಂದ್ರ ಸರಕಾರವನ್ನು ದೂಷಣೆ ಮಾಡುತ್ತಿರುವ ವಿರೋಧ ಪಕ್ಷಗಳ ನಡೆಯನ್ನು ಖಂಡಿಸಿ ಮೈಸೂರಿನಲ್ಲಿ ಹೇಳಿಕೆ ನೀಡಿರುವ ಸಂಸದ ಪ್ರತಾಪ್ ಸಿಂಹ, “ಮೋದಿ ದೇವರಿದ್ದಂತೆ, ಅವರನ್ನು ಬೈದರೆ ದೇವರನ್ನೇ ಬೈದಂತೆ. ಅವರು ಆಕಾಶದ ಎತ್ತರದಲ್ಲಿದ್ದಾರೆ ಅವರನ್ನು ಉಗಿದರೆ ಅದು ನಿಮ್ಮ ಮೇಲೆಯೇ ಬೀಳುತ್ತದೆ” ಎಂಬ ಹೇಳಿಕೆ ನೀಡಿದ್ದರು.

ಪ್ರವಾಹ ಪರಿಹಾರ ಡಿವಿಎಸ್ 'ದಾರಿತಪ್ಪಿಸುವ' ಹೇಳಿಕೆಗೆ ಸೂಲಿಬೆಲೆ ಗರಂ

ಸಂಸದರ ಈ ಹೇಳಿಕೆ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರವಾಹದಿಂದಾಗಿ ಜನ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ವಿದೇಶಕ್ಕೆ ಹೋಗಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಮನುಷ್ಯತ್ವ ಇರುವವರು ಕರ್ನಾಟಕಕ್ಕೆ ಬರಬೇಕಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿ , ರಾಜ್ಯದಲ್ಲಿ ಭೀಕರ ಬರ ಹಾಗೂ ನೆರೆಗೆ ಜನ ತತ್ತರಿಸಿದ್ದಾರೆ. 20 ಲಕ್ಷ ಜನರು ಮನೆ ಮಠ ಕಳೆದುಕೊಂಡಿದ್ದಾರೆ. ಅವರ ಬಗ್ಗೆ ಅನುಕಂಪ ತೋರಿಸದ ವ್ಯಕ್ತಿ ಭಟ್ಟಂಗಿತನ ತೋರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಬಿಹಾರ ಪ್ರವಾಹಕ್ಕೆ ಮೋದಿ ಟ್ವೀಟ್; ಕರ್ನಾಟಕದತ್ತನೂ ನೋಡಿ ಅಂದ್ರು ನೆಟ್ಟಿಗರು

ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಸಂಸದರ ಹೇಳಿಕೆಯನ್ನು ಖಂಡಿಸಿದ್ದು, ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ನೂರಾರು ಜನ ಸಾವನ್ನಪ್ಪಿದ್ದಾರೆ. ರೈತರ ಬೆಳೆಗೆ ಹಾನಿಯಾಗಿದೆ. ಜನರು ನೆಲೆ ಕಳೆದುಕೊಂಡಿದ್ದಾರೆ. ಇಂತಹಾ ಪರಿಸ್ಥಿತಿಯಲ್ಲಿ ನೆರವಿಗೆ ಬಾರದ ಪ್ರಧಾನಿ ವರ್ತನೆ ಬೇಜಾವಾಬ್ದಾರಿಯಾದದ್ದು. ಪ್ರಜ್ಞಾವಂತ ಸಂಸದರಾಗಿ ಪ್ರತಾಪ್ ಸಿಂಹ ಹೀಗೆ ಹೇಳಿದ್ದು ಸರಿಯಲ್ಲ ಎಂದಿದ್ದಾರೆ.

ಈ ನಡುವೆ ಪ್ರವಾಹ ಪರಿಹಾರ ಕುರಿತಾಗಿ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಾ. ಅಶ್ವಥ್ ನಾರಾಯಣ, ಕೇಂದ್ರ ಸರಕಾರದಿಂದ ನೆರವು ಸಿಗಲಿಲ್ಲ ಎಂದು ದೊಡ್ಡದಾಗಿ ಬಿಂಬಿಸುವ ಅಗತ್ಯ ಇಲ್ಲ ಎಂದಿದ್ದು. ಪ್ರವಾಹದ ಬಗ್ಗೆ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದೆ. ನೆರವು ತಡವಾಗಿ ಸಿಕ್ಕರೆ ಸಮಸ್ಯೆ ಏನು ಇಲ್ಲ. ಇದರಿಂದ ನಮಗೆ ಯಾವುದೇ ಅನಾನುಕೂಲತೆ ಇಲ್ಲ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ