ಆ್ಯಪ್ನಗರ

ಕೊರೊನಾ ನಿರ್ಬಂಧ 'ಆರ್‌ಎಸ್‌ಎಸ್‌'ಗೆ ಅನ್ವಯಿಸುವುದಿಲ್ಲವೇ? ಸಿದ್ದರಾಮಯ್ಯ ಪ್ರಶ್ನೆ

ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಸಾರ್ವಜನಿಕ ಸಮಾವೇಶ-ಸಮಾರಂಭಗಳ ಮೇಲೆ ನಿರ್ಬಂಧ ಹೇರಲಾಗಿದೆ. ಆದರೆ ನಗರದಲ್ಲಿ ಆರ್ ಎಸ್‌ಎಸ್ ಮಹಾಸಮಾವೇಶ ಇದೇ15 ರಿಂದ ನಡೆಯಲಿದೆ. ಆರ್‌ಎಸ್‌ಎಸ್‌ಗೆ ಸರ್ಕಾರಿ ಆದೇಶ ಅನ್ವಯಿಸುವುದಿಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Vijaya Karnataka Web 14 Mar 2020, 9:29 am
ಬೆಂಗಳೂರು: ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತುರ್ತುಪರಿಸ್ಥಿತಿಯ ವಾತಾವರಣವಿದ್ದು ಒಂದು ವಾರಗಳ ಕಾಲ ಸಭೆ ಸಮಾರಂಭ, ಮಾಲ್‌,ಚಿತ್ರಮಂದಿರ, ಮದುವೆ, ಸಂತೆ, ಸಮಾವೇಶ ಹಾಗೂ ಪ್ರದರ್ಶನವನ್ನು ಸ್ಥಗಿತಗೊಳಿಸಲು ಸರ್ಕಾರ ಆದೇಶಿಸಿದೆ. ಆದರೆ ಭಾನುವಾರ( ಮಾರ್ಚ್‌ 15) ರಿಂದ ಬೆಂಗಳೂರಿನಲ್ಲಿ ನಡೆಯಲಿರುವ ಆರ್.ಎಸ್‌.ಎಸ್‌ ಮಹಾಸಮಾವೇಶಕ್ಕೆ ಅವಕಾಶ ನೀಡಿರುವುದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
Vijaya Karnataka Web siddaramaih


ಟ್ವೀಟ್‌ ಮಾಡುವ ಮೂಲಕ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ ಅವರು, “ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಸಾರ್ವಜನಿಕ ಸಮಾವೇಶ-ಸಮಾರಂಭಗಳ ಮೇಲೆ ರಾಜ್ಯ ಸರ್ಕಾರ ನಿರ್ಬಂಧ ಹೇರಿದೆ. ಆದರೆ ನಗರದಲ್ಲಿ ಆರ್ ಎಸ್‌ಎಸ್ ಮಹಾಸಮಾವೇಶ ಇದೇ15 ರಿಂದ ಅನಿರ್ಬಂಧಿತವಾಗಿ ನಡೆಯಲಿದೆ. ಮುಖ್ಯಮಂತ್ರಿ ಬಿಎಸ್‌ವೈ ಅವರೇ ಆರ್‌ಎಸ್‌ಎಸ್‌ಗೆ ಸರ್ಕಾರಿ ಆದೇಶ ಅನ್ವಯಿಸುವುದಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.



“ಇದೇ 15ರಿಂದ ನಗರದಲ್ಲಿ ನಡೆಯಲಿರುವ ಆರ್‌ಎಸ್ಎಸ್ ಸಮಾವೇಶದಲ್ಲಿ ದೇಶದ ಬೇರೆ ಕಡೆಗಳಿಂದ 1500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕನಿಷ್ಠ ಈ ಪ್ರತಿನಿಧಿಗಳ ಆರೋಗ್ಯದ ಕಾಳಜಿ ದೃಷ್ಟಿಯಿಂದಾದರೂ ಮಹಾಸಮಾವೇಶವನ್ನು ಮುಂದೂಡಿ.ಯಾವ ಸಿದ್ಧಾಂತವೂ ಮನುಷ್ಯನ ಪ್ರಾಣಕ್ಕಿಂತ ಹೆಚ್ಚಲ್ಲ” ಎಂದು ಟ್ವೀಟ್‌ ಮೂಲಕ ಸಮಾವೇಶವನ್ನು ಮುಂದೂಡಲು ಸೂಚಿಸುವಂತೆ ಕೇಳಿಕೊಂಡಿದ್ದಾರೆ.

ಮಾರ್ಚ್ 15 ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ( ಆರ್.ಎಸ್‌.ಎಸ್) ಅಖಿಲ ಭಾರತೀಯ ಪ್ರತಿನಿಧಿಗಳ ಸಭೆ ಚೆನ್ನೇನಹಳ್ಳಿಯಲ್ಲಿನ ಜನಸೇವಾ ವಿದ್ಯಾಕೇಂದ್ರದಲ್ಲಿ ನಡೆಯಲಿದೆ. ಆರ್.ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್‌, ಸಹ ಕಾರ್ಯವಾಹ ಸುರೇಶ್ ಭಯ್ಯಾಜಿ ಜೋಶಿ, ಸಹ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಸಂಘದ 1,500 ಕ್ಕೂ ಹೆಚ್ಚು ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ರಾಜ್ಯದಲ್ಲಿ ಕೊರೊನಾ ಭೀತಿಯಿದ್ದರೂ ಸಮಾವೇಶ ಮುಂಜಾಗರೂಕತಾ ವ್ಯವಸ್ಥೆಗಳೊಂದಿಗೆ ಸುತೂತ್ರವಾಗಿ ನಡೆಯಲಿದೆ ಎಂದು ಆರ್.ಎಸ್‌.ಎಸ್‌ ಮೂಲಗಳು ತಿಳಿಸಿವೆ. ಸಂಘದ ಮುಂದಿನ ಚಟುವಟಿಕೆಗಳು, ಪೌರತ್ವ ಕಾಯ್ದೆ ಹಾಗೂ ಕೊರೊನಾ ವೈರಸ್ ಕುರಿತಾದ ಜಾಗೃತಿ ಸೇರಿದಂತೆ ಹಲವು ವಿಚಾರಗಳ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ